ಶಬರಿಗೆಮಲೆಗೆ ಮೂರಲ್ಲ 10 ಮಹಿಳೆಯರ ಪ್ರವೇಶ!
ಜ.1ರಂದೇ ಮಲೇಷ್ಯಾದ 3 ಮಹಿಳೆಯರಿಂದ ದರ್ಶನ| ಮರುದಿನ ಬಿಂದು, ಕನಕದುರ್ಗ ಪ್ರವೇಶ| ಕೇರಳದಲ್ಲಿ ಮುಂದುವರಿದ ಹಿಂಸೆ
ತಿರುವನಂತಪುರ[ಜ.07]: ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರು ಪ್ರವೇಶಿಸಿದ್ದರ ವಿರುದ್ಧ ಕೇರಳದಲ್ಲಿ ವ್ಯಾಪಕ ಪ್ರತಿಭಟನೆ, ಹಿಂಸಾಚಾರ ನಡೆಯುತ್ತಿರುವ ಸಂದರ್ಭದಲ್ಲೇ, ಜ.1ರಿಂದ ಐದು ದಿನಗಳ ಅವಧಿಯಲ್ಲಿ 10 ಮಹಿಳೆಯರು ಅಯ್ಯಪ್ಪ ಸನ್ನಿಧಾನಕ್ಕೆ ಭೇಟಿ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶಬರಿಮಲೆ ಬಳಿಕ ಇದೀಗ ಅಗಸ್ತ್ಯಮಲೆಗೂ ಸ್ತ್ರೀ ಪ್ರವೇಶ!
ಜ.2ರಂದು ನಸುಕಿನ ಜಾವ ಕೇರಳದ ಬಿಂದು ಹಾಗೂ ಕನಕದುರ್ಗ ಎಂಬ ಮಹಿಳೆಯರು ದೇಗುಲ ಪ್ರವೇಶಿಸಿ ಸುದ್ದಿ ಮಾಡಿದ್ದರು. ಯಾವುದೇ ವಯೋಮಾನದ ಮಹಿಳೆಯರು ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡಬಹುದು ಎಂದು 2018ರ ಸೆ.28ರಂದು ಸುಪ್ರೀಂಕೋರ್ಟ್ ನೀಡಿದ್ದ ತೀರ್ಪಿನ ಬಳಿಕ ದೇವಸ್ಥಾನಕ್ಕೆ ಕಾಲಿಟ್ಟಮೊದಲ ಮಹಿಳೆ ಅವರಾಗಿದ್ದರು. ಆದರೆ ಅವರಿಗಿಂತ ಒಂದು ದಿನ ಮೊದಲೇ, ಅಂದರೆ ಹೊಸ ವರ್ಷದ ಪ್ರಥಮ ದಿನವೇ ಮಲೇಷ್ಯಾದ ಮೂವರು ತಮಿಳು ಭಾಷಿಕ ಮಹಿಳೆಯರು ಅಯ್ಯಪ್ಪ ದರ್ಶನ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶಬರಿಮಲೆಯಲ್ಲಿ ಇತಿಹಾಸ: ದೇಗುಲ ಪ್ರವೇಶಿಸಿದ ಇಬ್ಬರು ಮಹಿಳೆಯರು!
ಈ ಮಹಿಳೆಯರ ದೇಗುಲ ಪ್ರವೇಶಕ್ಕೆ ಸಂಬಂಧಿಸಿದ ವಿಡಿಯೋ ಕೇರಳ ಪೊಲೀಸರ ವಿಶೇಷ ಶಾಖೆ ಅಧಿಕಾರಿಗಳ ಬಳಿ ಇದ್ದು, ಅದು ತನಗೆ ಲಭ್ಯವಾಗಿದೆ ಎಂದು ಆಂಗ್ಲದೈನಿಕವೊಂದು ವರದಿ ಮಾಡಿದೆ.
ಮಲೇಷ್ಯಾದ ಮೂವರು, ಕೇರಳದ ಇಬ್ಬರು ಹಾಗೂ ಶ್ರೀಲಂಕಾದ ಒಬ್ಬರು ಮಹಿಳೆಯರ ಜತೆಗೆ ಕನಿಷ್ಠ ಇನ್ನೂ ನಾಲ್ವರು ದೇಗುಲ ಪ್ರವೇಶಿಸಿದ್ದಾರೆ. 50 ವರ್ಷದೊಳಗಿನ ಒಟ್ಟು 10 ಮಂದಿ ಮಹಿಳೆಯರು ಅಯ್ಯಪ್ಪ ದರ್ಶನ ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಂಕಾ ಮಹಳೆ ಶಬರಿಮಲೆ ಪ್ರವೇಶಿಸಿದ್ದು ಸಿಸಿಟಿವಿಯಲ್ಲಿ ದೃಢ!
ಅಯ್ಯಪ್ಪ ದೇಗುಲಕ್ಕೆ ಬಂದಿದ್ದ ಮಲೇಷ್ಯಾದ ಮುವರು ಮಹಿಳೆಯರ ಗುರುತು, ಹೆಸರು, ವಯಸ್ಸು, ಪೊಲೀಸರ ಬಳಿ ಇದೆ ಎಂದು ಪತ್ರಿಕೆ ತಿಳಿಸಿದೆ.
ಕೇರಳದಲ್ಲಿ ಮುಂದುವರಿದ ಹಿಂಸೆ
ಶಬರಿಮಲೆ ವಿಷಯವಾಗಿ ಬಿಜೆಪಿ- ಆರ್ಎಸ್ಎಸ್ ಮತ್ತು ಆಡಳಿತಾರೂಢ ಸಿಪಿಎಂ ಮಧ್ಯೆ ಹಿಂಸಾಚಾರ ಮುಂದುವರಿದಿದ್ದು, ತಿರುವನಂತಪುರಂನಲ್ಲಿ ಭಾನುವಾರ ನಸುಕಿನ ವೇಳೆಯಲ್ಲಿ ಮನೆ ಹಾಗೂ ಅಂಗಡಿ ಮುಂಗಟ್ಟುಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿದೆ. ಕಣ್ಣೂರ್ ಜಿಲ್ಲೆಯ ಥಲಸ್ಸೆರಿಯಲ್ಲಿ ನಾನ್ ಗೆಜೆಟೆಟ್ ಅಧಿಕಾರಿಯೊಬ್ಬರ ಮನೆಯ ಮೇಲೆ ಬಾಂಬ್ ದಾಳಿ ನಡೆದಿದೆ. ಅದೇರೀತಿ ಕೆಲವು ಬಿಜೆಪಿ ಕಾರ್ಯಕರ್ತರ ಮನೆಗಳ ಮೇಲೂ ದಾಳಿ ನಡೆಸಲಾಗಿದ್ದು, ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದೆ. ಶನಿವಾರ ರಾತ್ರಿಯ ವರೆಗೆ 1,286 ಹಿಂಸಾಚಾರ ಘಟನೆಗಳು ವರದಿಯಾಗಿದ್ದು, ಈ ಸಂಬಂಧ 3,282 ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಡಿಜಿಪಿ ಲೋಕನಾಥ್ ಬೆಹರಾ ತಿಳಿಸಿದ್ದಾರೆ.
ಶಬರಿಮಲೆ ಪ್ರವೇಶಿಸಿದ ಬಿಂದು ಮತ್ತು ಕನಕದುರ್ಗ ಯಾರು? ಇಲ್ಲಿದೆ ಸ್ಫೋಟಕ ಮಾಹಿತಿ
ಶಬರಿಮಲೆಗೆ ರಾತ್ರೋ ರಾತ್ರಿ ಇಬ್ಬರು ಮಹಿಳೆಯರು ಪ್ರವೇಶಿಸಿದ್ದು ಹೇಗೆ? ಇಲ್ಲಿದೆ ವಿವರ