Asianet Suvarna News Asianet Suvarna News

Council Election : ವಿಜಯಪುರದಲ್ಲಿ ಕೈ, ಕಮಲ ಅವಿರೋಧ ಆಯ್ಕೆಗೆ ಕಸರತ್ತು

  •  ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆ ಕಾವು
  • ಸೋಲು ಗೆಲುವಿನ ಲೆಕ್ಕಾಚಾರ ಆರಂಭ - ವಿಜಯಪುರ- ಬಾಗಲಕೋಟೆ ದ್ವಿಸದಸ್ಯ ಕ್ಷೇತ್ರದಲ್ಲಿನ ಲೆಕ್ಕಾಚಾರವೇ ಬೇರೆ
MLC Election Vijayapura congress BJP Try To get victory from Unanimous choice in Vijayapura snr
Author
Bengaluru, First Published Nov 25, 2021, 7:57 AM IST

 ವರದಿ :  ರುದ್ರಪ್ಪ ಆಸಂಗಿ 

ವಿಜಯಪುರ (ನ.25):  ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ (MLC Election) ನಡೆಯುವ ಚುನಾವಣೆ  ಕಾವು ಪಡೆದುಕೊಂಡಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ. ಆದರೆ, ವಿಜಯಪುರ- ಬಾಗಲಕೋಟೆ (Vijayapura - Bagalkote) ದ್ವಿಸದಸ್ಯ ಕ್ಷೇತ್ರದಲ್ಲಿನ ಲೆಕ್ಕಾಚಾರವೇ ಬೇರೆಯಾಗಿದೆ. ಕಾಂಗ್ರೆಸ್‌ (Congress), ಬಿಜೆಪಿ (BJP) ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲು ತೆರೆಮರೆಯ ಕಸರತ್ತು ಆರಂಭಗೊಂಡಿದೆ. ಡಿ.10ರಂದು ನಡೆಯಲಿರುವ ವಿಧಾನ ಪರಿಷತ್‌ ಚುನಾವಣೆಗೆ ವಿಜಯಪುರ-ಬಾಗಲಕೋಟೆ ದ್ವಿ ಸದಸ್ಯತ್ವ ಕ್ಷೇತ್ರಕ್ಕೆ ಒಟ್ಟು 13 ಜನರು 19 ನಾಮಪತ್ರ ಸಲ್ಲಿಸಿದ್ದರು. ಆದರೆ, ನಾಮಪತ್ರ ಪರಿಶೀಲನೆ ವೇಳೆ ಪಕ್ಷೇತರ ಅಭ್ಯರ್ಥಿ ನಾಮಪತ್ರ (Nomination) ತಿರಸ್ಕೃತಗೊಂಡಿದ್ದು, 12 ಜನರು ಈಗ ಕಣದಲ್ಲಿ ಉಳಿದುಕೊಂಡಿದ್ದಾರೆ. ಈ ಪೈಕಿ ಕಾಂಗ್ರೆಸ್‌, ಬಿಜೆಪಿಯಿಂದ (BJP) ಒಬ್ಬ ಅಭ್ಯರ್ಥಿ ಉಳಿದ 10 ಜನರು ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ 10 ಜನ ಪಕ್ಷೇತರರನ್ನು ಕಣದಿಂದ ಹಿಂದಕ್ಕೆ ಸರಿಸಿ, ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡುವ ಕಸರತ್ತು ತೆರೆಮರೆಯಲ್ಲಿ ಗಂಭೀರವಾಗಿ ನಡೆಯುತ್ತಿದೆ.

ಏನೆಲ್ಲಾ ತಂತ್ರಗಳನ್ನು ಮಾಡುತ್ತಿದ್ದಾರೆ?:

ಅಭ್ಯರ್ಥಿ ಗುರು ಲಿಂಗಪ್ಪ ಅಂಗಡಿ ಅವರು ಬಿಜೆಪಿಯವರಾಗಿದ್ದು (BJP), ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ ಅವರನ್ನು ಕಣದಿಂದ ಹಿಂದೆ ಸರಿಸಲು ಬಿಜೆಪಿ ನಾಯಕರು ಈಗಾಗಲೇ ಅಂಗಡಿ ಅವರ ಮನವೊಲಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಉಳಿದಂತೆ 9 ಜನ ಪಕ್ಷೇತರ ಅಭ್ಯರ್ಥಿಗಳಲ್ಲಿ 6 ಜನರು ವಿಜಯಪುರ (Vijayapura) ಜಿಲ್ಲೆಯವರಾಗಿದ್ದಾರೆ. ಹಾಗಾಗಿ ವಿಜಯಪುರ ಕಾಂಗ್ರೆಸ್‌ ನಾಯಕರು ಈ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸಲು ಶತಾಯ ಗತಾಯ ಶ್ರಮಿಸುತ್ತಿದ್ದಾರೆ. ಬಿಜೆಪಿಗಿಂತ ಕಾಂಗ್ರೆಸ್‌ (congress) ಪಕ್ಷದಲ್ಲಿಯೇ ಈ ಚಟುವಟಿಕೆ ನಡೆಯುತ್ತಿದ್ದು, ಹೆಚ್ಚಾಗಿ ಇದು ಗಮನ ಸೆಳೆಯುತ್ತಿದೆ.

10 ಜನ ಪಕ್ಷೇತರ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸುವುದು ಎಂದರೆ ಸಿಪ್ಪೆ ಸುಲಿದಷ್ಟು ಸುಲಭವಲ್ಲ. ಆದ್ದರಿಂದ ಕಾಂಗ್ರೆಸ್‌, ಬಿಜೆಪಿ (BJP) ನಾಯಕರು 10 ಜನ ಪಕ್ಷೇತರ ಅಭ್ಯರ್ಥಿಗಳನ್ನು ಮನವೊಲಿಸಿ ಕಣದಿಂದ ಹಿಂದೆ ಸರಿಸುವಲ್ಲಿ ಯಶಸ್ವಿಯಾದರೆ ವಿಜಯಪುರ-ಬಾಗಲಕೋಟೆ ದ್ವಿ ಸದಸ್ಯ ವಿಧಾನ ಪರಿಷತ್‌ ಕ್ಷೇತ್ರ ಅವಿರೋಧ ಆಯ್ಕೆ ಆಗುವುದರಲ್ಲಿ ಅನುಮಾನವಿಲ್ಲ. ನ.26ರಂದು ನಾಮಪತ್ರ ಹಿಂದೆ ಪಡೆಯಲು ಕೊನೆಯ ದಿನವಾಗಿದ್ದು, ಅಲ್ಲಿಯವರೆಗೆ ಯಾವ ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುತ್ತಾರೆ ಎಂಬುವುದು ಕುತೂಹಲ ಮೂಡಿಸಿದೆ. ಈಗಾಗಲೇ ಕೆಲವು ಪಕ್ಷೇತರ ಅಭ್ಯರ್ಥಿಗಳನ್ನು ಸಂಪರ್ಕಿಸಿರುವ ಕಾಂಗ್ರೆಸ್‌ ನಾಯಕರು ಅವರ ಮನವೊಲಿಸುವತ್ತ ಹೆಜ್ಜೆ ಹಾಕಿದ್ದಾರೆ. ಪ್ರಚಾರಕ್ಕಿಂತ ಇದಕ್ಕೆ ಹೆಚ್ಚಿನ ಗಮನ ಹರಿಸಿದ್ದಾರೆ ಎಂದು ಮೂಲಗಳು ಕೂಡ ಹೇಳಿವೆ. ಮಾತ್ರವಲ್ಲ, ನಾಮಪತ್ರ ಸಲ್ಲಿಕೆ ನಂತರ ನಡೆದ ಕಾಂಗ್ರೆಸ್‌ ಸಭೆಯಲ್ಲಿಯೂ ಈ ವಿಚಾರ ಕೂಡ ಮುನ್ನೆಲೆಗೆ ಬಂದಿತ್ತು ಎಂದು ಹೇಳಲಾಗುತ್ತಿದೆ.

ಅವಿರೋಧವಾದರೆ ರಾಜ್ಯದಲ್ಲೇ ಮೊದಲು:

ಪಕ್ಷೇತರರ ಮನವೊಲಿಸಿದರೆ, ಕೊನೆಗೆ ಕಣದಲ್ಲಿ ಉಳಿಯುವುದು ಕಾಂಗ್ರೆಸ್‌, ಬಿಜೆಪಿ (BJP) ಅಭ್ಯರ್ಥಿಗಳು ಮಾತ್ರ. ದ್ವಿಸದಸ್ಯ ಸ್ಥಾನ ಇರುವುದರಿಂದ ಚುನಾವಣಾ ಆಯೋಗ ಇಬ್ಬರೇ ಅಭ್ಯರ್ಥಿಗಳು ಇರುವುದರಿಂದ ಅವಿರೋಧ ಆಯ್ಕೆ ಘೋಷಿಸಬಹುದು. ಹೀಗಾದಲ್ಲಿ ಇದು ರಾಜ್ಯದಲ್ಲೇ ಕಾಂಗ್ರೆಸ್‌, ಬಿಜೆಪಿ ಪಕ್ಷಗಳು ಮೊದಲ ಬಾರಿಗೆ ಅವಿರೋಧವಾಗಿ ಆಯ್ಕೆಯಾದ ಕೀರ್ತಿಗೂ ಪಾತ್ರವಾಗುತ್ತವೆ. ಒಂದು ವೇಳೆ ಚುನಾವಣೆ ನಡೆದರೂ ಕೂಡ ಈಗ ಕಾಂಗ್ರೆಸ್‌- ಬಿಜೆಪಿ ನಡುವೆಯೇ ನೇರ ಹೋರಾಟ ನಡೆಯಲಿದೆ.

ಅವಿರೋಧ ಆಯ್ಕೆಯಾದರೆ ದುಂದು ವೆಚ್ಚ, ಸಮಯದ ಅಪವ್ಯಯ ತಪ್ಪಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂಬ ವಿಚಾರ ಕಾಂಗ್ರೆಸ್‌, ಬಿಜೆಪಿ ನಾಯಕರಲ್ಲಿ ಬಂದಿದೆ. ಹಾಗಾಗಿ ಈಗ ಕಾಂಗ್ರೆಸ್‌, ಬಿಜೆಪಿ ನಾಯಕರು ಅವಿರೋಧ ಆಯ್ಕೆಯತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಈಗ ಆ ನಿಟ್ಟಿನಲ್ಲಿ ಕಾಂಗ್ರೆಸ್‌, ಬಿಜೆಪಿ ಪಕ್ಷದ ನಾಯಕರು ತೆರೆಮರೆಯಲ್ಲಿ ಬಿರುಸಿನ ಪ್ರಯತ್ನ ನಡೆಸಿದ್ದಾರೆ.ಕಾಂಗ್ರೆಸ್‌, ಬಿಜೆಪಿ ನಾಯಕರು ತೆರೆಮರೆಯಲ್ಲಿ 10 ಜನ ಅಭ್ಯರ್ಥಿಗಳನ್ನು ಕಣದಿಂದ ಹಿಂದೆ ಸರಿಸಲು ಭಾರಿ ಕಸರತ್ತು ಮಾಡುತ್ತಿದ್ದಾರೆ.

ವಿಧಾನ ಪರಿಷತ್‌ ಚುನಾವಣೆಯಲ್ಲಿ ಅವಿರೋಧ ಆಯ್ಕೆಗೆ ಪಕ್ಷದ ವಲಯದಲ್ಲಿ ಪ್ರಯತ್ನಿಸಲಾಗುತ್ತಿದೆ. ಎಲ್ಲರ ಮನವೊಲಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆದಿವೆ. ಇದರಲ್ಲಿ ಯಶಸ್ಸು ಕಾಣುವುದು ಬಿಡುವುದು ಪಕ್ಷೇತರ ಅಭ್ಯರ್ಥಿಗಳ ನಿರ್ಧಾರವನ್ನು ಅವಲಂಬಿಸಿದೆ.

-ಸುನೀಲಗೌಡ ಪಾಟೀಲ, ವಿಧಾನ ಪರಿಷತ್‌ ಚುನಾವಣೆ ಕಾಂಗ್ರೆಸ್‌ ಅಭ್ಯರ್ಥಿ

ಚುನಾವಣೆಯಲ್ಲಿ ಸ್ಪರ್ಧಿಸುವುದು ಎಲ್ಲರ ಸಂವಿಧಾನ ಬದ್ಧ ಹಕ್ಕು. ಕಣದಿಂದ ಹಿಂದೆ ಸರಿಯುವಂತೆ ತಾವು ಯಾವ ಅಭ್ಯರ್ಥಿಗಳ ಮೇಲೆ ಒತ್ತಡ ಹೇರುವುದಿಲ್ಲ. ಅವಿರೋಧ ಆಯ್ಕೆ ಬಗ್ಗೆ ತಮಗೆ ಯಾವ ಮಾಹಿತಿ ಇಲ್ಲ.

-ಪಿ.ಎಚ್‌.ಪೂಜಾರಿ ವಿಧಾನ ಪರಿಷತ್‌ ಚುನಾವಣೆ ಬಿಜೆಪಿ ಅಭ್ಯರ್ಥಿ

ತಮ್ಮ ಪಕ್ಷದ ಗುರುಲಿಂಗಪ್ಪ ಅಂಗಡಿ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮನವೊಲಿಸಲಾಗುತ್ತಿದೆ. ಉಳಿದಂತೆ ಬಹುತೇಕ ಅಭ್ಯರ್ಥಿಗಳು ತಮ್ಮ ಪಕ್ಷಕ್ಕೆ ಸಂಬಂಧಿಸಿದ್ದವರಲ್ಲ. ಕಾಂಗ್ರೆಸ್‌ ಪಕ್ಷದವರು ಅವರ ಮನವೊಲಿಸಿ ಕಣದಿಂದ ಹಿಂದೆ ಸರಿಸಿದರೆ ಬಹಳ ಅನುಕೂಲ. ಒಂದೊಮ್ಮೆ ಚುನಾವಣೆ ನಡೆದರೂ ತಾವು ಚುನಾವಣೆಗೆ ಸನ್ನದ್ಧರಾಗಿದ್ದೇವೆ.

-ಆರ್‌.ಎಸ್‌. ಪಾಟೀಲ ಕೂಚಬಾಳ, ಜಿಲ್ಲಾ ಬಿಜೆಪಿ ಅಧ್ಯಕ್ಷ ವಿಜಯಪುರ

ಕಾಂಗ್ರೆಸ್‌, ಬಿಜೆಪಿ ಅಭ್ಯರ್ಥಿಗಳ ಅವಿರೋಧ ಆಯ್ಕೆಗಾಗಿ ಪಕ್ಷೇತರ ಅಭ್ಯರ್ಥಿಗಳನ್ನು ಕಣದಿಂದ ನಾಮಪತ್ರ ಹಿಂಪಡೆಯುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ಕಣದಿಂದ ಹಿಂದೆ ಸರಿಯಲು ಮನವೊಲಿಸಲಾಗುತ್ತಿದೆ. ಪಕ್ಷೇತರ ಅಭ್ಯರ್ಥಿಗಳ ತೀರ್ಮಾನವೇ ಅಂತಿಮವಾಗಿದೆ.

-ರಾಜು ಆಲಗೂರ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ, ವಿಜಯಪುರ

ಕಾಂಗ್ರೆಸ್‌, ಬಿಜೆಪಿದವರು ತಮ್ಮನ್ನು ಕಣದಿಂದ ಹಿಂದೆ ಸರಿಯುವಂತೆ ಮನವೊಲಿಸಲು ಸಂಪರ್ಕಿಸಿದ್ದಾರೆ. ತಾವು ಯಾವುದೇ ಕಾರಣಕ್ಕೂ ಚುನಾವಣೆ ಕಣದಿಂದ ಹಿಂದೆ ಸರಿಯುವುದಿಲ್ಲ. ಸೋಲು ಗೆಲುವು ಯಾರದ್ದೇ ಆಗಲಿ. ಚುನಾವಣೆ ನಡೆಯಬೇಕು.

-ಮಲ್ಲಿಕಾರ್ಜುನ ಲೋಣಿ, ವಿಧಾನ ಪರಿಷತ್‌ ಚುನಾವಣೆ ಪಕ್ಷೇತರ ಅಭ್ಯರ್ಥಿ

ಕಾಂಗ್ರೆಸ್‌, ಬಿಜೆಪಿ ನಾಯಕರು ಅವಿರೋಧ ಆಯ್ಕೆಗೆ ಸಹಕಾರ ನೀಡಬೇಕು. ಆ ಕಾರಣಕ್ಕಾಗಿ ಕಣದಿಂದ ಹಿಂದೆ ಸರಿಯುವಂತೆ ಮನವೊಲಿಸುತ್ತಿದ್ದಾರೆ. ಆದರೆ ತಾವು ಕಣದಿಂದ ಹಿಂದೆ ಸರಿಯುವುದಿಲ್ಲ.

-ಕಾಂತು ಇಂಚಗೇರಿ, ವಿಧಾನ ಪರಿಷತ್‌ ಚುನಾವಣೆ ಪಕ್ಷೇತರ ಅಭ್ಯರ್ಥಿ

ಸ್ಥಳೀಯ ಸಂಸ್ಥೆಗಳಿಂದ ವಿಜಯಪುರ-ಬಾಗಲಕೋಟೆ ದ್ವಿ ಸದಸ್ಯ ವಿಧಾನ ಪರಿಷತ್‌ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಉದ್ದೇಶದಿಂದ ಯಾವುದೇ ಪಕ್ಷದವರಾಗಲಿ ಪಕ್ಷೇತರ ಅಭ್ಯರ್ಥಿಗಳ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವ ಬೀರುವುದು ಕಾನೂನು ಬಾಹಿರವಾಗುತ್ತದೆ. ಯಾವುದೇ ಒಬ್ಬ ಪಕ್ಷೇತರ ಅಭ್ಯರ್ಥಿಗಳು ಈ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳ ಸಮೇತ ನಿರ್ದಿಷ್ಟದೂರು ಸಲ್ಲಿಸಿದರೆ ರಾಜ್ಯ ಚುನಾವಣೆ ಆಯೋಗಕ್ಕೆ ವರದಿ ಸಲ್ಲಿಸಿ ಮುಂದಿನ ಜರುಗಿಸಲಾಗುವುದು.

-ಪಿ.ಸುನೀಲಕುಮಾರ, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ವಿಜಯಪುರ

Follow Us:
Download App:
  • android
  • ios