Asianet Suvarna News Asianet Suvarna News

Council Election: ಮೈಸೂರಲ್ಲಿ ತ್ರಿಕೋನ ಹೋರಾಟಕ್ಕೆ ಅಖಾಡ ಸಜ್ಜು, ವಾಟಾಳ್ ಸಹ ಕಣದಲ್ಲಿ

  •  ನಿರೀಕ್ಷೆಯಂತೆ ತ್ರಿಕೋನ ಹೋರಾಟಕ್ಕೆ ಮೈಸೂರು ಕಣ ಸಜ್ಜು  
  •  ಅಭ್ಯರ್ಥಿಗಳು ತಮ್ಮ ತಮ್ಮ ಪಕ್ಷದ ನಾಯಕರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ನಾಮಪತ್ರ 
  • ಗೆಲುವಿಗಾಗಿ ಹೋರಾಟ ನಡೆಯುವುದು ಈ ಮೂರು ಪಕ್ಷಗಳ ನಡುವೆ
MLC Election Fight Between 3 Parties in Mysuru constituency snr
Author
Bengaluru, First Published Nov 24, 2021, 3:01 PM IST

ವರದಿ :  ಅಂಶಿ ಪ್ರಸನ್ನಕುಮಾರ್‌

 ಮೈಸೂರು (ನ.24):  ಮೈಸೂರು (Mysuru), ಚಾಮರಾಜನಗರ (Chamarajanagar) ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ನಿರೀಕ್ಷೆಯಂತೆಯೇ ಬಿಜೆಪಿಯ (BJP) ಆರ್‌. ರಘು, ಕಾಂಗ್ರೆಸ್‌ನ (Congress) ಡಾ.ಡಿ. ತಿಮ್ಮಯ್ಯ ಹಾಗೂ ಜೆಡಿಎಸ್‌ನ ಸಿ.ಎನ್‌. ಮಂಜೇಗೌಡ ಅವರ ನಡುವೆ ತ್ರಿಕೋನ ಹೋರಾಟಕ್ಕೆ ಕಣ ಸಜ್ಜಾಗಿದೆ.  ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಮಂಗಳವಾರ ಈ ಮೂವರು ಅಭ್ಯರ್ಥಿಗಳು ತಮ್ಮ ತಮ್ಮ ಪಕ್ಷದ ನಾಯಕರೊಂದಿಗೆ ಜಿಲ್ಲಾಧಿಕಾರಿ (DC) ಕಚೇರಿಗೆ ಆಗಮಿಸಿ, ನಾಮಪತ್ರ ಸಲ್ಲಿಸಿದ್ದಾರೆ. ನ.24 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ವಾಪಸಾತಿಗೆ ನ.26 ಕೊನೆಯ ದಿನ. ಮಾಜಿ ಶಾಸಕ ವಾಟಾಳ್‌ ನಾಗರಾಜ್‌ Vatal nagarj) ಸೇರಿದಂತೆ ಇನ್ನೂ ಕೆಲವರು ನಾಮಪತ್ರ ಸಲ್ಲಿಸಿದ್ದರೂ ಗೆಲುವಿಗಾಗಿ ಹೋರಾಟ ನಡೆಯುವುದು ಈ ಮೂರು ಪಕ್ಷಗಳ ನಡುವೆಯೇ. ಏಕೆಂದರೆ ಇವರನ್ನು ಚುನಾಯಿತ ಪ್ರತಿನಿಧಿಗಳು ಆಯ್ಕೆ ಮಾಡುತ್ತಾರೆ.

ಬಿಜೆಪಿಯು  (BJP) ರಘು ಕೌಟಿಲ್ಯ ಅವರ ಹೆಸರನ್ನು ನ.20 ರಂದೇ ಪ್ರಕಟಿಸಿತ್ತು. ಕಾಂಗ್ರೆಸ್‌ ಡಾ.ಡಿ. ತಿಮ್ಮಯ್ಯ ಅವರ ಹೆಸರನ್ನು ನ.22 ರಂದು ಪ್ರಕಟಿಸಿತು. ಜೆಡಿಎಸ್‌ (JDS) ಅಧಿಕೃತವಾಗಿ ಇವತ್ತು ಪ್ರಕಟಿಸಿತು.

ಮೈಸೂರು- ಚಾಮರಾಜನಗರ (Chamarajanagar) ದ್ವಿಸದಸ್ಯ ಕ್ಷೇತ್ರದಿಂದ ಇಬ್ಬರು ಹಾಲಿ ಸದಸ್ಯರು ಸ್ಪರ್ಧಿಸುತ್ತಿಲ್ಲ. ಜೆಡಿಎಸ್‌ನ  ಸಂದೇಶ್‌ ನಾಗರಾಜ್‌  (Sandesh Nagaraj) ಹಾಗೂ ಕಾಂಗ್ರೆಸ್‌ನ ಆರ್‌. ಧರ್ಮಸೇನ ಅವರಿಗೆ ಆಯಾ ಪಕ್ಷಗಳು ಟಿಕೆಟ್‌ (Ticket) ನೀಡಿಲ್ಲ. ಸಂದೇಶ್‌ ನಾಗರಾಜ್‌ ಕಳೆದೆರಡು ಬಾರಿಯಿಂದ ಅಂದರೆ 12 ವರ್ಷಗಳಿಂದ ಸದಸ್ಯರಾಗಿದ್ದರು. ಧರ್ಮಸೇನ ಒಂದು ಉಪ ಚುನಾವಣೆ (By Election) ಮತ್ತು ಒಂದು ಸಾರ್ವತ್ರಿಕ ಚುನಾವಣೆ ಸೇರಿ ಎಂಟೂವರೆ ವರ್ಷ ಸದಸ್ಯರಾಗಿದ್ದರು.

ಈ ಕ್ಷೇತದಲ್ಲಿ ಎನ್‌. ಮಂಜುನಾಥ್‌ (N Manjunath) ಅವರಿಗೆ ಮೊದಲ ಬಾರಿಗೆ ಸತತ ಎರಡನೇ ಅವಧಿಗೆ ಟಿಕೆಟ್‌ ನೀಡಲಾಗಿತ್ತು. ಆದರೆ ಅವರು ಸೋತಿದ್ದರು. ಹೀಗಾಗಿ ಈ ಕ್ಷೇತ್ರದಲ್ಲಿ ಸತತ ಎರಡು ಅವಧಿಗೆ ಗೆದ್ದ ಹೆಗ್ಗಳಿಕೆ ಸಂದೇಶ್‌ ನಾಗರಾಜ್‌ ಹಾಗೂ ಧರ್ಮಸೇನ ಅವರದಾಗಿತ್ತು.

ಈ ಬಾರಿ ಕೂಡ ಇಬ್ಬರೂ ಟಿಕೆಟ್‌ (Ticket) ಆಕಾಂಕ್ಷಿಗಳಾಗಿದ್ದರು. ಧರ್ಮಸೇನ ಕಾಂಗ್ರೆಸ್‌ನಿಂದ ಟಿಕೆಟ್‌ ಕೇಳಿದ್ದರು. ಆದರೆ ಕಳೆದ 33 ವರ್ಷಗಳಿಂದಲೂ ಕಾಂಗ್ರೆಸ್‌ ಪಕ್ಷ ದಲಿತದಲ್ಲಿ ಎಡಗೈನ ಸಮೂದಾಯದ ಟಿ.ಎನ್‌. ನರಸಿಂಹಮೂರ್ತಿ, ಸಿ. ರಮೇಶ್‌, ಎನ್‌. ಮಂಜುನಾಥ್‌ ಹಾಗೂ ಆರ್‌. ಧರ್ಮಸೇನ ಅವರಿಗೆ ಟಿಕೆಟ್‌ ನೀಡಿತ್ತು. ಇವರೆಲ್ಲಾ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದರು. ಪದೇ ಪದೇ ಒಂದೇ ಕುಟುಂಬಕ್ಕೆ ಟಿಕೆಟ್‌ ಏಕೆ? ಎಂಬ ಅಪಸ್ಪರ ಕೇಳಿ ಬಂದಿದ್ದರಿಂದ ಈ ಬಾರಿ ಕಾಂಗ್ರೆಸ್‌ ತನ್ನ ಸಂಪ್ರದಾಯದಂತೆ ಎಡಗೈ ಸಮೂದಾಯದ ಡಾ.ಡಿ. ತಿಮ್ಮಯ್ಯ ಅವರಿಗೆ ಮಣೆ ಹಾಕಿದೆ. ಅವರು ಆರೋಗ್ಯ ಇಲಾಖೆಯ ನಿವೃತ್ತ ಯೋಜನಾ ನಿರ್ದೇಶಕರು. ದಾಸ್ತಿ ನರ್ಸಿಂಗ್‌ ಕಾಲೇಜು ನಡೆಸುತ್ತಾರೆ. ಹರಳಯ್ಯ ಟ್ರಸ್ಟ್‌ ಮತ್ತಿತರವುಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಕೆಪಿಸಿಸಿ ರಾಜ್ಯ ಕಾರ್ಯದರ್ಶಿಯೂ ಆಗಿದ್ದರು. ಬಿಜೆಪಿ ಹಾಗೂ ಜೆಡಿಎಸ್‌ನಲ್ಲಿ ಕೂಡ ಇದ್ದರು.

ಪಕ್ಷದ ಹೈಕಮಾಂಡ್‌ನ ಈ ನಿರ್ಧಾರವನ್ನು ಧರ್ಮಸೇನ ಒಪ್ಪಿಕೊಂಡು, ಕಣದಿಂದ ದೂರ  

ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ವಿರಸಕಟ್ಟಿಕೊಂಡು ಪಕ್ಷದ ಚಟುವಟಿಕೆಗಳಿಂದ ದೂರವಿದ್ದ ಸಂದೇಶ್‌ ನಾಗರಾಜ್‌ (Sandesh nagaraj) ಈ ಬಾರಿ ಬಿಜೆಪಿ ಟಿಕೆಟ್‌ ನಿರೀಕ್ಷೆಯಲ್ಲಿದ್ದರು. ಆದರೆ ಬಿಜೆಪಿ ಕಳೆದ ಬಾರಿ ಸೋತಿದ್ದ, ಹಾಲಿ ಡಿ. ದೇವರಾಜ ಅರಸು (Devraj arasu) ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್‌. ರಘು ಅವರಿಗೆ ಮತ್ತೊಮ್ಮೆ ಟಿಕೆಟ್‌ ನೀಡಿದೆ. ಇಲ್ಲಿ ಮಾಜಿ ಸಿಎಂ ಬಿ.ಎಸ್‌. ಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪ್ರಭಾವ ಕೆಲಸ ಮಾಡಿದೆ.

ಬಿಜೆಪಿ ಟಿಕೆಟ್‌ ತಪ್ಪಿದ ನಂತರ ಸಂದೇಶ್‌ ನಾಗರಾಜ್‌ ಅವರು ಮತ್ತೆ ಜೆಡಿಎಸ್‌ (JDS) ಬಾಗಿಲು ತಟ್ಟಿದರು. ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದರು. ಆದರೆ ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ, ಎಚ್‌ಡಿಕೆ ವಿರುದ್ಧ ನಡೆಸಿದ್ದ ವಾಗ್ವಾಳಿ ಅವರಿಗೆ ಮುಳುವಾಯಿತು.

ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ತಾಪಂ ಮಾಜಿ ಅಧ್ಯಕ್ಷ ಸಿ.ಎನ್‌. ಮಂಜೇಗೌಡರನ್ನು ಪಕ್ಷಕ್ಕೆ ಸೇರಿಸಿಕೊಂಡು, ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ. ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷರೂ ಆದ ಮಂಜೇಗೌಡ 2008 ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು.

ಮೈಸೂರು, ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಲ್ಲಿ ಈ ಬಾರಿ 6792 ಮಂದಿ ಮತದಾರರು

ಈ ಪಾಕಿ 3275 ಪುರುಷರು ಹಾಗೂ 3517 ಮಹಿಳೆಯರು. ಮೈಸೂರು ಜಿಲ್ಲೆಯಲ್ಲಿ 4517, ಚಾಮರಾಜನಗರ ಜಿಲ್ಲೆಯಲ್ಲಿ 2275 ಮತದಾರರು ಇದ್ದಾರೆ. ಈ ಬಾರಿ ಜಿಲ್ಲಾ ಹಾಗೂ ತಾಪಂ ಸದಸ್ಯರು ಇರುವುದಿಲ್ಲ. ಅವರ ಅವಧಿ ಮುಗಿದಿದ್ದು, ಚುನಾವಣೆ ನಡೆದಿಲ್ಲ. ಗ್ರಾಪಂ, ಪಪಂ, ಪುರಸಭೆ, ನಗರಸಭೆ, ನಗರಪಾಲಿಕೆ ಸದಸ್ಯರು (ಇವರಲ್ಲಿ ಸಂಸದರು, ವಿಧಾನಸಭೆ, ವಿಧಾನ ಪರಿಷತ್ತು ಸದಸ್ಯರು ಸೇರುತ್ತಾರೆ) ಮತ ಚಲಾಯಿಸುತ್ತಾರೆ. ತಾಲೂಕುವಾರು ಮತದಾರರ ವಿವರ ಈ ಕೆಳಕಂಡಂತಿದೆ.

ಪಿರಿಯಾಪಟ್ಟಣ- 576, ಕೆ.ಆರ್‌. ನಗರ- 583, ಹುಣಸೂರು- 634, ಮೈಸೂರು- 589, ಎಚ್‌.ಡಿ. ಕೋಟೆ- 431, ಸರಗೂರು- 204, ನಂಜನಗೂಡು- 843,

ಟಿ. ನರಸೀಪುರ- 657, ಗುಂಡ್ಲುಪೇಟೆ- 521, ಚಾಮರಾಜನಗರ- 778, ಯಳಂದೂರು- 205, ಕೊಳ್ಳೇಗಾಲ- 335, ಹನೂರು- 436

Follow Us:
Download App:
  • android
  • ios