ಹಳದಿ ಎಲೆಗಳ ಮರಗಳು, ಕೆಂಪು ಹೂವಿನ ಗಿಡಗಳು, ಹಿತ ಅನ್ನಿಸುವ ಬೆಳದಿಂಗಳು, ಹಸಿರು ತುಂಬಿದ ಹಾದಿ, ಅವಳ ಮನೆಯ ಬೀದಿ ಎಲ್ಲವನ್ನೂ ಅತಿ ಸುಂದರವಾಗಿ ತೋರಿಸುತ್ತಾ ಅಮರ ಮಧುರ ಪ್ರೇಮವನ್ನು ಸಾರುವ ಕತೆಯೇ ಈ ಸಿನಿಮಾದ ಜೀವಾಳ. ವೈದ್ಯ ಜಗತ್ತಿಗೆ ಟ್ರಿಬ್ಯೂಟ್‌ ಸಲ್ಲಿಸಿದಂತಿರುವ ಈ ಸಿನಿಮಾವನ್ನು ಮೂರು ಜನ ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಸಾಗಿದ್ದಾರೆ.

ರಾಜೇಶ್‌ ಶೆಟ್ಟಿ

Add Asianetnews Kannada as a Preferred SourcegooglePreferred

ಒಬ್ಬರು ನಿರ್ದೇಶಕ ರಾಘವೇಂದ್ರ. ಜಗತ್ತೇ ಒಂದು ದಾರಿಯಲ್ಲಿ ಹೋಗುತ್ತಿದ್ದರೆ ತಾವು ಮಾತ್ರ ಪರಿಶುದ್ಧವಾದ ಪ್ರೇಮವನ್ನು ಸಾರುತ್ತೇನೆ, ತಾಳ್ಮೆಯಿಂದ ಸಹನೆಯಿಂದ ಕತೆ ಹೇಳುತ್ತೇನೆ ಎಂದು ಬಂದಿದ್ದಾರೆ. ಈ ಸಿನಿಮಾದ ಪ್ರತೀ ಫ್ರೇಮಲ್ಲೂ ಅವರ ಸಹನೆ ಮಡುಗಟ್ಟಿದೆ. ಅಪಾರ ಪ್ರೇಮವಿದೆ. ಅದನ್ನು ಗಾಢ ತಾಳ್ಮೆಯಿಂದ ಆಸ್ವಾದಿಸಬೇಕಿದೆ.

ಇನ್ನೊಬ್ಬರು ಈ ಚಿತ್ರದ ಛಾಯಾಗ್ರಾಹಕ ನವೀನ್‌ಕುಮಾರ್‌. ಅತಿ ಸಾಮಾನ್ಯವಾದ ವಸ್ತುವನ್ನೂ ಅವರು ತಮ್ಮ ಕ್ಯಾಮೆರಾ ಕಣ್ಣುಗಳಿಂದ ನೋಡಿ ಅದಕ್ಕೊಂದು ಮ್ಯಾಜಿಕ್‌ ಟಚ್‌ ಕೊಟ್ಟು ಅಸಾಧಾರಣವೆಂಬಂತೆ ಕಾಣಿಸುತ್ತಾರೆ. ಇವರು ಕಟ್ಟಿಕೊಡುವ ದೃಶ್ಯಗಳು ನಿರ್ದೇಶಕರ ಸಾವಧಾನವನ್ನು ಮರೆಸುವಂತಿವೆ.

"

ಒಂದೇ ಶೇಡ್‌ಗೆ ತೂಕ ಹೆಚ್ಚು ಮತ್ತೊಂದರಲ್ಲಿ ಕಡಿಮೆ, ನಾನು ಐಟಿ ಕೆಲಸ ಮಾಡಿರುವೆ: ನಟಿ ಬೃಂದಾ ಆಚಾರ್ಯ

ತಾರಾಗಣ: ನೆನಪಿರಲಿ ಪ್ರೇಮ್‌, ಬೃಂದಾ ಆಚಾರ್ಯ, ಮಾ. ಆನಂದ್‌, ಸಾಧು ಕೋಕಿಲ

ನಿರ್ದೇಶನ: ಡಾ. ರಾಘವೇಂದ್ರ ಬಿ.ಎಸ್‌.

ರೇಟಿಂಗ್‌: 3

ಮತ್ತೊಬ್ಬರು ಪ್ರೇಮ್‌. ಸಿನಿಮಾ ಪೂರ್ತಿ ಇರುವ ಒಳ್ಳೆಯ ಹುಡುಗ. ಅತಿ ಒಳ್ಳೆಯತನವನ್ನು, ಅಸಾಧ್ಯ ಪ್ರೇಮವನ್ನು, ಅಸಹನೀಯ ನೋವನ್ನು, ಯಾವುದೋ ಒಂದು ಕ್ಷುಲ್ಲಕ ಗಳಿಗೆಯಲ್ಲಿ ಒಂದು ಹನಿ ಕಣ್ಣೀರನ್ನು ಪ್ರೇಮ್‌ ಅದ್ಭುತವಾಗಿ ದಾಟಿಸುತ್ತಾರೆ. ಅವರು ಕುಸಿದು ಕುಳಿತಾಗ ನೋಡುಗನೂ ಮನಸ್ಸಲ್ಲೇ ಮಂಡಿಯೂರಿ ಕೂರಬೇಕು. ಒಂದು ಸುದೀರ್ಘ ನಿಟ್ಟುಸಿರನ್ನು ಆಚೆ ಹಾಕಬೇಕು.

ಪ್ರೇಮ್‌ 25ನೇ ಚಿತ್ರಕ್ಕೆ U/A ಸರ್ಟಿಫಿಕೇಟ್; ಪ್ರಶಂಸೆ ವ್ಯಕ್ತ ಪಡಿಸಿದ ಸೆನ್ಸರ್ ಮಂಡಳಿ!

ತುಂಬಾ ಗಂಭೀರ ಅನ್ನಿಸಿದಾಗ ಹಗುರ ಮಾಡುವ ಕೆಲಸವನ್ನು ಮಾಡುವುದು ಮಾ.ಆನಂದ್‌ ಮತ್ತು ಸಾಧು ಕೋಕಿಲ. ಅವರಿಬ್ಬರೂ ಮೆಚ್ಚುಗೆಗೆ ಅರ್ಹರು. ನಾಯಕಿ ಬೃಂದಾ ತುಂಬಾ ಚೆಂದ ಕಾಣಿಸುತ್ತಾರೆ. ಅವರ ಮೇಲೆ ಸಿಟ್ಟಾಗುವಂತೆ, ಪ್ರೀತಿಯಾಗುವಂತೆ, ಅಯ್ಯೋ ಅನ್ನಿಸುವಂತೆ ನಿರ್ದೇಶಕರೇ ಕತೆ ಹೆಣೆದಿದ್ದರಿಂದ ಅವರ ಕೈಯಲ್ಲಿ ಏನೂ ಇಲ್ಲ. ಇಡೀ ಜಗತ್ತು ವೇಗದ ಹಿಂದೆ ಬಿದ್ದಿದೆ, ಸ್ಟೋರಿಗಳಲ್ಲಿ ಸ್ಟೇಟಸ್‌ಗಳಲ್ಲಿ ಪ್ರೀತಿ ಕ್ಷಣಕ್ಷಣಕ್ಕೂ ಅರಳುತ್ತದೆ ಅಥವಾ ಒಡೆದುಹೋಗುತ್ತದೆ. ಇಂಥಾ ಹೊತ್ತಲ್ಲಿ ನಿರ್ದೇಶಕರು ಪರಿಶುದ್ಧ ಪ್ರೇಮದ ಕತೆಯನ್ನು ಒಂದೊಂದು ನಿಟ್ಟುಸಿರೂ ಕೇಳುವಂತೆ ನಿರಾಳವಾಗಿ ಸಾವಧಾನವಾಗಿ ಹೇಳಿರುವುದೇ ಈ ಚಿತ್ರದ ವಿಶೇಷತೆ.

Puneeth Rajkumar: ಪ್ರತಿವರ್ಷ ಜೊತೆಯಾಗಿ ಶಬರಿಮಲೆಗೆ ಹೋಗ್ತಿದ್ರು ಪ್ರೇಮ್-ಅಪ್ಪು

    ಈ ಕ್ರಮ ಯಾರನ್ನು ಹೇಗೆ ತಾಕುತ್ತದೆ ಎಂದು ಥಟ್‌ ಅಂತ ಹೇಳಲಾಗುವುದಿಲ್ಲ. ಕಾಡಿನ ಪಕ್ಕದಲ್ಲಿ ಕೂತಿದ್ದಾಗ ಮರದ ಎಲೆಯೊಂದು ತೊಟ್ಟು ಕಳಚಿ ನೆಲ ಸೇರುವುದನ್ನು ಅತ್ಯಂತ ಜತನದಿಂದ ನೋಡುವಷ್ಟುಶಾಂತಿ ನಿಮ್ಮಲ್ಲಿ ನೆಲೆಸಿದೆ ಎಂದಾದರೆ ಪ್ರೇಮಂ ಪೂಜ್ಯಂ ಮನಸ್ಸಲ್ಲಿ ಉಳಿಯುತ್ತದೆ. ಪ್ರೀತಿ, ಪ್ರೇಮವನ್ನು ದಾಟಿ ಬೇರೊಂದು ಜಗತ್ತಲ್ಲಿ ಧಾವಂತದಿಂದ ಸಾಗುವವರಾಗಿದ್ದರೆ ಕುಳಿತುಕೊಳ್ಳುವ ಸೀಟೇ ಶತ್ರುವಾಗುತ್ತದೆ. ಹಾಗಿದ್ದರೂ ಪ್ರೇಮ್‌ ಯಾವುದೋ ಒಂದು ಗಳಿಗೆಯಲ್ಲಿ ಮಂಡಿಯೂರಿ ಕುಳಿತಾಗ ಎದೆಯಲ್ಲೊಂದು ಚಿಟ್ಟೆಓಡಿದಂತೆ ಅನ್ನಿಸುವುದೇ ಈ ಸಿನಿಮಾದ ಸಾರ್ಥಕತೆ.

    "