ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಬುಧವಾರ ಕಲಬುರಗಿಯಲ್ಲಿ ಮಳೆಯ ರೆಡ್‌ ಅಲರ್ಚ್‌ ನೀಡಲಾಗಿತ್ತಾದರೂ ಈ ದಿನ ಬೆಳಗ್ಗೆಯಿಂದ ನಗರ ಹಾಗೂ ಜಿಲ್ಲಾದ್ಯಂತ ಎಲ್ಲಿಯೂ ಮಳೆ ಸುರಿಯಲಿಲ್ಲ!

ಕಲಬುರಗಿ (ಜು.27) :  ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಬುಧವಾರ ಕಲಬುರಗಿಯಲ್ಲಿ ಮಳೆಯ ರೆಡ್‌ ಅಲರ್ಟ್ ನೀಡಲಾಗಿತ್ತಾದರೂ ಈ ದಿನ ಬೆಳಗ್ಗೆಯಿಂದ ನಗರ ಹಾಗೂ ಜಿಲ್ಲಾದ್ಯಂತ ಎಲ್ಲಿಯೂ ಮಳೆ ಸುರಿಯಲಿಲ್ಲ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಚ್ಚು ಮಳೆ ಸುರಿಯುತ್ತಿದ್ದ ಚಿಂಚೋಳಿ ತಾಲೂಕಿನಲ್ಲಿಯೂ ಬುಧವಾರ ದಿನ ಮಳೆ ಸುರಿಯಲಿಲ್ಲ, ಕಲಬುರಗಿಯಲ್ಲಿ ಬೆಳಗಿನ 10 ನಿಮಿಷಗಳ ಕಾಲ ತುಂತುರು ಮಳೆ ಹಾಗೂ ಅಫಜಲ್ಪುರದಲ್ಲಿ ಕೆಲವು ಹೋಬಳಿಗಳಲ್ಲಿ ಮಳೆ ಸಿಂಚನವಾಗಿದ್ದು ಹೊರತುಪಡಿಸಿದರೆ ಜಿಲ್ಲಾದ್ಯಂತ ಬುಧವಾರ ಹಗಲು ಪೂರ್ತಿ ಮಳೆರಾಯ ಬಿಡುವು ನೀಡಿದ್ದ. ಇದರಿಂದಾಗಿ ವರುಣನ ಅಬ್ಬರದಿಂದ ಕಂಗಾಲಾಗಿದ್ದ ಜಿಲ್ಲೆಯ ಜನತೆ ತುಸು ನಿಟ್ಟುಸಿರು ಬಿಟ್ಟರು.

ಕಲಬುರಗಿ: ನೀರಿನ ಗುಂಡಿಯಲ್ಲಿ ಮುಳುಗಿ ಬಾಲಕರಿಬ್ಬರು ದುರ್ಮರಣ

ಆದರೆ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಜಿಲ್ಲಾಡಳಿತ ಮಳೆಯ ಸವಾಲು ಎದುರಿಸಲು ಸಿದ್ಧವಾಗಿತ್ತಲ್ಲದೆ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾದ್ಯಂತ ಶಾಲೆಗಳಿಗೂ ರಜೆ ಘೋಷಣೆ ಮಾಡಲಾಗಿತ್ತು. ಆದರೆ ಬುಧವಾರ ಇಡೀ ದಿನ ಮಳೆ ಕಲಬುರಗಿಯತ್ತ ಸುಳಿಯಲೇ ಇಲ್ಲ. ಹೀಗಾಗಿ ಜನರೆಲ್ಲರೂ ರೆಡ್‌ ಅಲರ್ಚ್‌ ಘೋಷಣೆಯ ದಿನ ಮಳೆರಾಯ ಅಲರ್ಚ್‌ ಆಗಿದ್ದಾನೆ. ಆತ ಜಿಲ್ಲೆಯತ್ತ ಸುಳಿದಿಲ್ಲ, ಏಕಾಏಕಿ ಸುರಿಯುತ್ತಾನೆಂದು ಆಡಿಕೊಂಡರು.

ಮಂಗಳವಾರದ ಮಳೆಗೆ ಪ್ರವಾಹ ಕಂಡಿದ್ದ ಜಿಲ್ಲೆಯ ಚಿಂಚೋಳಿ, ಸೇಡಂ, ಚಿತ್ತಾಪುರ ತಾಲೂಕುಗಳಲ್ಲಿ ಬುಧವಾರ ನೀರಿನ ಮಟ್ಟದಲ್ಲಿ ಇಳಿಕೆ ಕಂಡಿತ್ತು. ಈ ತಾಲೂಕುಗಳಲ್ಲಿ ಹರಿಯುವ ಕಾಗಿಣಾ ಹಾಗೂ ಮುಲ್ಲಾಮಾರಿ ನದಿಗಳು ಉಕ್ಕೇರಿ ಅನೇಕ ಸೇತುವೆಗಳನ್ನು ಮುಳುಗಿಸಿದ್ದವು. ಆದರೆ ಪ್ರವಾಹ ಇಳಿಕೆಯಾಗಿದ್ದರಿಂದ ನಿದಾನಕ್ಕೆ ಒಂದೊಂದೇ ಸೇತುವೆಗಳು ಸಂಚಾರಕ್ಕೆ ಮುಕ್ತವಾಗುತ್ತಿವೆ.

ಚಿಂಚೋಳಿ ತಾಲೂಕಿನಲ್ಲಿ ಮಳೆಯಿಂದಾಗಿ ಅನೇಕ ಗ್ರಾಮಗಳಲ್ಲಿ ಮುಲ್ಲಾಮಾರಿ ನದಿಯ ನೀರು ನುಗ್ಗಿ ಪ್ರವಾಹ ಭೀತಿ ಕಾಡಿತ್ತು, ಬುಧವಾರ ಈ ಪರಿಸ್ಥಿತಿ ಸ್ವಲ್ಪ ತಿಳಿಯಾಗಿತ್ತು. ದೇಗಲಮಡಿ, ಗರಗಪಳ್ಳಿ, ಚಿಂಚೋಳಿ ಪಟ್ಟಣದ ಹರಿಜನವಾಡ, ಛೋಟಿದರ್ಗಾ, ಬಡಿದರ್ಗಾ ಬಡಾವಣೆಗಳಲ್ಲೇ ನದಿ ನೀರು ನುಗ್ಗಿದ್ದರಿಂದ ಭಾರಿ ಪ್ರಮಾಣದಲ್ಲಿ ಹಾನಿ ಸಂಭವಿಸಿದೆ. ಕೆಳದಂಡೆ ಮುಲ್ಲಾಮಾರಿ ಜಲಾಶಯ ಒಳಹರಿವು ಹೆಚ್ಚಿದೆ. ನಾಗರಾಳ ಜಲಾಶಯದಿಂದ 4 ಗೇಟ್‌ ಮೂಲಕ 6 ಸಾವಿರ ಕ್ಯುಸೆಕ್‌ ನೀರು ನದಿಗೆ ಹರಿಬಿಡಲಾಗುತ್ತಿದೆ.

ಆದಾಗ್ಯೂ ಜಲಾವೃತಗೊಂಡಿದ್ದ ಚಿಮ್ಮನಚೋಡ, ತಾಜಲಾಪುರ, ಕನಕಪುರ, ಗೌಡನಹಳ್ಳಿ, ನಿಮಾಹೊಸಳ್ಳಿ, ಗರಗಪಳ್ಳಿ, ಇರಗಪಳ್ಳಿ, ಚಂದಾಪುರ ಬಾಂದಾರು ಸೇತುವೆಗಳು ಬುಧವಾರ ಸಂಚಾರಕ್ಕೆ ಮುಕ್ತವಾಗಿದೆವ.

ಕಾಗಿಣಾ ಪ್ರವಾಹದಲ್ಲೂ ಇಳಿಕೆ ಗೋಚರ:

ಉಕ್ಕೇರಿದ್ದ ಕಾಗಿಣಾ ನದಿಯಲ್ಲಿಯೂ ನೀರಿನ ಹರಿವು ತಗ್ಗುತ್ತಿದೆ, ಹೀಗಾಗಿ ಪ್ರವಾಹ ಇಳಿಕೆ ಕಂಡಿದೆ. ಸೇಡಂನಲ್ಲಿರುವ ಬಿಬ್ಬಳ್ಳಿ ಹಾಗೂ ಸಂಗಾವಿ ಗ್ರಾಮಗಳ ಸಂಪರ್ಕ ಸೇತುವೆಗಳು ಸಂಪೂರ್ಣ ನೀರಲ್ಲಿ ಮುಳುಗಿದ್ದವು, ಆದರೆ ಬುಧವಾರ ನೀರು ತಗ್ಗಿದ್ದರಿಂದ ಇಲ್ಲಿನ ಸಂಚಾರ ಪುನಃ ಶುರುವಾಗಿದೆ.

ಕೊಡಗು: ವರ್ಷ ಕಳೆದರೂ NDRF ಹಣ ಬಳಸದ ಅಧಿಕಾರಿಗಳಿಗೆ ನೋಟಿಸ್

ಜಲಾವೃತಗೊಂಡಿದ್ದ ಮಳಖೇಡ ಬಳಿಯ ಸೇತುವೆಯ ನೀರಿನ ಮಟ್ಟದಲ್ಲೂ ಇಳಿಕೆಯಾಗಿದ್ದರಿಂದ ನಿಧಾನಕ್ಕೆ ಇಲ್ಲಿಯೂ ವಾಹನ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದಲ್ಲದೆ ಉತ್ತರಾದಿ ಮಠದ ಪ್ರಾಂಗಣದಲ್ಲಿನ ನೀರಿನ ಪ್ರಮಾಣವೂ ಇಳಿಮುಖವಾಗುತ್ತಿದೆ.