Asianet Suvarna News Asianet Suvarna News

ಚಿತ್ರ ವಿಮರ್ಶೆ: ಹೀರೋ

ಒಂದು ತುಂಬಾ ಸರಳವಾದ ಕತೆ ಇಟ್ಟುಕೊಂಡು ಎರಡು ಗಂಟೆ 5 ನಿಮಿಷ ಥಿಯೇಟರಲ್ಲಿ ಕೂರಿಸುವ ಹೊಸ ಕಾಲದ ಸಿನಿಮಾ ಹೀರೋ. ಒಂದೇ ದಿನದಲ್ಲಿ ನಡೆಯುವ ಕ್ಷಣ ಭಂಗುರದ ಕತೆ. ಹೀರೋ ರೌಡಿಯೊಬ್ಬನ ಗಡ್ಡ ಶೇವ್‌ ಮಾಡುವ ನೆಪದಲ್ಲಿ ತನ್ನ ಹಳೇ ಪ್ರೇಯಸಿಯನ್ನು ಹುಡುಕಿಕೊಂಡು ಎಸ್ಟೇಟ್‌ ಒಂದಕ್ಕೆ ಬರುತ್ತಾನೆ. ಅಲ್ಲಿ ಏನಂದುಕೊಂಡಿದ್ದನೋ ಅದು ನಡೆಯುವುದಿಲ್ಲ. ಯಾವಾಗ ಬದುಕಲ್ಲಿ ಅಂದುಕೊಂಡಿದ್ದು ನಡೆಯುವುದಿಲ್ಲವೋ ಅಲ್ಲಿಂದ ಕತೆ ಶುರುವಾಗುತ್ತದೆ.

Rishab shetty kannada movie Hero film review vcs
Author
Bangalore, First Published Mar 6, 2021, 9:36 AM IST

ರಾಜೇಶ್‌ ಶೆಟ್ಟಿ

ಮೊದಲಾರ್ಧದಲ್ಲಿ ಕತೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ದ್ವಿತೀಯಾರ್ಧ ಚೇಸಿಂಗ್‌. ಈ ಎರಡೂ ಭಾಗಗಳಲ್ಲಿ ಇಲ್ಲಿನ ವಾತಾವರಣವೂ ಒಂದು ಪಾತ್ರ. ಈ ವಾತಾವರಣವಿಲ್ಲದಿದ್ದರೆ ಕತೆ ಇಲ್ಲ ಅನ್ನುವಷ್ಟುಬೆರೆತು ಹೋಗುತ್ತದೆ. ಮಂಜು ಮುಸುಕಿದ ಕಾಫಿ ತೋಟ, ಮಳೆ ಬಿದ್ದ ಒದ್ದೆ ಹಾದಿ, ಮಣ್ಣು ರಸ್ತೆಯಲ್ಲಿ ಮಾತ್ರ ಓಡಾಡುವ ಜೀಪು, ಹಳೆಯದೊಂದು ಟ್ರ್ಯಾಕ್ಟರ್‌ ಎಲ್ಲವೂ ಇಲ್ಲಿ ಪಾತ್ರಗಳೇ. ಈ ಸಿನಿಮಾದ ಶಕ್ತಿ ಏನೆಂದರೆ ಎಲ್ಲವೂ ಇಲ್ಲಿ ಕತೆ. ಎಲ್ಲವೂ ಇಲ್ಲಿ ಪಾತ್ರ. ದಾರಿಯಲ್ಲಿ ಇದ್ದಕ್ಕಿದ್ದಂತೆ ಹಾದುಹೋಗುವ ಒಂದು ಹಂದಿ ಕೂಡ ನೆನಪಲ್ಲಿ ಉಳಿಯುವಷ್ಟುಶಕ್ತ.

ಸಂದೇಶ ಇಲ್ಲ, ಮಜಾ ಸಿನಿಮಾ ಹೀರೋ: ರಿಷಬ್‌ ಶೆಟ್ಟಿ 

ನಿರ್ದೇಶನ: ಎಂ. ಭರತ್‌ ರಾಜ್‌

ತಾರಾಗಣ: ರಿಷಬ್‌ ಶೆಟ್ಟಿ, ಪ್ರಮೋದ್‌ ಶೆಟ್ಟಿ, ಗಾನವಿ ಲಕ್ಷ್ಮಣ್‌, ಉಗ್ರಂ ಮಂಜು, ಪ್ರದೀಪ್‌ ಶೆಟ್ಟಿ, ಅನಿರುದ್ಧ ಮಹೇಶ್‌

ಸಂಗೀತ: ಅಜನೀಶ್‌ ಲೋಕನಾಥ್‌

ಛಾಯಾಗ್ರಾಹಣ: ಅರವಿಂದ್‌ ಕಶ್ಯಪ್‌

ರೇಟಿಂಗ್‌- 3

ಸಿನಿಮಾ ಮೇಕಿಂಗ್‌ ಬದಲಾಗಿದೆ. ಮೊದಲಿನಂತೆ ಈಗಿಲ್ಲ. ಅದಕ್ಕೆ ಸಾಕ್ಷಿ ಈ ಸಿನಿಮಾ. ಒಂದು ಹೊಸ ಪ್ಯಾಷನೇಟ್‌ ಟೀಮ್‌ ಇಟ್ಟುಕೊಂಡು ಹೊಸ ಕಾಲದ ಸಿನಿಮಾ ಹೇಗೆ ಮಾಡಬಹುದು ಅನ್ನುವುದಕ್ಕೆ ಉದಾಹರಣೆ. ಸಿನಿಮಾ ಪೂರ್ತಿ ಕಲಾವಿದರು ನಗಿಸುತ್ತಿರುತ್ತಾರೆ. ಮುಂದೇನಾಗುತ್ತದೆ ಎಂಬ ಕುತೂಹಲ ಉಳಿಸಿಕೊಂಡೇ ಸಾಗುತ್ತಾರೆ. ಅಷ್ಟರ ಮಟ್ಟಿಗೆ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಹಾಗಂತ ಇದೊಂದು ಕ್ಲಾಸಿಕ್‌ ಸಿನಿಮಾ ಅಲ್ಲ. ಕ್ಲಾಸಿಕ್‌ ಆಗುವ ಗುಣಗಳು ಕಡಿಮೆ ಇದೆ. ಇದೊಂದು ತಂತ್ರಜ್ಞರ ಸಿನಿಮಾ. ಕತೆಗಿಂತ ಚಿತ್ರಕತೆಗೆ ಮಹತ್ವ. ಚಿತ್ರಕತೆಯಷ್ಟೇ ಸಂಗೀತ ಮತ್ತು ಛಾಯಾಗ್ರಹಣಕ್ಕೂ ಮರ್ಯಾದೆ. ಎಲ್ಲವೂ ಎಲ್ಲವುದರ ಜೊತೆ ಸೇರಿ ಇಲ್ಲೊಂದು ಮ್ಯಾಜಿಕ್‌ ಸೃಷ್ಟಿಯಾಗಿದೆ. ಹಾಗಾಗಿ ಹೀರೋ ಒಮ್ಮೆ ನೋಡಿ ನಗಬಹುದಾದ, ಮನಸ್ಸಲ್ಲೇ ಇಟ್ಟುಕೊಂಡು ಸವಿಯಬಹುದಾದ ಸಿನಿಮಾ.

ಲಾಕ್‌ಡೌನ್‌ನಲ್ಲಿ ಹೀರೋ ಆದ ರಿಷಬ್‌ ಶೆಟ್ಟಿ ಶುಕ್ರವಾರ ಬರ್ತಿದ್ದಾರೆ; ಏನಿದೆ ವಿಶೇಷತೆಗಳು! 

"

ಸಿನಿಮಾದಲ್ಲಿ ನಟಿಸಿದ ಪ್ರತಿಯೊಬ್ಬ ಕಲಾವಿದನಿಂದ ಹಿಡಿದು ಎಲ್ಲಾ ತಂತ್ರಜ್ಞರೂ ಹೀರೋಗಳು ಈ ಸಿನಿಮಾದಲ್ಲಿ. ನಿರ್ದೇಶಕ ಭರತ್‌ರಾಜ್‌ ಚಿತ್ರರಂಗಕ್ಕೆ ಆಸ್ತಿ. ನಾಯಕಿ ಗಾನವಿ ಲಕ್ಷ್ಮಣ್‌ ನಟನೆ ಚಿತ್ರಕ್ಕೆ ಕಳಶಪ್ರಾಯ. ಅಜನೀಶ್‌ ಲೋಕನಾಥ್‌ ಸಂಗೀತ ಮಂತ್ರಮುಗ್ಧ ಮಾಡುತ್ತದೆ. ಪ್ರಮೋದ್‌ ಶೆಟ್ಟಿನೋಟದಲ್ಲೇ ಕೊಂದು ಹಾಕುವ ಪ್ರತಿಭೆ. ರಿಷಬ್‌ ಶೆಟ್ಟಿಎನರ್ಜಿ ಎಲ್ಲಕ್ಕೂ ದಾರಿ. ಈ ಸಿನಿಮಾದಿಂದ ಉದಯವಾದ ಮತ್ತೊಂದು ಪ್ರತಿಭೆ ವಿಲನ್‌ ಪ್ರದೀಪ್‌ ಶೆಟ್ಟಿ. ಕೋವಿ ಹಿಡಿದು ನಿಂತರೆ ಆತ ನಟಿಸುವುದೇ ಬೇಡ, ಸಹಜ ನಟ.

ಗಂಡಾಂತರದಿಂದ ಪಾರಾದ ರಿಷಬ್ ಶೆಟ್ಟಿ; ಪೆಟ್ರೋಲ್ ಬಾಂಬ್ ಸಿಡಿಸೋ ವೇಳೆ ರಿಷಬ್‌ಗೆ ಹೊತ್ತಿಕೊಳ್ತು ಬೆಂಕಿ! 

ಹೀರೋಗೆ ಆತ್ಮ ಇದೆ, ಹೃದಯವೂ ಇದೆ. ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲಿಯೇ ಇದೆ. ಹಾಗಾಗಿ ಇದು ಬೇರೆ ಸಾಲಲ್ಲಿ ನಿಲ್ಲುತ್ತದೆ.

Follow Us:
Download App:
  • android
  • ios