ಮಳೆಗಾಲದಲ್ಲಿ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ವೆ. ಈ ಸಮಯದಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡ್ರೆ ಅದನ್ನು ನಿರ್ಲಕ್ಷ್ಯ ಮಾಡ್ಬಾರದು. ನೋವು ಏಕೆ ಬರ್ತಿದೆ, ಅದು ಯಾವ ಕಾಯಿಲೆಗಳ ಲಕ್ಷಣ, ಅದನ್ನು ಹೇಗೆ ತಡೆಯೋದು ಎಂಬುದನ್ನು ತಿಳಿದ್ಕೊಳ್ಳಿ.
ಮಳೆಗಾಲದಲ್ಲಿ ಹೊಟ್ಟೆ ಮತ್ತು ಕರುಳಿನ ಕಾಯಿಲೆಗಳು ಹೆಚ್ಚಾಗೋದು ಸಾಮಾನ್ಯ. ಹಾಗಂತ ಅದನ್ನು ನಿರ್ಲಕ್ಷಿಸೋದು ಅಪಾಯಕಾರಿ. ಸೌಮ್ಯವಾದ ಹೊಟ್ಟೆ ನೋವು ಅಥವಾ ಅಸ್ವಸ್ಥತೆ ಕಾಣಿಸಿಕೊಂಡಾಗ್ಲೆ ಅದಕ್ಕೆ ಪರಿಹಾರ ಕಂಡುಕೊಳ್ಳೋದು ಬಹಳ ಮುಖ್ಯ.
ಹೊಟ್ಟೆ ನೋವು ಹೆಚ್ಚಾಗಲು ಕಾರಣ
ಈ ಋತುವಿನಲ್ಲಿ, ಮಳೆ ಹೆಚ್ಚಾದಾಗ ಚರಂಡಿಗಳು ಉಕ್ಕಿ ಹರಿಯುತ್ವೆ. ಅಲ್ಲಲ್ಲಿ ನೀರು ಸಂಗ್ರಹವಾಗುತ್ತೆ. ಕೊಳಕು ನೀರು ಶುದ್ಧ ನೀರನ್ನು ಸೇರುವ ಅಪಾಯ ಹೆಚ್ಚು. ಸರಿಯಾದ ಸಂಸ್ಕರಣೆಯಿಲ್ಲದ ನೀರನ್ನು ಕುಡಿದಾಗ ಅಥವಾ ಬಳಸಿದಾಗ ಹಾನಿಕಾರಕ ಬ್ಯಾಕ್ಟೀರಿಯಾ, ವೈರಸ್ಗಳು ಮತ್ತು ಪರಾವಲಂಬಿಗಳು ದೇಹಕ್ಕೆ ಪ್ರವೇಶಿಸುತ್ತವೆ.
ಬೀದಿ ಆಹಾರ
ಅಷ್ಟೇ ಅಲ್ಲ ಮಳೆಗಾಲದಲ್ಲಿ ಬೀದಿ ಆಹಾರ ಮಾರಾಟಗಾರರು ಯಾವ ನೀರು ಬಳಕೆ ಮಾಡ್ತಾರೆ ಎನ್ನುವ ಜ್ಞಾನ ನಮಗೆ ಇರೋದಿಲ್ಲ. ಅವರು ಕೊಳಕು ಮಿಶ್ರಿತ ನೀರನ್ನು ಬಳಕೆ ಮಾಡಿದ್ರೆ ಅದು ಆಹಾರದ ಮೂಲಕ ನಮ್ಮ ಹೊಟ್ಟೆಗೆ ಹಾನಿ ಮಾಡುತ್ತೆ. ಬಿಸಿ ಮತ್ತು ಆರ್ದ್ರ ವಾತಾವರಣವು ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಿದೆ. ಅಡುಗೆಮನೆಯ ಸ್ಪಂಜುಗಳು ಮತ್ತು ಪಾತ್ರೆಗಳಿಂದ ಹಿಡಿದು ಅಳಿದುಳಿದ ಆಹಾರದಲ್ಲಿ ಸೂಕ್ಷ್ಮಜೀವಿಗಳು ವೇಗವಾಗಿ ಬೆಳೆಯುತ್ತವೆ. ಇದು ಅನಾರೋಗ್ಯಕ್ಕೆ ದಾರಿಮಾಡಿಕೊಡುತ್ತದೆ.
ಆರಂಭಿಕ ಲಕ್ಷಣ
ಹೊಟ್ಟೆಯ ಸೋಂಕುಗಳು ವಿಭಿನ್ನ ರೀತಿಯಲ್ಲಿ ಕಾಣಿಸಿಕೊಳ್ಳುತ್ತವೆ. ಆರಂಭಿಕ ರೋಗಲಕ್ಷಣಗಳನ್ನು ಗುರುತಿಸಿದ್ರೆ ಮುಂದೆ ಬರುವ ಅಪಾಯ ತಡೆಯಬಹುದು. ಹಠಾತ್ ವಾಕರಿಕೆ ಅಥವಾ ವಾಂತಿ ಸಾಮಾನ್ಯವಾಗಿ ಮೊದಲ ಎಚ್ಚರಿಕೆಯ ಸಂಕೇತವಾಗಿದೆ. ವಾಂತಿ ಬಂದ್ರೆ ನಿಮ್ಮ ದೇಹವು ಹಾನಿಕಾರಕ ವಿಷವನ್ನು ಹೊರಗೆ ಹಾಕಲು ಪ್ರಯತ್ನಿಸ್ತಿದೆ ಎಂದರ್ಥ. ಹೊಟ್ಟೆಯ ಕೆಳಭಾಗದಲ್ಲಿ ನಿರಂತರ ಸೆಳೆತ ಅಥವಾ ನೋವು ಕಾಣಿಸಿಕೊಂಡ್ರೆ ಅದ್ರಲ್ಲೂ ಆಹಾರ ಸೇವನೆ ನಂತ್ರ ಈ ಸಮಸ್ಯೆ ಆದ್ರೆ ಹೊಟ್ಟೆ ಸೋಂಕಿನ ಸಂಕೇತವಾಗಿದೆ. ಇದನ್ನು ಕೇವಲ ಅಜೀರ್ಣ ಎಂದು ನಿರ್ಲಕ್ಷಿಸಬೇಡಿ. ಆಗಾಗ್ಗೆ, ನೀರಿನಂಶದ ಮಲವು ತ್ವರಿತ ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಅತಿಸಾರ ಎರಡು ದಿನಗಳಿಗಿಂತ ಹೆಚ್ಚು ಕಾಲ ಇದ್ದರೆ, ವೈದ್ಯರನ್ನು ಸಂಪರ್ಕಿಸಿ.
ಹೊಟ್ಟೆ ನೋವು ಯಾವ ರೋಗಗಳ ಲಕ್ಷಣವಾಗಿರಬಹುದು?
ಆಹಾರ ವಿಷವಾದಾಗ, ಮಲಬದ್ಧತೆ, ಆಮ್ಲೀಯತೆ ಸಮಸ್ಯೆ ಕಾಡ್ತಿದೆ, ಹೊಟ್ಟೆ ಹುಣ್ಣು ಅಥವಾ ಟೈಫಾಯ್ಡ್ ಆದಾಗ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಸಮಸ್ಯೆ ಶುರುವಾಗ್ತಿದ್ದಂತೆ ವೈದ್ಯರನ್ನು ಭೇಟಿಯಾಗಿ. ಈ ಸಮಸ್ಯೆ ಕಾಡ್ಬಾರದು ಅಂದ್ರೆ ಶುದ್ಧ ಅಥವಾ ಬಿಸಿ ಮಾಡಿದ ನೀರನ್ನು ಮಾತ್ರ ಕುಡಿಯಿರಿ. ಮನೆಯಿಂದ ಹೊರಗೆ ರಸ್ತೆ ಬದಿಯಲ್ಲಿರುವ ನೀರನ್ನು ಸೇವಿಸಬೇಡಿ. ಹೊಸದಾಗಿ ತಯಾರಿಸಿದ ಮತ್ತು ಬಿಸಿ ಆಹಾರವನ್ನು ಸೇವಿಸಿ.


