ನಾನಿನ್ನ ಬಿಡಲಾರೆ ದುರ್ಗಾ ಪಾತ್ರಧಾರಿ ರಿಷಿಕಾ 'ನೀಲಿ ಇರತ್ತೆ ಹೆವ್ವಿ ಇರಲ್ಲ-ಅದೇನು' ಪ್ರಶ್ನೆ ಕೇಳಿ ಸೀರಿಯಲ್ ತಂಡವನ್ನು ಸುಸ್ತು ಮಾಡಿದ್ದಾರೆ. ಇದಕ್ಕೆ ಉತ್ತರ ಏನು? ಇಲ್ಲಿದೆ ನೋಡಿ...
ಎಡವಟ್ಟು ದುರ್ಗಾ ಎಂದರೆ, ಸೀರಿಯಲ್ ಪ್ರೇಮಿಗಳಿಗೆ ಮೊದಲು ನೆನಪಾಗೋದು ನಾನಿನ್ನ ಬಿಡಲಾರೆಯ ದುರ್ಗಾ. ಹೌದು. ಈಕೆ ಮಾಡೊದೆಲ್ಲಾ ಎಡವಟ್ಟೇ. ಆದರೂ ಸೌಮ್ಯ ಸ್ವಭಾವ ಇನ್ನೂ ಚಿಕ್ಕಮಕ್ಕಳ ಮುಗ್ಧತೆ ಇರುವ ಯುವತಿ ದುರ್ಗಾ. ಆತ್ಮದ ಜೊತೆ ಮಾತನಾಡುವ ಶಕ್ತಿ ಇರುವ ಏಕೈಕ ನಟಿ ಈಕೆ! ಅಂದಹಾಗೆ, ಈಕೆ ನಿಜ ಜೀವನದಲ್ಲಿ ಆತ್ಮಗಳ ಜೊತೆ ಮಾತನಾಡಲ್ಲ, ಬದಲಿಗೆ ನಾನಿನ್ನ ಬಿಡಲಾರೆ ಸೀರಿಯಲ್ನಲ್ಲಿ ಸತ್ತುಹೋಗಿರೋ ಅಂಬಿಕಾ ಇವಳಿಗೆ ಕಾಣಿಸುತ್ತಿದ್ದಾಳೆ. ಆಕೆ ಸತ್ತು ಹೋಗಿದ್ದಾಳೆ ಎನ್ನುವುದು ದುರ್ಗಾಗೆ ಗೊತ್ತಿಲ್ಲ. ಅಷ್ಟಕ್ಕೂ ಅವಳು ಯಾರು ಎನ್ನೋದೇ ಗೊತ್ತಿಲ್ಲ. ಆದರೂ ಇಬ್ಬರೂ ಫ್ರೆಂಡ್ಸ್ ಆಗಿದ್ದಾರೆ. ಅಂಬಿಕಾಗೋ ದುರ್ಗಾ ಮೇಲೆ ಇನ್ನಿಲ್ಲದ ಪ್ರೀತಿ. ತನ್ನ ಗಂಡನನ್ನೇ ದುರ್ಗಾಗೆ ಮದ್ವೆ ಮಾಡಿಸೋ ಪ್ಲ್ಯಾನ್ ಈ ಅಂಬಿಕಾ ಎನ್ನೋ ಆತ್ಮದ್ದು. ಇದು ಕ್ಯೂಟ್ ಆತ್ಮ ಎಂದೇ ಫೇಮಸ್ಸು.
ಇಂತಿಪ್ಪ ದುರ್ಗಾ ಅರ್ಥಾತ್ ರಿಷಿಕಾ, ಒಂದು ಪ್ರಶ್ನೆ ಕೇಳಿ ಸೀರಿಯಲ್ ತಂಡವನ್ನೇ ಸುಸ್ತು ಮಾಡಿದ್ದಾರೆ. ಅವರು ಕೇಳಿರೋ ಪ್ರಶ್ನೆ ಏನೆಂದರೆ, 'ನೀಲಿ ಇರತ್ತೆ ಹೆವ್ವಿ ಇರಲ್ಲ-ಅದೇನು' ಎನ್ನುವುದು. ಇದಕ್ಕೆ ಸೀರಿಯಲ್ನ ವಿವಿಧ ಪಾತ್ರಧಾರಿಗಳು ಏನೇನೋ ಉತ್ತರ ಕೊಟ್ಟಿದ್ದಾರೆ. ಆಕಾಶ, ಕಣ್ಣು ಅದು ಇದು ಏನೇನೋ ನೀಲಿ ಬಣ್ಣ ಇರುವ ವಸ್ತುಗಳ ಬಗ್ಗೆ ಹೇಳಿದ್ದಾರೆ. ಆದರೆ ನಟಿ ಅದ್ಯಾವುದೂ ಸರಿಯಲ್ಲ ಎಂದಿದ್ದಾಳೆ. ಕೊನೆಗೆ ಶರತ್ ಸಹೋದರ ಕೊನೆಗೂ ಇದಕ್ಕೆ ಸರಿಯಾದ ಉತ್ತರ ಕೊಟ್ಟಿದ್ದಾರೆ. ಅದೇನೆಂದರೆ ಹೆವ್ವಿ ಅಲ್ಲದೇ ಇರೋದು ಎಂದ್ರೆ ಲೈಟ್ ಬ್ಲೂ (Light Blue) ಎಂದು. ಇಷ್ಟು ಸಿಂಪಲ್ ಆಗಿರೋ ಉತ್ತರ ತಮಗೆ ಬರಲಿಲ್ಲ ಎಂದು ಎಲ್ಲರೂ ಓಓಓಓ ಎಂದಿದ್ದಾರೆ.
ಇನ್ನು ದುರ್ಗಾ ಪಾತ್ರಧಾರಿ ರಿಷಿಕಾ ಕುರಿತು ಹೇಳುವುದಾದರೆ, ರಿಷಿಕಾಗೆ ಇದು ನಾಲ್ಕನೇ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾಕುಮಾರಿ' ಧಾರಾವಾಹಿಯಲ್ಲಿ ನಾಯಕನ ತಂಗಿ ಐಶ್ವರ್ಯಾ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟರು. ಮೊದಲ ಸೀರಿಯಲ್ನಲ್ಲಿ ಸೈಡ್ ರೋಲ್ನಲ್ಲಿ ಕಾಣಿಸಿಕೊಂಡಿದ್ದರೂ, ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ಬಳಿಕ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾದಾನ' ಧಾರಾವಾಹಿಯಲ್ಲಿ ಚಿತ್ರಾ ಆಗಿ ನಟಿಸಿದ ಈಕೆ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡ ಪ್ರತಿಭೆ.
ನಾ ನಿನ್ನ ಬಿಡಲಾರೆ ಸೀರಿಯಲ್ ಕುರಿತು ಹೇಳುವುದಾದರೆ, ಶರತ್ ಕಂಪೆನಿಯಲ್ಲಿ ಕೆಲಸ ಮಾಡುವ ಎಡವಟ್ಟು ದುರ್ಗಾ ತುಂಬಾ ಒಳ್ಳೆಯ ಸ್ವಭಾವದವಳಾಗಿದ್ದು, ಆಕೆಯನ್ನು ತನ್ನ ಪತಿಯ ಜೊತೆ ಮದ್ವೆ ಮಾಡಿಸಬೇಕು ಎನ್ನುವ ಆಸೆ ಅಂಬಿಕಾಗೆ. ಅವಳು ತಾನು ಯಾರೆಂದು ಹೇಳದೇ ದುರ್ಗಾಗೆ ಮಾತ್ರ ಕಾಣಿಸಿಕೊಂಡು ಫ್ರೆಂಡ್ ಆಗಿದ್ದಾಳೆ. ಆದರೆ ಆಕೆಯ ಎಡವಟ್ಟಿನಿಂದ ಶರತ್ಗೆ ಆಕೆಯನ್ನು ಕಂಡ್ರೆ ಇನ್ನಿಲ್ಲದ ಕೋಪ. ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ. ನಾಯಕ ಶರತ್ ಪಾತ್ರದಲ್ಲಿ ಶರತ್ ಪದ್ಮನಾಭ್ ಕಾಣಿಸಿಕೊಂಡಿದ್ದರೆ, ವಿಕ್ರಾಂತ್ ರೋಣ ಚಿತ್ರದಲ್ಲಿ ನಟಿಸಿದ್ದ ನೀತಾ ಅಶೋಕ್, ಅಂಬಿಕಾ ಪಾತ್ರದಲ್ಲಿದ್ದಾರೆ. ದುರ್ಗಾಗಳಾಗಿ ರಿಷಿಕಾ ಹಾಗೂ ವಿಲನ್ ಆಗಿ ರುಹಾನಿ ಶೆಟ್ಟಿ ನಟಿಸುತ್ತಿದ್ದಾರೆ.
