ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದ್ದು, ತೈಲ ಸಾಗಾಟಕ್ಕೆ ಅಡ್ಡಿಯಾಗಿದೆ. ಆದಾಗ್ಯೂ, ಭಾರತವು ಸಾಕಷ್ಟು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ಹೊಂದಿದ್ದು ಸದ್ಯಕ್ಕೆ ಯಾವುದೇ ಆತಂಕವಿಲ್ಲ ಎಂದಿದೆ.
ನವದೆಹಲಿ (ಮಾ.3): ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ವೈಮಾನಿಕ ದಾಳಿ ನಡೆಸಿದ ನಂತರ ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ತೀವ್ರಗೊಂಡಿದೆ. ಈ ಹಿನ್ನೆಲೆಯಲ್ಲಿ, ಕಚ್ಚಾ ತೈಲ ಮತ್ತು ಅನಿಲದ ಪೂರೈಕೆ ಬಗ್ಗೆ ಭಾರತಕ್ಕೆ ಯಾವುದೇ ಆತಂಕ ಇಲ್ಲ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ.
ಕಚ್ಚಾ ತೈಲ, ಎಲ್ಪಿಜಿ ಮತ್ತು ಎಲ್ಎನ್ಜಿ ವಿಚಾರದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಸದ್ಯ ದೇಶದಲ್ಲಿ 25 ದಿನಗಳಿಗೆ ಆಗುವಷ್ಟು ಕಚ್ಚಾ ತೈಲ ಮತ್ತು 25 ದಿನಗಳ ಉತ್ಪನ್ನಗಳ ದಾಸ್ತಾನು ಇದೆ ಎಂದು ಮೂಲಗಳು ತಿಳಿಸಿವೆ. ಕಳೆದ ತಿಂಗಳು, ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ರಾಜ್ಯಸಭೆಯಲ್ಲಿ ಮಾಹಿತಿ ನೀಡಿದ್ದರು. ಜಾಗತಿಕ ಮಟ್ಟದಲ್ಲಿ ಯಾವುದೇ ಸಮಸ್ಯೆ ಉಂಟಾದರೂ, ಭಾರತದ ಪೆಟ್ರೋಲಿಯಂ ಮೀಸಲು ಸಂಗ್ರಹವು 74 ದಿನಗಳವರೆಗೆ ಬೇಡಿಕೆಯನ್ನು ಪೂರೈಸಬಲ್ಲದು ಎಂದು ಅವರು ಹೇಳಿದ್ದರು.
ವಿಶ್ವದ ಐದನೇ ಒಂದು ಭಾಗದಷ್ಟು ತೈಲ ಸಾಗಾಟವಾಗುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿದ್ದರಿಂದ ಇಂಧನ ಬಿಕ್ಕಟ್ಟಿನ ಆತಂಕ ಹೆಚ್ಚಾಗಿದೆ. ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದರಿಂದ, ಸುಮಾರು 90% ಕಚ್ಚಾ ತೈಲ ಸಾಗಾಟ ಸ್ಥಗಿತಗೊಂಡಿದೆ. ಸಾಮಾನ್ಯವಾಗಿ 100ಕ್ಕೂ ಹೆಚ್ಚು ಹಡಗುಗಳು ಸಂಚರಿಸುತ್ತಿದ್ದ ಈ ಮಾರ್ಗದಲ್ಲಿ, ಭಾನುವಾರ ಕೇವಲ ಮೂರು ಟ್ಯಾಂಕರ್ಗಳು ಮಾತ್ರ ಹಾದುಹೋಗಲು ಸಾಧ್ಯವಾಯಿತು. ಸೋಮವಾರ ಈ ಸಂಖ್ಯೆ ಒಂದಕ್ಕೆ ಇಳಿದಿದೆ. ಸದ್ಯ, 700ಕ್ಕೂ ಹೆಚ್ಚು ಟ್ಯಾಂಕರ್ಗಳು ಜಲಸಂಧಿಯ ಎರಡೂ ಬದಿಗಳಲ್ಲಿ ಸಿಲುಕಿಕೊಂಡಿವೆ.

