ಎಲ್ಲಿಯ ಮಣಿಪುರ, ಎಲ್ಲಿಯ ಬೆಂಗಳೂರು..ಹಿಂಸಾಚಾರದಲ್ಲಿ ಮುಳುಗಿದ್ದ ಮಣಿಪುರದಲ್ಲಿ ತನ್ನ ಹೆಸರು ಹೇಳಿದರೂ ಆಪತ್ತ ಅನ್ನೋ ಆತಂಕದಲ್ಲಿದ್ದ ಯುವತಿ ಇದೀಗ ಶ್ರೀ ರವಿಶಂಕರ್ ಗುರೂಜಿಯ ಆರ್ಟ್ ಆಫ್ ಲಿವಿಂಗ್ ನೆರವಿನಿಂದ ಬೆಂಗಳೂರಿಗೆ ಬಂದು ಹೊಸ ಬದುಕು ಕಟ್ಟಿಕೊಂಡಿದ್ದಾರೆ.
ಬೆಂಗಳೂರು (ಆ.11) ಮಣಿಪುರದ ಹಿಂಸಾಚಾರ, ಗಲಭೆ, ಸಂಕಷ್ಟಗಳ ಸರಮಾಲೆಗಳಿಂದ ಸ್ಥಳೀಯರ ಶಾಂತಿ, ನೆಮ್ಮದಿ, ಸುಂದರ ಬದುಕು ಆಗ್ರಹಿಸುತ್ತಿದ್ದಾರೆ. ಇನ್ನೇನು ಶಾಂತವಾಯಿತು ಅನ್ನೋವಷ್ಟರಲ್ಲೇ ಒಂದಲ್ಲಾ ಒಂದು ಕಾರಣಗಳಿಂದ ಮತ್ತೆ ಹಿಂಸಾಚಾರಗಳು ಭುಗಿಲೇಳುತ್ತವೆ. ಇದರಿಂದ ಸ್ಥಳೀಯರ ಬದುಕು ನಕರವಾಗಿದೆ. ಈ ಆತಂಕದ ವಾತಾವರಣದಲ್ಲಿ ಯಾರಾದರೂ ತನ್ನ ಹೆಸರು ಕೇಳಿದರೂ ಹೇಳಲು ಭಯ. ಗುರುತು, ಸಮುದಾಯ ಗೊತ್ತಾದರೆ ಅನಾಹುತವಾಗುವ ಸಾಧ್ಯತಗಳೇ ಹೆಚ್ಚು. ಹೀಗೆ ಭಯದ ನೆರಳಿನಲ್ಲಿ ಆತಂಕದಿಂದ ದಿನದೂಡಿದ್ದ 21 ವರ್ಷದ ಚಿನ್ಲಾಲ್ಚೋಯ್ ಇದೀಗ ಬೆಂಗಳೂರಿನಲ್ಲಿ ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಶ್ರೀ ರವಿಶಂಕರ್ ಗುರೂಜಿಯ ಆರ್ಟ್ ಆಫ್ ಲೀವಿಂಗ್ ನೆರವಿನಿಂದ ಚಿನ್ಲಾಲ್ಚೋಯ್ ಜೀವನ ಮಾತ್ರವಲ್ಲ ಇಡೀ ಕುಟುಂಬ ಬದುಕಿನ ಹೊಸ ಅಧ್ಯಾಯ ಆರಂಭಿಸಿದೆ.
ಮಣಿಪುರದಿಂದ ಬೆಂಗಳೂರಿಗೆ, ಹೊಸ ಬದುಕು
ರೈತ ಕುಟುಂಬದ ಹಿನ್ನೆಲೆಯುಳ್ಳ ಚಿನ್ಲಾಲ್ಚೋಯ್, ಭವಿಷ್ಯದ ಕುರಿತು ಭರವಸೆಯನ್ನೇ ಕಳೆದುಕೊಂಡಿದ್ದರು. ಆದರೆ, 'ದಿ ಆರ್ಟ್ ಆಫ್ ಲಿವಿಂಗ್, ಟಾಟಾ ಸ್ಟ್ರೈವ್, ಇಎಚ್ಸಿಎಲ್ (IHCL) ಹಾಗೂ ಅಸ್ಸಾಂ ರೈಫಲ್ಸ್ ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ನಡೆದ ಯುವ ಕೌಶಲ್ಯಾಭಿವೃದ್ಧಿ ತರಬೇತಿಯು ಈಕೆಯ ಜೀವನದ ದಿಕ್ಕನ್ನೇ ಬದಲಿಸಿತು. ಇದೀಗ ಬೆಂಗಳೂರಿನ ಪ್ರತಿಷ್ಠಿತ ತಾಜ್ ವೆಸ್ಟ್ ಎಂಡ್ ಹೊಟೆಲ್ನಲ್ಲಿ ಅತಿಥಿಗಳನ್ನು ಮುಗುಳುನಗೆಯಿಂದ ಸ್ವಾಗತಿಸುತ್ತಾ ಹುರುಪು, ಚೈತನ್ಯದಿಂದ ಕೆಲಸ ಮಾಡುತ್ತಿದ್ದಾರೆ.
ಆತಿಥ್ಯ ಕ್ಷೇತ್ರದಲ್ಲಿ ಕೆಲಸ ಗಿಟ್ಟಿಸಿದ ಯುವತಿ
ಅಸ್ಸಾಂ ರೈಫಲ್ಸ್ ಆವರಣದಲ್ಲಿ ನಡೆದ ಈ ತರಬೇತಿಯಲ್ಲಿ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಪ್ರೇರಣೆಯ 'ಯುವ ನಾಯಕತ್ವ ತರಬೇತಿ ಕಾರ್ಯಕ್ರಮದ (YLTP) ಭಾಗವಾಗಿ ಯೋಗ, ಧ್ಯಾನ ಹಾಗೂ 'ಸುದರ್ಶನ ಕ್ರಿಯಾ' ಪ್ರಾಣಾಯಾಮವನ್ನು ಅಭ್ಯಾಸ ಮಾಡಲಾಯಿತು. ಇದರಿಂದ ಚಿನ್ಲಾಲ್ಚೋಯ್ ಅವರಲ್ಲಿದ್ದ ಮಾನಸಿಕ ಒತ್ತಡ ಹಾಗೂ ಆತ್ಮವಿಶ್ವಾಸದ ಕೊರತೆ ದೂರವಾಯಿತು. ಜೊತೆಗೆ ಆತಿಥ್ಯ , ಸಂವಹನ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಸನ ತರಬೇತಿಯನ್ನು ಪಡೆಯುವ ಮೂಲಕ ತಮ್ಮಲ್ಲಿದ್ದ ಹಿಂಜರಿಕೆಯನ್ನು ಗೆದ್ದು ಹೊರಬಂದರು.
ಪೋಷಕರ ಜವಾಬ್ದಾರಿಯೂ ನಿರ್ವಹಿಸುತ್ತಾಳೆ ಚಿನ್ಲಾಲ್ಚೋಯ್
ತರಬೇತಿಯ ಕೊನೆಯಲ್ಲಿ ನಡೆಸಿದ ಆಯ್ಕೆ ಪ್ರಕ್ರಿಯೆಯಲ್ಲಿ ಅದ್ಭುತ ಸಾಧನೆ ತೋರಿದ ಚಿನ್ಲಾಲ್ಚೋಯ್, ಬೆಂಗಳೂರಿನ 'ತಾಜ್ ವೆಸ್ಟ್ ಎಂಡ್'ನಲ್ಲಿ ಉದ್ಯೋಗ ಗಿಟ್ಟಿಸಿಕೊಂಡರು. ಮಣಿಪುರದಿಂದ ಮೊದಲ ಬಾರಿಗೆ ಹೊರಬಿದ್ದು, ವಿಮಾನವೇರಿ ಬೆಂಗಳೂರಿಗೆ ಬಂದ ಚಿನ್ಲಾಲ್ಚೊಯ್, ಇಂದು ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ತಮ್ಮ ಸಂಪಾದನೆಯಲ್ಲಿ ಒಂದಷ್ಟು ಭಾಗವನ್ನು ಮಣಿಪುರದಲ್ಲಿರುವ ಪೋಷಕರಿಗೂ ಕಳುಹಿಸಿಕೊಡುತ್ತಿದ್ದಾರೆ.
ಗುರೂಜಿ ಅವರ 'ಆರ್ಟ್ ಆಫ್ ಲಿವಿಂಗ್' ಕೌಶಲ್ಯ ತರಬೇತಿಯು ದೇಶಾದ್ಯಂತ 4 ಲಕ್ಷಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ ಕಂಡುಕೊಳ್ಳಲು ನೆರವಾಗಿದ್ದು, ಮಣಿಪುರದ ಕತ್ತಲಿನಲ್ಲಿ ಕಳೆದುಹೋಗಬೇಕಿದ್ದ ಚಿನ್ಲಾಲ್ಚೋಯ್ ಅವರಂತಹ ಸಾವಿರಾರು ಯುವಕರ ಬಾಳಿಗೆ ಹೊಸ ಭರವಸೆಯ ಬೆಳಕಾಗಿದೆ


