ಚಾಮರಾಜನಗರದಲ್ಲಿ ಐದು ಹುಲಿಗಳ ನಿಗೂಢ ಸಾವು ಸಂಭವಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ವಿಷಪೂರಿತ ಮಾಂಸ ತಿಂದು ಹುಲಿಗಳು ಸಾವನ್ನಪ್ಪಿವೆ ಎಂಬ ಶಂಕೆ ವ್ಯಕ್ತವಾಗಿದ್ದು, ತನಿಖೆ ಮುಂದುವರೆದಿದೆ.

ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಜೀವಿ ವಿಭಾಗದಲ್ಲಿ ಐದು ಹುಲಿಗಳ ನಿಗೂಢ ಸಾವಿನಿಂದ ಸಂಚಲನ ಸೃಷ್ಟಿಯಾಗಿದೆ. ಹೂಗ್ಯಂ ವನ್ಯಜೀವಿ ವಲಯದಲ್ಲಿ ಒಂದೇ ಕುಟುಂಬದ ಐದು ಹುಲಿಗಳು ಸಾವನ್ನಪ್ಪಿದ್ದ ಘಟನೆ ಸಂಬಂಧ ವಿಚಾರಣೆ ನಡೆಯುತ್ತಿದೆ.

Add Asianetnews Kannada as a Preferred SourcegooglePreferred

ಕಳ್ಳಬೇದೊಡ್ಡಿ ಮತ್ತು ಕೊಪ್ಪ ಗ್ರಾಮಗಳಲ್ಲಿ ನಿವಾಸಿಸುತ್ತಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಬಂಧಿಸಿದೆ. ಬಂಧಿತರಾಗಿ ಕಳ್ಳಬೇದೊಡ್ಡಿಯ ಕೋನಪ್ಪ, ಮಾದುರಾಜ್ ಹಾಗೂ ಕೊಪ್ಪ ಗ್ರಾಮದ ನಾಗರಾಜ್ ಗುರುತಿಸಲಾಗಿದ್ದಾರೆ. ಮೂಲಗಳ ಪ್ರಕಾರ, ಈ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ಮತ್ತು ಕರ್ನಾಟಕ ಅರಣ್ಯ ಕಾಯ್ದೆ, 1969ರಡಿ ಗಂಭೀರ ಆರೋಪ ದಾಖಲಿಸಲಾಗಿದೆ.

ಆರೋಪಿತ ಮಾದುರಾಜ್, ತನ್ನ ಹಸುವನ್ನು ಕೊಂದ ಹುಲಿಗೆ ಪ್ರತೀಕಾರವಾಗಿ ಹುಲಿಯನ್ನು ಕೊಲ್ಲಲು ಸಂಚು ರೂಪಿಸಿದ್ದಾನೆ ಎಂದು ಆರೋಪಿಸಲಾಗಿದೆ. ಹಸುವಿನ ಮಾಂಸಕ್ಕೆ ವಿಷ ಮಿಶ್ರಣ ಮಾಡಿದ ಆರೋಪವೂ ಆತನ ಮೆಲೆ ಹೊರಹೊಮ್ಮಿದೆ. ಮೃತಪಟ್ಟ ಹಸು ಕೂನಯ್ಯನಿಗೆ ಸೇರಿದದ್ದು ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ, ಆರೋಪಿಗಳು ಕೊಪ್ಪ ಗ್ರಾಮ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತಲೆಮರೆಸಿಕೊಂಡು ಬಿದ್ದಿದ್ದು, ತಡರಾತ್ರಿ ಅವರನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದುಕೊಂಡಿದೆ. ಬಳಿಕ ಅವರನ್ನು ಹನೂರಿಗೆ ಕರೆತಂದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ತನಿಖೆ ವೇಳೆ ಹಸುವಿನ ಮಾಲೀಕ ಕೋನಪ್ಪ ಆರೋಪಗಳ ಕುರಿತು ಅನಿಸಿಕೆ ವ್ಯಕ್ತಪಡಿಸುತ್ತಾ, “ಇದು ನಮ್ಮ ಹಸು ಅಲ್ಲ. ಯಾರು ವಿಷ ಹಾಕಿದ್ದಾರೆ ನನಗೆ ಗೊತ್ತಿಲ್ಲ,” ಎಂದು ಏಷಿಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿಕೆ ನೀಡಿದ್ದಾರೆ. ಕೊನಪ್ಪ ಸ್ಥಳಕ್ಕೆ ಬಂದಾಗ ಅಮಾಯಕನಂತೆ ವರ್ತಿಸಿದ್ದು, ಹಸುವಿನ ಬಗ್ಗೆ ತಾನು ತಿಳಿದಿಲ್ಲ ಎಂದು ಹೇಳಿದ್ದಾನೆ.

ಮೃತ ಹಸು ಯಾರದ್ದು ಎಂದು ಖಚಿತಪಡಿಸಿಕೊಳ್ಳಲು, ಕೆಲವು ಗ್ರಾಮಸ್ಥರನ್ನು ಅಧಿಕಾರಿಗಳು ಸ್ಥಳಕ್ಕೆ ಕರೆತಂದಿದ್ದು, ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಸಂಯುಕ್ತವಾಗಿ ಆರೋಪಿಗಳ ವಿಚಾರಣೆ ನಡೆಸುತ್ತಿದ್ದು, ಪ್ರಕರಣಕ್ಕೆ ಇನ್ನಷ್ಟು ಪೂರಕ ಮಾಹಿತಿ ಹೊರಬರುವ ನಿರೀಕ್ಷೆಯಿದೆ. ಈ ಐದು ಹುಲಿಗಳ ನಿಗೂಢ ಸಾವಿಗೆ ಕಾರಣವಾದ ಘಟನೆಯ ಹಿಂದೆ ಬ್ಲ್ಯಾಕ್ ಮ್ಯಾಜಿಕ್ ಅಥವಾ ಬೇರೆ ಯಾವುದಾದರೂ ಸಂಕೀರ್ಣ ಕಾರಣವಿದೆಯೇ ಎಂಬುದರ ಬಗ್ಗೆ ತನಿಖೆ ಮುಂದುವರಿಯುತ್ತಿದೆ.