ಬೆಂಗಳೂರಿನ 29 ಕಡೆ ನೆಲೆಸಿದ್ದ ಅಕ್ರಮ ಬಾಂಗ್ಲಾದೇಶಿಗಳ ವಿರುದ್ದ ಪೊಲೀಸರು ದಾಳಿ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಬಳಿ ಈ ದಾಳಿ ನಡೆದಿದ್ದು ಬರೋಬ್ಬರಿ 1909 ಅಕ್ರಮ ಬಾಂಗ್ಲಾ ವಲಸಿಗರನ್ನು ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು (ಆ.08) ಪಶ್ಚಿಮ ಬಂಗಾಳ, ಅಸ್ಸಾಂ ಗಡಿಗಳಲ್ಲಿ ಕಾರ್ಯಾಚರಣೆ ತೀವ್ರಗೊಳ್ಳುತ್ತಿದ್ದಂತೆ ಇದೀಗ ಅಕ್ರಮ ಬಾಂಗ್ಲಾದೇಶಿಗಳು ದಕ್ಷಿಣ ಭಾರತದತ್ತ ಮುಖ ಮಾಡುತ್ತಿದ್ದಾರೆ. ಈ ಪೈಕಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಅಕ್ರಮ ಬಾಂಗ್ಲಾದೇಶಿಗಳು ನೆಲೆಸಿದ್ದಾರೆ ಅನ್ನೋ ಆರೋಪಗಳು ಹಲವು ಬಾರಿ ಸಾಬೀತಾಗಿದೆ. ಇದೀಗ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. 23 ವಿಶೇಷ ಪೊಲೀಸ್ ತಂಡಗಳು 29 ಕಡೆ ದಾಳಿ ಮಾಡಿದೆ. ಈ ವೇಳೆ ಬರೋಬ್ಬರಿ 1909 ಅಕ್ರಮ ಬಾಂಗ್ಲಾ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮುಂಜಾನೆ ನಾಲ್ಕು ಗಂಟೆಗೆ ಪೊಲೀಸ್ ದಾಳಿ
ಬೆಂಗಳೂರಿನಲ್ಲಿ ಅಕ್ರಮ ಬಾಂಗ್ಲಾದೇಶ ವಲಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಹೈಕೋರ್ಟ್ ಕೂಡ ಈ ಕುರಿತು ಸರ್ಕಾರವನ್ನು ಪ್ರಶ್ನಿಸಿದೆ. ಇದರ ಬೆನ್ನಲ್ಲೇ ಎಲೆಕ್ಟ್ರಾನಿಕ್ ಸಿಟಿ ಉವ ವಿಭಾಗದ ಡಿಸಿಪಿ ಎಮ್.ನಾರಾಯಣ್ ನೇತೃತ್ವದಲ್ಲಿ ವಲಸಿಗರ ಕಾರ್ಯಪಡೆ ರಚನೆ ಮಾಡಲಾಗಿತ್ತು. 23 ವಿಶೇಷ ಪೊಲೀಸ್ ತಂಡಗಳು ಅಕ್ರಮ ಬಾಂಗ್ಲಾ ವಲಸಿಗರ ವಿರುದ್ದಕಾರ್ಯಾಚರಣೆ ನಡೆಸಲಾಗಿದೆ. ಇಂದು ಮುಂಜಾನೆ 4 ಗಂಟಗೆ ಏಕಕಾಲದಲ್ಲಿ ಪೊಲೀಸರು ದಾಳಿ ಮಾಡಿದ್ದಾರೆ.
29 ಸ್ಥಳಗಳಲ್ಲಿದ್ದ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರ್ಯಾಚರಣೆಯಲ್ಲಿ 295 ಪೊಲೀಸ್ ಅಧಿಕಾರಿಗಳು ಸೇರಿದಂತೆ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಈ ಮೂಲಕ 1909 ಅಕ್ರಮ ವಲಸಿಗರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪೈಕಿ 15 ಮಂದಿ ಅಕ್ರಮ ಬಾಂಗ್ಲಾ ವಲಸಿಗರು ಎಂದು ದೃಢವಾಗಿದೆ.
ಬಂಗಾಳ, ಅಸ್ಸಾಂ ಮೂಲದ ನಕಲಿ ಆಧಾರ್ ಕಾರ್ಡ್
ಅಕ್ರಮ ವಲಸಿಗರ ಕೈಯಲ್ಲಿ ಪಶ್ಚಿಮ ಬಂಗಾಳ, ಅಸ್ಸಾಂ ವಿಳಾಸದ ನಕಲಿ ಆಧಾರ್ ಕಾರ್ಡ್, ವೋಟರ್ ಐಡಿಗಳು ಪತ್ತೆಯಾಗಿದೆ. ಹೀಗಾಗಿ ಪೊಲೀಸರು 1894 ಅಕ್ರಮ ವಲಸಿಗರ ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಶಂಕಿತರ ವೀಸಾ, ಪಾಸ್ ಪೋರ್ಟ್, ಮತ್ತು ರಾಷ್ಟೀಯತೆ ದಾಖಲೆ ಪರಿಶೀಲನೆ ನಡೆಸಲಾಗುತ್ತಿದೆ. ದೃಢಪಟ್ಟಿರುವ 15 ಮಂದಿ ಬಾಂಗ್ಲಾ ದೇಶದ ಬಾಗೇರಹತ್ ನ ಖುಲ್ನಾ ಜಿಲ್ಲೆಯವರು. ಇವರು ಅಕ್ರಮವಾಗಿ ಭಾರತ ಗಡಿ ನುಸುಳಿ ಬಂದು ಇಲ್ಲಿನ ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ. ಭಾರತದಲ್ಲಿ ಕೆಲ ಸ್ಥಳೀಯರು ಇವರಿಗೆ ನೆರವು ನೀಡಿರುವ ಕುರಿತು ತನಿಖೆ ನಡೆಯುತ್ತಿದೆ.
ಕೆಲವರು ನೈತಿಕ ಪೊಲೀಸ್ಗಿರಿ ಮಾಡುತ್ತಾರೆ. ಬಾಂಗ್ಲಾ ದೇಶಿಯರ ಶೇಡ್ ಮೇಲೆ ದಾಳಿ ಮಾಡುತ್ತಾರೆ. ಅವರನ್ನ ಹೆದರಿಸಿ ಬೆದರಿಸಿ ಕೆಲವರು ಹಣ ಹಾಕಿಸಿಕೊಳ್ತಾರೆ.ಸುಲಿಗೆ ಮಾಡುತ್ತಿದ್ದಾರೆ. ನಿಮಗೆ ಬಾಂಗ್ಲಾ ದೇಶಿಯರು ಅಂತ ತಿಳಿದರೆತಕ್ಷಣವೇ ಪೊಲೀರಿಗೆ ಮಾಹಿತಿ ನೀಡಬೇಕು. ನೈತಿಕ ಪೊಲೀಸ್ ಗಿರಿ ನಡೆಸಿದ್ರೆ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಎಲೆಕ್ಟ್ರಾನಿಕ್ ಸಿಟಿ ಡಿಸಿಪಿ ನಾರಾಯಣ್ ಹೇಳಿದ್ದಾರೆ.


