userpic
user icon
0 Min read

Aachari Baa Review: ಅಮ್ಮನಿಗೆ ಅರವತ್ತಾದರೇನು ಅವಳಿಗೆ ಅಸ್ತಿತ್ವ/ಅಭಿರುಚಿ ಇಲ್ಲವೇ?

Aachari Baa Review The mother is 60 years old but her opinions don't exist mrq
Aachari Baa

Synopsis

Aachari Baa: ಅರವತ್ತರ ಇಳಿವಯಸ್ಸಿನ ಜೈಷ್ಣವಿ ತನ್ನ ಉಪ್ಪಿನಕಾಯಿ ಉದ್ಯಮದಲ್ಲಿ ತೃಪ್ತಿಯಿಂದ ಜೀವನ ಸಾಗಿಸುತ್ತಿರುತ್ತಾಳೆ. ಮಗನ ಕರೆಯ ಮೇರೆಗೆ ಮುಂಬೈಗೆ ಹೋದಾಗ ಅವಳಿಗೆ ಕಾದಿದ್ದ ಅನಿರೀಕ್ಷಿತ ಘಟನೆಗಳೇನು?

ಚಿತ್ರ: ಆಚಾರಿ ಬಾ
ನಿರ್ದೇಶನ: ಹಾರ್ದಿಕ್ ಗಜ್ಜರ್
ತಾರಾಗಣ: ನೀನಾ ಗುಪ್ತ, ಕಬೀರ್ ಬೇಡಿ
ಒಟಿಟಿ: ಜಿಯೋ ಹಾಟ್ ಸ್ಟಾರ್

ತಮ್ಮ ಭಾವನಾತ್ಮಕ ಅಭಿನಯದಿಂದ ಎಲ್ಲರ ಮನೆಸೆಳೆಯುವ ನೀನಾ ಗುಪ್ತ ಅವರ ನಟನೆಯ ಮತ್ತೊಂದು ಚಿತ್ರ ಅಚಾರಿ ಬಾ. ಆಚಾರ್ ಎಂದರೆ ಹಿಂದಿಯಲ್ಲಿ ಉಪ್ಪಿನಕಾಯಿ. ಬಾ ಎಂದರೆ ಗುಜರಾತಿನ ಭಾಷೆಯಲ್ಲಿ ಅಜ್ಜಿ. ನೀನಾ ಗುಪ್ತ ಈ ಚಿತ್ರದಲ್ಲಿ ಗುಜರಾತಿನ ಅಸ್ಮಿತೆಯಾದ ಉಪ್ಪಿನಕಾಯಿಯನ್ನು ತಯಾರಿಸಿ ಮಾರುವ ಒಂದು ಗೃಹ ಕೈಗಾರಿಕೆಯ ಮಹಿಳಾ ಉದ್ಯಮಿಯಾಗಿ ಕಾಣಿಸಿಕೊಂಡದ್ದಾರೆ.

ಜೈಷ್ಣವಿ 60/65ಇಳಿವಯಸ್ಸಿನ ಮಹಿಳೆ. ಚಿಕ್ಕ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡು ಒಬ್ಬನೇ ಮಗನನ್ನು ತನ್ನ ಉಪ್ಪಿನಕಾಯಿ ಉದ್ಯಮದಲ್ಲಿ ಬೆಳೆಸಿ ದೊಡ್ಡವನನ್ನಾಗಿ ಮಾಡಿರುತ್ತಾಳೆ. ಬೆಳೆದು ಓದಿ ನಗರ ಸೇರಿ ದೊಡ್ಡ ಕೆಲಸದಲ್ಲಿ ಇರುವ ಮಗನಿಗೆ ತಾಯಿಯ ಉಪ್ಪಿನಕಾಯಿ ಉದ್ಯಮ ಎಂದರೆ ಅಷ್ಟಕ್ಕಷ್ಟೆ. ಅದು ಯಾವ ಮಹಾ ವ್ಯವಹಾರ ಎಂಬ ಅನಾದರ. ಆದರೆ ಜೈಷ್ಣವಿಗೆ ಅದೇ ಅವಳ ಪೆಹಚಾನ್. ಕಷ್ಟಕಾಲದಲ್ಲಿ ತನ್ನ ಕೈಹಿಡಿದು ಸಲಹಿದ ಉಪ್ಪಿನಕಾಯಿ ಉದ್ಯಮಕ್ಕೆ ಅವಳೆಂದೂ ಆಭಾರಿ. ಉಪ್ಪಿನಕಾಯಿ ಹಾಕುವುದರಲ್ಲಿ ಜೈಷ್ಣವಿ ಎತ್ತಿದ ಕೈ. ಅಷ್ಟು ರುಚಿಕರ ಅವಳು ಹಾಕುವ ಉಪ್ಪಿನಕಾಯಿ.

ಇಬ್ಬರು ಮಧ್ಯವಯಸ್ಸಿನ ಮಹಿಳಾ ಸಹಾಯಕರು ಹಾಗೂ ಒಬ್ಬ ಚಿಕ್ಕ ವಯಸ್ಸಿನ ಸಹಾಯಕನೊಂದಿಗೆ ಜೈಷ್ಣವಿ ತನ್ನ ಉದ್ಯಮವನ್ನು ಮುಂದುವರೆಸುತ್ತಿರುತ್ತಾಳೆ. ಅವಳ ಒಳ್ಳೆಯತನ, ಕಷ್ಟಗಳಿಗೆ ಮಿಡಿವ ಹೃದಯ, ಅವಳ  ಮುಖದಲ್ಲಿ ಎಂದೂ ಅಳಿಯದ ಮಂದಹಾಸ ಅವಳಿಗೆ ಆ ಊರಿನಲ್ಲಿ ಅನೇಕ ಸಹೃದಯರ ಸಾಹರ‍್ಯವನ್ನು ಕೊಟ್ಟಿರುತ್ತದೆ. ಆದರೂ ರಾತ್ರಿ ಮಲಗುವಾಗ ಒಮ್ಮೆಯಾದರೂ ಅವಳಿಗೆ ಅಳಿದ ಗಂಡ ಹಾಗೂ ದೂರವಾದ ಮಗ ಇವರ ನೆನಪನ್ನು ಮಾಡಿಕೊಂಡು ಕಣ್ಣು ಹಸಿಯಾಗುತ್ತದೆ. ಅವಳ ಸಹಾಯಕ ಅವಳು ಉಪ್ಪಿನ ಕಾಯಿ ಮಾಡುವ ವೀಡೀಯೋ ತೆಗೆದು ತನಗೆ ಗೊತ್ತಿರುವವರಿಗೆ ಕಳಿಸುತ್ತಿರುತ್ತಾನೆ. ಈ ಮೂವರು ಸಹಾಯಕರೊಡನೆ ಮಾತು ನಗು ಹರಟೆ ಆತ್ಮೀಯತೆಯಲ್ಲಿ ಜೈಷ್ಣವಿಯ ಜೀವನ ಸಾಗುತ್ತಿರುತ್ತದೆ.

ಒಮ್ಮೆ ಅಚಾನಕ್ಕಾಗಿ ಎಂದೂ ಫೋನ್ ಮಾಡದ ಮಗನಿಂದ ಫೋನ್ ಬರುತ್ತದೆ. ಮಗ ಅವಳನ್ನು ಮುಂಬೈಗೆ ಬಂದುಬಿಡು ಎಂದು ಕರೆಯುತ್ತಾನೆ. ಮಗ ತನ್ನನ್ನು ಈಗಲಾದರೂ ನೆನೆಪಿಸಿಕೊಂಡನಲ್ಲ ಎಂದು ಜೈಷ್ಣವಿಗೆ ಖುಷಿಯಾಗುತ್ತದೆ. ತನ್ನ ಸಹಾಯಕರಿಗೆ ಉಪ್ಪಿನಕಾಯಿ ಉದ್ಯಮ ನಡೆಸಲು ಹೇಳಿ ತಾನು ಮುಂಬೈಗೆ ಹೊರಡುವ ತಯಾರಿ ನಡೆಸುತ್ತಾಳೆ. ಅವಳಿಗೂ ಮೊಮ್ಮಗನನ್ನು ನೋಡಬೇಕು ಎಂಬ ಆಸೆ ಮಮತೆ ಬಲವಾಗಿರುತ್ತದೆ.

ಮುಂಬೈಗೆ ಬಂದಿಳಿಯುವ ಜೈಷ್ಣವಿ ತನ್ನ ಫೋನ್ ನಿಂತು ಹೋಗಿದ್ದರಿಂದ ಮಗನೊಡನೆ ಸಂಪರ್ಕ ಸಾಧಿಸಲು ಕಷ್ಟವಾಗಿ ತಾನೊಬ್ಬಳೇ ಮಗನ ಮನೆ ಹುಡುಕಿ ಬಂದು ಸೇರುತ್ತಾಳೆ. ದೊಡ್ಡ ಅಪಾರ‍್ಟ್ ಮೆಂಟಿನ ಸಂಕೀರ್ಣದಲ್ಲಿ ತನ್ನ ಮಗನ ಮನೆಯೂ ಇರುತ್ತದೆ. ಮಗನ ವೈಭವೋಪೇತ ಫ್ಲಾಟ್ ನೋಡಿ ಬೆರಗಾಗುತ್ತಾಳೆ. ಮೊಮ್ಮಗನನ್ನು ಮುದ್ದಿಸಿ ಖುಷಿ ಪಡುತ್ತಾಳೆ. ಮಗಸೊಸೆಯರನ್ನು ನೋಡಿ ಆನಂದಿತಳಾಗುತ್ತಾಳೆ. ಹಳೆಯ ಕಾಲದ ತಾಯಿಯ ನಡವಳಿಕೆ ಮಗನಿಗೆ ಕೊಂಚ ಇರಿಸುಮುರಿಸು ತಂದರೂ ಅವನು ತೋರ್ಪಡಿಸಿಕೊಳ್ಳುವುದಿಲ್ಲ. ಅತ್ತೆಗೆ ಸೊಸೆ ಊಟ ಉಪಚಾರ ಚೆನ್ನಾಗಿ ಮಾಡುತ್ತಾಳೆ. ಎಲ್ಲವೂ ಚೆನ್ನಾಗಿದೆ ಎಂಬ ಭಾವನೆ ಬರುವಷ್ಟರಲ್ಲಿ ಮಗ ಸಾಕಿದ್ದ ಬೃಹತ್ ಗಾತ್ರದ ನಾಯಿಯನ್ನು ನೋಡಿ ಬೆಚ್ಚಿಬೀಳುತ್ತಾಳೆ. ಆ ನಾಯಿ ಈ ಅಪರಿಚಿತೆಯನ್ನು ನೋಡಿ ಮೂಸಿ ನೋಡಿದಾಗಲಂತೂ ಜೈಷ್ಣವಿ ಅಕ್ಷರಶಃ ಕಿರುಚಿಯೇ ಬಿಡುತ್ತಾಳೆ. 'ನಾಯಿ ಏನೂ ಮಾಡುವುದಿಲ್ಲ, ಅದರೊಂದಿಗೆ ಸ್ನೇಹ ಬೆಳೆಸಿಕೊ' ಎಂದು ಮಗಸೊಸೆ ಹೇಳಿದರೂ ಅವಳಿಗೆ ನಾಯಿಯನ್ನು ನೋಡಿದಾಕ್ಷಣ ಎದೆ ಡವಡವ. ಅವಳ ಭಯವನ್ನು ನೋಡಿದ ಸೊಸೆ "ಅತ್ತೆಮ್ಮಾ ನೀವು ನಾಯಿಯೊಂದಿಗೆ ಸ್ನೇಹ ಬೆಳೆಸಿಕೊಳ್ಳಲೇ ಬೇಕು, ನಾಳೆಯಿಂದ ನೀವು  ಹತ್ತುದಿನ ಅದರೊಟ್ಟಿಗೆ ಒಬ್ಬರೇ ಇರಬೇಕು, ನಾವು ಟೂರ್ ಹೋಗುತ್ತಿದ್ದೇವೆ" ಎಂದು ಹೇಳುತ್ತಾಳೆ. ಸೊಸೆಯ ಮಾತಿಗೆ ಅತ್ತೆ ಷಾಕ್ ಆಗುತ್ತಾಳೆ. ತಾನು ನಾಯಿಯೊಂದಿಗೆ ಒಂಟಿಯಾಗಿ ಇರಬೇಕೇ ಎಂದು ಆಘಾತವಾಗುತ್ತದೆ. ತನ್ನನ್ನು ಈ ನಾಯನ್ನು ನೋಡಿಕೊಳ್ಳಲೆಂದೇ ಕರೆಸಿದರೋ ಹೇಗೆ ಎಂಬ ಯೋಚನೆಯೂ ಬರುತ್ತದೆ. ಈ ಯೋಚನೆ ಬಂದಾಗ ಅವಳ ಮನಸ್ಸು ಚಿಕ್ಕದಾಗುತ್ತದೆ. ಎಲ್ಲಿಯೋ ಚುಳ್ ಎಂದಂತೆ ನೋವು! ಆ ರಾತ್ರಿ ಮಲಗಿದಾಗ ನಾಳೆಯಿಂದ ಆ ದೈತ್ಯಾಕಾರದ ನಾಯಿಯೊಂದಿಗೆ ಹೇಗೆ ಏಗುವುದು ದೇವರೇ ಎಂಬ ಚಿಂತೆ ಒಂದು ಕಡೆಯಾದರೆ ತನ್ನ ಗತಿಸಿದ ಗಂಡನ ನೆನಪು ಬಂದು ವ್ಯಥೆ ಒಂದು ಕಡೆ. ಕಣ್ಣೀರು ಹಾಕುತ್ತಲೇ ನಿದ್ರಿಸಲು ಪ್ರಯತ್ನಿಸುತ್ತಾಳೆ.

ಬೆಳಗಾದೊಡನೆ ಮಗಸೊಸೆ ಮೊಮ್ಮಗ ಅವಳಿಗೆ ಸಾಕಷ್ಟು ಎಚ್ಚರಿಕೆ ಸಲಹೆ ಕೊಟ್ಟು ಊರಿಗೆ ಹೊರಟುಬಿಡುತ್ತಾರೆ. ಅವರು ಹೊರಡುತ್ತಲೇ ನಾಯಿ ಹಸಿವಿನಂದ ಬೊಗಳುತ್ತಾ ಅವಳ ಹಿಂದೆಮುಂದೆ ಸುತ್ತುತ್ತದೆ. ಅವಳಿಗೆ ಕೈಕಾಲೇ ಆಡುವುದಿಲ್ಲ. ನಾಯಿಗೆ ಏನು ಹಾಕಬೇಕು ಎಂದು ಸೊಸೆ ಹೇಳಿಕೊಟ್ಟಿದ್ದರೂ ಗಾಬರಿಯಲ್ಲಿ ಮರೆತುಬಿಡುತ್ತಾಳೆ. ನಾಯಿಯ ಆಹಾರ ಪೆಡಿಗ್ರಿ ಡಬ್ಬ ಇಳಿಸಲು ಹೋಗಿ ಗಾಬರಿಯಿಂದ ನೆಲದ ಮೇಲೆಲ್ಲಾ ಚೆಲ್ಲಿ ಬಿಡುತ್ತಾಳೆ. ನಾಯಿ ಆ ನೆಲದಲ್ಲಿ ಬಿದ್ದ ಪೆಡಿಗ್ರೀಯನ್ನೇ ಅತಿಯಾಗಿ ತಿಂದುಬಿಡುತ್ತದೆ. ಅಷ್ಟರಲ್ಲಿ ಪಕ್ಕದ ಮನೆಯ ಯುವತಿ ಮತ್ತು ಅದೇ ಸೊಸೈಟಿಯಲ್ಲಿ ವಾಸಿಸುವ ಮೊಮ್ಮಗನ ಸ್ನೇಹಿತರು ಬಂದು ಅವಳಿಗೆ ನಾಯಿಯ ಆಹಾರ ಹೇಗೆ ಕೊಡಬೇಕು ಎಂದು ತಿಳಿಸಿಕೊಡುತ್ತಾರೆ. ಪಕ್ಕದ ಮನೆಯ ಯುವತಿ ಧನಶ್ರೀ ಜೈಷ್ಣವಿಯ ಸಹೃದಯತೆಗೆ ಮನಸೋಲುತ್ತಾಳೆ. ಇಬ್ಬರೂ ವಯಸ್ಸಿನ ಅಂತರ ಮರೆತು ಸ್ನೇಹಿತೆಯರಾಗುತ್ತಾರೆ. ಒಂದೆರಡು ದಿನದಲ್ಲಿ ಜೈಷ್ಣವಿ ನಾಯಿಗೆ ಹೊಂದಿಕೊಳ್ಳುತ್ತಾಳೆ. ನಾಯಿಗೂ ತಾನು ಊರಿಂದ ತಂದ ಉಪ್ಪಿನಕಾಯನ್ನು ತಿನ್ನಿಸುತ್ತಾಳೆ. ನಾಯಿಯೊಂದಿಗೆ ಸ್ನೇಹಕ್ಕಾಗಿ ಅದಕ್ಕೆ ಚಾಕೊಲೇಟ್ ತಿನ್ನಿಸುತ್ತಾಳೆ. ನಾಯಿ ಅವಳ ಹಿಂದೆಮುಂದೆ ಸುತ್ತುತ್ತಾ ಅವಳ ಗಮನ ಸೆಳೆಯುತ್ತದೆ. ಅವಳು ಅದನ್ನು ವಾಕ್ ಗೆ ಕೂಡ ಕರೆದುಕೊಂಡು ಹೋಗುತ್ತಾಳೆ. ಅಪರಿಚಿತತೆ ಮಾಯವಾಗುತ್ತದೆ. ಸೊಸೈಟಿಯ ಪರಿಸರದಲ್ಲಿ ನಾಯಿಯನ್ನು ವಾಕ್ ಮಾಡಿಸುವಾಗ ಅದೇ ಸೊಸೈಟಿಯ ಇನ್ನೊಂದು ಫ್ಲಾಟ್ ನಲ್ಲಿ ವಾಸವಾಗಿರುವ ಬ್ರಿಜೇಶ್ ಹಾಗೂ ಅವರ ಮೊಮ್ಮಗಳ ಪರಿಚಯವಾಗುತ್ತದೆ.

ಬ್ರಿಜೇಶ್ ಮಗ ಸೊಸೆಯನ್ನು ಒಂದು ಅಪಘಾತದಲ್ಲಿ ಕಳೆದುಕೊಂಡು ಮೊಮ್ಮಗಳ ಪೋಷಕನಾಗಿರುವ ಹೆಚ್ಚುಕಡಿಮೆ ಜೈಷ್ಣವಿಯ ವಯಸ್ಸಿನವನೇ ಆದ ವ್ಯಕ್ತಿ. ಈ ಪಾತ್ರವನ್ನು ಒಂದಾನೊಂದು ಕಾಲದ ಹಾಟ್ ನಟ ಕಬೀರ್ ಬೇಡಿ ಬಹಳ ಚೆಂದವಾಗಿ ನಿರ್ವಹಿಸಿದ್ದಾರೆ. ಬ್ರಿಜೆಶ್ ಕೂಡಾ ಬಹಳ ಬೇಗ ಜೈಷ್ಣವಿಯ ಸ್ನೇಹಿತರಾಗಿ ಬಿಡುತ್ತಾರೆ. ಆದರೆ ಸೊಸೈಟಿಯ ನಿವಾಸಿಗಳು ಜೈಷ್ಣವಿ ನಾಯಿಯೊಂದಿಗೆ ಹೊರಗೆ ಕಾಣಿಸಿದಾಗಲೆಲ್ಲಾ ಇವಳನ್ನು ನೋಡಿ 'ಓ ನಾಯಿಯನ್ನು ನೋಡಿಕೊಳ್ಳಲು ನೀವೇನಾ ಬಂದವರು' ಎಂದಾಗಲೆಲ್ಲಾ ಜೈಷ್ಣವಿಗೆ ಎದೆಯಲ್ಲಿ ಕತ್ತರಿಯಾಡಿಸಿದ ಅನುಭವ. ನಗುವಿನ ಮುಖವಾಡ ಹಾಕಿ ಸುಮ್ಮನಾಗುತ್ತಾಳೆ.

ಇದನ್ನೂ ಓದಿ: 1 ಗಂಟೆ 15 ನಿಮಿಷದ ಈ ಹಾರರ್ ಸೈಕಲಾಜಿಕಲ್ ಚಿತ್ರ ನೋಡಿದ್ರೆ ಪಾತ್ರಗಳು ನಿಮ್ಮ ಸುತ್ತವೇ ಸುತ್ತಿದ ಅನುಭವ ಆಗುತ್ತೆ

ಆದಿನ ರಾತ್ರಿ ನಾಯಿಯನ್ನು ಬಾಲ್ಕನಿಯಲ್ಲಿ ಆಡಲು ಬಿಡುವ ವೈಷ್ಣವಿ ಅದನ್ನು ಒಳಗೆ ಕರೆತರುವುದು ಮರೆತುಬಿಡುತ್ತಾಳೆ. ರಾತ್ರಿಯೆಲ್ಲಾ ಥಂಡಿಯಲ್ಲಿ ಇರುವ ನಾಯಿ ಬೆಳಗ್ಗೆ ಜ್ಞಾನವಿಲ್ಲದೆ ಬಿದ್ದಿರುತ್ತದೆ. ಧನಶ್ರೀ ಬ್ರಿಜೇಶ್ ಸಹಾಯದಿಂದ ನಾಯಿಯನ್ನು ಪಶುವೈದ್ಯರ ಬಳಿ ಕರೆದೊಯ್ಯುವ ಜೈಷ್ಣವಿ ಆ ಮೂಕಪ್ರಾಣಿಗಾದ ತೊಂದರೆಗೆ ಅತ್ತೇ ಬಿಡುತ್ತಾಳೆ. ಅದನ್ನು ಬಹಳ ಕಾಳಜಿ ಮಾಡುತ್ತಾಳೆ. ಈಗ ನಾಯಿ ಕೂಡ ಅವಳನ್ನು ತುಂಬಾ ಹಚ್ಚಿಕೊಳ್ಳುತ್ತದೆ.

ಒಂದು ದಿನ ಬ್ರಿಜೇಶ್ ನ ಮೊಮ್ಮಗಳು ವೈಷ್ಣವಿಯನ್ನು ತನ್ನ ಮನೆಗೆ ಭೋಜನಕ್ಕೆ ಆಹ್ವಾನಿಸುತ್ತಾಳೆ. ಅಲ್ಲಿಗೆ ಹೋಗುವ ವೈಷ್ಣವಿಗೆ ಅಚ್ಚರಿಯೊಂದು ಕಾದಿರುತ್ತದೆ. ಬ್ರಿಜೇಶ್ ಒಂದು ಉಪ್ಪಿನಕಾಯಿ ವೀಡಿಯೋ ನೋಡಿ ತಾನೂ ಅದೇರೀತಿ ಉಪ್ಪಿನಕಾಯಿ ಮಾಡಿರುತ್ತಾನೆ. ಆ ವೀಡಿಯೋ ಜೈಷ್ಣವಿಗೆ ತೋರಿಸುತ್ತಾನೆ. ಆ ವೀಡಿಯೋ ಅವಳದೇ ಆಗಿರುತ್ತದೆ. ಅವಳು ಉಪ್ಪಿನಕಾಯಿ ಮಾಡುವುದರಲ್ಲಿ ನಿಷ್ಣಾತಳು ಎಂದು ತಿಳಿದು ಸಣ್ಣ ಪ್ರಮಾಣದಲ್ಲಿ ಇಲ್ಲಿಯೂ ನೀನು ಉಪ್ಪಿನಕಾಯಿ ತಯಾರಿಸಬಹುದಲ್ಲಾ ಎನ್ನು ಸಲಹೆ ನೀಡುತ್ತಾನೆ. ಧನಶ್ರೀಯೂ ಒತ್ತಾಯ ಮಾಡುತ್ತಾಳೆ. ಮೊದಮೊದಲು ತನಗೆ ವಯಸ್ಸಾಯಿತು ಶಕ್ತಿಯಿಲ್ಲ ಎಂದು ವಿರೋಧಿಸುವ ಜೈಷ್ಣವಿ ಕೊನೆಗೆ ಒಪ್ಪಿಕೊಂಡು ಆ ಸ್ನೇಹಿತರ ಸಹಾಯದಿಂದಲೇ ಬಗೆಬಗೆ ಉಪ್ಪಿನಕಾಯಿ ತಯಾರಿಸುತ್ತಾಳೆ.

ಮಗಸೊಸೆ ಮೊಮ್ಮಗ ತಮ್ಮ ಡಾರ್ಜಿಲಿಂಗ್ ಪ್ರವಾಸ ಮುಗಿಸಿ ವಾಪಸ್ ಬರುವಷ್ಟರಲ್ಲಿ ಜೈಷ್ಣವಿ ಸೊಸೈಟಿಯಲ್ಲಿ ಪ್ರಸಿದ್ಧಳಾಗಿಬಿಟ್ಟಿರುತ್ತಾಳೆ. ಹಾಗೂ ನಾಯಿಯೊಂದಿಗೆ ಅತ್ಯಂತ ಆಪ್ತಸ್ನೇಹವನ್ನೂ ಸಂಪಾದಿಸಿರುತ್ತಾಳೆ. ನಾಯಿಯನ್ನು ಬಹಳ ಪ್ರೀತಿಸುವ ಮೊಮ್ಮಗ ಕೌಶಲ್ ಅಜ್ಜಿ ತಮ್ಮ ಅನುಪಸ್ಥಿತಿಯಲ್ಲಿ ನಾಯಿಯನ್ನು ಚೆನ್ನಾಗಿ ನೋಡಿಕೊಂಡಿದ್ದಕ್ಕೆ ಖುಷಿಯಾಗುತ್ತಾನೆ. ಮಕ್ಕಳು  ಬಂದ ಮಾರನೇ ದಿನವೇ ಜೈಷ್ಣವಿ ತನ್ನೂರಿಗೆ ಹೊರಡಲು ತಯಾರಾಗುತ್ತಾಳೆ. ಅವಳಿಗೆ ಗೊತ್ತು ತನ್ನ ಅಸ್ತಿತ್ವ ತನ್ನೂರಿನಲ್ಲಿ ತನ್ನ ಸ್ವತಂತ್ರ ಮನೆಯಲ್ಲಿ ಎಂದು. ಮಗ ಹೋಗಬೇಡ ಎಂದು ತಡೆದರೂ ನಿಲ್ಲದೆ ಹೊರಟುಬಿಡುತ್ತಾಳೆ. ಆದರೆ ಹೋಗುವಾಗ ಮಗಸೊಸೆಯ ಸ್ವಾರ್ಥಕ್ಕೆ ತಕ್ಕ ತಪರಾಕಿಯನ್ನು ಕೊಟ್ಟೇ ಹೋಗುತ್ತಾಳೆ. ಅವಳೊಂದಿಗೆ ನಾಯಿಯೂ ಹೊರಡುತ್ತದೆ.

ಇದನ್ನೂ ಓದಿ: ಒಂಟಿತನದ ನಡುವೆ 50ರ ಹರೆಯದ ಮಹಿಳೆ ಮೀಠಿಯ ಕಥೆಯೇ 'ಯುವರ್ಸ್ ಟ್ರೂಲಿ' ಚಿತ್ರ

ಕೊನೆಯಲ್ಲಿ ಜೈಷ್ಣವಿ ಮಗನಿಗೆ ಹೇಳಿದ ಮಾತುಗಳೇನು ಎಂಬುದ ತಿಳಿಯಲು ನೀವೇ ಚಿತ್ರನೋಡಬೇಕು, ವಯಸ್ಸಾದ ತಾಯಿಗೆ ಮಕ್ಕಳು ಆಸರೆಯಾಗಬೇಕು ಎಂಬ ಸತ್ಯ ಎಲ್ಲರೂ ತಿಳಿಯಬೇಕು. ವೃದ್ಧರನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುವ ಮಕ್ಕಳಿಗೆ ಈ ಚಿತ್ರ ಒಂದು ಪಾಠ.  ತಮ್ಮ ಮನೆಯ ನಾಯಿ ಬೆಕ್ಕುಗಳನ್ನು, ತಮ್ಮ ಮಕ್ಕಳನ್ನು, ಮನೆಯನ್ನು ನೋಡಿಕೊಳ್ಳುವ ದಾದಿ ಎಂದು ವೃದ್ಧ ತಂದೆತಾಯಿಯರನ್ನು ಮಕ್ಕಳು ಭಾವಿಸಬಾರದು. ವಯಸ್ಸಾದರೇನು ತಾಯಿಗೂ ಒಂದು ಮನಸ್ಸಿದೆ ಅಭಿರುಚಿ ಇದೆ ಅವಳಿಗೂ ಒಂದು ಸ್ಥಾನಮಾನ ಇದೆ ಎಂದು ಅರಿತುಕೊಳ್ಳಬೇಕು.

ಜೈಷ್ಣವಿ ಪಾತ್ರದಲ್ಲಿ ನೀನಾಗುಪ್ತ ಬಹಳ ಚೆಂದದ ಅಭಿನಯ. ಬಹಳ ವರ್ಷಗಳ ನಂತರ ತೆರೆಯ ಮೇಲೆ ಕಾಣುವ ಕಬೀರ್ ಬೇಡಿ ಸಹ ಮಿಂಚಿದ್ದಾರೆ. ಒಂದು ಸರಳ ಸದಭಿರುಚಿಯ ಚಿತ್ರ.

Latest Videos