ಯುವಕರು ಬದಲಾವಣೆಯನ್ನು ತರಬಹುದು. ನೀವು ಜನರ ಹೃದಯ ಮತ್ತು ಮನಸ್ಸುಗಳನ್ನು ಒಂದುಗೂಡಿಸಬಹುದು. ನಮ್ಮಲ್ಲಿ ಪ್ರತಿಯೊಬ್ಬರಿಗೂ ನಮ್ಮದೇ ಆದ ವಿಶಿಷ್ಟ ಶಕ್ತಿ ಇದೆ ಎಂದರು ರವಿಶಂಕರ್ ಗುರೂಜಿ.
ಬೆಂಗಳೂರು (ಏ.25): ಜಾಗತಿಕ ಸಂವಾದದಲ್ಲಿ ಅಪನಂಬಿಕೆ ಮತ್ತು ಧ್ರುವೀಕರಣ ಹೆಚ್ಚುತ್ತಿರುವ ಸಮಯದಲ್ಲಿ, ಏಳು BIMSTEC ರಾಷ್ಟ್ರಗಳ ಯುವ ನಾಯಕರು ದಿ ಆರ್ಟ್ ಆಫ್ ಲಿವಿಂಗ್ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನಡೆದ BIMSTEC ಯೂತ್ ಲೀಡರ್ಶಿಪ್ ಎಕ್ಸ್ಚೇಂಜ್ ಪ್ರೋಗ್ರಾಂನಲ್ಲಿ (ಯುವ ನಾಯಕತ್ವ ವಿನಿಮಯ ಕಾರ್ಯಕ್ರಮ) ಒಂದಾಗಿ ಸೇರಿದರು. ಈ ಸಂದರ್ಭದಲ್ಲಿ ರವಿಶಂಕರ್ ಗುರೂಜಿ ಮುಂದಿನ ತಲೆಮಾರಿಗೆ, ಸಂಘರ್ಷಕ್ಕಿಂತ ಸಹಕಾರವನ್ನು ಆಯ್ಕೆಮಾಡಿ ಹೆಚ್ಚು ಒಗ್ಗಟ್ಟಿನ ಪ್ರದೇಶವನ್ನು ನಿರ್ಮಿಸುವಂತೆ ಕರೆ ನೀಡಿದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ಮಾರ್ಗದರ್ಶನ ಮತ್ತು ಆಶ್ರಯದಲ್ಲಿ ನಡೆಯುತ್ತಿರುವ ಈ ಆರು ದಿನಗಳ ಕಾರ್ಯಕ್ರಮದಲ್ಲಿ ಭಾರತ, ನೇಪಾಳ, ಭೂತಾನ್, ಶ್ರೀಲಂಕಾ, ಮಯಾನ್ಮಾರ್, ಬಾಂಗ್ಲಾದೇಶ ಮತ್ತು ಥೈಲ್ಯಾಂಡ್ನ ಉದಯೋನ್ಮುಖ ನಾಯಕರು ಒಟ್ಟುಗೂಡಿದ್ದಾರೆ. ದಿ ಆರ್ಟ್ ಆಫ್ ಲಿವಿಂಗ್ನ 45ನೇ ವರ್ಷದ ಆಚರಣೆಯ ಭಾಗವಾಗಿರುವ ಈ ಕಾರ್ಯಕ್ರಮವು ಬಂಗಾಳ ಕೊಲ್ಲಿಯ ಸಮುದಾಯದಾದ್ಯಂತ ಪ್ರಾದೇಶಿಕ ಸ್ನೇಹವನ್ನು ಗಾಢವಾಗಿಸುವುದು, ಜನರಲ್ಲಿ ಪರಸ್ಪರ ಸಂಬಂಧವನ್ನು ಬಲಪಡಿಸುವುದು ಮತ್ತು ಯುವ ನಾಯಕತ್ವವನ್ನು ಬೆಳೆಸುವ ಉದ್ದೇಶ ಹೊಂದಿದೆ.
ಇತರರೊಂದಿಗೆ ಹಂಚಿಕೊಳ್ಳಬೇಕಾಗಿದೆ
ಸಭೆಯನ್ನುದ್ದೇಶಿಸಿ ಮಾತನಾಡಿದ ರವಿಶಂಕರ್ ಗುರೂಜಿ, “ನೀವು (ಯುವಕರು) ಒಂದು ಬದಲಾವಣೆಯನ್ನು ತರಬಹುದು. ನೀವು ಜನರ ಹೃದಯ ಮತ್ತು ಮನಸ್ಸುಗಳನ್ನು ಒಂದುಗೂಡಿಸಬಹುದು. ನಮ್ಮಲ್ಲಿ ಪ್ರತಿಯೊಬ್ಬರಿಗೂ ನಮ್ಮದೇ ಆದ ವಿಶಿಷ್ಟ ಶಕ್ತಿ ಇದೆ, ಮತ್ತು ನಾವು ಆ ಶಕ್ತಿಗಳನ್ನು ಇತರರೊಂದಿಗೆ ಹಂಚಿಕೊಳ್ಳಬೇಕಾಗಿದೆ. ರಾಷ್ಟ್ರಗಳು ಪರಸ್ಪರ ಅಸೂಯೆ ಪಡುವ ದಿನಗಳು ಕಳೆದು ಹೋದವು. ಇದು ಸಹಕಾರ ನೀಡುವ ಮತ್ತು ನಾವು ಹೊಂದಿರುವ ಅತ್ಯುತ್ತಮವಾದದ್ದನ್ನು ಪರಸ್ಪರ ಹಂಚಿಕೊಳ್ಳುವ ಕಾಲ” ಎಂದು ಹೇಳಿದರು.
ಯುವಕರು ತಮ್ಮ ಪರಂಪರೆಯಲ್ಲಿ ನೆಲೆಸಿಕೊಂಡು, ಅದೇ ಸಮಯಕ್ಕೆ ವಿಶಾಲ ದೃಷ್ಟಿಕೋನವನ್ನು ಬೆಳೆಸುವಂತೆ ಗುರುದೇವರು ಪ್ರೇರೇಪಿಸಿದರು. “ನಮ್ಮ ಸಂಸ್ಕೃತಿಗಳು, ಸಂಪ್ರದಾಯಗಳು ಮತ್ತು ಭಾಷೆಗಳಲ್ಲಿನ ವೈಶಿಷ್ಟ್ಯತೆಯೇ, ಪ್ರತಿಯೊಬ್ಬರನ್ನು ಸುಂದರವಾಗಿಸುವುದು. ನಿಮ್ಮ ಮೂಲಗಳನ್ನು ಗೌರವಿಸಿ, ಅದರೊಳಗೆ ಆಳವಾಗಿ ಹೋಗಿ, ಮತ್ತು ನಿಮ್ಮ ದೃಷ್ಟಿಕೋನವನ್ನು ವಿಸ್ತರಿಸಿ, ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಿ” ಎಂದು ಅವರು ಹೇಳಿದರು.
ಮೊದಲ ದಿನದ ಕಾರ್ಯಕ್ರಮದಲ್ಲಿ, ಬೆಂಗಳೂರಿನ ಕ್ಯಾಂಪಸ್ ಸಂಸ್ಕೃತಿಗಳ, ಭಾಷೆಗಳ ಮತ್ತು ವಿಚಾರಗಳ ಸಮ್ಮಿಲನ ತಾಣವಾಯಿತು. ವಿವಿಧ ದೇಶಗಳ ಪ್ರತಿನಿಧಿಗಳು ತಮ್ಮ ದೇಶಗಳ ಕನಸುಗಳನ್ನು ಹಂಚಿಕೊಂಡು, ಸ್ಥಳೀಯ ಸವಾಲುಗಳನ್ನು ಚರ್ಚಿಸಿದರು ಮತ್ತು ಸಾಮಾನ್ಯ ಮೌಲ್ಯಗಳ ಬಗ್ಗೆ ಅನ್ವೇಷಿಸಿದರು. ಮುಖ್ಯ ಭಾಷಣ ಮಾಡುತ್ತಾ, ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ BIMSTEC ಮತ್ತು SAARC ವಿಭಾಗದ ಜಂಟಿ ಕಾರ್ಯದರ್ಶಿ, ಶ್ರೀ ಸಿ.ಎಸ್.ಆರ್. ರಾಮ್ ಅವರು ಈ ಪ್ರದೇಶದ ಜನಸಂಖ್ಯಾ ಬಲದ ಬಗ್ಗೆ ಒತ್ತಿ ಹೇಳಿದರು.
“ನಮ್ಮ ಪ್ರದೇಶವು ವಿಶ್ವದಲ್ಲೇ ಅತಿ ಯುವ ಪ್ರದೇಶವಾಗಿದೆ, ರಾಷ್ಟ್ರ ಮಟ್ಟದಲ್ಲಿ, ಪ್ರಾದೇಶಿಕ ಮಟ್ಟದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಮುನ್ನಡೆಯುತ್ತಿದೆ. ಈ ಕಾರ್ಯಕ್ರಮವನ್ನು, ಯುವ ನಾಯಕರನ್ನು ಒಂದಾಗಿಸಿ, ಆಲೋಚನೆಗಳನ್ನು ಹಂಚಿಕೊಳ್ಳಲು, ಸವಾಲುಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹಾರಗಳಿಗೆ ಸಹಕರಿಸಲು ವಿನ್ಯಾಸಗೊಳಿಸಲಾಗಿದೆ. ಯುವ ನಾಯಕರು ಒಂದುಗೂಡಿ, ಪ್ರದೇಶದ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ, ಒಳಗಿನ ಮತ್ತು ಹೊರಗಿನ ಶಾಂತಿಯನ್ನು ಕಂಡುಕೊಳ್ಳುವ ದೃಷ್ಟಿಕೋನದೊಂದಿಗೆ ನಾವು ಆರ್ಟ್ ಆಫ್ ಲಿವಿಂಗ್ ಜೊತೆಗೆ ಕೆಲಸ ಮಾಡುತ್ತಿದ್ದೇವೆ” ಎಂದು ಅವರು ಹೇಳಿದರು.
ತಮ್ಮ ವಿಶೇಷ ಭಾಷಣದಲ್ಲಿ, ಕೇರಳದ ಪ್ರಶಸ್ತಿ ವಿಜೇತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಶ್ರೀ ಪಿ. ವಿಜಯನ್, IPS ಅವರು, “ಲೋಕದಲ್ಲಿ ಎರಡು ವಿಧದ ಜನರು ಮಾತ್ರ ಇರುತ್ತಾರೆ: ಸಮಸ್ಯೆ ಸೃಷ್ಟಿಸುವವರು ಮತ್ತು ಪರಿಹಾರ ನೀಡುವವರು. ಪರಿಹಾರಕ್ಕೆ ಕೊಡುಗೆ ನೀಡುವವರು ನಾಯಕರು” ಎಂದು ಹೇಳಿದರು. ಧ್ಯಾನ ಮತ್ತು ಸುದರ್ಶನ ಕ್ರಿಯೆಯು ತಮ್ಮಲ್ಲಿ ಸಮತೋಲನ, ಚಿಂತನೆ ಮತ್ತು ಉತ್ತಮ ನಿರ್ಧಾರಗಳನ್ನು ಬೆಳೆಸಲು ಸಹಾಯ ಮಾಡಿದೆ ಎಂದು ಅವರು ಹೇಳಿದರು.
ರವಿಶಂಕರ್ ಗುರೂಜಿ ಮಾನವ ಸಾಮರ್ಥ್ಯದ ಮಹತ್ತರ ಶಕ್ತಿಯನ್ನು ನೆನಪಿಸುತ್ತಾ, “ನಿಮ್ಮ ಸಾಮರ್ಥ್ಯದ 97% ಇನ್ನೂ ಬಳಸಲ್ಪಟ್ಟಿಲ್ಲ. ನಿಮ್ಮ ಒಳಗಿನ ಶಕ್ತಿಯನ್ನು ಜಾಗೃತಗೊಳಿಸಲು ಈ ತರಬೇತಿಗಳನ್ನು ದಿ ಆರ್ಟ್ ಆಫ್ ಲಿವಿಂಗ್ ಆಯೋಜಿಸಿದೆ” ಎಂದು ಹೇಳಿದರು. ಏಪ್ರಿಲ್ 25ರಿಂದ 30ರವರೆಗೆ ನಡೆಯುವ ಈ ಕಾರ್ಯಕ್ರಮವು ಭಾವನಾತ್ಮಕ ಸ್ಥೈರ್ಯ, ನಾಯಕತ್ವ ಸಾಮರ್ಥ್ಯ ಮತ್ತು ವಿವಿಧ ಸಂಸ್ಕೃತಿಗಳ ನಡುವೆ ಪರಸ್ಪರ ಸಹಕಾರವನ್ನು ಬೆಳೆಸುವುದರ ಜೊತೆಗೆ ಉದ್ಯಮಶೀಲ ಚಿಂತನೆ ಮತ್ತು ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಬೆಳೆಸಲು ರೂಪಿಸಲಾಗಿದೆ.
ಭಾಗವಹಿಸುವವರು ಇನೋವೇಶನ್ ಲ್ಯಾಬ್ಗಳು, ಕ್ಷೇತ್ರ ಅನುಭವಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಮತ್ತು ಸಾಮಾಜಿಕ ಪರಿಣಾಮ, ಆಡಳಿತ, ಸುಸ್ಥಿರತೆ, ತಂತ್ರಜ್ಞಾನ, ಶಿಕ್ಷಣ ಮತ್ತು ಸಮುದಾಯ ಅಭಿವೃದ್ಧಿಯಂತಹ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಭಾರತೀಯ ತಜ್ಞರಿಂದ ಒಳನೋಟಗಳನ್ನು ಪಡೆಯುತ್ತಾರೆ. “ನೀವು ಇಲ್ಲಿ ನಿಮ್ಮ ದೇಶಗಳನ್ನು ಪ್ರತಿನಿಧಿಸುವುದಷ್ಟೇ ಅಲ್ಲ, ನೀವು ಹಿಂದಿರುಗಿ ನಿಮ್ಮ ದೇಶದ ಯುವಕರನ್ನು ಪ್ರೇರೇಪಿಸಲಿದ್ದೀರಿ” ಎಂದು ಗುರುದೇವರು ಭಾಗವಹಿಸುವವರಿಗೆ ಹೇಳಿದರು.


