ಶಿವಮೊಗ್ಗದಲ್ಲಿ ಅಣ್ಣನ ಭೀಕರ ಕೊಲೆಯಾಗಿದ್ದು, ತಮ್ಮ ನಾಪತ್ತೆಯಾಗಿದ್ದಾನೆ. ರಾತ್ರಿ ಅಕ್ಕ-ಪಕ್ಕದಲ್ಲೇ ಮಲಗಿದ್ದ ಅಣ್ಣ-ತಮ್ಮಂದಿರ ಪೈಕಿ ಬೆಳಗ್ಗೆ ಅಣ್ಣ ಮಣಿಕಂಠನ ಮೃತದೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಮಣಿಕಂಠನ ಮೃತದೇಹದ ಬಳಿ ಕಲ್ಲು ಪತ್ತೆಯಾಗಿದೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಶಿವಮೊಗ್ಗ (ಜು.27): ರಾತ್ರಿ ಊಟ ಮಾಡಿ ಮಲಗುವಾಗ ಅಣ್ಣ-ತಮ್ಮ ಇಬ್ಬರೂ ಒಟ್ಟಿಗೆ ಮಲಗಿದಗದರು. ಆದರೆ, ಬೆಳಗಿನ ಜಾವ ಮನೆಯವರು ಬಂದು ನೋಡಿದಾಗ, ಅಣ್ಣನ ಮೃತದೇಹ ರಕ್ತ ಮಡುವಿನಲ್ಲಿ ಬಿದ್ದಿತ್ತು. ಆದರೆ, ಆತನ ಪಕ್ಕದಲ್ಲಿ ರಾತ್ರಿ ವೇಳೆ ಮಲಗಿದ್ದ ತಮ್ಮ ನಾಪತ್ತೆ ಆಗಿದ್ದನು.
ಈ ದೃಶ್ಯವು ಶಿವಮೊಗ್ಗದ ಮೇಲಿನ ತುಂಗಾನಗರದ ನಿವಾಸಿಗಳಿಗೆ ಆತಂಕ, ಅಚ್ಚರಿ ಹಾಗೂ ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮನೆಯಲ್ಲಿ ಮಲಗಿದ್ದ ಅಣ್ಣನ ತಲೆಯ ಮೇಲೆ ಭಾರಿ ಕಲ್ಲು ಎತ್ತಿಹಾಕಿರುವ ಈ ಭೀಕರ ಕೊಲೆ ಕೇಸಿನ ಘಟನೆಯ ಬಗ್ಗೆ ದೂರು ಪಡೆದಿರುವ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಮೃತ ವ್ಯಕ್ತಿಯನ್ನು ಮಣಿಕಂಠ ಎಂದು ಗುರುತಿಸಲಾಗಿದ್ದು, ಅವರು ಗಾರೆ ಕೆಲಸ ಮಾಡಿ ಜೀವನ ನಡೆಸುತ್ತಿದ್ದರು. ಎಂದಿನಂತೆ ತಮ್ಮ ಸಂತೋಷ್ ಜೊತೆ ಮಲಗಿದ್ದ ಮಣಿಕಂಠನ ಮೃತದೇಹ ಬೆಳಿಗ್ಗೆ ರಕ್ತದ ಮಡುವಿನಲ್ಲಿ ಪತ್ತೆಯಾಗಿದೆ. ಆದರೆ, ಅಚ್ಚರಿಯ ಸಂಗತಿಯೆಂದರೆ ಅವರ ತಮ್ಮ ಈ ವೇಳೆ ನಾಪತ್ತೆಯಾಗಿದ್ದು, ಕೊಲೆ ಪ್ರಕರಣಕ್ಕೆ ಮತ್ತಷ್ಟು ಸಸ್ಪೆನ್ಸ್ ಮೂಡಿಸಿದೆ.
ಮಣಿಕಂಠನ ಸಹೋದರಿಯ ಮನೆ ಪಕ್ಕದಲ್ಲಿಯೇ ಇರುವ ಕಾರಣದಿಂದ, ಪ್ರತಿದಿನವೂ ಊಟ, ತಿಂಡಿ ಅವರೇ ಕೊಡುತ್ತಿದ್ದರು. ಬೆಳಿಗ್ಗೆ ಸಹೋದರಿಯ ಚಿಕ್ಕ ಮಗ ಟೀ ಕೊಟ್ಟು ಬರುವುದಕ್ಕೆ ಬಂದು ಮಾವನ ಮನೆಗೆ ಬಂದಾಗ, ಮನೆಯೊಳಗಿನ ಭೀಕರ ದೃಶ್ಯವನ್ನು ಕಂಡು ಗಾಬರಿಯಾಗಿದ್ದಾನೆ. ನಂತರ, ಸಾವರಿಸಿಕೊಂಡು ಬಂದು ಮನೆಯವರಿಗೆ ವಿಷಯ ತಿಳಿಸಿದ್ದು, ತಕ್ಷಣ ಮನೆಯವರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಕೊಲೆ ಮಾಹಿತಿ ಕಿವಿಗೆ ಬಿದ್ದಾಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ.
ಸ್ನೇಹಿತರಿಂದ ಕೊಲೆ ನಡೆದಿರುವ ಶಂಕೆ:
ಮಣಿಕಂಠನಿಗೆ ಕುಡಿಯುವ ಚಟವಿತ್ತು. ಆ ಮೂಲಕ ಸ್ನೇಹಿತರಿಂದಲೇ ಏನಾದರೂ ಗಲಾಟೆ ನಡೆದು ಕೊಲೆ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಕೊಲೆಗೆ ಸಂಬಂಧಿಸಿದಂತೆ ಮಣಿಕಂಠನ ಸಹೋದರಿಯು – 'ಅಣ್ಣ-ತಮ್ಮಂದಿರ ನಡುವೆ ಯಾವುದೇ ಗಲಾಟೆ ಇಲ್ಲ, ಆದರೆ ತಮ್ಮ ಸಂತೋಷ್ ವಿಳಾಸವಿಲ್ಲದೆ ನಾಪತ್ತೆಯಾಗಿರುವುದು ಅನುಮಾನ ಮೂಡಿಸುತ್ತದೆ' ಎಂದು ಹೇಳುತ್ತಿದ್ದಾರೆ. ಯಾರೋ ಕಿಡಿಗೇಡಿಗಳು ಅಣ್ಣನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿ, ತಮ್ಮನನ್ನು ಕಿಡ್ನಾಪ್ ಮಾಡಿಕೊಂಡು ಹೋಗಿರಬಹುದು ಎಂದು ಹೇಳಿದ್ದಾರೆ.
ಪೊಲೀಸರ ತನಿಖೆ:
ಘಟನಾ ಸ್ಥಳಕ್ಕೆ ಅಡಿಷನಲ್ ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಹಾಗೂ ತುಂಗಾನಗರ ಠಾಣೆಯ ಇನ್ಸ್ಪೆಕ್ಟರ್ ಗುರುರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಿಂದ ಸಾಕ್ಷ್ಯ ಸಂಗ್ರಹ ಹಾಗೂ ನಾಪತ್ತೆಯಾದ ತಮ್ಮ ಸಂತೋಷ್ ಶೋಧನೆ ಮುಂದುವರಿದಿದೆ. ಇದೇ ವೇಳೆ, ಮಣಿಕಂಠನ ಸ್ನೇಹಿತರು, ಅವರ ತಂಗಿಯರೊಂದಿಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಸದ್ಯ ಈ ಪ್ರಕರಣವು ಶಿವಮೊಗ್ಗದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
