ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೂಷ್, ಕ್ಷಮಾದಾನ ಕೋರಿ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದಾನೆ. ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ, ಪ್ರದೂಷ್ ಕುರಿತು ವರದಿ ಸಲ್ಲಿಸುವಂತೆ ಪ್ರೊಬೆಷನ್ ಅಧಿಕಾರಿಗೆ ನಿರ್ದೇಶನ ನೀಡಿ, ವಿಚಾರಣೆಯನ್ನು ಮುಂದೂಡಿದೆ.
ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಕ್ಷಮಾದಾನ ನೀಡುವ ಮೂಲಕ ತನ್ನನ್ನು ಮಾಫಿ ಸಾಕ್ಷಿಯನ್ನಾಗಿಸಬೇಕು ಎಂದು ಕೋರಿ 14ನೇ ಆರೋಪಿ ಪ್ರದೂಷ್ ಅರ್ಜಿ ಸಲ್ಲಿಸಿರುವ ಕ್ರಮವನ್ನು ಗಂಭೀರವಾಗಿ ಪರಿಗಣಿಸಿರುವ ನಗರದ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್, ಕಾರಾಗೃಹದಲ್ಲಿ ಪ್ರದೂಷ್ ಕುರಿತಂತೆ ವರದಿ ಸಲ್ಲಿಸಬೇಕು ಎಂದು ಪ್ರೊಬೆಷನ್ ಅಧಿಕಾರಿಗೆ ನಿರ್ದೇಶಿಸಿದೆ.
ಪ್ರದೂಷ್ ಸಲ್ಲಿಸಿರುವ ಅರ್ಜಿ ಕುರಿತು ಗುರುವಾರ ವಿಚಾರಣೆ ನಡೆಸಿದ ನ್ಯಾಯಾಧೀಶೆ ಸುಜಾತಾ ಎಂ. ಸಾಂಬ್ರಾಣಿ ಅವರು ಈ ಸೂಚನೆ ನೀಡಿ ವಿಚಾರಣೆಯನ್ನು ಆ.24ಕ್ಕೆ ಮುಂದೂಡಿತು.
ಇದೇ ವೇಳೆ, ಪ್ರದೂಷ್ಗೆ ನ್ಯಾಯಾಲಯ ಗುರುವಾರ ಮತ್ತೆ ಹಲವು ಪ್ರಶ್ನೆಗಳನ್ನು ಕೇಳಿತು. ನ್ಯಾಯಾಲಯದ ಪ್ರಶ್ನೆಗಳಿಗೆ ಉತ್ತರಿಸಿದ ಪ್ರದೂಷ್, ನಾನು ಎಂಬಿಎ ಪದವೀಧರ. ನನಗೆ ಇಂಗ್ಲಿಷ್ ಭಾಷೆ ಚೆನ್ನಾಗಿ ತಿಳಿದಿದೆ. ಅರ್ಜಿ ಮತ್ತು ಅದರಲ್ಲಿರುವ ಎಲ್ಲಾ ಅಂಶಗಳ ಬಗ್ಗೆ ಸಂಪೂರ್ಣ ಅರಿವಿದೆ. ಯಾರ ಪ್ರಭಾವ ಮತ್ತು ಒತ್ತಡಕ್ಕೆ ಒಳಗಾಗದೆ ಈ ಅರ್ಜಿ ಸಲ್ಲಿಸಿದ್ದೇನೆ ಎಂದು ನ್ಯಾಯಾಲಯಕ್ಕೆ ಖಚಿತಪಡಿಸಿದರು.
ಪ್ರದೂಷ್ ಅರ್ಜಿ ಕುರಿತು ಆ.18ರಂದು ವಿಚಾರಣೆ ಪೂಣರ್ಗೊಳಿಸಿದ್ದ ಗುರುವಾರ (ಆ.20ರಂದು) ಆದೇಶ ಪ್ರಕಟಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. ಆದರೆ ಗುರುವಾರ ಆದೇಶ ಪ್ರಕಟಿಸಲಿಲ್ಲ. ಬದಲಾಗಿ ಪ್ರದೂಷ್ ಅರ್ಜಿ ವಿಚಾರಣೆ ಮುಂದುವರಿಸಿದ ನ್ಯಾಯಾಲಯ, ಪ್ರದೂಷ್ ಅರ್ಜಿಯ ಸ್ವರೂಪ ಮತ್ತು ಅಪರಾಧ ಗಂಭೀರತೆಯಿಂದ ಕೂಡಿದೆ. ಇದರಿಂದ ಈ ಅರ್ಜಿ ಪರಿಗಣಿಸುವ ಮುನ್ನ ಪ್ರದೂಷ್ ಕುರಿತು ಪ್ರೊಬೇಷನ್ ಅಧಿಕಾರಿಯಿಂದ ವರದಿ ಪಡೆಯವುದು ಸೂಕ್ತವೆನಿಸುತ್ತಿದೆ. ಹಾಗಾಗಿ, ಪ್ರದೂಷ್ ಕುರಿತು ಪ್ರೊಬೆಷನ್ ಅಧಿಕಾರಿಯು ಆ.24ರಂದು ಬೆಳಗ್ಗೆ 11 ಗಂಟೆಗೆ ವರದಿ ಸಲ್ಲಿಸಬೇಕು. ಆ ವರದಿ ಬಂದನ ನಂತರ ಪ್ರದೂಷ್ ಅರ್ಜಿಯನ್ನು ಪರಿಗಣಿಸಲಾಗುವುದು ಎಂದು ತಿಳಿಸಿದೆ.
ಯಾರು ಈ ಪ್ರೊಬೆಷನ್ ಅಧಿಕಾರಿ?:
ಪ್ರೊಬೆಷನ್ ಅಧಿಕಾರಿಯು ರಾಜ್ಯ ಸಮಾಜ ಕಲ್ಯಾಣ ಇಲಾಖೆ ಅಥವಾ ಸರ್ಕಾರದ ಇತರೆ ಇಲಾಖೆಯ ಉದ್ಯೋಗಿಯಾಗಿರುತ್ತಾರೆ. ಅವರು ಪರಪ್ಪನ ಅಗ್ರಹಾರ ಕಾರಾಗೃಹದ ಅಧಿಕಾರಿಗಳ ಮೂಲಕ ಜೈಲಿನಲ್ಲಿರುವ ಪ್ರದೂಷ್ನನ್ನು ಭೇಟಿ ಮಾಡಿ ಸಮಾಲೋಚನೆ ಮಾಡುತ್ತಾರೆ. ಈ ವೇಳೆ ಪ್ರದೂಷ್ ವೈಯಕ್ತಿಕ ವಿವರ, ಕುಟುಂಬದ ಹಿನ್ನೆಲೆ, ಅರ್ಜಿ ಸಲ್ಲಿಸಲು ಆತ ನೀಡುವ ಕಾರಣಗಳು, ಜೈಲಿನಲ್ಲಿನ ಆತನ ಪರಿಸ್ಥತಿ ಹಾಗೂ ಮಾನಸಿಕ ಸ್ಥಿತಿಗತಿ ಸೇರಿ ಇನ್ನಿತರ ವಿವರ ಸಂಗ್ರಹಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತಾರೆ.


