ಕಾಂಗ್ರೆಸ್, ಜೆಡಿಎಸ್ ಸೀಟು ಹಂಚಿಕೆ ಸಭೆ ವಿಫಲ; ಹೈ ಕಮಾಂಡ್ ಅಂತಿಮ ನಿರ್ಧಾರ
ಕಾಂಗ್ರೆಸ್, ಜೆಡಿಎಸ್ ಸೀಟು ಹಂಚಿಕೆ ಸಭೆ ವಿಫಲ | ಸಮನ್ವಯ ಸಮಿತಿ ಸಭೆಯಲ್ಲಿ ಬಗೆಹರಿಯದ ಲೋಕಸಭೆ ಕ್ಷೇತ್ರ ಹಂಚಿಕೆ | ಹೈಕಮಾಂಡ್ ಮಟ್ಟದಲ್ಲೇ ಹಂಚಿಕೆಗೆ ಮೈತ್ರಿ ಪಕ್ಷಗಳ ನಿರ್ಧಾರ | 12 ಕ್ಷೇತ್ರ ಬಿಟ್ಟುಕೊಡುವಂತೆ ಕೇಳಿದ ಜೆಡಿಎಸ್ ನಾಯಕರು
ಬೆಂಗಳೂರು (ಮಾ. 05): ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಕುರಿತು ಚರ್ಚಿಸಲು ನಡೆದ ಸಮನ್ವಯ ಸಮಿತಿ ಸಭೆ ವಿಫಲವಾಗಿದ್ದು, ಹೈಕಮಾಂಡ್ ಮಟ್ಟದಲ್ಲೇ ಈ ಬಗ್ಗೆ ಅಂತಿಮ ತೀರ್ಮಾನವಾಗಲಿ ಎಂಬ ನಿರ್ಧಾರಕ್ಕೆ ಮೈತ್ರಿ ಪಕ್ಷಗಳ ನೇತಾರರು ಬಂದಿದ್ದಾರೆ.
ಯೋಧ ಗುರು ಪತ್ನಿಗೆ ಸುಮಲತಾ ಅರ್ಧ ಎಕರೆ ದಾನ
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಯಿತು. ಈ ಸಭೆಯಲ್ಲಿ ಜೆಡಿಎಸ್ ನಾಯಕರು ತಮ್ಮ ಪಕ್ಷಕ್ಕೆ 12 ಸೀಟು ಬಿಟ್ಟುಕೊಡಬೇಕು ಎಂದು ಕೋರಿದರು ಎನ್ನಲಾಗಿದೆ. ಆದರೆ, ಇದಕ್ಕೆ ಒಪ್ಪದ ಕಾಂಗ್ರೆಸ್ ನಾಯಕರು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹಾಲಿ ಗೆದ್ದಿರುವ ಕ್ಷೇತ್ರಗಳನ್ನು ಹೊರತುಪಡಿಸಿ ಚರ್ಚೆ ನಡೆಯಬೇಕು ಎಂದು ವಾದಿಸಿದ್ದಾರೆ.
ಮೋದಿಗೆ ಮುಸ್ಲಿಂ ಮತ ಬೇಕಿಲ್ಲ, ನಮಗೇ ಹಾಕಿ: ಜಮೀರ್ ಅಹ್ಮದ್ ಕರೆ
ತನ್ಮೂಲಕ ಜೆಡಿಎಸ್ ಕೇಳುತ್ತಿರುವ ಕಾಂಗ್ರೆಸ್ ಗೆದ್ದಿರುವ ಕ್ಷೇತ್ರಗಳಾದ ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗದಂತಹ ಕ್ಷೇತ್ರಗಳನ್ನು ಸುತಾರಾಂ ಬಿಟ್ಟುಕೊಡಲು ಸಿದ್ಧರಿಲ್ಲ ಎಂಬ ಸಂದೇಶ ನೀಡಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ ಜೆಡಿಎಸ್ ನಾಯಕರು, ಮಂಡ್ಯ ಹಾಗೂ ಹಾಸನ ಕ್ಷೇತ್ರಗಳಲ್ಲಿ ಜೆಡಿಎಸ್ ಸಂಸದರಿದ್ದಾರೆ. ಇದಲ್ಲದೆ, ಪಕ್ಷಕ್ಕೆ ಉತ್ತಮ ತಳಹದಿ ಇರುವ ಕ್ಷೇತ್ರಗಳಾದ ಮೈಸೂರು, ಶಿವಮೊಗ್ಗ, ಚಿತ್ರದುರ್ಗ, ತುಮಕೂರು, ವಿಜಯಪುರ, ಬೆಂಗಳೂರು ಉತ್ತರ, ಕೋಲಾರ, ಚಿಕ್ಕಬಳ್ಳಾಪುರ, ಕೆನರಾ ಹಾಗೂ ಬೆಳಗಾವಿ ಕ್ಷೇತ್ರಗಳಲ್ಲೂ ಈ ಬಾರಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲು ಬಯಸಿದೆ ಎಂದು ತಿಳಿಸಿದರು ಎನ್ನಲಾಗಿದೆ.
ಎಫ್-16 ಹೊಡೆಯಲು ಮಿಗ್ ಬಳಸಿದ್ದೇಕೆ?: ಧನೋವಾ ನೀಡಿದ ಅಚ್ಚರಿಯ ಉತ್ತರ!
ಆದರೆ, ಇದಕ್ಕೆ ಕಾಂಗ್ರೆಸ್ ನಾಯಕರು ಆಕ್ಷೇಪ ಮಾಡಿದ್ದು, ತುಮಕೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರದಲ್ಲಿ ಕಾಂಗ್ರೆಸ್ ಸಂಸದರು ಇದ್ದಾರೆ. ಇಂತಹ ಕ್ಷೇತ್ರಗಳನ್ನು ಬಿಟ್ಟುಕೊಡಲು ಸಾಧ್ಯವೇ ಇಲ್ಲ. ಉಳಿದ ಕ್ಷೇತ್ರಗಳ ಬಗ್ಗೆ ಬೇಕಿದ್ದರೆ ಚರ್ಚೆ ಮಾಡಬಹುದು ಎಂದು ವಾದ ಮಂಡಿಸಿದರು ಎನ್ನುತ್ತವೆ ಮೂಲಗಳು.
ಅಲ್ಲದೆ, ತಮ್ಮ ಸ್ವಂತ ಜಿಲ್ಲೆಯಾದ ಮೈಸೂರನ್ನು ಜೆಡಿಎಸ್ಗೆ ಬಿಟ್ಟುಕೊಡಲು ಸಾಧ್ಯವಿಲ್ಲ. ಬೆಂಗಳೂರು ಉತ್ತರದಲ್ಲಿ ದೇವೇಗೌಡ ಅವರೇ ಸ್ಪರ್ಧಿಸಲು ಆಸಕ್ತಿ ತೋರಿರುವುದರಿಂದ ಅದನ್ನು ಬಿಟ್ಟುಕೊಡಬಹುದು. ಆದರೆ, ಯಾವ ಕಾರಣಕ್ಕೂ ಮೈಸೂರು ಬಿಟ್ಟುಕೊಡಲು ಸಾದ್ಯವಿಲ್ಲ ಎಂದು ಸ್ವತಃ ಸಿದ್ದರಾಮಯ್ಯ ಅವರು ಸಭೆಯಲ್ಲಿ ವಾದಿಸಿದರು ಎನ್ನಲಾಗಿದೆ.
ಇದಕ್ಕೆ ಪ್ರತಿಯಾಗಿ ಜೆಡಿಎಸ್ ನಾಯಕರು ಮೈತ್ರಿ ಸಂದರ್ಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಕೆಲವೊಂದು ಭರವಸೆಗಳನ್ನು ನೀಡಿದೆ. ಅದರಲ್ಲಿ ಸೀಟು ಹಂಚಿಕೆ ವಿಚಾರ ಸಹ ಸೇರಿದೆ. ಹೀಗಾಗಿ ಈ ವಿಚಾರದ ಬಗ್ಗೆ ನಮ್ಮ ಪಕ್ಷದ ವರಿಷ್ಠರಾದ ಎಚ್.ಡಿ. ದೇವೇಗೌಡರು ಕಾಂಗ್ರೆಸ್ನ ವರಿಷ್ಠ ರಾಹುಲ್ ಗಾಂಧಿ ಜತೆ ಚರ್ಚಿಸಿದ ನಂತರವೇ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿ ಎಂದಿದ್ದು, ಇದಕ್ಕೆ ಕಾಂಗ್ರೆಸ್ ನಾಯಕರು ಒಪ್ಪಿದ್ದಾರೆ ಎನ್ನಲಾಗಿದೆ.
6 ಕ್ಕೆ ಒಪ್ಪಿದೆಯೇ ಜೆಡಿಎಸ್?
ಸೀಟು ಹಂಚಿಕೆ ಕುರಿತು ಉಭಯ ಪಕ್ಷಗಳ ರಾಜ್ಯ ನಾಯಕರ ಸಭೆ ವಿಫಲವಾಗಿದೆ ಎನ್ನಲಾಗುತ್ತಿದ್ದರೂ, ಉಭಯ ಪಕ್ಷಗಳು ಕೊಡು-ಕೊಳ್ಳುವಿಕೆ ವಿಚಾರದಲ್ಲಿ ತಾತ್ವಿಕ ಒಪ್ಪಿಗೆಗೆ ಬಂದಿದ್ದಾರೆ ಎಂದು ಕಾಂಗ್ರೆಸ್ನ ಪ್ರಭಾವಿ ಬಣವೊಂದರ ಮೂಲಗಳು ಹೇಳುತ್ತವೆ.
ಈ ಮೂಲಗಳ ಪ್ರಕಾರ ಜೆಡಿಎಸ್ 12 ಸ್ಥಾನಗಳಿಗೆ ಬೇಡಿಕೆಯಿಟ್ಟಿದ್ದರೂ, ತಾನು ಬೇಡಿದ ಆರು ಕ್ಷೇತ್ರಗಳನ್ನು ತಕರಾರಿಲ್ಲದೆ ಬಿಟ್ಟುಕೊಟ್ಟರೆ ಅಷ್ಟಕ್ಕೆ ತೃಪ್ತರಾಗುವ ಸಂಕೇತವನ್ನು ಸಮನ್ವಯ ಸಮಿತಿ ಸಭೆಯಲ್ಲಿ ನೀಡಿತು ಎನ್ನಲಾಗಿದೆ.
ಜೆಡಿಎಸ್ ತನ್ನ ಸಂಸದರನ್ನು ಹೊಂದಿರುವ ಮಂಡ್ಯ ಹಾಗೂ ಹಾಸನದ ಜತೆಗೆ, ಶಿವಮೊಗ್ಗ, ಉತ್ತರ ಕನ್ನಡ, ಬೆಂಗಳೂರು ಉತ್ತರ ಹಾಗೂ ಮೈಸೂರು ಕ್ಷೇತ್ರಗಳನ್ನು ತನಗೆ ಬಿಟ್ಟುಕೊಡಬೇಕು ಎಂದು ಬೇಡಿಕೆಯಿಟ್ಟಿದೆ. ಈ ಪೈಕಿ, ಕಾಂಗ್ರೆಸ್ಗೆ ಶಿವಮೊಗ್ಗ, ಉತ್ತರ ಕನ್ನಡ, ಬೆಂಗಳೂರು ಉತ್ತರ ಕ್ಷೇತ್ರಗಳನ್ನು ಬಿಟ್ಟುಕೊಡಲು ಯಾವುದೇ ತಕರಾರಿಲ್ಲ. ಆದರೆ, ಸಮಸ್ಯೆಯಿರುವುದು ಮೈಸೂರು ಕ್ಷೇತ್ರದ ಬಗ್ಗೆ. ಈ ಕ್ಷೇತ್ರಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಪಟ್ಟು ಹಿಡಿದಿದ್ದರೆ, ಜೆಡಿಎಸ್ ಕೂಡ ತನ್ನ ಆಗ್ರಹದಿಂದ ಹಿಂದಕ್ಕೆ ಸರಿಯುತ್ತಿಲ್ಲ ಎಂದು ಈ ಮೂಲಗಳು ಹೇಳಿವೆ.
ಜೆಡಿಎಸ್ ಕೇಳುತ್ತಿರುವ ಕ್ಷೇತ್ರಗಳು
ಮಂಡ್ಯ, ಹಾಸನ, ಮೈಸೂರು, ಚಿತ್ರದುರ್ಗ, ತುಮಕೂರು, ಬೆಂಗಳೂರು ಉತ್ತರ, ಚಿಕ್ಕಬಳ್ಳಾಪುರ, ಕೋಲಾರ, ಶಿವಮೊಗ್ಗ, ಧಾರವಾಡ, ಬೆಳಗಾವಿ ಹಾಗೂ ಧಾರವಾಡ.
ಕಾಂಗ್ರೆಸ್ ಬಿಟ್ಟುಕೊಡಲು ತಯಾರಿರುವ ಕ್ಷೇತ್ರಗಳು-
ಮಂಡ್ಯ, ಹಾಸನ, ಬೆಂಗಳೂರು ಉತ್ತರ, ಮೈಸೂರು, ಶಿವಮೊಗ್ಗ, ಬೆಳಗಾವಿ ಮತ್ತು ಧಾರವಾಡ.