ಜಿಲ್ಲೆಯಲ್ಲಿ ಇಂದ್ರಧನುಷ್‌ ಮಿಷನ್ ಲಸಿಕಾ ಅಭಿಯಾನ ಮೂರನೇ ಸುತ್ತಿನ ಲಸಿಕೆ ನೀಡುವ ಕಾರ್ಯಕ್ರಮ ಅ. ೧೪ರವರೆಗೆ ಹಮ್ಮಿಕೊಳ್ಳಲಾಗಿದ್ದು, ಐದು ವರ್ಷದೊಳಗಿನ ಎಲ್ಲಾ ಮಕ್ಕಳು ಹಾಗೂ ಗರ್ಭಿಣಿಯರು ಪಾಲ್ಗೊಳ್ಳುವಂತೆ ತಹಸೀಲ್ದಾರ್ ಹರ್ಷವರ್ಧನ್ ಹೇಳಿದರು.

ಕೋಲಾರ : ಜಿಲ್ಲೆಯಲ್ಲಿ ಇಂದ್ರಧನುಷ್‌ ಮಿಷನ್ ಲಸಿಕಾ ಅಭಿಯಾನ ಮೂರನೇ ಸುತ್ತಿನ ಲಸಿಕೆ ನೀಡುವ ಕಾರ್ಯಕ್ರಮ ಅ. ೧೪ರವರೆಗೆ ಹಮ್ಮಿಕೊಳ್ಳಲಾಗಿದ್ದು, ಐದು ವರ್ಷದೊಳಗಿನ ಎಲ್ಲಾ ಮಕ್ಕಳು ಹಾಗೂ ಗರ್ಭಿಣಿಯರು ಪಾಲ್ಗೊಳ್ಳುವಂತೆ ತಹಸೀಲ್ದಾರ್ ಹರ್ಷವರ್ಧನ್ ಹೇಳಿದರು.

Add Asianetnews Kannada as a Preferred SourcegooglePreferred

ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ತೀವ್ರವಾದ ಮಿಷನ್ ಇಂದ್ರಧನುಷ್‌ ೫.೦ ಕಾರ್ಯಕ್ರಮದ ತಾಲೂಕು ಮಟ್ಟದ ಚಾಲನಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ರೋಗ ನಿರೋಧಕ ಶಕ್ತಿ ಹೆಚ್ಚಳ

ವಯಸ್ಸಿಗನುಗುಣವಾಗಿ ಲಸಿಕೆ ಪಡೆಯದೆ ಬಿಟ್ಟು ಹೋದ ಹಾಗೂ ಲಸಿಕೆ ವಂಚಿತರಾದ ಮತ್ತು ಲಸಿಕೆ ಕಾರಣಕ್ಕೆ ಬಾಕಿ ಇರುವ ಗರ್ಭಿಣಿಯರು ಹಾಗೂ ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತೀವ್ರತರವಾದ ಇಂದ್ರಧನುಷ್‌ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಡಾರ ಮತ್ತು ರುಬೇಲ ರೋಗ ನಿರೋಧಕತೆಯ ಶಕ್ತಿ ಹೆಚ್ಚಿಸುವ ಉದ್ದೇಶ ಹೊಂದಿದೆ, ಈ ಮಹತ್ವದ ಆರೋಗ್ಯ ಕಾರ್ಯಕ್ರಮ ಸಮರ್ಪಕವಾಗಿ ಫಲಾನುಭವಿಗಳಿಗೆ ತಲುಪುವಂತೆ ನೋಡಿಕೊಳ್ಳಬೇಕು ಎಂದರು.

ಮೂರನೇ ಸುತ್ತಿನ ಲಸಿಕೆ ಕಾರ್ಯಕ್ರಮದಲ್ಲಿ ಯಾವುದೇ ಮಗು ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು, ಮಕ್ಕಳು ಈ ವಿಶೇಷ ಲಸಿಕೆಯ ಹಾಕಿಸಲು ಹಿಂದೇಟು ಹಾಕುವ ಫಲಾನುಭವಿಗಳ ಮನವೊಲಿಸಿ ತಪ್ಪದೇ ಲಸಿಕೆ ಹಾಕಿಸಬೇಕು, ಪಟ್ಟಣ ಪ್ರದೇಶದಲ್ಲಿ ವಾಸವಾಗಿರುವ ಐದು ವರ್ಷದೊಳಗಿ ಮಕ್ಕಳು ಹಾಗೂ ಗರ್ಭಿಣಿಯರಿಗೆ ಯೋಜನೆಯ ಬಗ್ಗೆ ಅರಿವು ಮೂಡಿಸಿ ಈ ಯೋಜನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.

ಕಾರ್ಯಕ್ರಮ ಯಶಸ್ಸುಗೊಳಿಸಿ

ಅಂತೆಯೇ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಈ ಬಗ್ಗೆ ಅತಿಹೆಚ್ಚು ಪ್ರಚಾರ ಕೊಟ್ಟು ಕಾರ್ಯಕ್ರಮ ಯಶಸ್ವಿಯಾಗುವಂತೆ ನೋಡಿಕೊಳ್ಳಬೇಕು. ಮಿಷನ್ ಇಂದ್ರ ಧನುಷ್‌ ಕಾರ್ಯಕ್ರಮದಲ್ಲಿ ಧನುರ್ ವಾಯು, ದಡಾರ, ನಾಯಿ ಕೆಮ್ಮು, ಕ್ಷಯ, ಕಾಮಾಲೆ ಮತ್ತು ಪೋಲಿಯೋ ನಂತಹ ಮಾರಕ ರೋಗಗಳ ವಿರುದ್ಧ ಲಸಿಕೆ ಹಾಕಲಾಗುವುದು. ಈ ಕಾರ್ಯಕ್ರಮದ ಯಶಸ್ಸಿಗಾಗಿ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಇಂದ್ರಧನುಷ್‌ ಲಸಿಕೆ ಕೇಂದ್ರಗಳನ್ನು ಹಾಗೂ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.

ಯೋಜನೆಯ ಯಶಸ್ವಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ತಾಯಂದಿರ ಕುರಿತು ಅಭಿಯಾನದ ಮಾಹಿತಿ ನೀಡಬೇಕು. ಐದು ವರ್ಷದೊಳಗಿನ ಮಕ್ಕಳು ಲಸಿಕೆ ವಂಚಿತರಾಗದಂತೆ ಪರಿಶೀಲಿಸಬೇಕು ಎಂದು ಹೇಳಿದರು.

ಲಸಿಕೆ ಕುರಿತು ಜಾಗೃತಿ ಮೂಡಿಸಿ

ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು ಶಿಕ್ಷಣ ಇಲಾಖೆಯ ಮಕ್ಕಳ ಲಸಿಕೆ ಪಡೆದಿರುವರೆ ಎಂಬ ಬಗ್ಗೆ ಪರಿಶೀಲನೆ ಮಾಡಬೇಕು ಲಸಿಕೆ ಹಾಕಿಸಲು ಪೋಷಕರಿಗೆ ಉತ್ತೇಜನ ನೀಡಬೇಕು ಇಲಾಖೆ ಕಾರ್ಯಕ್ರಮ ಯಶಸ್ವಿಯಾಗುವಂತೆ ಕ್ರಮವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ವಿಜಯ್ ಕುಮಾರ್ ಇದ್ದರು.