ಬಿದ್ದು ಸಾಯೋಣ ಅಂತ ಕಷ್ಟಪಟ್ಟು ಬಿಲ್ಡಿಂಗ್ ಮೇಲೇರೋ ಲೋಹಿತನನ್ನು ಒಬ್ಬ ಅಪರಿಚಿತ ಆಸಾಮಿ ತಡೆಯುತ್ತಾನೆ. ಲೋಹಿತನ ಆತ್ಮಹತ್ಯಾ ಪ್ರಸಂಗಕ್ಕೆ ಕಿವಿಯಾಗ್ತಾನೆ.
ಪ್ರಿಯಾ ಕೆರ್ವಾಶೆ
ಕ್ಲಾಸ್ನಲ್ಲಿ ಟಾಪರ್ ಆದ್ರೂ ಸಹಪಾಠಿಗಳ ಕಣ್ಣಲ್ಲಿ ಅವನು ಲೊಡ್ಡೆ ಲೋಹಿತ. ಹಾಗಂತ ಇಡೀ ಸಿನಿಮಾ ಲೊಡ್ಡೆ ಲೋಹಿತನ ಲೆಫ್ಟ್ ಹ್ಯಾಂಡ್ ಪುರಾಣವಾ ಅಂದ್ರೆ ಅಲ್ಲ, ಇದೊಂದು ಪಕ್ಕಾ ಡಾರ್ಕ್ ಹ್ಯೂಮರ್ ಕ್ರೈಮ್ ಥ್ರಿಲ್ಲರ್. ಆದರೆ ಈ ಕ್ರೈಮ್ ನಡೆಯೋದಕ್ಕೆ ಕಾರಣ ಮಾತ್ರ ಲೋಹಿತನ ಎಡಗೈ ಮಾಡಿದ ಅವಾಂತರ.
ಬಿದ್ದು ಸಾಯೋಣ ಅಂತ ಕಷ್ಟಪಟ್ಟು ಬಿಲ್ಡಿಂಗ್ ಮೇಲೇರೋ ಲೋಹಿತನನ್ನು ಒಬ್ಬ ಅಪರಿಚಿತ ಆಸಾಮಿ ತಡೆಯುತ್ತಾನೆ. ಲೋಹಿತನ ಆತ್ಮಹತ್ಯಾ ಪ್ರಸಂಗಕ್ಕೆ ಕಿವಿಯಾಗ್ತಾನೆ. ಎಡಗೈ ಬಳಸೋ ಲೋಹಿತ ಈ ಕಾಲದ ನತದೃಷ್ಟ ಪುರುಷ. ಹುಟ್ಟುತ್ತಲೇ ಎಡಗೈ ಮಾಡಿದ ಅವಾಂತರಕ್ಕೆ ತಾಯಿಯನ್ನೇ ಕಳೆದುಕೊಂಡವನು. ಬೆಳೆಯುತ್ತ ಬೇರೆ ಬೇರೆ ಬಗೆಯಲ್ಲಿ ಬವಣೆ ಪಟ್ಟವನು.
ಎಡಗೈ ಕಾರಣಕ್ಕೆ ಈತ ಕ್ರೈಮ್ಗಳಲ್ಲಿ ಸಿಕ್ಕಾಕಿಕೊಂಡು ಒದ್ದಾಡುವುದನ್ನು ಸಿನಿಮಾ ಸೊಗಸಾಗಿ ಕಟ್ಟಿಕೊಡುತ್ತದೆ. ಈ ನಡುವೆ ತೋಳ, ಸಿಂಹ, ಆನೆಯ ಕಥೆ ಬರುತ್ತದೆ. ಅದೇ ಸೆಕೆಂಡ್ ಹಾಫ್ನ ಹೈಲೈಟ್. ಕಥೆಯ ಬಗ್ಗೆ ಇನ್ಯಾವ ಅಂಶ ಹೇಳಿದರೂ ಸ್ಪಾಯ್ಲ್ ಮಾಡಿದಂತಾಗಬಹುದು. ಆರಂಭದಿಂದ ಕೊನೇವರೆಗೂ ಸಿನಿಮಾ ಪ್ರೇಕ್ಷಕನನ್ನು ಹಿಡಿದು ಕೂರಿಸುತ್ತದೆ. ನಿರ್ದೇಶಕ ಸಮರ್ಥ್ ಕಡಕೋಳ ಕಷ್ಟಬಿದ್ದು ಸಿನಿಮಾ ಮಾಡಿದ್ದು ವೇಸ್ಟ್ ಆಗಿಲ್ಲ.
ಚಿತ್ರ: ಎಡಗೈಯೇ ಅಪಘಾತಕ್ಕೆ ಕಾರಣ
ತಾರಾಗಣ: ದಿಗಂತ್, ಧನು ಹರ್ಷ, ನಿರೂಪ್ ಭಂಡಾರಿ, ನಿಧಿ ಸುಬ್ಬಯ್ಯ, ಕೃಷ್ಣ ಹೆಬ್ಬಾಳೆ
ನಿರ್ದೇಶನ: ಸಮರ್ಥ್ ಕಡಕೋಳ
ರೇಟಿಂಗ್: 3.5
ಚಿತ್ರಕಥೆ, ಸಂಭಾಷಣೆಯಲ್ಲಿ ಲವಲವಿಕೆ, ಹಿನ್ನೆಲೆ ಸಂಗೀತದಲ್ಲಿ ಖದರ್ ಇದೆ. ದಿಗಂತ್ ಚಾಕ್ಲೇಟ್ ಬಾಯ್ ಇಮೇಜ್ನಲ್ಲೇ ಎಂಟರ್ಟೇನ್ ಮಾಡುತ್ತಾರೆ. ಧನು ಹರ್ಷ ಭರವಸೆ ಮೂಡಿಸುವ ಪ್ರತಿಭೆ. ವಿಶಿಷ್ಟ ಪಾತ್ರವೊಂದರಲ್ಲಿ ನಿರೂಪ್ ಭಂಡಾರಿ ಗಮನಸೆಳೆಯುತ್ತಾರೆ. ಕೃಷ್ಣ ಹೆಬ್ಬಾಳೆ ಆ್ಯಕ್ಟಿಂಗ್ಗೆ ವಿಷಲ್ ಹೊಡೆಯೋಣ ಅನಿಸುತ್ತೆ. ಕೊನೆಯ ಭಾಗ ಕೊಂಚ ಬಿಗು ಕಳೆದುಕೊಂಡಿದೆ ಅನ್ನೋದು ಬಿಟ್ಟರೆ ಮನರಂಜನೆಗೆ, ಪ್ರೇಕ್ಷಕ ಕೊಟ್ಟ ಕಾಸಿಗೆ ಮೋಸ ಮಾಡದ ಸಿನಿಮಾವಿದು.
