ಬಾವಿ ಕಳೆದು ಹೋಗಿದೆ ಹುಡುಕಿ ಕೊಡಿ ಎಂದು ಕುಡುಮಲ್ಲಿಗೆ ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ದಾರೆ. ಹಾಗಾದ್ರೆ ಗ್ರಾಮದಲ್ಲಿದ್ದ ಬಾವಿ ಏನಾಯ್ತು? ನಟ ರವಿಶಂಕರ್ ಗೌಡ ನಟನೆಯ ‘ಸರ್ಕಾರಿ ಕೆಲಸ, ದೇವರ ಕೆಲಸ’ ಕನ್ನಡ ಸಿನಿಮಾದ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಿಜವಾಗಿಯೂ ಸಂಭವಿಸಿದೆ.
ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಕುಡುಮಲ್ಲಿಗೆ ಗ್ರಾಪಂಯಲ್ಲಿ 1.24 ಲಕ್ಷ ರು. ಮೊತ್ತದ ಬಾವಿ ಕಾಮಗಾರಿ ನಿರ್ಮಾಣವೇ ಇಲ್ಲದೇ ಬಿಲ್ ಪಾವತಿಯಾದ ಪ್ರಕರಣವೊಂದು ನಾಲ್ಕು ವರ್ಷಗಳ ನಂತರ ಬೆಳಕಿಗೆ ಬಂದಿದ್ದು, ಬಾವಿ ಕಳೆದು ಹೋಗಿದೆ ಹುಡುಕಿ ಕೊಡಿ ಎಂದು ಕುಡುಮಲ್ಲಿಗೆ ಗ್ರಾಮಸ್ಥರ ಪ್ರತಿಭಟನೆಗೆ ಕಾರಣವಾಗಿದೆ.
ಹಣ ದುರುಪಯೋಗದ ಆರೋಪ
2021-22ರಲ್ಲಿ ನಡೆದಿರುವ ಈ ಪ್ರಕರಣದಲ್ಲಿ ಭೆಕ್ಷೆ ಗ್ರಾಮದ ಧಾರ್ಮಿಕ ಕೇಂದ್ರದ ಬಳಿ ನಿರ್ಮಿಸಲು ಮಂಜೂರಾಗಿದ್ದ ಹಣ ದುರುಪಯೋಗ ಆಗಿರುವ ಬಗ್ಗೆ ಸಾರ್ವಜನಿಕ ಲೆಕ್ಕಪರಿಶೋದನಾ ಸಮಿತಿಯ ತನಿಖೆಯಿಂದ ಪ್ರಕರಣ ಹೊರ ಬಂದಿದ್ದು ಗ್ರಾಮಸ್ಥರ ಪ್ರತಿಭಟನೆಗೆ ಕಾರಣವಾಗಿದ್ದು, ಅಧಿಕಾರಿಗಳು ವಿವರ ಕಲೆ ಹಾಕುತ್ತಿದ್ದಾರೆ.
ಬೇರೆ ಬಾವಿಯ ಫೋಟೋ ಲಗತ್ತಿಸಿ ಹಣವನ್ನು ಡ್ರಾ
ಕುಡುಮಲ್ಲಿಗೆ ಬಳಿಯ ಭೆಕ್ಷೆ ಶ್ರೀ ಸತ್ಯಸಾರಮಾನಿ ಧರ್ಮದೈವ ಹಾಗೂ ಶ್ರೀ ಆತೀರ ಪಂಜುರ್ಲಿ ದೇವಸ್ಥಾನದ ಬಳಿ ಕುಡಿಯುವ ನೀರಿನ ಬಾವಿ ನಿರ್ಮಾಣದ ಸಲುವಾಗಿ ತಾಪಂ ಅನುದಾನದಲ್ಲಿ 1.24 ಲಕ್ಷ ರು. ಮಂಜೂರಾಗಿತ್ತು. ಕಾಮಗಾರಿ ಸ್ಥಳಕ್ಕೆ 30 ರಿಂಗ್ಗಳನ್ನು ತಂದು ಹಾಕಿ ಬೇರೊಂದು ಜಾಗದಲ್ಲಿ ನಿರ್ಮಿಸಲಾಗಿದ್ದ ಬಾವಿಯ ಫೋಟೋವನ್ನು ಲಗತ್ತಿಸಿ ಹಣವನ್ನು ಡ್ರಾ ಮಾಡಲಾಗಿದೆ ಎನ್ನಲಾಗಿದೆ.
ಈ ಕಾಮಗಾರಿ ಸಲುವಾಗಿ ತಂದಿರುವ ಸುಮಾರು 30 ಬಾವಿ ರಿಂಗ್ಗಳು ಸ್ಥಳದಲ್ಲಿ ಬಿದ್ದಿದ್ದು, ಅವುಗಳು ಕೂಡಾ ಶಿಥಿಲಗೊಂಡಿವೆ. ಈ ಪ್ರಕರಣದಲ್ಲಿ ನಡೆದಿರುವ ಅಕ್ರಮದಲ್ಲಿ ಗುತ್ತಿಗೆದಾರನೊಂದಿಗೆ ಕೈ ಜೋಡಿಸಿರುವ ಗ್ರಾಮೀಣ ಕುಡಿಯುವ ನೀರಿನ ಯೋಜನಾಧಿಕಾರಿ ಹಾಗೂ ಬಾವಿ ನಿರ್ಮಾಣವಾಗಿರುವ ಬಗ್ಗೆ ಧೃಡೀಕರಣ ಪತ್ರ ನೀಡಿರುವ ಕುಡುಮಲ್ಲಿಗೆ ಗ್ರಾಪಂ ಅಂದಿನ ಪಿಡಿಓ ಶಾಮೀಲಾಗಿದ್ದಾರೆಂಬ ಬಗ್ಗೆಯೂ ಗ್ರಾಮಸ್ಥರಿಂದ ಆರೋಪವಿದೆ.
ಇದನ್ನೂ ಓದಿ: ಗಣಿ ಅಧಿಕಾರಿ ಮೊಹಂತಿ ಮನೆಯಲ್ಲಿ ನೋಟುಗಳ ರಾಶಿ, 4 ಕೋಟಿ ಪತ್ತೆ; ಮುಂದುವರಿದ ಎಣಿಕೆ
ಕುಡುಮಲ್ಲಿಗೆ ಗ್ರಾಪಂಯಲ್ಲಿ ನಡೆದಿರುವ ಬಾವಿ ಹಗರಣದ ಬಗ್ಗೆ ವಿವರಣೆ ಪಡೆಯುತ್ತಿರುವ ಸಾರ್ವಜನಿಕ ಲೆಕ್ಕಪರಿಶೋದನಾ ಸಮಿತಿಯ ಅಧಿಕಾರಿಗಳು.
ಇದನ್ನೂ ಓದಿ: ಮಂಡ್ಯ ಗ್ರಾ.ಪಂಚಾಯ್ತಿಯೊಳಗೆ 3 ದಿನದಲ್ಲಿ 54 ಲಕ್ಷ ಗುಳುಂ: 11 ನೌಕರರ ವಿರುದ್ಧ ಪ್ರಕರಣ ದಾಖಲು
ನಟ ರವಿಶಂಕರ್ ಗೌಡ ನಟನೆಯ ‘ಸರ್ಕಾರಿ ಕೆಲಸ, ದೇವರ ಕೆಲಸ’ ಕನ್ನಡ ಸಿನಿಮಾದಲ್ಲಿ ಬಾವಿ ಕಳೆದುಕೊಂಡ ಕಥೆಯಿದೆ. ಸರ್ಕಾರಿ ಅಧಿಕಾರಿಗಳು ಯಾವುದನ್ನು ಪರಿಶೀಲನೆ ನಡೆಸದೇ ಲಂಚ ಪಡೆದುಕೊಂಡು ಹೇಗೆ ಎಲ್ಲದಕ್ಕೂ ಸಹಿ ಹಾಕ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ಇಲ್ಲದೇ ಇರೋ ಬಾವಿಗೆ ಇದೆ ಎಂದು ಅಧಿಕಾರಿಗಳು ಅನುಮತಿ ನೀಡಿರುತ್ತಾರೆ. ಈ ಸಿನಿಮಾದ ವಿಡಿಯೋ ಲಿಂಕ್ ಕೆಳಗೆ ನೀಡಲಾಗಿದೆ.



