ಶಿವಮೊಗ್ಗದಲ್ಲಿ, ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡು, ತನಗೂ ಮತ್ತು ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳಿಗೂ ಮತಾಂತರಗೊಳ್ಳುವಂತೆ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ಪತಿಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮತಾಂತರಕ್ಕೆ ಒಪ್ಪದಿದ್ದಕ್ಕೆ ಪತ್ನಿ ಮನೆ ಬಿಟ್ಟು ಹೋಗಿದ್ದಾರೆ.

ಶಿವಮೊಗ್ಗ (ಫೆ.07): ನನ್ನ ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಈಗ ನನ್ನನ್ನೂ ಹಾಗೂ ನನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನೂ ಮತಾಂತರಗೊಳ್ಳುವಂತೆ ಒತ್ತಾಯಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿ ಪತಿಯೊಬ್ಬರು ಪತ್ನಿಯ ವಿರುದ್ಧವೇ ಪೊಲೀಸ್ ಠಾಣೆಯ ಮೆಟ್ಟಿಲೇರಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ.

Add Asianetnews Kannada as a Preferred SourcegooglePreferred

ಘಟನೆಯ ವಿವರ

ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿಯಾದ ಬಿ. ವಿನಯ್ ಎಂಬುವವರು ತಮ್ಮ ಪತ್ನಿ ಪ್ರಿಯತಾ ಆರ್. ವಿರುದ್ಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿನಯ್ ಅವರು 2011ರಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಬನಶಂಕರಿ ಕಲ್ಯಾಣ ಮಂಟಪದಲ್ಲಿ ಪ್ರಿಯತಾ ಆರ್. ಅವರನ್ನು ಲಿಂಗಾಯತ ಕುಂಬಾರ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು. ಈ ದಂಪತಿಗೆ ಯೋಜ್ಞಾ (14) ಮತ್ತು ಮನೋಜ್ಞಾ (8) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆರಂಭದಲ್ಲಿ ಸುಖವಾಗಿದ್ದ ಇವರ ಸಂಸಾರದಲ್ಲಿ ಬಿರುಕು ಮೂಡಿದ್ದು 2015ರ ನಂತರ ಎಂದು ವಿನಯ್ ದೂರಿನಲ್ಲಿ ತಿಳಿಸಿದ್ದಾರೆ.

ಮತಾಂತರದ ಜಾಡು ಹಿಡಿದ ಪತ್ನಿ

2015ರಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಪೋದಾರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಪ್ರಿಯತಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ್ದರು. ಅಲ್ಲಿ ಅದೇ ಶಾಲೆಯಲ್ಲಿದ್ದ ಮರಿಯಾ ಪ್ರಿಯದರ್ಶಿನಿ ಎಂಬ ಸಹೋದ್ಯೋಗಿಯ ಸಂಪರ್ಕ ಬೆಳೆದಿದೆ. ಮರಿಯಾ ಅವರ ಪ್ರಭಾವದಿಂದ ಪ್ರಿಯತಾ ಹಿಂದೂ ಧರ್ಮದ ಆಚರಣೆಗಳನ್ನು ಬಿಟ್ಟು ಕ್ರೈಸ್ತ ಧರ್ಮದ ಕಡೆಗೆ ಆಕರ್ಷಿತರಾಗಿದ್ದಾರೆ. ಕ್ರಮೇಣ ಅವರು ಸಂಪೂರ್ಣವಾಗಿ ಮತಾಂತರಗೊಂಡಿದ್ದಾರೆ ಎಂದು ಪತಿ ವಿನಯ್ ಆರೋಪಿಸಿದ್ದಾರೆ.

ಮತಾಂತರಗೊಂಡ ನಂತರ ಪ್ರಿಯತಾ ಅವರ ವರ್ತನೆಯಲ್ಲಿ ಭಾರೀ ಬದಲಾವಣೆ ಕಂಡುಬಂದಿದೆ. ಅವರು ನಿಯಮಿತವಾಗಿ ಚರ್ಚ್‌ಗೆ ಹೋಗಲಾರಂಭಿಸಿದರು. ಮನೆಯಲ್ಲಿಯೇ ಬೈಬಲ್ ತಂದು ಇಟ್ಟುಕೊಂಡು ಓದುವುದು, ಯೇಸುಕ್ರಿಸ್ತನನ್ನು ಪೂಜಿಸುವುದನ್ನು ರೂಢಿಸಿಕೊಂಡರು. ಪತಿ ಎಷ್ಟೇ ಬುದ್ಧಿವಾದ ಹೇಳಿದರೂ, 'ನಾನು ಕ್ರೈಸ್ತ ಧರ್ಮ ಪಾಲಿಸುತ್ತಿದ್ದೇನೆ, ನೀವೂ ಅದನ್ನೇ ಪಾಲಿಸಿ' ಎಂದು ಒತ್ತಾಯಿಸಲು ಶುರುಮಾಡಿದರು.

ಮಕ್ಕಳ ಮೇಲೂ ಮತಾಂತರದ ಒತ್ತಡ

ಕೇವಲ ಪತಿಯನ್ನು ಮಾತ್ರವಲ್ಲದೆ, ತಮ್ಮ ಹಿರಿಯ ಮಗಳಿಗೂ ಕ್ರೈಸ್ತ ಧರ್ಮವನ್ನೇ ಪಾಲಿಸುವಂತೆ ಪ್ರಿಯತಾ ಒತ್ತಾಯಿಸುತ್ತಿದ್ದರು ಎಂದು ವಿನಯ್ ದೂರಿದ್ದಾರೆ. ಕ್ರೈಸ್ತ ಧರ್ಮಕ್ಕೆ ಸೇರಿದ ವೆಬ್‌ಸೈಟ್‌ಗಳನ್ನು ಫಾಲೋ ಮಾಡುವುದು, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥನೆ ಸಲ್ಲಿಸುವುದು ಮತ್ತು ಪ್ರತಿ ತಿಂಗಳು ಧಾರ್ಮಿಕ ಚಟುವಟಿಕೆಗಳಿಗೆ ಹಣ ಪಾವತಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದರು.

ಷರತ್ತು ವಿಧಿಸಿ ಮನೆ ಬಿಟ್ಟ ಪತ್ನಿ:

ಮತಾಂತರದ ವಿಚಾರವಾಗಿ ಮನೆಯಲ್ಲಿ ನಿತ್ಯ ಜಗಳವಾಗುತ್ತಿತ್ತು. 2019ರಲ್ಲಿ ಒಮ್ಮೆ ತವರು ಮನೆಗೆ ಹೋಗಿದ್ದ ಪತ್ನಿಯನ್ನು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ವಿನಯ್ ಅವರು 2020ರಲ್ಲಿ ಮನವೊಲಿಸಿ ಕರೆತಂದಿದ್ದರು. ಆದರೆ, 2024ರ ವೇಳೆಗೆ ಅವರ ವರ್ತನೆ ಮತ್ತಷ್ಟು ತೀವ್ರವಾಯಿತು. 'ನನ್ನ ಮಾತನ್ನು ನೀವು ಕೇಳದಿದ್ದರೆ ನಾನು ಮನೆಯಲ್ಲಿ ಇರುವುದಿಲ್ಲ' ಎಂದು ಹಠ ಹಿಡಿದ ಪ್ರಿಯತಾ, ಪತಿ ಮತ್ತು ಮಕ್ಕಳು ಮತಾಂತರಗೊಳ್ಳಲು ಒಪ್ಪದ ಕಾರಣ 2025ರಲ್ಲಿ ಗಂಡ-ಮಕ್ಕಳನ್ನು ಬಿಟ್ಟು ತವರು ಮನೆಗೆ ತೆರಳಿದ್ದಾರೆ. ಸ್ನೇಹಿತರ ಮೂಲಕ ಸಂಧಾನಕ್ಕೆ ಪ್ರಯತ್ನಿಸಿದಾಗ, 'ನೀವು ಮತ್ತು ಮಕ್ಕಳು ಮತಾಂತರಗೊಂಡರೆ ಮಾತ್ರ ನಾನು ವಾಪಸ್ ಬರುತ್ತೇನೆ' ಎಂದು ಕಡಾಖಂಡಿತವಾಗಿ ಹೇಳಿದ್ದಾರೆ ಎಂದು ವಿನಯ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದ ವಿನಯ್, ತಮ್ಮ ಸಂಸಾರವನ್ನು ಒಡೆಯಲು ಕಾರಣವಾದ ಬಲವಂತದ ಮತಾಂತರದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಪೇಪರ್ ಟೌನ್ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಶಾಲಾ ಆಡಳಿತ ಮಂಡಳಿಯು ಪ್ರಿಯತಾ ಹಾಗೂ ಮರಿಯಾ ಇಬ್ಬರನ್ನೂ ಕೆಲಸದಿಂದ ವಜಾಗೊಳಿಸಿದೆ ಎಂದು ತಿಳಿದುಬಂದಿದೆ.