- Home
- Karnataka Districts
- Raichur
- ರಾಯಚೂರು: ಕರೆಂಟ್ ಶಾಕ್ಗೆ ಸ್ನೇಹಿತ ಬಲಿ: 9ನೇ ಕ್ಲಾಸ್ ಬಾಲಕನ ಶವಕ್ಕೆ ಕಲ್ಲು ಕಟ್ಟಿ ಕೆರೆಗೆಸೆದ ಸ್ನೇಹಿತರು
ರಾಯಚೂರು: ಕರೆಂಟ್ ಶಾಕ್ಗೆ ಸ್ನೇಹಿತ ಬಲಿ: 9ನೇ ಕ್ಲಾಸ್ ಬಾಲಕನ ಶವಕ್ಕೆ ಕಲ್ಲು ಕಟ್ಟಿ ಕೆರೆಗೆಸೆದ ಸ್ನೇಹಿತರು
ರಾಯಚೂರಿನ ಲಿಂಗಸೂಗೂರಿನಲ್ಲಿ, ಬೀಳ್ಕೊಡುಗೆ ಸಮಾರಂಭಕ್ಕೆ ಬಟ್ಟೆ ತರಲೆಂದು ಹೋದ 15 ವರ್ಷದ ಕಾರ್ತಿಕ್ ಎಂಬ ಬಾಲಕ ಕರೆಂಟ್ ಶಾಕ್ ತಗುಲಿ ಸಾವನ್ನಪ್ಪಿದ್ದಾನೆ. ಆತನ ಸಾವಿನಿಂದ ಹೆದರಿದ ಆತನ ಸ್ನೇಹಿತರು, ಶವವನ್ನು ಗೋಣಿಚೀಲದಲ್ಲಿ ಕಟ್ಟಿ ಕೆರೆಗೆ ಎಸೆದಿರುವ ಆಘಾತಕಾರಿ ಘಟನೆ ನಡೆದಿದೆ.

ಬೀಳ್ಕೊಡುಗೆ ಸಮಾರಂಭಕ್ಕೆ ಬಟ್ಟೆ ತರಲು ಹೋದ ಬಾಲಕನ ದಾರುಣ ಸಾವು
ರಾಯಚೂರು: ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ಹಿನ್ನೆಲೆ ಹೊಸ ಬಟ್ಟೆ ಖರೀದಿಗೆ ಸ್ನೇಹಿತರೊಂದಿಗೆ ಹೋದ ಬಾಲಕ ಕರೆಂಟ್ ಶಾಕ್ ತಗುಲಿ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆ ಲಿಂಗಸೂಗೂರಿನಲ್ಲಿ ನಡೆದಿದೆ. ಗುಂಡಸಾಗರ ಗ್ರಾಮದ 15 ವರ್ಷದ ಕಾರ್ತಿಕ್ ಸಾವನ್ನಪ್ಪಿದ ಯುವಕ.
10ನೇ ಕ್ಲಾಸ್ನ ಇಬ್ಬರು ಸ್ನೇಹಿತರ ಜೊತೆ ಹೋದ 9ನೇ ಕ್ಲಾಸ್ನ ಕಾರ್ತಿಕ್
ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಸಮಾರಂಭ ಆಯೋಜಿಸಲಾಗಿತ್ತು. ಈ ಹಿನ್ನೆಲೆ ಕಾರ್ಯಕ್ರಮಕ್ಕೆ ಹೊಸಬಟ್ಟೆ ತರುವುದಕ್ಕೆ ತನ್ನ ಇಬ್ಬರು 10ನೇ ತರಗತಿಯ ಸ್ನೇಹಿತರ ಜೊತೆಗೆ 9ನೇ ತರಗತಿಯಲ್ಲಿ ಓದುತ್ತಿದ್ದ ಕಾರ್ತಿಕ್ ಕೂಡ ಹೋಗಿದ್ದರು. ದಾರಿ ಮಧ್ಯೆ ಬಾಯಾರಿಕೆಯಾಗಿದ್ದು, ಬಾವಿಯಲ್ಲಿ ನೀರು ಕುಡಿಯಲು ಹೋದಾಗ ಕಾರ್ತಿಕ್ಗೆ ಕರೆಂಟ್ ಶಾಕ್ ತಗುಲಿದ್ದು, ಕಾರ್ತಿಕ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ದಾರಿಮಧ್ಯೆ ಬಾವಿಗೆ ನೀರು ಕುಡಿಯಲು ಹೋದಾಗ ಕರೆಂಟ್ ಶಾಕ್
ಕಾರ್ತಿಕ್ ಸಾವಿನಿಂದ ಭಯಗೊಂಡ ಸ್ನೇಹಿತರು ಈ ವಿಚಾರವನ್ನು ಯಾರಿಗೂ ತಿಳಿಸದೇ ಸಾವಿನ ಆರೋಪದಿಂದ ತಪ್ಪಿಸಿಕೊಳ್ಳಲು ಗೋಣಿ ಚೀಲದಲ್ಲಿ ಕಾರ್ತಿಕ್ ಶವ ಹಾಕಿ ಸಾಗಿಸಿದ್ದಾರೆ. ಬೈಕ್ನಲ್ಲಿ ಶವ ತೆಗೆದುಕೊಂಡು ಕರಡಕಲ್ ಕೆರೆಯಲ್ಲಿ ಕಾರ್ತಿಕ್ ಶವಕ್ಕೆ ಕಲ್ಲು ಕಟ್ಟಿ ಎಸೆದು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಆ ಬಳಿಕ ಕಾರ್ತಿಕ್ ಸ್ನೇಹಿತರು ಗ್ರಾಮಕ್ಕೆ ತೆರಳಿ ಯಾರಿಗೂ ವಿಚಾರ ತಿಳಿಸದೇ ಸುಮ್ಮನೇ ಕುಳಿತಿದ್ದಾರೆ.
ಕಾರ್ತಿಕ್ ಶವ ಗೋಣಿಚೀಲಕ್ಕೆ ತುಂಬಿಸಿ ಕೆರೆಗೆಸೆದ ಸ್ನೇಹಿತರು
ಇತ್ತ ರಾತ್ರಿಯಾದರೂ ಕಾರ್ತಿಕ್ ಮನೆಗೆ ಬಾರದೇ ಹೋದಾಗ ಕಾರ್ತಿಕ್ ಪೋಷಕರು ಮಗನಿಗಾಗಿ ಹುಡುಕಾಟ ನಡೆಸಿದ್ದು, ಕಾರ್ತಿಕ್ನನ್ನು ಜೊತೆಗೆ ಕರೆದೊಯ್ದು ಆತನ ಇಬ್ಬರು ಸ್ನೇಹಿತರ ಬಳಿ ಒತ್ತಡ ಹಾಕಿ ವಿಚಾರಿಸಿದಾಗ ಬಾಲಕರು ಸತ್ಯ ಬಾಯ್ಬಿಟ್ಟಿದ್ದಾರೆ. ಕೂಡಲೇ ಇಬ್ಬರನ್ನ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೆರೆಯಿಂದ ಶವ ಹೊರತೆಗೆದ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು
ಈ ಮಾಹಿತಿ ತಿಳಿದು ಕರಡಕಲ್ ಕೆರೆ ಬಳಿ ಪೊಲೀಸರು ಭೇಟಿ ನೀಡಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಶವಕ್ಕಾಗಿ ಕರೆಯಲ್ಲಿ ಹುಡುಕಾಟ ನಡೆಸಿದ್ದಾರೆ. ನಂತರ ಕರೆಯಲ್ಲಿ ಗೋಣಿ ಚೀಲದಲ್ಲಿ ಕಾರ್ತಿಕ್ ಶವ ಪತ್ತೆಯಾಗಿದೆ. ಸ್ಥಳಕ್ಕೆ ರಾಯಚೂರು ಎಸ್ ಪಿ ಅರುಣಾಂಗ್ಷು ಗಿರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಸಂಬಂಧಿಸಿದಂತೆ ಲಿಂಗಸೂಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

