Asianet Suvarna News Asianet Suvarna News

Rain| ಹಂಪಿಯ ಕೆಲ ಸ್ಮಾರಕ ಜಲಾವೃತ

*   ತುಂಗಭದ್ರಾ ಡ್ಯಾಂನಿಂದ 1 ಲಕ್ಷ ಕ್ಯುಸೆಕ್‌ ನೀರು ನದಿಗೆ
*  ಸುರಕ್ಷಿತ ಸ್ಥಳಗಳಿಗೆ ತೆರಳಲು ಟಿಬಿ ಬೋರ್ಡ್‌ ಸಂದೇಶ
*  ಮರಿಯಮ್ಮನಹಳ್ಳಿಯಲ್ಲಿ 18 ಮನೆ ಭಾಗಶಃ ಜಖಂ
 

Some Monuments Inundated of Hampi in Vijayanagara grg
Author
Bengaluru, First Published Nov 22, 2021, 12:53 PM IST

ಹೊಸಪೇಟೆ(ನ.22): ಕಲ್ಯಾಣ ಕರ್ನಾಟಕದ(Kalyana Karnataka) ಜೀವನಾಡಿ ತುಂಗಭದ್ರಾ ಜಲಾಶಯದ(Tungabhadra Dam) ಒಳಹರಿವಿನಲ್ಲಿ ಭಾರಿ ಏರಿಕೆಯಾಗಿರುವ ಹಿನ್ನೆಲೆ ಜಲಾಶಯದಿಂದ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರು ನದಿಗೆ ಹರಿಸಲಾಯಿತು. ಜಲಾಶಯದಿಂದ ನದಿಗೆ ನೀರು ಹರಿಸಿದ್ದರಿಂದ ಹಂಪಿಯ ಕೆಲ ಸ್ಮಾರಕಗಳು ಜಲಾವೃತವಾಗಿವೆ.

ಜಲಾಶಯದ 33 ಕ್ರೇಸ್ಟ್‌ ಗೇಟ್‌ಗಳ ಪೈಕಿ 28 ಗೇಟ್‌ಗಳಿಂದ 1,09, 881 ಕ್ಯುಸೆಕ್‌ ನೀರು ನದಿಗೆ ಹರಿಬಿಡಲಾಯಿತು. 20 ಗೇಟ್‌ಗಳನ್ನು ತಲಾ 2 ಅಡಿ ಎತ್ತರಿಸಿದರೆ, 10 ಗೇಟ್‌ಗಳನ್ನು ತಲಾ ಒಂದು ಅಡಿ ಎತ್ತರಿಸಿ ನದಿಗೆ ನೀರು ಹರಿಸಲಾಯಿತು. ಜಲಾಶಯದ ಮೇಲ್ಭಾಗದಲ್ಲಿ ಮಳೆ ಬೀಳುತ್ತಿರುವುದರಿಂದ ಡ್ಯಾಂನ ಒಳಹರಿವಿನಲ್ಲಿ(Inflow) ಭಾರಿ ಏರಿಕೆಯಾಗಿದೆ. ತುಂಗಭದ್ರಾ ಮಂಡಳಿ ಈ ಮೊದಲೇ ನದಿಪಾತ್ರದ ಜನ- ಜಾನುವಾರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಿತ್ತು.

Vijayanagara| ಟಿಬಿ ಡ್ಯಾಂನಿಂದ 40 ಸಾವಿರ ಕ್ಯುಸೆಕ್‌ ನೀರು ಬಿಡುಗಡೆ

ಸ್ಮಾರಕಗಳು ಜಲಾವೃತ:

ಹಂಪಿಯ ಧಾರ್ಮಿಕ ವಿಧಿವಿಧಾನ ನೆರವೇರಿಸುವ ಮಂಟಪ, ಸ್ನಾನಘಟ್ಟ, ರಾಮ-ಲಕ್ಷ್ಮಣರ ದೇಗುಲ, ಚಕ್ರತೀರ್ಥ, ಕೋಟಿಲಿಂಗ, ಕಂಪಭೂಪ ಮಾರ್ಗ ಸೇರಿದಂತೆ ಹಂಪಿ ಕೆಲ ಸ್ಮಾರಕಗಳು(Hampi Monuments) ಜಲಾವೃತವಾಗಿವೆ. ಇನ್ನೂ ಹಂಪಿಯ ಪುರಂದರದಾಸರ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ.

ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರು ಬಿಟ್ಟಿರುವುದರಿಂದ ಹಂಪಿಯ ತುಂಗಭದ್ರಾ ನದಿ(Tungabhadra River) ದಂಡೆಯಲ್ಲಿ ಪೊಲೀಸರನ್ನು(Police) ನಿಯೋಜಿಸಲಾಗಿದೆ. ಹಂಪಿಯಲ್ಲಿ ಬೋಟ್‌ಗಳನ್ನು(Boat) ಹಾಕಲು ನಿರ್ಬಂಧ ಹಾಕಲಾಗಿದ್ದು, ಪ್ರವಾಸಿಗರು(Tourists)ಸುರಕ್ಷಿತವಾಗಿರಲು ಸೂಚಿಸಲಾಗಿದೆ.

ತುಂಗಭದ್ರಾ ಜಲಾಶಯ ರಾಜ್ಯದ ರಾಯಚೂರು, ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳ 3.5 ಲಕ್ಷ ಹೆಕ್ಟೇರ್‌ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಜಲಾಶಯದ ಸಂಗ್ರಹ ಸಾಮರ್ಥ್ಯ 100.855 ಟಿಎಂಸಿಯಷ್ಟಿದ್ದು, ಜಲಾಶಯ ಭರ್ತಿಯಾಗಿರುವ ಹಿನ್ನೆಲೆ ಜಲಾಶಯದಿಂದ ಭಾರಿ ಪ್ರಮಾಣದ ನೀರು ನದಿಗೆ ಹರಿಸಲಾಗುತ್ತಿದೆ. ಜಲಾಶಯದಿಂದ ನೀರು ಬಿಟ್ಟಿರುವುದರಿಂದ ವರ್ಷದಲ್ಲಿ ಎರಡನೇ ಬಾರಿ ಪ್ರವಾಹದ ಎಚ್ಚರಿಕೆ ಸಂದೇಶ ರವಾನಿಸಿದೆ.

ಮಳೆಗೆ 50ಕ್ಕೂ ಅಧಿಕ ಕುರಿ, ಮೇಕೆಗಳ ಸಾವು

ಕೊಟ್ಟೂರು: ತಾಲೂಕಿನಲ್ಲಿ 2 ದಿನಗಳಿಂದ ಸುರಿದ ಮಳೆಗೆ ನೆನೆದು ಶೆಟೆರೋಗದಿಂದ ಅಂದಾಜು 50ಕ್ಕೂ ಅಧಿಕ ಕುರಿಗಳು(Sheeps) ಮತ್ತು ಮೇಕೆಗಳು(Goat) ಸಾವಿಗೀಡಾಗಿವೆ(Dead).

ಕುರಿಮರಿಗಳು ಸಾವಿಗೀಡಾಗಿದ್ದರೂ ಮರಣೋತ್ತರ(Post Mortem) ಪರೀಕ್ಷೆ ನಡೆಸಲು ವೈದ್ಯರು(Doctors) ಸಕಾಲಕ್ಕೆ ಬರಲಿಲ್ಲ. ಹೀಗಾಗಿ ಕುರಿಗಾರರು ಊರಹೊರಗಿನ ಸ್ಥಳಗಳಲ್ಲಿ ಕುರಿ, ಮೇಕೆಗಳ ಮೃತದೇಹವನ್ನು ಬಿಸಾಡಿದ್ದಾರೆ. ಹೊಸಕೋಡಿಹಳ್ಳಿ, ಚಿರಿಬಿ, ಹರಾಳು, ಕೊಟ್ಟೂರಿನಲ್ಲೂ ಕುರಿ, ಮೇಕೆಗಳು ಸಾವಿಗೀಡಾಗಿವೆ. ಪಶು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ವೈದ್ಯರು ಸೇರಿದಂತೆ ಬೇರೆ ಇತರ ಸಿಬ್ಬಂದಿ ಕುರಿಗಾರರಿಗೆ ಸಕಾಲದಲ್ಲಿ ಸಿಗದ ಕಾರಣಕ್ಕಾಗಿ ಕುರಿಮರಿಗಳು ನರಳಿ ನರಳಿ ಸಾಯುತ್ತಿವೆ. ಹೀಗಾಗಿ ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ ಎನ್ನುತ್ತಾರೆ ಸಾಕಾಣಿಕೆದಾರ ಕೊಟ್ಟೂರು ವಿರೂಪಾಕ್ಷಿ, ಹರಾಳು ಪರುಸಪ್ಪ, ಚಿರಿಬಿ ಕೊಟ್ರೇಶ, ಹೊಸಕೋಡಿಹಳ್ಳಿ ಮೂಗಪ್ಪ.
ಮಳೆ(Rain) ಅಬ್ಬರ ಕಡಿಮೆಯಾಗಿ ಭಾನುವಾರ ಕೊಟ್ಟೂರಿನಲ್ಲಿ ಬಿಸಿಲಿನ ವಾತಾವರಣ ನಿರ್ಮಾಣವಾಗಿದ್ದರಿಂದ ಜನತೆ ನಿಟ್ಟಿಸಿರು ಬಿಟ್ಟರು.

Tomato ಬಾಕ್ಸ್‌ಗೆ 1200 ರೂ. ಬಂಪರ್‌ ಬೆಲೆ, ರೈತರಿಗೆ ಸಂತಸ..!

ಮರಿಯಮ್ಮನಹಳ್ಳಿಯಲ್ಲಿ 18 ಮನೆ ಭಾಗಶಃ ಜಖಂ

ಮರಿಯಮ್ಮನಹಳ್ಳಿ: ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಮರಿಯಮ್ಮನಹಳ್ಳಿಯ ಹೋಬಳಿಯಲ್ಲಿ ಸುಮಾರು 18 ಮನೆಗಳು(Houses) ಭಾಗಶಃ ಜಖಂಗೊಂಡಿವೆ. ನೂರಾರು ಎಕರೆ ಬೆಳೆಹಾನಿಯಾಗಿದೆ.

ಇಲ್ಲಿಗೆ ಸಮೀಪದ ಚಿಲನಕಹಟ್ಟಿ ಗ್ರಾಮದಲ್ಲಿ ಚೋರನೂರು ದುರುಗಪ್ಪ, ಮುದ್ದವ್ವ, ಕಮ್ಮಾರ್‌ ಬಿ. ಹನುಮಂತಪ್ಪ, ಹನುಮವ್ವ ಸೇರಿದಂತೆ 4 ಮನೆಗಳು ಬಿದ್ದಿದ್ದು, ಮರಿಯಮ್ಮನಹಳ್ಳಿಯ 7ನೇ ವಾರ್ಡ್‌ನಲ್ಲಿ ಗಂಗಮ್ಮ ಎಂಬುವರ ಮನೆ ಬಿದ್ದಿದೆ. ವ್ಯಾಸನಕೆರೆಯಲ್ಲಿ ಕಮ್ಮಾರ್‌ ಲಕ್ಷ್ಮವ್ವ, ಬಾರಿಕರ್‌ ಹನುಂತಪ್ಪ ಸೇರಿದಂತೆ ಒಟ್ಟು ಈ ಗ್ರಾಮದಲ್ಲಿ 7 ಮನೆಗಳು ಬಿದ್ದಿವೆ. ಪೋತಲಕಟ್ಟೆಯಲ್ಲಿ ಜಿ. ಕಲ್ಲಪ್ಪ ಸೇರಿದಂತೆ ಒಟ್ಟು 2 ಮನೆಗಳು, ಗೊಲ್ಲರಹಳ್ಳಿಯಲ್ಲಿ ಜಯಮ್ಮ ಎಂಬವರಿಗೆ ಸೇರಿ ಮನೆ ಬಿದ್ದಿದ್ದು, ಹಾರುವನಹಳ್ಳಿಯಲ್ಲಿ 2 ಮನೆ ಸೇರಿದಂತೆ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಒಟ್ಟು 18 ಮನೆಗಳು ಭಾಗಶಃ ಜಖಂಗೊಂಡಿವೆ.

ಬಿದ್ದ ಮನೆಗಳಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಪಿಡಿಒ ಸೇರಿದಂತೆ ಸ್ಥಳೀಯ ಗ್ರಾಮಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಸೇರಿದಂತೆ ಇತರೆ ಅಧಿಕಾರಿಗಳು ಭೇಟಿ ನೀಡಿ ಹಾನಿ ಕುರಿತು ವರದಿ ತಯಾರಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗುವುದು ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಇದೇ ರೀತಿಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಉಂಟಾಗಿರುವ ಬೆಳೆ ನಷ್ಟವನ್ನು(Crop Loss) ವೀಕ್ಷಿಸಲು ಸ್ಥಳೀಯ ಕೃಷಿ ಇಲಾಖೆಯ(Department of Agriculture) ಅಧಿಕಾರಿಗಳು ಮತ್ತು ಗ್ರಾಮಲೆಕ್ಕಾಧಿಕಾರಿಗಳು ಹೊಲ- ಗದ್ದೆಗಳಿಗೆ ಭೇಟಿ ನೀಡಿ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ.
 

Follow Us:
Download App:
  • android
  • ios