ಶೂಟಿಂಗ್ ಮುಗಿಸಿ ಮನೆಗೆ ತೆರಳ್ತಿದ್ದ ಸ್ಯಾಂಡಲ್ವುಡ್ ನಟಿಗೆ ಅಪಘಾತ, ಆಸ್ಪತ್ರೆಗೆ ದಾಖಲು!
ಶೂಟಿಂಗ್ ಮುಗಿಸಿ ಮನೆಗೆ ತೆರಳ್ತಿದ್ದ ಸ್ಯಾಂಡಲ್ವುಡ್ ಪೋಷಕ ನಟಿಗೆ ಅಪಘಾತ
ಗಾಯಾಳು ನಟಿ ಸುನೇತ್ರಾ(40) ಗೆ ಖಾಸಗಿ ಆಸ್ಪತ್ರೆಗೆ ದಾಖಲು
ಅಪಘಾತದ ರಭಸಕ್ಕೆ ನಟಿ ಸುನೇತ್ರಾ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ
ಬೆಂಗಳೂರು(ಏ.08): ಶೂಟಿಂಗ್ ಮುಗಿಸಿ ಮನೆಗೆ ತೆರಳ್ತಿದ್ದ ಸ್ಯಾಂಡಲ್ವುಡ್ ಪೋಷಕ ನಟಿ ಅಪಘಾತಕ್ಕೀಡಾಗಿದ್ದಾರೆ. ಗಾಯಾಳು ನಟಿ ಸುನೇತ್ರಾ(40)ರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಅಪಘಾತದ ರಭಸಕ್ಕೆ ನಟಿ ಸುನೇತ್ರಾ ತಲೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿದ್ದು, ಕೂಡಲೇ ಸಹಾಯಕ್ಕೆ ಧಾವಿಸಿದ ಸ್ಥಳೀಯರಿಂದ ಗಾಯಾಳು ಸುನೇತ್ರರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಬಸವನಗುಡಿಯ ಖಾಸಗಿ ಆಸ್ಪ್ರತ್ರೆಯಲ್ಲಿ ಸುನೇತ್ರಾಗೆ ಚಿಕಿತ್ಸೆ ಮುಂದುವರೆದಿದೆ.
ಸುನೇತ್ರರವರು ತಡರಾತ್ರಿ ಶೂಟಿಂಗ್ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಎನ್ ಆರ್ ಕಾಲೋನಿ 9 ನೇ ಅಡ್ಡ ರಸ್ತೆಯಲ್ಲಿ ದ್ವಿಚಕ್ರ ವಾಹನ ಅಪಘಾತ ಸಂಭವಿಸಿದೆ. ರಸ್ತೆಯಲ್ಲಿನ ಅವೈಜ್ಞಾನಿಕ ಹಂಪ್ ಮತ್ತು ರಸ್ತೆಗುಂಡಿಯಿಂದಾಗಿ ಅಪಘಾತ ಸಂಭವಿಸಿದ್ದು, ಬಸವನಗುಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.
ಕೊರೋನಾ ವೈರಸ್ ಇಲ್ಲ ಅಂದವರಿಗೆ ಕಪಾಳಕ್ಕೆ ಹೊಡೆಯಿರಿ ಎಂದಿದ್ದ ನಟಿ
ಸುನೇತ್ರಾ ಮಾಧ್ಯಮಗಳ ಮುಂದೆ ಮಾತನಾಡಿ, ಕೊರೋನಾ ವೈರಸ್ ಇಲ್ಲ, ಮಾಧ್ಯಮಗಳು ಹೆದರಿಸುತ್ತವೆ ಎಂದವರಿಗೆ ಕಪಾಳಕ್ಕೆ ಹೊಡೆಯಿರಿ ಎಂದು ಹೇಳಿದ್ದರು.
"ಕಳೆದ ವರ್ಷ ಲಾಕ್ಡೌನ್ನಲ್ಲಿ ಸಾಕಷ್ಟು ಅನುಭವಿಸಿದ್ದೇವೆ. ಗಾರೆ ಕೆಲಸ ಮಾಡುವವನು, ಕೂಲಿ ಮಾಡುವವನು ಅಂದು ದುಡಿಮೆ ಮಾಡಿಕೊಂಡು, ಅಂದೇ ಊಟ ಮಾಡುವವನ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಿ. ಚಾಕು ತೋರಿಸಿ ದುಡ್ಡು ವಸೂಲಿ ಮಾಡುವುದು ಶುರುವಾಗಿದೆ. ರಾತ್ರಿ ಹೀಗಾದರೆ ಏನು ಮಾಡ್ತೀರಿ? ಪೊಲೀಸ್ ಸ್ಟೇಶನ್ನಲ್ಲಿ ಸಿಬ್ಬಂದಿಗಳು ಕಡಿಮೆ ಇದ್ದಾರೆ. ಏನು ಮಾಡಬೇಕು?" ಎಂದು ರಮೇಶ್ ಪಂಡಿತ್ ಹೇಳಿದ್ದರು.
"ಒಂದು ದಿನ ಕೇರ್ಲೆಸ್ ಆಗಿದ್ದಕ್ಕೆ ನನ್ನ ಅಕ್ಕ ಹೋದಳು. ಬಿಬಿಎಂಪಿ ಅವರು ಐಸಿಯು ಇರುವ ಆಸ್ಪತ್ರೆ ಮಾಡಿಸಿ. ಕೊರೊನಾ ರೋಗಿಗಳಿಗೆ ಎಲ್ಲ ಸೌಕರ್ಯ ಇರುವ ಆಸ್ಪತ್ರೆಗಳ ವ್ಯವಸ್ಥೆ ಮಾಡಿ. ಎಲ್ಲರಿಗೂ ಪ್ರೆಶರ್ ಇದೆ. ನಮ್ಮ ಅಕ್ಕ ಹೋಗಿಬಿಟ್ಲು, ನಾನು ಸತ್ತರೂ ನಾನು ಅವಳನ್ನು ಕರೆದುಕೊಂಡು ಬರೋಕೆ ಆಗಲ್ಲ. ಮಕ್ಕಳಿದ್ದಾರೆ. ಏನು ಮಾಡಬೇಕು?" ಎಂದು ಸುನೇತ್ರಾ ಪಂಡಿತ್ ಹೇಳಿದ್ದರು.