Idli Kadai, ನೆಟ್‌ಫ್ಲಿಕ್ಸ್‌ನಲ್ಲಿರೋ ತಮಿಳು ಚಿತ್ರ.ಧನುಷ್ ನಟಿಸಿ, ನಿರ್ದೇಶಿಸಿದ ಈ ಚಿತ್ರದಲ್ಲಿ ನಿತ್ಯಾಮೆನನ್ ಹಾಗೂ ಶಾಲಿನಿ ಪಾಂಡೆ ನಟಿಸಿದ್ದಾರೆ. ಮಧುರೈನ ಚಿಕ್ಕ ಹಳ್ಳಿಯ ಹುಡುಗ ಬ್ಯಾಂಕಾಂಕ್‌ಗೆ ಹೋಗಿ, ಅಲ್ಲಿ ಮದ್ವೆಯಾಗಲು ಸಿದ್ಧನಾಗಿರುತ್ತಾನೆ. ಆಗ ಅಪ್ಪ ಸಾವು ಬರ ಸಿಡಿಲಿನಂತೆ ಬಂದೆರುಗುತ್ತದೆ. ಅಂತಿಮ ಸಂಸ್ಕಾರಕ್ಕೆ ಬಂದಾಗ ಅಮ್ಮನೂ ಕೊನೆಯುಸಿರೆಳೆಯುತ್ತಾಳೆ. ಆಗ ನಡೆಯುವ ಕಥೆಯೇ ಚಿತ್ರದ ತಿರುಳು. ನವಿರಾದ ಕಥೆ ಇದೆ.

Idli Kadai Movie
ನಿರ್ದೇಶನ: ಧನುಷ್
ತಾರಾಗಣ: ಧನುಷ್, ನಿತ್ಯಾ ಮೆನನ್, ಸತ್ಯರಾಜ್, ಶಾಲಿನಿ ಪಾಂಡೆ.
ಒಟಿಟಿ: ನೆಟ್‌ಫ್ಲಿಕ್ಸ್
ಬಿಡುಗಡೆಯಾದ ವರ್ಷ: 2025

ಬಾಲ್ಯದಿಂದಲೂ ತನ್ನ ತಂದೆಯ ಸಣ್ಣ ಇಡ್ಲಿ ಅಂಗಡಿಯನ್ನೇ ನೋಡುತ್ತ ಬೆಳೆದ ಮುರುಗನ್ ತಾನೂ ದೊಡ್ಡವನಾಗಿ ಹೊಟೇಲ್ ಮ್ಯಾನೇಜ್‌ಮೆಂಟ್ ಓದಿ ಬ್ಯಾಂಕಾಕ್ ನಲ್ಲಿ ಒಂದು ದೊಡ್ಡ ರೆಸ್ಟೋರೆಂಟ್‌ನಲ್ಲಿ ಕೆಲಸಕ್ಕೆ ಸೇರುತ್ತಾನೆ. ಆ ರೆಸ್ಟೋರೆಂಟಿನ ಓನರ್ ವಿಷ್ಣುವರ್ಧನ್ ಎಂಬ ದೊಡ್ಡ ವ್ಯಾಪಾರಸ್ಥ, ಅವನಿಗೆ ಇಬ್ಬರು ಮಕ್ಕಳು ಮೀರಾ ಮತ್ತು ಅಶ್ವಿನ್. ಮೀರಾಳ ಜೊತೆ ಮುರುಗನ್ ಮದುವೆ ನಿಶ್ಚಯವಾಗಿರುತ್ತದೆ. ಅದಕ್ಕೆ ಅವರ ತಂದೆಯ ತಕರಾರೇನೂ ಇಲ್ಲ. ಆದರೆ ಮೀರಾಳ ಅಣ್ಣ ಅಶ್ವಿನ್ ಬಹುದೊಡ್ಡ ಜೂಜುಕೋರ ಹಾಗೂ ಮಾದಕವ್ಯಸನಿ. ಇವನಿಗೆ ಮುರುಗನ್ ಎಂದರೆ ದ್ವೇಷ ಅಸಡ್ಡೆ. ಆದರೆ ಮುರುಗನ್ ತಮ್ಮ ರೆಸ್ಟೋರೆಂಟಿಗೆ ಬಂದ ನಂತರವೇ ತಮ್ಮ ವ್ಯಾಪಾರ ಬಡಾಯಿಸಿದ್ದು ಎಂದು ವಿಷ್ಣುವರ್ಧನನಿಗೆ ಮುರುಗನ್ ಕಂಡರೆ ಎಲ್ಲಿಲ್ಲದ ಅಕ್ಕರೆ.

ಮುರುಗನ್ ಬಾಲ್ಯದಿಂದ ಅಪ್ಪನ ಸಣ್ಣ ಹೋಟೆಲ್ ಹಾಗೂ ಅಪ್ಪನ ಶಿಸ್ತಿನ ಕ್ರಮಬದ್ಧ ಜೀವನವನ್ನು ನೋಡುತ್ತ ಬೆಳೆದವನು, ಅಪ್ಪ ಎಂದರೆ ಗುರುವಿನಂತೆ ಬಹಳ ಭಕ್ತಿ ಮತ್ತು ಪ್ರೀತಿ. ತಾಯಿ ಕಸ್ತೂರಿಯೂ ಗಂಡನ ಕೆಲಸದಲ್ಲಿ ತನ್ನ ಶ್ರಮವನ್ನೂ ಸೇರಿಸಿ ಮನೆಯನ್ನು ಚೆನ್ನಾಗಿ ನೋಡಿಕೊಳ್ಳುವ ಅಪ್ಪಟ ಗೃಹಿಣಿ. ತನ್ನ ಸಣ್ಣ ಹೊಟೇಲನ್ನೇ ಮಗ ಮುಂದೆ ನೋಡಿಕೊಳ್ಳಲಿ ಎಂದು ಅಪ್ಪನಿಗೆ ಆಸೆ. ಆದರೆ ಮುರುಗನ್ ಗೆ ತಂದೆಗಿಂತ ಇನ್ನೂ ಚೆನ್ನಾಗಿ ಹೊಟೇಲ್ ಮಾಡಬೇಕು, ಬಡತನ ನೀಗಿಕೊಳ್ಳಬೇಕು ಎಂಬ ಆಸೆ. ಹೀಗಾಗಿ ಅವನು ಹೋಟೆಲ್ ಮ್ಯಾನೇಜ್‌ಮೆಂಟ್ ಓದಿ ತಂದೆಯನ್ನು ಒಪ್ಪಿಸಿ ಬ್ಯಾಂಕಾಕ್‌ಗೆ ಬರುತ್ತಾನೆ.

ವಿಷ್ಣುವರ್ಧನ್‌ಗೊಬ್ಬ ದಾರಿ ತಪ್ಪಿದ ಮಗ:

ವಿಷ್ಣುವರ್ಧನ್ ಮಗ ಅಶ್ವಿನ ಯಾವಾಗಲೂ ಡ್ರಗ್ಸ್ ಅಥವಾ ಜೂಜು ಕೇಸಿನಲ್ಲಿ ಸಿಕ್ಕಿಕೊಳ್ಳುವುದು, ಅವನ ಅಪ್ಪ ಅವನನ್ನು ಲಂಚ ಕೊಟ್ಟು ಬಿಡಿಸಿಕೊಳ್ಳುವುದು ಇದೇ ಆಗಿರುತ್ತದೆ. ತಂದೆಯ ವ್ಯಾಪಾರದಲ್ಲಿ ಅಶ್ವಿನ್ ಗೆ ಕೊಂಚವೂ ಆಸಕ್ತಿ ಇಲ್ಲ. ಬಾಕ್ಸಿಂಗ್ ಛಾಂಪಿಯನ್ ಆದ ಅವನಿಗೆ ಹಲವಾರು ವೈರಿಗಳು ಇರುತ್ತಾರೆ. ಯಾರ ಮಾತೂ ಕೇಳದ ಹಠಮಾರಿ ಅಶ್ವಿನ್ ಒಬ್ಬ ಸಾಧಾರಣ ಕೆಲಸಗಾರನಿಗೆ ಅಪ್ಪ, ತನ್ನ ತಂಗಿಯನ್ನು ಕೊಡುತ್ತಿರುವದು ಕೊಂಚವೂ ಇಷ್ಟವಿಲ್ಲ. ಮಾತುಮಾತಿನಲ್ಲಿ ಮುರುಗನ್‌ನನ್ನು ಹಿಯಾಳಿಸುತ್ತಿರುತ್ತಾನೆ.

ಮದುವೆಗೆ ತೀರಾ 15 ದಿನ ಇರುವಾಗ ಮುರುಗನ್‌ಗೆ ತನ್ನ ತಂದೆ ತೀರಿಕೊಂಡರೆಂಬ ಸುದ್ದಿ ಸಿಗುತ್ತದೆ. ಆಘಾತಗೊಳ್ಳುವ ಅವನು ತಾನು ತನ್ನ ತಾಯ್ನಾಡಿಗೆ ಹೋಗಿ ತನ್ನ ತಂದೆಯ ಅಂತಿಮ ವಿಧಿಯಲ್ಲಿ ಪಾಲ್ಗೋಳ್ಳಲೇ ಬೇಕೆಂದು ಹಠಮಾಡಿ ಚೆನ್ನೈನ ಮಧುರೈ ಪಟ್ಟಣದ ಸಮೀಪ ಇರುವ ತೇನಿ ಎಂಬ ತನ್ನ ಹುಟ್ಟೂರಿಗೆ ಬರುತ್ತಾನೆ. ಅಲ್ಲಿಯೇ ಹೋಟೆಲ್‌ನಲ್ಲಿ ಕೆಲಸ ಮಾಡುವ ಅಕೌಂಟೆಂಟ್ ರಾಮಾನುಜನನ್ನು ಮೀರಾ ಮುರುಗನ್ ಜೊತೆಗೆ ಕಳಿಸುತ್ತಾಳೆ. ತಂದೆಯ ಅಂತಿಮ ವಿಧಿ ಪೂರೈಸಿದ ಮರುಕ್ಷಣ ವಾಪಸ್ಸಾಗಬೇಕು ಎಂಬ ಶರತ್ತಿನೊಂದಿಗೆ ಕಳಿಸಿಕೊಡುತ್ತಾಳೆ. ಅವರಿಗೆ ಮದುವೆಗೆ ಕೇವಲ 15 ದಿನ ಉಳಿದಿರುವ, ಈಗಾಗಲೇ ಎಲ್ಲಗೂ ಆಹ್ವಾನ ಮಾಡಲಾದ ಕಾರ್ಯಕ್ರಮ ನಿಂತು ಹೋದರೆ ಆಗುವ ನಷ್ಟ ಮತ್ತು ಅಪಮಾನದ ಬಗ್ಗೆ ಚಿಂತೆ. ಈಗಾಗಲೇ ವಿಐಪಿ ಅತಿಥಿಗಳು ಬರಲು ಶುರುಮಾಡಿದ್ದಾರೆ ಎಂಬ ಸೂಚನೆಯನ್ನೂ ಕೊಟ್ಟಿರುತ್ತಾರೆ.

ತಂದೆಯ ಅಂತಿಮ ವಿಧಿಗಳನ್ನು ಪೂರೈಸಿದ ಮುರುಗನ್ ತಾಯಿಯೊಂದಿಗೆ ಒಂದೆರಡು ದಿನ ಅಲ್ಲಿಯೇ ಉಳಿಯುತ್ತಾನೆ. ಗಂಡನ ಮರಣದ ಆಘಾತವನ್ನು ತಾಳದ ಕಸ್ತೂರಿ ಎರಡೇ ದಿನದಲ್ಲಿ ಗಂಡನನ್ನು ಹಿಂಬಾಲಿಸುತ್ತಾಳೆ. ಎರಡೇ ದಿನಗಳ ಅಂತರದಲ್ಲಿ ಅಪ್ಪ ಅಮ್ಮ ಇಬ್ಬರನ್ನೂ ಏಕಕಾಲಕ್ಕೆ ಕಳೆದುಕೊಂಡ ಮುರುಗನ್ ದಿಕ್ಕು ತೋಚದವನಂತೆ ಆಗುತ್ತಾನೆ. ಅವನ ಬಾಲ್ಯದ ಗೆಳತಿ ಕಾಯರ್ ತನ್ನ ಮನೆಯಿಂದ ಊಟ ತಂದುಕೊಡುವುದು ಮುರುಗನ್ ಬೇಕು, ಬೇಡಗಳನ್ನು ಗಮನಿಸುವುದು ಮಾಡುತ್ತಾಳೆ. ಅವಳಿಗೆ ಮುರುಗನ್ ವಾಪಸ್ಸು ಹೋಗುವುದು ಇಷ್ಟವಿಲ್ಲ.

ಬ್ಯಾಂಕಾಕ್‌ಗೆ ಬರಲು ಹೆಚ್ಚಿದ ಒತ್ತಡ:

ಮುರುಗನ್ ಗೆ ವಾಪಸ್ಸು ಬರಲು ಮೀರಾಳ ಒತ್ತಡ ಹೆಚ್ಚಾಗುತ್ತದೆ. ಪದೇ ಪದೇ ವೀಡಿಯೋ ಕಾಲ್ ಮಾಡಿ ಎಮೋಷನಲ್ ಬ್ಲಾಕ್‌ಮೇಲ್ ಮಾಡುತ್ತಾಳೆ. ಮುರುಗನ್ ಗೆ ಏನು ಮಾಡಬೇಕೆಂದೇ ತೋಚುವುದಿಲ್ಲ. ಒಂದು ಕಡೆ ಅಪ್ಪ ಅಮ್ಮನ ಬಗ್ಗೆ ಗೌರವ, ಮತ್ತೊಂದು ಕಡೆ ತನ್ನ ಕೆರಿಯರ್‌ನ ಬಗ್ಗೆ ಕಾಳಜಿ. ಕೊನಗೆ ತನ್ನಪ್ಪನ ಹೋಟೆಲ್ ಬಳಿ ಇದ್ದ ಇನ್ನೊಂದು ಹೋಟೆಲ್‌ನ ಗಟ್ಟಿಕುಳ ಮರಿಸ್ವಾಮಿಗೆ ತನ್ನ ಹೋಟೆಲ್ ಮಾರಲು ಯೋಚಿಸುತ್ತಾನೆ. ಒಳ್ಳೆಯ ಹೆಸರು ಗೌರವ ಇದ್ದ ಮುರುಗನ್‌ನ ಅಪ್ಪನ ಹೋಟೆಲ್ ಮಾರಲು ಕಾಯರ್‌ಗೆ ಇಷ್ಟವಿಲ್ಲ. ಆದರೆ ಅವಳು ಅದನ್ನು ಹೇಳಲಾರಳು. ಮುರುಗನ್ ತಂದೆಯ ವೈರಿಯಾಗಿದ್ದ ಮರಿಸ್ವಾಮಿಗೆ ಹೋಟೆಲ್ ಮಾರಲು ಕೊನೆಗಳಿಗೆಯಲ್ಲಿ ತನ್ನ ತೀರ್ಮಾನ ಹಿಂತೆಗೆದುಕೊಂಡ ಮುರುಗನ್ ಮರಿಸ್ವಾಮಿಯ ದ್ವೇಷಕ್ಕೆ ಈಡಾಗುತ್ತಾನೆ. ಕಾಯರ್ ಗೆ ಖುಷಿಯಾಗುತ್ತದೆ.

ವಾಪಸ್ ಮೀರಾಳ ಬಳಿ ಹೋಗುವ ಇಚ್ಛೆಯಿಲ್ಲದ, ಜೊತೆಗೆ ಮೀರಾಳ ಜೊತೆ ತನ್ನ ಮದುವೆಯನ್ನೇ ರದ್ದು ಮಾಡುವ ಮುರುಗನ್ ಮೀರಾ ಹಾಗೂ ಅವಳಪ್ಪನ ಕೋಪಕ್ಕೂ ಗುರಿಯಾಗುತ್ತಾನೆ. ತನ್ನ ತಂದೆಯ ವ್ಯಾಪಾರವನ್ನೇ ತಾನೂ ಮುಂದುವರೆಸುವುದಾಗಿ ದೃಢನಿರ್ಧಾರ ಮಾಡುವ ಮುರುಗನ್ ತಂದೆಯಂತೆ ಶಿಸ್ತಿನಿಂದ ಬೆಳಗಿನ ಜಾವ ಮೂರಕ್ಕೇ ಎದ್ದು ಹೋಟೆಲಿಗೆ ಬಂದು ಹಿಟ್ಟು ರುಬ್ಬಿ ಸಾಂಬಾರ್ ಮಾಡಿ ಹೋಟೆಲ್ ಪ್ರಾರಂಭಿಸುತ್ತಾನೆ. ಪ್ರಾರಂಭದ ದಿನಗಳಲ್ಲಿ ಅಪ್ಪನ ಕೈ ರುಚಿಗೆ ಸರಿಸಾಟಿಯಾಗದ ಮುರುಗನ್ ಬಹಳ ಕಷ್ಟ ಹಾಗೂ ಏಕಮೇವ ನಿಷ್ಠೆಯಿಂದ ಅಪ್ಪನ ಕೈರುಚಿ ಸಾಧಿಸುತ್ತಾನೆ. ತನ್ನ ತಾಯಿಯ ವಿರೋಧವನ್ನು ಲೆಕ್ಕಿಸದೆ ಕಾಯರ್ ಮುರುಗನ್ ಕೆಲಸದಲ್ಲಿ ಜೊತೆಯಾಗುತ್ತಾಳೆ. ಸಹಕರಿಸುತ್ತಾಳೆ. ಕ್ರಮೇಣ ಊರ ಜನರು ಮುರುಗನ್ ಹೋಟೆಲ್ಲಿನ ಇಡ್ಲಿ ಸಾಂಬಾರನ್ನು ಒಪ್ಪಿಕೊಂಡು ಮೆಚ್ಚಿಕೊಳ್ಳುತ್ತಾರೆ.

ಇನ್ನೇನು ಮುರುಗನ್ ಹಳ್ಳಿಯಲ್ಲಿ ಒಂದು ಹೆಸರು, ಸ್ಥಾನಮಾನ ತೆಗೆದುಕೊಳ್ಳುತ್ತಿದ್ದಾನೆ ಎನ್ನುವಾಗ ಅವನು ತಾನು ಕಾಯರಳನ್ನು ಮದುವೆಯಾಗುವುದಾಗಿ ಅವಳ ತಾಯಿಗೆ ಹೇಳಿ ಒಪ್ಪಿಸುತ್ತಾನೆ. ಕಾಯರಳ ಜೊತೆ ನಗರಕ್ಕೆ ಹೋಗಿ ಒಡವೆ ಸೀರೆಗಳ ವ್ಯಾಪಾರ ಮಾಡುತ್ತಾನೆ. ಎಲ್ಲ ಹೀಗೆ ಗಲಾಟೆಯಿಲ್ಲದೆ ಮುಗಿದರೆ ರೋಚಕತೆಗೆಲ್ಲಿದೆ ಅವಕಾಶ?

ಮೀರಾ ಅಣ್ಣ ಅಶ್ವಿನ್ ಎಂಟ್ರಿ

ತನ್ನ ತಂಗಿಯನ್ನು ಮುರುಗನ್ ತಿರಸ್ಕರಿಸಿ ತಮಗೆ ನಷ್ಟವನ್ನುಂಟು ಮಾಡಿ ಅವನ ಹುಟ್ಟೂರಲ್ಲಿ ಉಳಿದ ಬಗ್ಗೆ ಅಶ್ವಿನ್‌ಗೆ ಕೋಪ ಇರುತ್ತದೆ. ಮದುವೆ ನಿಂತು ಹೋಯಿತೆಂದು ಅಳುವ ತಂಗಿಯನ್ನು ಸಮಾಧಾನ ಪಡಿಸಿ ತಾನು ಮುರುಗನ್‌ನನ್ನು ಕರೆತರುತ್ತೇನೆಂದು ಭಾರತಕ್ಕೆ ಬರುತ್ತಾನೆ. ಅಶ್ವಿನ್ ತಂಗಿಯ ಮದುವೆ ಸರಿಮಾಡಲು ಅಲ್ಲ ತಮ್ಮನ್ನು ಅಪಮಾನಗೊಳಿಸಿದ ಮುರುಗನ್‌ಗೆ ಪಾಠ ಕಲಿಸಲು ಮನದಲ್ಲೇ ನಿಶ್ಚಯಿಸಿಕೊಂಡು ಬಂದಿರುತ್ತಾನೆ. ಮುರುಗನ್‌ಗೂ ಅಶ್ವಿನ್ ಗೂ ಮಾರಾಮರಿ ಆಗುತ್ತದೆ. ಅಶ್ವಿನ್‌ಗೆ ಮುರುಗನ್ ಭಾರಿ ಪೆಟ್ಟುಕೊಟ್ಟು ಆಸ್ಪತ್ರೆ ಸೇರುವಂತೆ ಮಾಡುತ್ತಾನೆ. ಇದನ್ನು ತಿಳಿದ ವಿಷ್ಣುವರ್ಧನ್ ಮತ್ತು ಮೀರಾ ಭಾರತಕ್ಕೆ ಓಡಿಬರುತ್ತಾರೆ. ಒಂದು ತಿಂಗಳಲ್ಲಿ ಅಶ್ವಿನ್ ಚೇತರಿಸಿಕೊಂಡರೂ ಅವನಿಗೆ ಮುರುಗನ್ ಮೇಲೆ ಇನ್ನೂ ದ್ವೇಷ ಹೆಚ್ಚಾಗಿರುತ್ತದೆ. ಆದರೆ ಮುರುಗನ್ ಈಗ ತಂದೆಯ ಅಹಿಂಸಾ ಮೌಲ್ಯಗಳನ್ನು ಗೌರವಿಸುವ ವ್ಯಕ್ತಿಯಾಗಿರುತ್ತಾನೆ. ಎರಡನೇ ಬಾರಿ ಬಂದು ಹೊಡೆಯುವ ಅಶ್ವಿನ್ ಮೇಲೆ ಕೈ ಮಾಡುವುದಿಲ್ಲ. ಇದರಿಂದ ಬಹಳ ಪೆಟ್ಟು ತಿನ್ನುತ್ತಾನೆ. ವಿಷ್ಣುವರ್ಧನ್ ಸಹ ಅಲ್ಲಿಗೆ ಬರುತ್ತಾನೆ. ತಂದೆಮಗನಿಗೆ ವಾಗ್ವಾದ ನಡೆಯುತ್ತದೆ. ರೋಷತಪ್ತನಾದ ಅಶ್ವಿನ್ ಮುರುಗನ್ ಗೆ ಗುಂಡು ಹೊಡೆಯುತ್ತಾನೆ. ತಕ್ಷಣ ಊರವರೆಲ್ಲ ಸೇರಿ ಮುರುಗನ್‌ನನ್ನು ಆಸ್ಪತ್ರೆಗೆ ಸೇರಿಸಿ ಅಶ್ವಿನ್ ಪರಿವಾರ ಇಳಿದುಕೊಂಡಿರುವ ಗೆಸ್ಟ್ ಹೌಸಿಗೆ ಘೇರಾವ್ ಮಾಡುತ್ತಾರೆ.

ಪೊಲೀಸರು ಪ್ರಜ್ಞೆ ಬಂದ ಮುರುಗನ್‌ನನ್ನು ಶೂಟ್ ಮಾಡಿದ್ದು ಯಾರು ಎಂದ ಕೇಳಿದರೆ, ಅಹಿಂಸಾವಾದಿಯಾದ ಮುರುಗನ್ ತನಗೆ ಗೊತ್ತಿಲ್ಲ ಎಂದು ಬಿಡುತ್ತಾನೆ. ಮುರುಗನ್‌ನ ಕ್ಷಮೆ ಅಶ್ವಿನ್‌ನನ್ನು ರೊಚ್ಚಿಗೆಬ್ಬಿಸುತ್ತದೆ. ಮೀರಾ ತನ್ನ ತಂದೆ ಹಾಗೂ ಅಣ್ಣನಿಗೆ ಬಾಯಿಗೆ ಬಂದಹಾಗೆ ಬೈಯುತ್ತಾಳೆ. ಮುರುಗನ್ ನನ್ನು ಹೇಗಾದರೂ ಬಗ್ಗಿಸಬೇಕೆಂದು ಅಶ್ವಿನ್ ಅವನ ಹೋಟೆಲಿಗೆ ಬೆಂಕಿ ಇಡುತ್ತಾನೆ. ಹೋಟೆಲ್ ಧಗಧಗ ಉರಿದು ಭಸ್ಮವಾಗುತ್ತದೆ. ಕಾಯರಾ ದುಃಖತಪ್ತಳಾಗಿ ರೋಧಿಸುತ್ತಾಳೆ. ಆದರೆ ಮುರುಗನ್ ಧೃತಿಗೆಡುವುದಿಲ್ಲ. ಊರವರ ಸಹಾಯ ಹಾಗೂ ಕಾಯರಳ ಸಹಕಾರದೊಂದಿಗೆ ಮತ್ತೆ ಹೊಟೇಲ್ ಕಟ್ಟುತ್ತಾನೆ.

ಇವೆಲ್ಲ ತಿಳಿದ ಮೀರಾ ತಂದೆಯ ಬಳಿ ಮುರುಗನ್‌ನನ್ನು ವಹಿಸಿಕೊಂಡು ಮಾತನಾಡಿ, ಅಶ್ವಿನ್‌ನನ್ನು ಬಾಯಿಗೆ ಬಂದಹಾಗೆ ಬೈಯುತ್ತಾಳೆ. ತಾನೆ ಶೂಟ್ ಮಾಡಿಕೊಳ್ಳುತ್ತೇನೆಂದು ರಿವಾಲ್ವಾರ್ ತನ್ನ ತಲೆಗೆ ಹಿಡಿಯುತ್ತಾಳೆ. ಆಗ ಮಗನ ಮೇಲಿನ ಮೋಹ ಕಳಚುವ ವಿಷ್ಣುವರ್ಧನ್, ಮಗನ ಕಪಾಳಕ್ಕೆ ಬಾರಿಸಿ ಈ ಏಟು ನಾನು ಎಂದೋ ನಿನಗೆ ಕೊಡಬೇಕಿತ್ತು, ತಂದೆಯ ವ್ಯವಹಾರ ಬೆಳೆಸುವುದು, ಉಳಿಸುವುದು, ತಂದೆಯ ಹೆಸರಿನ ಗೌರವ ವೃದ್ಧಿಸುವುದು ಮುರುಗನ್ ನನ್ನು ನೋಡಿ ಕಲಿ' ಎಂದು ದಬಾಯಿಸುತ್ತಾನೆ. ತಂದೆಯ ರೌದ್ರರೂಪ ನೋಡಿದ ಅಶ್ವಿನ್‌ಗೆ ತನ್ನ ತಪ್ಪಿನ ಅರಿವಾಗುತ್ತದೆ. ಅವರು ಮೂವರೂ ವಾಪಸ್ ಬ್ಯಾಂಕಾಕ್‌ಗೆ ಹೋಗಲು ತಯಾರಾಗುತ್ತಾರೆ.

ಹೋಗುವ ಮೊದಲು ಮುರುಗನ್ ಹೋಟೆಲಿಗೆ ಬರುವ ಅವರು ಅಶ್ವಿನ್‌ನ ಬಾಯಲ್ಲಿ ಕ್ಷಮೆ ಕೇಳಿಸುತ್ತಾರೆ. ಮುರುಗನ್ ದೊಡ್ಡ ಮನಸ್ಸಿನಿಂದ ಅವೆಲ್ಲ ಏನೂ ಬೇಡ ಎಂದು ಸ್ನೇಹ ತೋರುತ್ತಾನೆ. ಎಲ್ಲರನ್ನೂ ತನ್ನ ಹೋಟೆಲಿನ ಇಡ್ಲಿ ತಿನ್ನಲು ಆಹ್ವಾನಿಸುತ್ತಾನೆ. ಎಲ್ಲರೂ ಸಾಂಬಾರಿನ ಜೊತೆ ಇಡ್ಲಿಯನ್ನು ಆಸ್ವಾದಿಸುತ್ತಾರೆ. ನೀನು ಏನಾದರೂ ಶಿಕ್ಷೆ ಅಶ್ವಿನ್‌ಗೆ ಕೊಡಲೇ ಬೇಕು ಎಂದು ಮೀರಾ ಮುರುಗನ್‌ಗೆ ಒತ್ತಾಯ ಮಾಡುತ್ತಾಳೆ. ಮುರುಗನ್ ಅಶ್ವಿನ್ ಕೈಯಲ್ಲಿ ಇಡ್ಲಿ ಹಿಟ್ಟು ರುಬ್ಬಿಸುವುದರೊಂದಿಗೆ ಚಿತ್ರ ಸುಖಾಂತವಾಗುತ್ತದೆ.

ಚಿತ್ರದ ಪೂರ್ತಿ ಧನುಷ್ ಆಕ್ರಮಿಸಿಕೊಂಡಿದ್ದಾರೆ. ಕಣ್ಣುಗಳೇ ಅವರ ನಟನಾಶಕ್ತಿ, ಮತ್ತು ಪವರ್ ಫುಲ್ ಡೈಲಾಗ್ ಡೆಲಿವರಿ. ನಿತ್ಯಾ ಮೆನನ್‌ಳ ಸಹಜ ಅಭಿನಯ ಈ ಚಿತ್ರದ ಹೈಲೈಟ್. ವಿಷ್ಣುವರ್ಧನ್, ಅಶ್ವಿನ್ ಹಾಗೂ ಮೀರಾ ಪಾತ್ರಧಾರಿಗಳೂ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಒಂದು ತಲೆಮಾರಿನ ಪಾವಿತ್ರ್ಯತೆ, ಗೌರವ ಉಳಿಸುವುದು ಒಬ್ಬ ಸುಸಂಸ್ಕೃತ ಮಗನಿಂದ ಸಾಧ್ಯ ಎಂಬುದನ್ನು ಈ ಚಿತ್ರದಲ್ಲಿ ಕಾಣಬಹುದು. ಮೂಲತಃ ತಮಿಳು ಭಾಷೆಯ ಸಿನಿಮಾ, ತೆಲುಗು ಹಿಂದಿಯಲ್ಲೂ ಲಭ್ಯವಿದೆ.