ಭದ್ರಾವತಿ ತಾಲೂಕಿನ ಮೈದೊಳಲಿನಲ್ಲಿ ನಾಗರ ಪಂಚಮಿಯಂದು ನಡೆದ ಹನುಮಂತ ದೇವರ ಕಾರ್ಣಿಕೋತ್ಸವದಲ್ಲಿ 'ಶಿಖರದ ತುದಿಗೆ ಘಟಸರ್ಪ ಏರಿತಲ್ಲೇ ಎಚ್ಚರ' ಎಂಬ ಭವಿಷ್ಯವಾಣಿ ನುಡಿಯಲಾಗಿದೆ. ಈ ಕಾರ್ಣಿಕವು ಗ್ರಾಮೀಣ ಭಾಗದಲ್ಲಿ ಪ್ರಸಿದ್ಧಿಯನ್ನು ಹೊಂದಿದೆ.
ಶಿವಮೊಗ್ಗ: ಶಿಖರದ ತುದಿಗೆ ಘಟಸರ್ಪ ಏರಿತಲ್ಲೇ ಎಚ್ಚರ! ಇದು ಮೈದೊಳಲಿನಲ್ಲಿ ಜರುಗಿದ ಹನುಮಂತ ದೇವರ ಕಾರ್ಣಿಕದ ನುಡಿ. ಭದ್ರಾವತಿ ತಾಲೂಕಿನ ಮೈದೊಳಲಿನಲ್ಲಿ ಪ್ರತಿ ವರ್ಷ ನಾಗರ ಪಂಚಮಿಯಂದು ಹನುಮಂತ ದೇವರ ಕಾರ್ಣಿಕೋತ್ಸವ ಜರುಗುತ್ತದೆ.
ಶಿಖರವೇರಿದ ಘಟಸರ್ಪ: ಮೈದೊಳಲು ಕಾರ್ಣಿಕದ ಎಚ್ಚರಿಕೆ
ಸೋಮವಾರ ಸಂಜೆ ಗೋದೂಳಿ ಲಗ್ನದಲ್ಲಿ ಗಂಗೆ ಪೂಜೆ ನೆರವೇರಿಸಿದ ನಂತರ ಹನು ಮಂತ ದೇವರನ್ನು ಅವಾಹನೆ ಮಾಡಿಕೊಂಡ ಗಣಮಗ ಪಿಳ್ಳೆಮಟ್ಟಿ ಗುಡ್ಡದಲ್ಲಿ ಎತ್ತರದ ಕಂಬವೇರಿ ಕಾರ್ಣಿಕ ನುಡಿಯುತ್ತಾನೆ. ಈ ಬಾರಿ ಶಿಖರದ ತುದ್ದಿಗೆ ಘಟ ಸರ್ಪ ಏರಿತಲ್ಲೇ ಎಚ್ಚರ ಎಂದು ಕಾರ್ಣಿಕ ನುಡಿದರು.
ಕಾರ್ಣಿಕದ ವಾಕ್ಯಗಳನ್ನು ಆಧರಿಸಿ ಗ್ರಾಮೀಣ ಭಾಗದ ಜನ ಜೀವನ, ಭವಿಷ್ಯವನ್ನು ಹೇಳುತ್ತಾರೆ. ಕೊನೆಯಲ್ಲಿ ಎಚ್ಚರ ಎಂದಿರುವುದರಿಂದ ಈ ಬಾರಿ ರೈತರಿಗೆ ಸ್ವಲ್ಪ ಹಿನ್ನಡೆಯಾಗುತ್ತದೆ. ನಾಡಿನಲ್ಲಿ ಮಳೆ ಕಡಿಮೆಯಾಗಿ ಕೃಷಿ ಚಟುವಟಿಕೆಗಳಿಗೆ ಅಡಚಣೆಗಳು ಉಂಟಾಗಬಹುದು. ಪ್ರಕೃತಿ ವಿಕೋಪಗಳಿಂದ ಸಂಭವಿಸಬಹುದಾದ ಹಾನಿಯನ್ನು ತಿಳಿಸುತ್ತದೆ ಎಂದು ಹಿರಿಯರು ಕಾರ್ಣಿಕದ ವಾಕ್ಯವನ್ನು ವಿಶ್ಲೇಷಿಸಿದರು.
ಭದ್ರಾವತಿ ಮೈದೊಳಲು ವಿಶೇಷತೆ
ಮಹಿಳೆಯರು, ಮಕ್ಕಳು ಹನುಮಂತ ದೇವರ ಪಲ್ಲಕಿ ಹಾಗೂ ಉತ್ಸವ ಮೂರ್ತಿಗಳಿಗೆ ಆರತಿ ಮಾಡಿ, ಹಣ್ಣು ಕಾಯಿ ನೈವೇದ್ಯ ಮಾಡಿದರು. ಪಿಳ್ಳೆಮಟ್ಟಿ ಹನುಮಂತಪ್ಪ, ಪರುಶುರಾಮ ದೇವರು, ಲಕ್ಷ್ಮೀದೇವಿ, ಶ್ರೀರಾಮ ದೇವರುಗಳ ಉತ್ಸವ ಮೂರ್ತಿಗಳು ಕಾರ್ಣಿಕದಲ್ಲಿ ಭಾಗಿಯಾಗಿದ್ದವು. ಆಂಜನೇಯ ಸೇವಾ ಸಮಿತಿ, ಮೈದೊಳಲು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.
ಮೈದೊಳಲು, ಶಿವಮೊಗ್ಗದ ಭದ್ರಾವತಿ ತಾಲೂಕಿನ ಒಂದು ಸಣ್ಣ ಹಳ್ಳಿಯಾಗಿದ್ದು, ಸುಮಾರು ಮೂರು ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಗ್ರಾಮದಲ್ಲಿ ಪ್ರತಿವರ್ಷ ಶ್ರಾವಣ ಮಾಸದ ನಾಗರ ಪಂಚಮಿಯಂದು ಶ್ರೀ ಹನುಮಂತ ದೇವರ ಕಾರ್ಣಿಕೋತ್ಸವ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತದೆ. ಈ ಗ್ರಾಮದದಲ್ಲಿ ನುಡಿಯುವ ಭವಿಷ್ಯವಾಣಿಯನ್ನು ಗ್ರಾಮೀಣ ಭಾಗದಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಹೊಂದಿದ್ದು, ಹತ್ತಾರು ಹಳ್ಳಿಗಳ ಭಕ್ತರು ಸೇರಿ ದೇವರ ದರ್ಶನ ಪಡೆದುಕೊಳ್ಳುತ್ತಾರೆ.


