Kantara; ಸಕ್ಸಸ್ ಬಳಿಕ ಹರಕೆ ತೀರಿಸಿದ ಚಿತ್ರತಂಡ; ರಿಷಬ್ ಮತ್ತು ತಂಡವನ್ನು ಅಪ್ಪಿಕೊಂಡ ದೈವ
ಕಾಂತಾರ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ಮತ್ತು ಇಡೀ ತಂಡ ದೈವಗೆ ಹರಕೆ ತೀರಿಸಿದೆ. ಕಾಂತಾರ ತಂಡ ಹರಕೆ ತೀರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕಾಂತಾರ, ರಿಷಬ್ ಶೆಟ್ಟಿಗೆ ದೊಡ್ಡ ಸಕ್ಸಸ್ ತಂದುಕೊಟ್ಟ ಸಿನಿಮಾ. ದೈವ, ಭೂತಕೋಲ ಕರಾವಳಿ ಭಾಗದ ಆಚಾರ, ವಿಚಾರಗಳ ಬಗ್ಗೆ ಜಗತ್ತಿಗೆ ಸಾರಿದ ಸಿನಿಮಾ. ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಿದೆ. ಈ ಸಕ್ಸಸ್ಗೆ ಕಾರಣ ದೈವ ಎನ್ನುವುದು ಸಿನಿಮಾತಂಡದ ನಂಬಿಕೆ.
ಕಾಂತಾರ ಸೂಪರ್ ಸಕ್ಸಸ್ ಬಳಿಕ ಚಿತ್ರತಂಡ ಹರಕೆ ತೀರಿಸಿದೆ. ಹರಿಕೆ ವೇಳೆ ಇಡೀ ಕಾಂತಾರ ತಂಡ ಭಾಗಿಯಾಗಿತ್ತು. ಮಂಗಳೂರಿನಲ್ಲಿ ನಡೆದ ಭೂತಕೋಲದಲ್ಲಿ ಚಿತ್ರತಂಡ ಭಾಗಿಯಾಗಿ ವಿಶೇಷ ಹರಕೆ ತೀರಿಸಿದೆ.
ಕೋಲದಲ್ಲೀ ಇಡೀ ಕಾಂತಾರ ತಂಡದವರಾದ ನಿರ್ಮಾಪಕ ವಿಜಯ್ ಕಿರಂಗದೂರು, ಕಾರ್ತಿಕ್ ಗೌಡ, ರಿಷಬ್ ಶೆಟ್ಟಿ, ಪ್ರಗತಿ ಶೆಟ್ಟಿ, ಸಪ್ತಮಿ ಗೌಡ ಸೇರಿದಂತೆ ಎಲ್ಲರೂ ಭಾಗಿಯಾಗಿದ್ದರು. ದೈವ ನರ್ತಕ ಇಡೀ ತಂಡವನ್ನು ಅಪ್ಪಿಕೊಂಡ ದೃಶ್ಯ ರೋಮಾಂಚನಕಾರಿಯಾಗಿದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಕಾಂತಾರ ಸಿನಿಮಾದಲ್ಲಿ ದೈವ ನರ್ತಕನಾಗಿ ರಿಷಬ್ ಶೆಟ್ಟಿ ಪೊಲೀಸ್ ಅಧಿಕಾರಿ ಹಾಗೂ ಊರಿನವರನ್ನು ಅಪ್ಪಿಕೊಂಡ ಹಾಗೆ ಹರಕೆ ತೀರಿಸುವ ವೇಳೆಯೂ ದೈವ ನರ್ತಕ ರಿಷಬ್ ಶೆಟ್ಟಿಯನ್ನು ಅಪ್ಪಿಕೊಂಡಿದೆ. ಬಳಿಕ ಇಡೀ ತಂಡದವರನ್ನು ಅಪ್ಪಿಕೊಂಡಿರುವ ದೃಶ್ಯ ಎಲ್ಲರ ಗಮನ ಸೆಳೆಯುತ್ತಿದೆ.
ಕಾಂತಾರ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಬಾಚಿಕೊಂಡಿದೆ. ಸ್ಯಾಂಡಲ್ ವುಡ್ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಪರಭಾಷೆಯಲ್ಲೂ ಕೋಟಿ ಕೋಟಿ ಬಳಿಕೆ ಮಾಡಿದೆ.
ಕಾಂತಾರ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಕನ್ನಡ ಸಿನಿಮಾ. ಈ ಸಿನಿಮಾ ಬಳಿಕ ರಿಷಬ್ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರ ಹೊಮ್ಮಿದರು. ಕಾಂತಾರ ಸಿನಿಮಾಗೆ ಪ್ರೇಕ್ಷಕರು ಮಾತ್ರವಲ್ಲದೇ ಸಿನಿ ಗಣ್ಯರು ಕೂಡ ಹಾಡಿಹೊಗಳಿದ್ದಾರೆ. ರಜನಿಕಾಂತ್, ಪ್ರಭಾಸ್, ಕಮಲ್ ಹಾಸನ್, ಧನುಷ್, ಕಾರ್ತಿ, ಅನುಷ್ಕಾ ಶೆಟ್ಟಿ ಸೇರಿದಂತೆ ಬಹುತೇಕ ಕಲಾವಿದರು ಹಾಡಿಹೊಗಳಿದ್ದರು.
ಸೌತ್ ಸಿನಿಮಾರಂಗದ ಕಲಾವಿದರು ಮಾತ್ರವಲ್ಲದೇ ಬಾಲಿವುಡ್ ಮಂದಿ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಕಂಗನಾ ರಣಾವತ್, ಹೃತಿಕ್ ರೋಷನ್, ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ ಸೇರಿದಂತೆ ಅನೇಕರು ಕಾಂತಾರ ಸಿನಿಮಾಗೆ ಫಿದಾ ಆಗಿದ್ದರು.
ಕಾಂತಾರ ಕ್ಲೈಮ್ಯಾಕ್ಸ್ ದೃಶ್ಯ ಎಲ್ಲರ ಮನಗೆದ್ದಿತ್ತು. ರಿಷಬ್ ಶೆಟ್ಟಿ ನಟನೆ, ನಿರ್ದೇಶನಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಸಿನಿಮಾದ ಹಾಡುಗಳು ಕೂಡ ಚಿತ್ರದ ಸಕ್ಸಸ್ಗೆ ಬಹುದೊಡ್ಡ ಕೊಡುಗೆಯಾಗಿದೆ. ಕಾಂತಾರ ಸಕ್ಸಸ್ ಬಳಿಕ ಪಾರ್ಟ್-2 ಮಾಡಲಾಗುತ್ತದೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಇದುವರೆಗೂ ಪಾರ್ಟ್-2 ಬಗ್ಗೆ ಯಾವುದೇ ಮಾಹಿತಿ ರಿವೀಲ್ ಮಾಡಿಲ್ಲ.