'ಬೇಲಿಯೇ ಎದ್ದು ಹೊಲ ಮೇಯ್ದಂತೆ....' ಎನ್ನುವಂತೆ ಪೋಷಕರಿಂದಲೇ ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿವೆ . ಇಂಥ ಮಕ್ಕಳನ್ನು ರಕ್ಷಿಸಲು ಹೆಲ್ಪ್‌ಲೈನ್ ಆರಂಭಿಸಿದ್ದು, ಈ ಸಂಖ್ಯೆಗೆ ಬಂದ ಕರೆಗಳ ಜಾಡು ಹಿಡಿದು....

ಬೆಂಗಳೂರು ಮಾಯ ನಗರಿಯಲ್ಲಿ ಪುಟ್ಟ ಮಕ್ಕಳ ಮೇಲಾಗುತ್ತಿರುವ ದೌರ್ಜನ್ಯ ತಡೆಯಲು 1098 ಹೆಲ್ಪ್‌ಲೈನ್ ಪರಿಚಯಿಸಲಾಗಿದೆ. ಈ ಸಂಖ್ಯೆಗೆ ಬಂದ ಕರೆಗಳ ಜಾಡು ಹಿಡಿದು, ವಿಭಿನ್ನ ಕಿರು ಚಿತ್ರದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಚಿತ್ರ ತಂಡವೊಂದು ಯತ್ನಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

1098 ಹೆಲ್ಪ್ ಲೈನನ್ನು ಮರೆತಿರುವ ಮುದುಡಿದ ಮುಗ್ಧ ಮನಸ್ಸುಗಳಿಗೆ ಮನ ಮುಟ್ಟುವಂತೆ ಕಿರು ಚಿತ್ರವೊಂದನ್ನು ತಯಾರಿಸಲಾಗಿದೆ. ಅಶೋಕ್ ವಿ.ಎ. ಹಾಗೂ ಅವರ ಗೆಳೆಯರಾದ ಭಾಸ್ಕರ್, ಅರವಿಂದ್ ಅವರ ಪರಿಶ್ರಮದಿಂದ ಸಮಾಜಕ್ಕೊಂದು ಒಳ್ಳೆ ಸಂದೇಶ ಸಾರುವ ಚಿತ್ರವೊಂದು ನಿರ್ಮಾಣವಾಗಿದೆ.

ಸಚಿವಾಲಯ ಸಪೋರ್ಟ್: ಈ ಚಿತ್ರದ ಬಗ್ಗೆ ಖುದ್ದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವೇ ಟ್ವೀಟ್ ಮಾಡಿದ್ದು, ನಾಲ್ಕು ಮಕ್ಕಳಿಗೆ ನೆರವಾಗುವ ಚಿತ್ರಕ್ಕೆ ಅತ್ಯುತ್ತಮ ಬೆಂಬಲ ಸಿಗುತ್ತಿದೆ. 'ಈ ಚಿತ್ರವನ್ನು ಮರು ನಿರ್ಮಿಸಿ, ಮಕ್ಕಳ ‘ರಕ್ಷಣೆ’ಗೆಂದು ಬದಲಾಯಿಸಲಾಗಿದೆ. ಸ್ವಂತ ವೆಚ್ಚದಲ್ಲಿಯೇ ಮತ್ತೊಮ್ಮೆ #ten98 ಚಿತ್ರ ಮರು ನಿರ್ಮಾಣಕ್ಕೆ ಮುಂದಾಗಿರುವುದು ಖುಷಿಯ ವಿಚಾರ. ಇಂದಿನಿಂದಲೇ ಬದಲಾವಣೆ ಶುರುವಾಗಲಿ @Childline1098', ಎಂದು ಸಚಿವಾಲಯ ಟ್ವೀಟ್ ಮಾಡಿದೆ.

ಆಟ ಆಡ್ಕೊಂಡು, ಜಗತ್ತಿನ ಜಂಜಾಟದಿಂದ ದೂರ ಉಳಿಯಬೇಕಾದ ಮಕ್ಕಳು ಎದುರಿಸುವ ಸಮಸ್ಯೆ ಅಷ್ಟಿಷ್ಟಲ್ಲ. ಈ ಮುಗ್ಧ ಮಕ್ಕಳ ನೋವಿಗೆ ಧ್ವನಿಯಾಗುವಂಥ ಈ ಚಿತ್ರವನ್ನು ಮಕ್ಕಳ ದಿನಾಚರಣೆಯಂದೇ ಬಿಡುಗಡೆ ಮಾಡುವ ಉದ್ದೇಶವಿತ್ತು. ಆದರೆ, ಕಾರಾಣಾಂತರಗಳಿಂದ‘Help is at hand' ಎಂಬ ಟ್ಯಾಗ್‌ಲೈನ್‌ನೊಂದಿಗೆ ಇದೀಗ ತೆರೆ ಕಂಡಿದೆ. ಮೊಬೈಲ್ ಮೂಲಕವೇ ಕೆಲವು ಸನ್ನಿವೇಷಗಳನ್ನು ಶೂಟ್ ಮಾಡಿರುವುದು ಈ ಚಿತ್ರದ ಮತ್ತೊಂದು ವಿಶೇಷ.

ಮೊದಲನೇ ಭಾಗದಲ್ಲಿ ಗ್ರಾಫಿಕ್ಸ್ ಮೂಲಕ ಕಥೆ ಹೇಳಿದ್ದರೆ, ಎರಡನೇ ಭಾಗದಲ್ಲಿ ಫೋಟೋ ಬಳಸಲಾಗಿದೆ. ಆ ಮೂಲಕ ಸಮಾಜಕ್ಕೆ ವಿಭಿನ್ನವಾಗಿ ಸಂದೇಶ ಸಾರುವ ಯತ್ನವನ್ನು ಚಿತ್ರ ತಂಡ ಮಾಡಿದೆ. ಮಕ್ಕಳೂ ಸುಲಭವಾಗಿ ಕಥೆಯನ್ನು ಅರ್ಥ ಮಾಡಿಕೊಳ್ಳುವಂತಿರುವುದು ಈ ಚಿತ್ರದ ಮತ್ತೊಂದು ವಿಶೇಷ. ಎಲ್ಲರೂ ನೋಡಿ, ಪ್ರೋತ್ಸಾಹಿಸುತ್ತಾರೆ ಎಂಬ ನಿರೀಕ್ಷೆ ಚಿತ್ರತಂಡಕ್ಕಿದೆ.