ಹಿಂದಿಯಲ್ಲೂ ಶತದಿನೋತ್ಸವ ಆಚರಿಸಿದ ಬ್ಲಾಕ್ಬಸ್ಟರ್ ‘ಕಾಂತಾರ’
ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದ ಬ್ಲಾಕ್ಬಸ್ಟರ್ ಚಲನಚಿತ್ರ ‘ಕಾಂತಾರ’ ಹಿಂದಿ ಅವತರಣಿಕೆಯಲ್ಲೂ 100 ದಿನ ಪೂರೈಸಿದೆ. ಅ.14ರಂದು ಸಿನಿಮಾದ ಹಿಂದಿ ಅವತರಣಿಕೆಯನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು.
ಬೆಂಗಳೂರು (ಜ.23): ನಟ, ನಿರ್ದೇಶಕ ರಿಷಬ್ ಶೆಟ್ಟಿ ನಿರ್ದೇಶನದ ಬ್ಲಾಕ್ಬಸ್ಟರ್ ಚಲನಚಿತ್ರ ‘ಕಾಂತಾರ’ ಹಿಂದಿ ಅವತರಣಿಕೆಯಲ್ಲೂ 100 ದಿನ ಪೂರೈಸಿದೆ. ಅ.14ರಂದು ಸಿನಿಮಾದ ಹಿಂದಿ ಅವತರಣಿಕೆಯನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಈ ಕುರಿತಾಗಿ ಟ್ವೀಟರ್ನಲ್ಲಿ ಸಂಭ್ರಮ ಹಂಚಿಕೊಂಡಿರುವ ನಿರ್ದೇಶಕ ರಿಷಬ್ ಶೆಟ್ಟಿ, ಸಾಂಪ್ರಾದಾಯಿಕ ಜಾನಪದವನ್ನು ಬಿಂಬಿಸುವ ಸಿನಿಮಾ ‘ಕಾಂತಾರ’ ಹಿಂದಿ ಭಾಷೆಯಲ್ಲೂ 100 ದಿನಗಳನ್ನು ಪೂರೈಸಿದೆ. ಈ ವಿಷಯವನ್ನು ಹಂಚಿಕೊಳ್ಳಲು ಸಂಭ್ರಮವಾಗುತ್ತಿದೆ. ಅಚಲ ಬೆಂಬಲಕ್ಕಾಗಿ ನಾವು ನಮ್ಮ ಪ್ರೇಕ್ಷಕರಿಗೆ ಕೃತಜ್ಞತೆಯನ್ನು ತಿಳಿಸುತ್ತೇವೆ ಎಂದು ಹೇಳಿದ್ದಾರೆ. ಮೊದಲಿಗೆ ಕನ್ನಡ ಭಾಷೆಯಲ್ಲಷ್ಟೇ ಬಿಡುಗಡೆಯಾದ ಸಿನಿಮಾಕ್ಕೆ ಭಾರಿ ಜನಮನ್ನಣೆ ದೊರೆತ ಹಿನ್ನೆಲೆಯಲ್ಲಿ ಉಳಿದ ಭಾಷೆಗಳಲ್ಲೂ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು.
ಕಾಂತಾರ ಚಿತ್ರದಲ್ಲಿ ಯಾವುದೇ ಅಜೆಂಡಾಗಳಿಲ್ಲ: ‘ಕಾಂತಾರ ಸರಳ ಕಥೆ ಇರುವ ಚಿತ್ರ. ಇದರಲ್ಲಿ ಯಾವುದೇ ಅಜೆಂಡಾಗಳಿಲ್ಲ’ ಎಂದು ರಿಷಬ್ ಶೆಟ್ಟಿಹೇಳಿದ್ದಾರೆ. ಖಾಸಗಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರಿಷಬ್, ‘ಸಿನಿಮಾದಲ್ಲಿ ಜಾನಪದ, ನಂಬಿಕೆ, ಸಂಸ್ಕೃತಿಯ ಅಂಶಗಳಿವೆ. ನನ್ನ ಬಾಲ್ಯದಿಂದ ನೋಡಿದ ಸಂಗತಿಗಳನ್ನೇ ಸಿನಿಮಾದಲ್ಲಿ ತಂದಿದ್ದೇನೆ. ಅದು ಬಿಟ್ಟು ಅಜೆಂಡಾಗಳೆಲ್ಲ ಏನೂ ಇಲ್ಲ. ಕಾಂತಾರ ಅಂತಲ್ಲ, ಯಾವುದೇ ಸಿನಿಮಾ ತಗೊಂಡರೂ 0.1 ಪರ್ಸೆಂಟ್ ಜನ ತಗಾದೆ ತೆಗೆಯುತ್ತಾರೆ. ಇಂಥವಕ್ಕೆಲ್ಲ ನಾನು ಸಿನಿಮಾ ಮೂಲಕವೇ ಉತ್ತರ ಕೊಡುತ್ತೇನೆ.
ಜನ ನನ್ನ ಸಿನಿಮಾ ಇಷ್ಟ ಆಗಲಿಲ್ಲ ಅಂದರೂ ನಾನು ನನ್ನ ಕೆಲಸ ಮುಂದುವರಿಸುತ್ತಲೇ ಇರುತ್ತೇನೆ. ಇಂದು ರಾಜಕೀಯ ಎಲ್ಲಾ ಕಡೆ ಇದೆ. ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ’ ಎಂದು ರಿಷಬ್ ಶೆಟ್ಟಿಹೇಳಿದ್ದಾರೆ. ‘ಕಾಂತಾರ ಆಸ್ಕರ್ಗೆ ಶಾರ್ಚ್ಲಿಸ್ಟ್ ಆದಮೇಲೆ ಮುಂಬರುವ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ನಾವು ಇವನ್ನು ದಾಟಿ ಮುಂದೆ ಹೋಗುತ್ತಿರಬೇಕು. ಯಾವುದೇ ಹೊರೆಯಿಲ್ಲದೇ ಸಿನಿಮಾ ಮಾಡಬೇಕು. ನಾನು ಒತ್ತಡವನ್ನು ಹೇರಿಕೊಂಡಿದ್ದರೆ ಕಾಂತಾರದಂಥಾ ಸಿನಿಮಾ ಮಾಡಲಾಗುತ್ತಿರಲಿಲ್ಲ’ ಎಂದೂ ರಿಷಬ್ ಹೇಳಿದ್ದಾರೆ.
Kantara; ಸಕ್ಸಸ್ ಬಳಿಕ ಹರಕೆ ತೀರಿಸಿದ ಚಿತ್ರತಂಡ; ರಿಷಬ್ ಮತ್ತು ತಂಡವನ್ನು ಅಪ್ಪಿಕೊಂಡ ದೈವ
ಆಸ್ಕರ್ ಅಂಗಳದಲ್ಲಿ ಕಾಂತಾರ: ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆ ಪಡೆದಿದೆ. ಈ ಸುದ್ದಿಯನ್ನು ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿತ್ತು. ಕಾಂತಾರ ಆಸ್ಕರ್ ಪ್ರಶಸ್ತಿ ಗೆಲ್ಲಲಿ ಎಂದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ.