ಬೆಂಗಳೂರಿನಲ್ಲಿ ಯುವ ರಂಗಭೂಮಿ ಕಲಾವಿದ ಮುರಳಿ ಆತ್ಮಹತ್ಯೆಗೆ ಶರಣಾಗಿದ್ದು, ಅವರ ಮೃತದೇಹ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಿರುಚಿತ್ರಗಳಲ್ಲಿಯೂ ನಟಿಸಿದ್ದ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ, ಈ ಘಟನೆ ಕನ್ನಡ ರಂಗಭೂಮಿ ವಲಯದಲ್ಲಿ ತೀವ್ರ ಆಘಾತವನ್ನುಂಟುಮಾಡಿದೆ.
ಬೆಂಗಳೂರು: ಕನ್ನಡ ರಂಗಭೂಮಿಗೆ ಬೆಳ್ಳಂಬೆಳಗ್ಗೆ ಆಘಾತಕಾರಿ ಸುದ್ದಿ ಬಂದಿದೆ. ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಯುವ ಕಲಾವಿದ ಮುರಳಿ ಎಂಬಾತ ಆತ್ಮ*ಹತ್ಯೆಗೆ ಶರಣಾಗಿರುವ ದುರ್ಘಟನೆ ಸಂಭವಿಸಿದೆ. ಬೆಂಗಳೂರಿನ ಸಾರಕ್ಕಿ ಸಮೀಪದ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದ್ದು, ಘಟನೆ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಿರುಚಿತ್ರಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿದ್ದ ಮುರಳಿ
ಮೃತ ಮುರಳಿ ಅವರು ರಂಗಭೂಮಿಯಲ್ಲಿ ಸಕ್ರಿಯರಾಗಿದ್ದು, ಕೆಲ ಕಿರುಚಿತ್ರಗಳಲ್ಲಿ ನಟಿಸುವ ಮೂಲಕವೂ ಗಮನಸೆಳೆದಿದ್ದರು. ಕಲೆಯ ಮೇಲಿನ ಅಪಾರ ಆಸಕ್ತಿ ಹೊಂದಿದ್ದ ಅವರು, ತಮ್ಮ ಅಭಿನಯದ ಮೂಲಕ ಸ್ನೇಹಿತರು ಹಾಗೂ ಸಹ ಕಲಾವಿದರ ಮನಸ್ಸಿನಲ್ಲಿ ವಿಶೇಷ ಸ್ಥಾನ ಗಳಿಸಿದ್ದರು.
ಇನ್ನೂ ಅವರ ಆತ್ಮ*ಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ವೈಯಕ್ತಿಕ ಕಾರಣಗಳೇ ಇದಕ್ಕೆ ಕಾರಣವೋ ಅಥವಾ ಬೇರೆ ಯಾವುದೇ ಒತ್ತಡಗಳಿದೆಯೋ ಎಂಬುದರ ಕುರಿತು ಪೊಲೀಸರ ತನಿಖೆಯಿಂದ ತಿಳಿದು ಬರಬೇಕಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೆಳೆಯನಿಗೆ ಭಾವನಾತ್ಮಕ ವಿದಾಯ
ಈ ಘಟನೆ ರಂಗಭೂಮಿ ವಲಯದಲ್ಲಿ ಆಘಾತ ಮೂಡಿಸಿದೆ. ಮುರಳಿ ಅವರ ಅಕಾಲಿಕ ನಿಧನಕ್ಕೆ ಸಹ ಕಲಾವಿದರು, ಸ್ನೇಹಿತರು ಮತ್ತು ಹಿತೈಷಿಗು ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ರಂಗಭೂಮಿ ಕಲಾವಿದ ವೆಂಕಟೇಶ್ ಪ್ರಸಾದ್ ಅವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಭಾವನಾತ್ಮಕವಾಗಿ ಬರೆದುಕೊಂಡು, ಗೆಳೆಯನನ್ನು ಕಳೆದುಕೊಂಡ ನೋವನ್ನು ಹಂಚಿಕೊಂಡಿದ್ದಾರೆ. "ಇಷ್ಟು ಸಣ್ಣ ವಯಸ್ಸಿನ, ಸುಂದರ ಮುಖದ ರಂಗಭೂಮಿ ಗೆಳೆಯ ...ಇಂದು ಬೆಳಿಗ್ಗೆ ನಮ್ಮೆಲ್ಲರನ್ನೂ ಬಿಟ್ಟು ಹೊರಟ..😓 ತಾನೇ ತನ್ನ ದಾರಿಯಲ್ಲಿ...😥 ಒಂದು ನಿಮಿಷ ನಮ್ಮಲ್ಲಿ ಯಾರಿಗಾದರೂ ತನ್ನ ನೋವು ಹೇಳಿಕೊಂಡಿದ್ದರೆ ಏನಾದರೂ ಪರಿಹಾರ ಮಾಡಬಹುದಿತ್ತು...ನಮಗೂ ಅವನ ನೋವೇನಿತ್ತು ಅರ್ಥವಾಗದೇ ಹೋಯಿತು..ಈ ಪಾಪ ಪ್ರಜ್ಞೆ ಕೊನೆಯವರೆಗೂ ಕಾಡದೇ ಬಿಡದು...ಹೋಗಿ ಬಾ ಮುರಳಿ.." ಎಂದು ಬರೆದುಕೊಂಡಿದ್ದಾರೆ.


