ಪಾಕಿಸ್ತಾನಿ ತಜ್ಞ ಸಾಜಿದ್ ತರಾರ್, ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಮುಸ್ಲಿಂ ಜಗತ್ತು ಇಸ್ರೇಲ್‌ಗೆ ಶರಣಾಗಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಯುದ್ಧವು ಜಾಗತಿಕ ಆರ್ಥಿಕತೆ ಮತ್ತು ತೈಲ ಬೆಲೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆಯೇ ಮುಂದೆ ಓದಿ

ಇಸ್ಲಾಮಾಬಾದ್(ಮಾ.3): ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧವು ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆಯುತ್ತಿದ್ದು, ಇಡೀ ಮುಸ್ಲಿಂ ಜಗತ್ತು ಇಸ್ರೇಲ್ ಮುಂದೆ ಮಂಡಿಯೂರಿ ಶರಣಾಗಬೇಕು ಎಂದು ಪಾಕಿಸ್ತಾನಿ ಮೂಲದ ತಜ್ಞ ಸಾಜಿದ್ ತರಾರ್ ನೀಡಿದ ಹೇಳಿಕೆ ಈಗ ಜಾಗತಿಕ ಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

'ಇಸ್ರೇಲ್ ಈಗ ಜಗತ್ತಿಗೆ ತಂದೆ: ಸಾಜಿದ್ ತರಾರ್ ವಿಶ್ಲೇಷಣೆ

ಗಲ್ಫ್ ರಾಷ್ಟ್ರಗಳ (GCC) ಮೌನಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸಾಜಿದ್ ತರಾರ್, ಪ್ರಸ್ತುತ ಜಗತ್ತು ಏಕಧ್ರುವೀಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 'ಇಂದು ರಷ್ಯಾ ಅಥವಾ ಚೀನಾ ಎಲ್ಲಿಯೂ ಕಾಣಿಸುತ್ತಿಲ್ಲ. ಅಧಿಕಾರ ಯಾರ ಕೈಯಲ್ಲಿದೆ? ಬೆಂಜಮಿನ್ ನೆತನ್ಯಾಹು ಒಬ್ಬರೇ ಇಂದು ಭೂಮಿಯ ಮೇಲಿನ ಅತ್ಯಂತ ಶಕ್ತಿಶಾಲಿ ವ್ಯಕ್ತಿ. ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ಅನ್ನು ತಮ್ಮ ತಾಯಿ-ತಂದೆ ಎಂದು ಪರಿಗಣಿಸಿ, 'ದೇವರೇ ನಾವು ಮಂಡಿಯೂರಿ ಕುಳಿತಿದ್ದೇವೆ' ಎಂದು ಶರಣಾಗುವುದೇ ಲೇಸು' ಎಂದು ಅವರು ವ್ಯಂಗ್ಯವಾಗಿ ಹೇಳಿದ್ದಾರೆ. ಜಗತ್ತು ಇಸ್ರೇಲ್‌ನಿಂದಲೇ ಆರಂಭವಾಗಿ ಅಲ್ಲೇ ಕೊನೆಗೊಳ್ಳುತ್ತಿದೆ ಎಂದು ಅವರು ಬಣ್ಣಿಸಿದ್ದಾರೆ.

ಯುದ್ಧ ಮುಂದುವರಿದರೆ ಶೇಖ್‌ಗಳ ಸ್ಥಿತಿ ಗತಿಗೇಡು!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 'ನಾಲ್ಕು ವಾರಗಳ ಯುದ್ಧ'ದ ಹೇಳಿಕೆಗೆ ಆತಂಕ ವ್ಯಕ್ತಪಡಿಸಿರುವ ತರಾರ್, ಒಂದು ವೇಳೆ ಯುದ್ಧ ಒಂದು ವಾರ ಮುಂದುವರಿದರೂ ಸಾಕು, ವಿಶ್ವದ ಆರ್ಥಿಕತೆ ಅಲುಗಾಡುತ್ತದೆ. ಆಗ ದುಬೈನ ಶ್ರೀಮಂತ ಶೇಖ್‌ಗಳು ಮತ್ತು ಲಾಹೋರ್‌ನ ಶೇಖ್‌ಗಳು ಸಮಾನರಾಗುತ್ತಾರೆ (ಬಡವರಾಗುತ್ತಾರೆ)," ಎಂದು ಎಚ್ಚರಿಸಿದ್ದಾರೆ. ಗಾಜಾದಲ್ಲಿ ಹಗಲು ಹೊತ್ತಿನಲ್ಲೇ ಲಕ್ಷಾಂತರ ಜನರ ಮಾರಣಹೋಮ ನಡೆಯುತ್ತಿದ್ದರೂ ಕೇಳುವವರಿಲ್ಲದ ಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಭುಗಿಲೆದ್ದ ತೈಲ ಬೆಲೆ: ಇರಾನ್‌ನಲ್ಲಿ ಸಾವಿನ ಸರಣಿ

ಇಸ್ರೇಲ್ ಮತ್ತು ಅಮೆರಿಕದ ಜಂಟಿ ದಾಳಿಗಳಿಂದಾಗಿ ಇರಾನ್‌ನಲ್ಲಿ ಸಾವನ್ನಪ್ಪಿದವರ ಸಂಖ್ಯೆ 742 ದಾಟಿದೆ. ಈ ಯುದ್ಧದ ತಾಪ ಜಾಗತಿಕ ಮಾರುಕಟ್ಟೆಗೂ ತಟ್ಟಿದ್ದು, ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ $150 ತಲುಪಿದೆ. ಇತ್ತೀಚೆಗಷ್ಟೇ ಇರಾನ್ ನಡೆಸಿದ ದಾಳಿಯಲ್ಲಿ ಬೀಟ್ ಶೆಮೇಶ್ ಪ್ರದೇಶದ ಒಂಬತ್ತು ಮಂದಿ ಇಸ್ರೇಲಿಗಳು ಬಲಿಯಾಗಿದ್ದರು. ಈ ಪ್ರದೇಶಕ್ಕೆ ಭೇಟಿ ನೀಡಿದ ನೆತನ್ಯಾಹು, 'ಇರಾನ್‌ನ ಭಯೋತ್ಪಾದಕ ಆಡಳಿತವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ನಾವು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.

ಜಗತ್ತನ್ನು ರಕ್ಷಿಸಲು ನಮ್ಮ ಹೋರಾಟ: ನೆತನ್ಯಾಹು ಸಮರ್ಥನೆ

ಇರಾನ್‌ನ ಪರಮಾಣು ಮತ್ತು ಕ್ಷಿಪಣಿ ಕಾರ್ಯಕ್ರಮಗಳು ಕೇವಲ ಇಸ್ರೇಲ್‌ಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಅಪಾಯಕಾರಿ ಎಂದು ನೆತನ್ಯಾಹು ಪ್ರತಿಪಾದಿಸಿದ್ದಾರೆ. 'ನಾವು ನಮ್ಮನ್ನು ರಕ್ಷಿಸಿಕೊಳ್ಳಲು ನಿರ್ಧರಿಸಿದ್ದೇವೆ, ಆದರೆ ಆ ಮೂಲಕ ನಾವು ಇಡೀ ಜಗತ್ತನ್ನೇ ರಕ್ಷಿಸುತ್ತಿದ್ದೇವೆ' ಎಂದು ಅವರು ತಮ್ಮ ಮಿಲಿಟರಿ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದಾರೆ. ಬ್ಯಾಲಿಸ್ಟಿಕ್ ಮತ್ತು ಖಂಡಾಂತರ ಕ್ಷಿಪಣಿಗಳನ್ನು ಹೊಂದಿರುವ ಇರಾನ್ ವಿರುದ್ಧ ಇಸ್ರೇಲ್ ಈಗ ನಿರ್ಣಾಯಕ ಹೋರಾಟಕ್ಕೆ ಇಳಿದಿರುವುದು ಸ್ಪಷ್ಟವಾಗಿದೆ.