Sarkari Nyaya Bele Angadi Review: ಮಹಿಳೆಯೊಬ್ಬಳು ಸರ್ಕಾರಿ ನ್ಯಾಯ ಬೆಲೆ ಅಂಗಡಿ ನಡಿಸೋದು ಎಷ್ಟು ಕಷ್ಟ ಎಂದು ಹೇಳುವ ಮೂಲಕ ಮಹಿಳಾ ಸಬಲೀಕರಣದ ಬಗ್ಗೆಯೂ ಈ ಸಿನಿಮಾ ಮಾತನಾಡುತ್ತದೆ.

ಕೇಶವ

ಇದು ಜನ ಸಾಮಾನ್ಯರ ಕತೆ. ಸೋಮನಹಳ್ಳಿಯ ಸರ್ಕಾರಿ ಪಡಿತರ ಅಂಗಡಿಯ ಸುತ್ತಾ ಈ ಚಿತ್ರದ ಕತೆ ಸಾಗುತ್ತದೆ. ತೀರಾ ಸಾಧಾರಣವಾಗಿ ತೆರೆದುಕೊಳ್ಳುವ ಕತೆ, ಆ ಕತೆಗೆ ತಕ್ಕಂತೆ ಬಂದು ಹೋಗುವ ಪಾತ್ರಧಾರಿಗಳ ಸಹಜ ನಟನೆ, ಯಾವುದೇ ಅಬ್ಬರ ಇಲ್ಲದೆ ಮೂಡಿ ಬಂದಿರುವ ದೃಶ್ಯ- ಸಂಭಾಷಣೆಗಳಿಂದ ಬಡವರ ಜೀವನಕ್ಕಾಗಿ ರೂಪಿಸಿರುವ ವ್ಯವಸ್ಥೆಯೊಂದರ ಸ್ಥಿತಿಗತಿಗಳನ್ನು ನಿಧಾನಕ್ಕೆ ಪ್ರೇಕ್ಷಕರಿಗೆ ದಾಟಿಸುತ್ತಾರೆ ನಿರ್ದೇಶಕ ಸಾತ್ವಿಕ್‌ ಪವನ್‌ ಕುಮಾರ್‌ ಅವರು.

ಮಹಿಳೆಯೊಬ್ಬಳು ಸರ್ಕಾರಿ ನ್ಯಾಯ ಬೆಲೆ ಅಂಗಡಿ ನಡಿಸೋದು ಎಷ್ಟು ಕಷ್ಟ ಎಂದು ಹೇಳುವ ಮೂಲಕ ಮಹಿಳಾ ಸಬಲೀಕರಣದ ಬಗ್ಗೆಯೂ ಈ ಸಿನಿಮಾ ಮಾತನಾಡುತ್ತದೆ. ಗಂಡನನ್ನು ಕಳೆದುಕೊಂಡಿರುವ ಸೋಮನಹಳ್ಳಿ ಪಾರ್ವತಿಯ ಸ್ವಾಭಿಮಾನದ ಬದುಕಿಗೆ ಸರ್ಕಾರಿ ನ್ಯಾಯ ಬೆಲೆ ಅಂಗಡಿಯೇ ಆಸರೆ. ತನ್ನ ಗಂಡ ಚಂದ್ರಪ್ಪ ಬಿಟ್ಟು ಹೋಗಿರುವ ನ್ಯಾಯ ಬೆಲೆ ಅಂಗಡಿಯ ಸಾರಥಿಯಾಗಲು ಹೊರಟಾಗಿ ಅಧಿಕಾರಿಯೊಬ್ಬ ಆಕೆಯನ್ನು ಲೈಂಗಿಕವಾಗಿ ಶೋಷಿಸುವುದು, ಕೊನೆಗೆ ಇದರ ವಿರುದ್ಧ ಪಾರ್ವತಿ ತಿರುಗಿ ನಿಂತಾಗ ಏನಾಗುತ್ತದೆ ಎಂಬುದು ಸಿನಿಮಾ.

ಚಿತ್ರ: ಸರ್ಕಾರಿ ನ್ಯಾಯ ಬೆಲೆ ಅಂಗಡಿ

ನಿರ್ದೇಶನ: ಸಾತ್ವಿಕ್‌ ಪವನ್‌ ಕುಮಾರ್‌

ತಾರಾಗಣ: ರಾಗಿಣಿ ದ್ವಿವೇದಿ, ಕುಮಾರ್‌ ಬಂಗಾರಪ್ಪ, ರೋಹಿತ್‌ ಶ್ರೀನಾಥ್‌, ದೊಡ್ಡಣ್ಣ, ಕೃಷ್ಣಪ್ಪ, ಎಲ್‌. ಆರ್‌. ಶಿವರಾಮೇಗೌಡ

ರೇಟಿಂಗ್‌: 3

ಇಂಥ ಸಾಮಾಜಿಕ ಕಳಕಳಿಯ ಚಿತ್ರದಲ್ಲಿ ಗ್ಲಾಮರ್‌ ನಟಿ ರಾಗಿಣಿ ಅವರನ್ನು ನಟಿಸುವಂತೆ ಮಾಡಿರುವುದು, ಕುಮಾರ್‌ ಬಂಗಾರಪ್ಪ, ದೊಡ್ಡಣ್ಣ, ಪ್ರಣಯರಾಜ ಶ್ರೀನಾಥ್‌ ಪುತ್ರ ರೋಹಿತ್‌ ಶ್ರೀನಾಥ್‌ ಅವರನ್ನು ಕರೆತಂದಿರುವುದು ಚಿತ್ರದ ಹೆಚ್ಚುಗಾರಿಕೆ. ಒಂದಿಷ್ಟು ಸಿನಿಮಿಯ ಘಟನೆಗಳಿಂದ ಸಮಸ್ಯೆಗೆ ಪರಿಹಾರ ಸೂಚಿಸಿದರೂ ಇನ್ನಷ್ಟು ಆಪ್ತವಾಗಿ ಚಿತ್ರವನ್ನು ಕಟ್ಟಿಕೊಡುವ ಸಾಧ್ಯತೆಗಳಿದ್ದವು ಎಂಬುದು ಕೂಡ ಸತ್ಯ.