ಬರದ ಭೂಮಿಯಲ್ಲಿ ಹಣ್ಣು ಬೆಳೆದು ನೆಮ್ಮದಿ ಕಂಡ ರೈತ ಚಿತ್ರದುರ್ಗ ಜಿಲ್ಲೆ ಹಾರವಿಗೊಂಡನಹಳ್ಳಿಯ ಧನಂಜಯಪ್ಪ. ಆರು ಎಕರೆ ಜಮೀನನ್ನು ಎರಡು ಭಾಗ ಮಾಡಿದ್ದಾರೆ. ಇದರಲ್ಲಿ ಮೆಲೋಡಿ ಮತ್ತು ಕೂಕುಮಿಸ್‌ ಮೆಲೊ ಎಂಬ ಕಲ್ಲಂಗಡಿ ಹಾಗೂ ಕರಬೂಜ ತಳಿಗಳನ್ನು ನಾಟಿ ಮಾಡಿದ್ದಾರೆ.

- ಚಳ್ಳಕೆರೆ ವೀರೇಶ್‌

Add Asianetnews Kannada as a Preferred SourcegooglePreferred

ಇಲ್ಲೊಂದು ಜಾಣ್ಮೆಯಿದೆ. ಒಂದು ಕಡೆ ಮೆಲೋಡಿ ತಳಿಯ ಹಣ್ಣು ಬೆಳೆದು ಅದರಿಂದ ಆದಾಯ ಬರುವಷ್ಟರಲ್ಲಿ ಮತ್ತೊಂದೆಡೆ ಭೂಮಿ ಸಿದ್ಧಪಡಿಸುತ್ತಾರೆ. ಇದರಲ್ಲಿ ಇಳುವರಿ ಬಂದು ಮುಗಿದಾಗ ಮತ್ತೊಂದೆಡೆ ಗಿಡಗಳು ಫಲ ನೀಡಲು ಶುರು ಮಾಡುತ್ತವೆ. ಐದು ವರ್ಷಗಳ ಹಿಂದೆ ಸ್ನೇಹಿತರ ಸಲಹೆಯಂತೆ ಆರಂಭಿಸಿದ ಹಣ್ಣು ಕೃಷಿ ಇಂದು ಬದುಕನ್ನು ಕಾಯುತ್ತಿದೆ.

ಸ್ಟ್ರಾಬೆರಿ ಬೆಳೆದು ಭರ್ಜರಿ ಲಾಭ ಮಾಡುತ್ತಿರುವ ಚಿಕ್ಕಬಳ್ಳಾಪುರದ ರೈತ ಸತೀಶ್ ರೆಡ್ಡಿ!

ನಾಟಿ ಹೇಗೆ?

ಬೀಜ ಚೆಲ್ಲುವ ಮುನ್ನ ಐದು ಎಕರೆ ಜಮೀನಿಗೆ ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರ ಎರಡು ಬಾರಿ ನೀಡಲಾಗಿದೆ. ನಂತರ ಬದು ಮಾಡಿ ಮಚ್ಲಿಂಗ್‌ ಹಾಕಿ ಸುಮಾರು ಒಂದು ವಾರ ಡ್ರಿಪ್‌ ಮೂಲಕ ನೀರು ಹಾಯಿಸಿ ಭೂಮಿಯನ್ನು ಹದಗೊಳಿಸುತ್ತಾರೆ. ವಾರದ ನಂತರ ಜೀಜ ನಾಟಿ ಮಾಡಿ ಎರಡ್ಮೂರು ದಿನಕ್ಕೆ ಮೊಳಕೆಯೊಡೆಯುತ್ತದೆ. ಮೊಳಕೆ ಹೊಡೆದು ಎಲೆ ಬಿಡುವ ಸಂದರ್ಭಕ್ಕೆ ಒಮ್ಮೆ ಕೃಷಿ ಇಲಾಖೆಯ ಸಲಹೆಯಂತೆ ಔಷಧಿಯನ್ನು ಸಿಂಪಡಣೆ ಮಾಡಲಾಗಿದೆ.

ಗಿಡ ಪೋಷಣೆ ಹೇಗೆ?

‘ಮೆಲೋಡಿ ಕಲ್ಲಂಗಡಿ ಒಂದು ತಿಂಗಳು ತುಂಬುವಷ್ಟರಲ್ಲಿ ಹೂ ಬಿಡುತ್ತದೆ. ಅ ಸಂದರ್ಭದಲ್ಲಿ ವಾರಕ್ಕೊಮ್ಮೆ ಬೋರಸಿಂಗ್‌, ಕಿಂಗ್‌ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿದೆ. ಕಾಯಿ ಬಿಡಲಾರಂಭಿಸಿದಾಗ ದಿನಕ್ಕೆ ಎರಡು ಬಾರಿ ನೀರು ಹಾಯಿಸಿದಲ್ಲಿ ಸಮೃದ್ಧ ಕಾಯಿಗಳು ಬರುತ್ತವೆ’ ಎನ್ನುತ್ತಾರೆ ಧನಂಜಯ. ಈ ಬಾರಿ ಕಾಯಿಗಳು ಸುಮಾರು 6 ರಿಂದ 8 ಕೆ.ಜಿಯಷ್ಟುತೂಕ ಬಂದಿರುವುದು ಇವರ ಹರ್ಷ ಹೆಚ್ಚಿಸಿದೆ.ಮೆಲೋಡಿ ಕಲ್ಲಂಗಡಿ ಬೀಜ 1 ಕೆ.ಜಿಗೆ 25 ಸಾವಿರ ಇದೆ, 350 ಗ್ರಾಂ ಒಂದು ಎಕರೆಗೆ ಬೇಕಾಗುತ್ತದೆ. ಮೂರು ಎಕರೆಗೆ ಒಂದು ಕೆ.ಜಿ.ಬೀಜ ಹಾಕಲಾಗಿದೆ. ಉತ್ತಮ ಸೈಜ್‌ನ ಒಂದು ಹಣ್ಣಿಗೆ ಕೆ.ಜಿಗೆ 8 ರಿಂದ 10 ರೂಪಾಯಿಯವರೆಗೂ ಸಿಕ್ಕಿದೆ. ಬೆಳೆಯನ್ನು ಬೆಂಗಳೂರು, ಕೇರಳ, ಮಂಗಳೂರು, ಉಡುಪಿ, ಬಾಂಬೆಗಳಲ್ಲಿ ಹೆಚ್ಚಿನ ಬೇಡಿಕೆ ಇರುವ ಕಡೆ ಮಾರಾಟ ಮಾಡುತ್ತಾರೆ. ಕೂಕುಮಿಸ್‌ ಮೆಲೊವನ್ನು ಜರ್ಮನಿಗೂ ಸಹ ಕಳುಹಿಸಿಕೊಡಲಾಗಿದೆ ಎನ್ನುತ್ತಾರೆ ರೈತ ಧನಂಜಯ.

ಸಾಗರದ ಹಿಂಡೂ ಮನೆ ತೋಟದಲ್ಲಿ ದೇಶ ವಿದೇಶದ ಹಣ್ಣುಗಳು!

ಐದು ಲಕ್ಷ ಲಾಭ

60 ದಿನಗಳಲ್ಲೂ ಮೂರು ಬೀಡ್‌ನಂತೆ 45 ಟನ್‌ ಫಸಲು ಮಾರುಕಟ್ಟೆಗೆ ಕಳುಹಿಸಲಾಗಿದೆ. ಸೈಜ್‌ಗೆ ಅನುಗುಣವಾಗಿ ಬೆಲೆಯೂ ಸಿಗುತ್ತಿದೆ. ಸುಮಾರು 5 ಲಕ್ಷ ರು. ಲಾಭ ಈಗಾಗಲೇ ಸಿಕ್ಕಿದೆ. ಮತ್ತೆ ಉಳಿದ ಹಣ್ಣು ಸ್ಥಳೀಯ ಮಾರುಕಟ್ಟೆಯವರು ಖರೀದಿಗೆ ಕೇಳಿದ್ದಾರೆ ಎನ್ನುತ್ತಾರೆ. ಹೆಚ್ಚಿನ ಮಾಹಿತಿಗಾಗಿ 94497 55879ಗೆ ಸಂಪರ್ಕಿಬಹುದು.