* ಸಿ.ಎಂ. ಇಬ್ರಾಹಿಂ ಸಹೋದರನ ಮೇಲೆ ಗಂಭೀರ ಆರೋಪ ಮಾಡಿದ ಬಜರಂಗದಳ * ಹಿಂದುಗಳಿಗೆ ಹಲಾಲ್ ಅಲ್ಲದ ಊಟ ನೀಡುವಂತೆ ಮಾಲೀಕರಿಗೆ ಮನವಿ* ಶಿವಮೊಗ್ಗ ಜಿಲ್ಲೆ ಬಜರಂಗದಳದಿಂದ ಆರೋಪ

ವರದಿ: ರಾಜೇಶ್ ಕಾಮತ್, ಏಷ್ಯಾನೆಟ್ ಸುವರ್ಣ ನ್ಯೂಸ್


ಶಿವಮೊಗ್ಗ, (ಮಾ.31): ಒಂದೆಡೆ ಹಲಾಲ್ ಅಭಿಯಾನದ ಹೆಸರಿನಲ್ಲಿ ಬಜರಂಗದಳ (Bajrang Dal) ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆಂದು, ಮತ್ತೊಂದೆಡೆ ಮಾಂಸದಂಗಡಿ ತೆರವುಗೊಳಿಸುವಂತೆ ಬೆದರಿಕೆ ಹಾಕಿದ್ದಾರೆಂಬ ಎರಡು ಪ್ರತ್ಯೇಕ ಪ್ರಕರಣಗಳು ಭದ್ರಾವತಿಯ ಎರಡು ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಘಟನೆ ನಡೆದಿದೆ.

ಭಜರಂಗದಳ ಕಾರ್ಯಕರ್ತರು ಭದ್ರಾವತಿ ನಗರದಲ್ಲಿ ಹಲಾಲ್ ಸಂಬಂಧ ಅಭಿಯಾನ ಕೈಗೊಂಡು ಬಿ.ಎಚ್ ರಸ್ತೆ ಜನತಾ ಹೋಟೆಲ್‌ನಲ್ಲಿ ಹಿಂದುಗಳಿಗೆ ಹಲಾಲ್ ಅಲ್ಲದ ಊಟ ನೀಡುವಂತೆ ಮಾಲೀಕರಿಗೆ ಮನವಿ ಮಾಡಿದ್ದು, ಈ ಸಂದರ್ಭದಲ್ಲಿ ಊಟ ಮಾಡುತ್ತಿದ್ದ ಕೆಲವು ವ್ಯಕ್ತಿಗಳು ಈ ವಿಚಾರಕ್ಕೆ ವಿನಾಕಾರಣ ತಕರಾರು ತೆಗೆದಿದ್ದಾರೆ. ಈ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಬಜರಂಗದಳ ಪ್ರಮುಖರಾದ ವಡಿವೇಲು, ಶ್ರೀಕಾಂತ್, ಗುಂಡ, ಸವಾಯಿ ಸಿಂಗ್, ಮಂಜ, ಲೋಕಿ ಮತ್ತು ಸಂಜು ಸೇರಿದಂತೆ ಒಟ್ಟು 7 ಜನರ ವಿರುದ್ಧ ಹಲ್ಲೆ ನಡೆಸಿದ್ದಾರೆಂಬ ದೂರು ಹಳೇನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Halal Row: ಕಲಾಪದಲ್ಲಿಯೂ ಹಲಾಲ್ ಪ್ರತಿಧ್ವನಿ, HDK ಓದಿದ ಕರಪತ್ರ

ಇನ್ನೂ ಹೊಸಮನೆ ಶಿವಾಜಿ ವೃತ್ತದಲ್ಲಿ ಅಭಿಯಾನ ಕೈಗೊಂಡಿದ್ದ ಬಜರಂಗದಳ ಕಾರ್ಯಕರ್ತರು, ಕೋಳಿ ಹಾಗು ಮಾಂಸದಂಗಡಿಗಳಿಗೆ ಭೇಟಿ ನೀಡಿ ಹೊಸಮನೆ ಬಡಾವಣೆಯ ಭಾಗದಲ್ಲಿ ಶೇ.90 ರಷ್ಟು ಹಿಂದೂಗಳಿದ್ದು, ಈ ಹಿನ್ನಲೆಯಲ್ಲಿ ಹಲಾಲ್ ಅಲ್ಲದೆ ಮಾಂಸ ನೀಡುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಒಂದು ಮಾಂಸದಂಗಡಿಯಲ್ಲಿ ಹಲಾಲ್ ಅಲ್ಲದ ಮಾಂಸ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದು, ಈ ಹಿನ್ನಲೆಯಲ್ಲಿ ಕಾರ್ಯಕರ್ತರು ಅಂಗಡಿ ತೆರವುಗೊಳಿಸುವಂತೆ ಆಗ್ರಹಿಸಿದ್ದಾರೆ. ಇದರಿಂದಾಗಿ ಅಂಗಡಿ ಮಾಲೀಕ ಹೊಸಮನೆ ಶಿವಾಜಿ ಸರ್ಕಲ್ ಪೊಲೀಸ್ ಠಾಣೆಯಲ್ಲಿ ಬಜರಂಗದಳ ಕಾರ್ಯಕರ್ತರ ವಿರುದ್ಧ ಬೆದರಿಕೆ ದೂರು ದಾಖಲಿಸಿದ್ದಾರೆ

ವಿನಾಕಾರಣ ಪ್ರಕರಣ ದಾಖಲು
ಬಜರಂಗದಳ ಪ್ರಮುಖ ವಡಿವೇಲು, ನಮ್ಮ ಮೇಲೆ ವಿನಾಕಾರಣ ಪ್ರಕರಣ ದಾಖಲಿಸಲಾಗಿದೆ. ಜನತಾ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದ ಎಸ್‌ಡಿಪಿಐ ಕಾರ್ಯಕರ್ತನೋರ್ವ ವಿನಾಕಾರಣ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಈ ಹಿನ್ನಲೆಯಲ್ಲಿ ಬಜರಂಗದಳ ಕಾರ್ಯಕರ್ತರು ಆಕ್ರೋಶಗೊಂಡು ಮಾತಿನ ಚಕಮಕಿ ನಡೆಸಿದ್ದಾರೆ. ಈ ವಿಚಾರವನ್ನು ದೊಡ್ಡದು ಮಾಡಿ ಕಾರ್ಯಕರ್ತರ ವಿರುದ್ಧ ಹಲ್ಲೆ ಮಾಡಿದ್ದಾರೆಂದು ಸುಳ್ಳು ದೂರು ದಾಖಲಿಸಲಾಗಿದೆ ಎಂದಿದ್ದಾರೆ

ಸಿ.ಎಂ ಖಾದರ್ ವಿರುದ್ಧ ಆರೋಪ
ಕೇಂದ್ರ ಮಾಜಿ ಸಚಿವ, ವಿಧಾನಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ ಸಹೋದರ ಸಿ.ಎಂ ಖಾದರ್ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬಜರಂಗದಳ ಪ್ರಮುಖ್ ವಡಿವೇಲು ತಿಳಿಸಿದ್ದು, ಹಲಾಲ್ ಸಂಬಂಧ ಸಿ.ಎಂ ಖಾದರ್ ಪ್ರಚೋದನಾಕಾರಿ ಹೇಳಿಕೆ ನೀಡಿದ ಹಿನ್ನಲೆಯಲ್ಲಿ ಬಜರಂಗದಳ ಕಾರ್ಯಕರ್ತರು ನಗರದಲ್ಲಿ ಅಭಿಮಾನ ಕೈಗೊಳ್ಳುವಂತಾಯಿತು. ಪ್ರಸ್ತುತ ನಡೆದಿರುವ ಅಹಿತಕರ ಬೆಳವಣಿಗೆಗಳಿಗೆ ಸಿ.ಎಂ ಖಾದರ್ ಕಾರಣಕರ್ತರಾಗಿದ್ದು, ಈ ಹಿನ್ನಲೆಯಲ್ಲಿ ಇವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು. ಅಲ್ಲದೆ ವಿನಾಕಾರಣ ಸುಳ್ಳು ದೂರು ನೀಡಿರುವ ಎಸ್‌ಡಿಪಿಐ ಕಾರ್ಯಕರ್ತನ ವಿರುದ್ಧ ಸಹ ದೂರು ನೀಡಲಾಗುವುದು ಎಂದಿದ್ದಾರೆ. 

ಮುಸ್ಲಿಂ ವ್ಯಾಪಾರಸ್ಥರ ಮೇಲೆ ಹಲ್ಲೆ
ಭದ್ರಾವತಿ ನಗರದದಲ್ಲಿ ಬಜರಂಗದಳ ಕಾರ್ಯಕರ್ತರು ಕೋಳಿ ಹಾಗು ಮಾಂಸದಂಗಡಿಗಳಿಗೆ ಹಾಗು ಹೋಟೆಲ್‌ಗಳಿಗೆ ನುಗ್ಗಿ ಮುಸ್ಲಿಂ ವ್ಯಾಪಾರಸ್ಥರು ಹಾಗು ಗ್ರಾಹಕರ ಮೇಲೆ ಹಲ್ಲೆ ನಡೆಸಿದ್ದು, ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ.