Asianet Suvarna News Asianet Suvarna News

ಕಾಳಸಂತೆಯಲ್ಲಿ ಗೊಬ್ಬರ ಮಾರಿದರೆ ಜೈಲುಶಿಕ್ಷೆ: ಸಚಿವ ಬಿ.ಸಿ. ಪಾಟೀಲ

*   ಡ್ರೋಣ್‌ ಮೂಲಕ ಔಷಧ ಸಿಂಪಡನೆಗೆ ಚಾಲನೆ ನೀಡಿದ ಕೃಷಿ ಸಚಿವರು 
*   ರೈತರೊಂದಿಗೆ ಸಂವಾದ ನಡೆಸಿದ ಸಚಿವ ಪಾಟೀಲ್‌
*   ರೈತರಿಗೆ ಸಹಾಯಧನದಲ್ಲಿ ಗೊಬ್ಬರ ವಿತರಣೆ 

Sentenced to Jail if Illegally Sale of Fertilizer Says BC Patil grg
Author
Bengaluru, First Published Nov 10, 2021, 12:31 PM IST

ನರಗುಂದ(ನ.10):  ರೈತರಿಗೆ(Farmers) ಬೇಕಾದ ಬೀಜ ಮತ್ತು ಗೊಬ್ಬರವನ್ನು ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿರುವುದು ಕಂಡುಬಂದಲ್ಲಿ ಅಂತವರ ಪರವಾನಿಗೆ ರದ್ದುಗೊಳಿಸಿ ಜೈಲುಶಿಕ್ಷೆಗೆ ಒಳಪಡಿಸಲಾಗುವುದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ(BC Patil) ಹೇಳಿದರು.

ಅವರು ಮಂಗಳವಾರ ತಾಲೂಕಿನ ಗಂಗಾಪುರ ಗ್ರಾಮದ ಮಲ್ಲಿಕಾರ್ಜುನಗೌಡ ಪಾಟೀಲ ಅವರ ಜಮೀನಿನಲ್ಲಿರುವ ಮೆಣಸಿನ ಬೆಳೆಗೆ ಡ್ರೋಣ್‌(Drone) ಮೂಲಕ ಔಷಧ ಸಿಂಪಡಣೆಗೆ ಚಾಲನೆ ನೀಡಿ, ನಂತರ ನಡೆದ ರೈತರೊಂದಿಗೆ ಒಂದು ದಿನ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸಕ್ತ ಸಾಲಿನಲ್ಲಿ ರಾಜ್ಯದಲ್ಲಿ(Karnataka) ಹೆಚ್ಚು ಮಳೆಯಾದ್ದರಿಂದ(Rain) ಕಾವೇರಿ ಕಂಪನಿಯವರ ಚಾಂಪ್‌ ಸೂರ್ಯಕಾಂತಿ ಬೀಜ(Seed) ಉತ್ಪಾದನೆ ಕಡಿಮೆ ಆಗಿದೆ. ಈ ಬೀಜಕ್ಕೆ ಹೆಚ್ಚು ಬೇಡಿಕೆ ಬಂದಿದೆ. ಆದರೆ, ನಮ್ಮ ಸರ್ಕಾರ ಪ್ರಸಕ್ತ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮಿಗೆ ಬೇಕಾದ ಡಿಎಪಿ ಮತ್ತು ಯೂರಿಯಾ ಗೊಬ್ಬರ ಕೊರತೆಯಾಗದಂತೆ ಕೇಂದ್ರದಿಂದ ತರಿಸಿಕೊಂಡಿದ್ದೇವೆ. ಆದರೆ, ಈ ತಾಲೂಕಿನಲ್ಲಿ ಖಾಸಗಿ ಗೊಬ್ಬರ(Fertilizer) ವ್ಯಾಪಾರಸ್ಥರು ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ರೈತರಿಂದ ತಿಳಿದು ಬಂದಿದೆ. ನಾನೂ ಸಹ ಈ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಜೊತೆ ಮಾತನಾಡಿದ್ದೇನೆ. ಯಾರು ಗೋದಾಮಿನಲ್ಲಿ ದಾಸ್ತಾನು ಇಟ್ಟುಕೊಂಡು ರೈತರಿಗೆ ಗೊಬ್ಬರ ಇಲ್ಲವೆಂದು ಹೇಳುವರೋ ಅಂಥವರ ಅಂಗಡಿಗಳ ಪರವಾನಗಿ(License) ರದ್ದುಗೊಳಿಸುವಂತೆ ಸೂಚನೆ ನೀಡಿದ್ದೇನೆ. ನಮ್ಮ ಸರ್ಕಾರ ಕಾಳ ಸಂತೆಯಲ್ಲಿ ಗೊಬ್ಬರ ಮಾರಾಟ ಮಾಡುವವರ ಮೇಲೆ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಹಿಳೆಯರು ಉದ್ಯಮ ಆರಂಭಿಸಿ ಸ್ವಾವಲಂಬಿಯಾಗಲಿ: ಸಚಿವ ಬಿ.ಸಿ. ಪಾಟೀಲ

ಶಿರೋಳ ಗ್ರಾಮದ ವಸ್ತ್ರದ ಅವರ ಜಮೀನಿನಲ್ಲಿ ಕಡಲೆ ಬೆಳೆ ಹಾಗೂ ಹತ್ತಿ ಬೆಳೆ ವೀಕ್ಷಣೆ ಮಾಡಿ ನಂತರ ರೈತರೊಂದಿಗೆ ಸಂವಾದ ನಡೆಸಿದರು. ಇದೇ ವೇಳೆ ತಾಲೂಕಿನ ವಿವಿಧ ಗ್ರಾಮಗಳ ರೈತರಿಗೆ ಪ್ರತಿದಿನ ಕೃಷಿ ಕಾರ್ಯಕ್ಕೆ ಹೊಲಗಳಿಗೆ ಹೋಗಲು ಸರಿಯಾದ ರಸ್ತೆ ಇಲ್ಲದೇ ತೊಂದರೆ ಅನುಭವಿಸುವಂತಾಗಿದೆ. ರಸ್ತೆ(Road) ನಿರ್ಮಿಸುವಂತೆ ಸಂಬಂಧಪಟ್ಟ ಇಲಾಖೆಯವರಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತ ಲಕ್ಷ್ಮಣ ಮನನೇಕೊಪ್ಪ ಸಚಿವರ ಮುಂದೆ ಅಳಲು ತೋಡಿಕೊಂಡರು.

ಈ ಸಂದರ್ಭದಲ್ಲಿ ಬಾಗಲಕೋಟಿ ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ(PC Gaddigoudar), ಬಸವಣ್ಣಪ್ಪ ಸುಂಕದ, ಬಾಬುಗೌಡ ತಿಮ್ಮನಗೌಡ್ರ, ಪಿ.ಎಲ್‌. ತಿರಕನಗೌಡ್ರ, ಸುರಕೋಡ ಗ್ರಾಪಂ ಅಧ್ಯಕ್ಷ ಪ್ರಕಾಶ ಕುಲಕರ್ಣಿ, ಬಸನಗೌಡ ಪಾಟೀಲ, ಗುರಪ್ಪ ಆದಪ್ಪನವರ, ಪುರಸಭೆ ಉಪಾಧ್ಯಕ್ಷ ಪ್ರಶಾಂತ ಜೋಶಿ, ಸದಸ್ಯರಾದ ರಾಚನಗೌಡ ಪಾಟೀಲ, ಸುನೀಲ ಕುಷ್ಟಗಿ, ಪವಾಡಪ್ಪ ವಡಗೇರಿ, ಬಸು ಪಾಟೀಲ, ಹಸನಸಾಬ ನವಲೆ, ಸಿದ್ದು ಹೂಗಾರ ಸೇರಿದಂತೆ ಮುಂತಾದವರು ಇದ್ದರು.

ಕೋಲಾರ ಮಾದರಿ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

ರಾಜ್ಯದ ರೈತರಿಗೆ ಇಸ್ರೇಲ್‌ ಮಾದರಿ ಕೃಷಿ(Israel Model Agriculture) ಬೇಡ, ನಮ್ಮ ರಾಜ್ಯದ ಕೋಲಾರ ಭಾಗದಲ್ಲಿ ಮಾಡುವ ಕೃಷಿ ಪದ್ಧತಿಯನ್ನು ನಮ್ಮ ರೈತರು ಅಳವಡಿಸಿಕೊಳ್ಳುವುದು ಅವಶ್ಯಕವಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು

ಅವರು ಮಂಗಳವಾರ ತಾಲೂಕಿನ ಭೈರನಹಟ್ಟಿ ಗ್ರಾಮದ ಬಸನಗೌಡ ಚಿಕ್ಕನಗೌಡ್ರ ಜಮೀನಿನಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ನಂತರ ತಾವೇ ಬಿತ್ತನೆ ಮಾಡುವ ಟ್ರ್ಯಾಕ್ಟರ್‌ ಚಲಾಯಿಸಿ, ಬಿತ್ತನೆ ಮಾಡಿ ಮಾತನಾಡಿದರು.

ರಾಜ್ಯದಲ್ಲಿ ರೈತರು ಪ್ರತಿ ವರ್ಷ ವಿವಿಧ ಭಾಗಗಳಲ್ಲಿ ಹಲವಾರು ರೀತಿ ಬೆಳೆ(Crop) ಬೆಳೆಯುವ ಪದ್ಧತಿಯಿದೆ. ಆದರೆ, ನಮ್ಮ ರೈತರು ಒಂದೇ ಬೆಳೆ ಬೆಳೆಯುವ ಪದ್ಧತಿಯನ್ನು ಕೈ ಬಿಡಬೇಕು. ಇಂದಿನ ಆಧುನಿಕ ಯುಗದಲ್ಲಿ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಮಾತ್ರ ಆರ್ಥಿಕವಾಗಿ ಸದೃಢವಾಗಲು ಸಾಧ್ಯವಾಗುತ್ತದೆ.

ನಮ್ಮ ರಾಜ್ಯದ ರೈತರಿಗೆ ಇಸ್ರೇಲ್‌ ದೇಶದ ಕೃಷಿ ಪದ್ಧತಿ ಅವಶ್ಯವಿಲ್ಲ, ಕೋಲಾರ ಜಿಲ್ಲೆಯಲ್ಲಿ ಬರಗಾಲ ಪ್ರದೇಶವಾದರೂ ಕೂಡ ಅಲ್ಪ ನೀರಿನಲ್ಲೇ ಹಲವಾರು ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮೇಲಾಗಿ ಹೈನುಗಾರಿಕೆ, ಜೇನು, ಕುರಿ, ಮೀನು ಸಾಕಾಣಿಕೆ ಸೇರಿದಂತೆ ವಿವಿಧ ರೀತಿಯ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು, ಸಧ್ಯ ಆ ಜಿಲ್ಲೆಯ ರೈತರು ಆರ್ಥಿಕವಾಗಿ ಸದೃಢರಾಗಿದ್ದಾರೆ. ಆದರಿಂದ ಮುಂದಿನ ದಿನಗಳಲ್ಲಿ ನಮ್ಮ ರೈತರು ಕೋಲಾರ(Kolar) ಭಾಗದ ರೈತರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡರೆ ಮಾತ್ರ ಆರ್ಥಿಕವಾಗಿ ಸದೃಢರಾಗುತ್ತಾರೆ.

ಚಿತ್ರದುರ್ಗ: ಸಚಿವ ಬಿ.ಸಿ.ಪಾಟೀಲ್‌ ಸಮ್ಮುಖದಲ್ಲೇ ಕೋವಿಡ್‌ ರೂಲ್ಸ್‌ ಬ್ರೇಕ್‌..!

ಭೈರನಹಟ್ಟಿ ಗ್ರಾಮದ ಜಿಲ್ಲಾ ಮಟ್ಟದ ಉತ್ತಮ ಕೃಷಿ ಪ್ರಶಸ್ತಿ ಪಡೆದ ಬಸನಗೌಡ ಚಿಕ್ಕನಗೌಡ್ರ ಅವರು ಬೇರೆ ಜಿಲ್ಲೆಯಿಂದ ಈ ಜಿಲ್ಲೆಗೆ ಬಂದು ತಮ್ಮ ಕೃಷಿ ಕಾಯಕದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಉತ್ತಮ ಸಾಧನೆ ಮಾಡಿದ್ದಾರೆ. ಇದೇ ಮಾದರಿಯಲ್ಲಿ ಎಲ್ಲ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಇನ್ನು ಸರ್ಕಾರ ಪ್ರತಿ ವರ್ಷ ರೈತರು ಆರ್ಥಿಕವಾಗಿ ಸುಧಾರಣೆಯಾಗಬೇಕು ಎಂದು ಸಹಾಯಧನದಲ್ಲಿ ಕೃಷಿ ಉಪಕರಣಗಳನ್ನುನೀಡುತ್ತದೆ. ಈ ಸೌಲಭ್ಯವನ್ನು ಎಲ್ಲ ರೈತರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಲೋಕೋಪಯೋಗಿ ಇಲಾಖೆ ಸಚಿವ ಸಿ.ಸಿ. ಪಾಟೀಲ(CC Patil) ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ಕಿಸಾನ ಸಮ್ಮಾನ ಯೋಜನೆ, ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ, ರೈತರಿಗೆ ಸಹಾಯಧನದಲ್ಲಿ ಗೊಬ್ಬರ ವಿತರಣೆ ಮಾಡಲಾಗಿದೆ ಎಂದರು.

ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ ಮಾತನಾಡಿ, ದೇಶದ ರೈತರ ಆರ್ಥಿಕ ಸ್ಥಿತಿ ಸುಧಾರಣೆಗೆ ಕೃಷಿ ಕಾಯ್ದೆ ಜಾರಿಗೆ ತರಲಾಗಿದೆ ಎಂದರು.

ಗ್ರಾಪಂ ಅಧ್ಯಕ್ಷೆ ಲಕ್ಷ್ಮವ್ವ ಕಟ್ಟಿಮನಿ, ಉಪಾಧ್ಯಕ್ಷ ನಾಗಪ್ಪ ಬೆನ್ನೂರ, ಸದಸ್ಯರಾದ ಶರಣಬಸಪ್ಪ ನರಸಾಪೂರ, ಜ್ಞಾನದೇವ ಮುನನೇಕೊಪ್ಪ, ಟಿಎಪಿಎಂಸಿ ಅಧ್ಯಕ್ಷ ಅಜ್ಜಪ್ಪ ಹುಡೇದ, ಎಪಿಎಂಸಿ ಅಧ್ಯಕ್ಷ ಶಂಕರಗೌಡ ಯಲ್ಲಪ್ಪಗೌಡ್ರ, ಗುರಪ್ಪ ಆದಪ್ಪನವರ, ಬಸು ಪಾಟೀಲ, ಪವಾಡಪ್ಪ ವಡಗೇರಿ, ಮಲ್ಲಪ್ಪ ಪೂಜಾರ, ಪಿಕಾರ್ಡ್‌ ಬ್ಯಾಂಕ್‌ ನಿರ್ದೇಶಕ ಬಿ.ಬಿ. ಐನಾಪೂರ, ರಾಜುಗೌಡ ಪಾಟೀಲ, ಚಂದ್ರು ದಂಡಿನ, ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್‌.ಆರ್‌. ಉಮಾಶಂಕರ, ಮೊಹ್ಮದ್‌ ಮೊಹಸೀನ, ಕೃಷಿ ಆಯುಕ್ತ ಬ್ರಿಜೇಶಕುಮಾರ ದೀಕ್ಷಿತ್‌, ಡಾ. ಎಂ.ಬಿ. ವಂಕಟೇಶ, ಡಾ. ಎಂ.ಬಿ. ಜೆಟ್ಟಿ, ಬಿ.ವೈ. ಶ್ರೀನಿವಾಸ, ನಂದಿನಿ ಕುಮಾರಿ, ಜಂಟಿ ಕೃಷಿ ನಿರ್ದೇಶಕ ಟಿ. ರುದ್ರೇಶ, ಉಪಕೃಷಿ ನಿರ್ದೇಶಕ ಹುನಗುಂದ, ನಾಗನಗೌಡ, ತಾಲೂಕು ಸಹಾಯಕ ನಿರ್ದೇಶಕಿ ಮೈತ್ರಿ, ಮಹೇಶ ಮಾಲಿಮನಿ ಹಾಗೂ ಕೃಷಿ ಇಲಾಖೆ ಸಿಬ್ಬಂದಿಗಳು, ರೈತರು ಇದ್ದರು.
 

Follow Us:
Download App:
  • android
  • ios