ತುಮಕೂರು ಗ್ರಾಮಾಂತರ ಕ್ಷೇತ್ರದ ಊರುಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹೆಬ್ಬಾಕ ಸ್ವಾಮಿ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಮಗಳನ್ನು ಶಾಲೆಗೆ ಬಿಟ್ಟು ಮನೆಗೆ ಬಂದ ಕೆಲವೇ ಕ್ಷಣಗಳಲ್ಲಿ ತಲೆಸುತ್ತಿ ಬಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ.

ತುಮಕೂರು (ಜು.1): ತುಮಕೂರು ಗ್ರಾಮಾಂತರ ಕ್ಷೇತ್ರದ ಊರುಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಬಿಜೆಪಿ ಯುವ ಮೋರ್ಚಾ ಮುಖಂಡರಾಗಿದ್ದ ಹೆಬ್ಬಾಕ ಸ್ವಾಮಿ (ವಯಸ್ಸು 36) ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ಹೊರಬಿದ್ದಿದೆ. ಈ ಘಟನೆ ಸ್ಥಳೀಯ ರಾಜಕೀಯ ವಲಯದಲ್ಲಿ ಹಾಗೂ ಗ್ರಾಮೀಣ ಸಮುದಾಯದಲ್ಲಿ ಶೋಕವನ್ನು ಮೂಡಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆ ವಿವರ:

ಎಂದಿನಂತೆ, ಮಗಳನ್ನು ಶಾಲೆಗೆ ಬಿಟ್ಟು ಮನೆಗೆ ಮರಳಿದ್ದ ಹೆಬ್ಬಾಕ ಸ್ವಾಮಿ ಅವರು, ತುಮಕೂರು ನಗರದ ಕುವೆಂಪು ನಗರದ ತಮ್ಮ ನಿವಾಸಕ್ಕೆ ಬಂದು ಕೆಲವೇ ಕ್ಷಣಗಳಲ್ಲಿ ತಲೆ ಸುತ್ತಿ ಬಿದ್ದಿದ್ದಾರೆ. ತಕ್ಷಣ ಅವರನ್ನು ಸ್ಥಳೀಯರು ಮತ್ತು ಕುಟುಂಬಸ್ಥರು ಸಿದ್ಧಗಂಗಾ ಆಸ್ಪತ್ರೆಗೆ ದಾಖಲಿಸಿದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.

ಸ್ಥಳೀಯರ ಆಘಾತ:

ಯುವ ನಾಯಕನಾಗಿ ಗುರುತಿಸಿಕೊಂಡಿದ್ದ ಹೆಬ್ಬಾಕ ಸ್ವಾಮಿಯ ಅಕಾಲಿಕ ನಿಧನದಿಂದ ಊರುಕೆರೆ ಗ್ರಾಮ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ದುಃಖದ ಛಾಯೆ ಮೂಡಿದೆ. ಜನರ ಸೇವೆಯಲ್ಲಿ ಸದಾ ತೊಡಗಿದ್ದ ಅವರು, ತಮ್ಮ ನಿಷ್ಠೆ ಮತ್ತು ಶಿಷ್ಟ ಪ್ರವೃತ್ತಿಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಬಿಜೆಪಿ ಮುಖಂಡರು ಹಾಗೂ ಯುವಮೋರ್ಚಾ ಕಾರ್ಯಕರ್ತರು ಅವರು ಒಬ್ಬ ಪ್ರಾಮಾಣಿಕ, ಕ್ರಿಯಾಶೀಲ ನಾಯಕನಾಗಿದ್ದೇನೆಂದು ನೆನಪಿಸಿಕೊಂಡಿದ್ದಾರೆ. ಈ ಯುವ ನಾಯಕನ ಅಕಾಲಿಕ ಅಗಲಿಕೆಯಿಂದ ಪಕ್ಷಕ್ಕೂ ಹಾಗೂ ಸಮುದಾಯಕ್ಕೂ ತುಂಬಲಾರದ ನಷ್ಟ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.