ಬೆಂಗಳೂರಿನ ಔಟರ್ ರಿಂಗ್ ರೋಡ್ನಲ್ಲಿ ಅಕ್ಟೋಬರ್ನಿಂದ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಲಿದ್ದು, ತೀವ್ರ ಸಂಚಾರ ದಟ್ಟಣೆ ಉಂಟಾಗಲಿದೆ. ಇದಕ್ಕೆ ಪರಿಹಾರವಾಗಿ ಸರ್ಕಾರವು ಐಟಿ ಕಂಪನಿಗಳಿಗೆ ಹೈಬ್ರಿಡ್ ಕೆಲಸದ ಮಾದರಿಗೆ ಮನವಿ ಮಾಡಿದೆ.
ಭಾರತದ ಐಟಿ ರಾಜಧಾನಿ ಬೆಂಗಳೂರಿನ ಔಟರ್ ರಿಂಗ್ ರೋಡು ಕಾರಿಡಾರ್ನಲ್ಲಿ ಪ್ರಯಾಣಿಸಿರುವ ಐಟಿ ಉದ್ಯೋಗಿಗಳು ಹಾಗೂ ನಗರ ವಾಹನ ಸವಾರರಿಗೆ ಶೀಘ್ರವೇ ಟ್ರಾಫಿಕ್ ಬಿಸಿ ಹೆಚ್ಚಾಗಲಿದೆ. ಏಕೆಂದರೆ ಗ್ರೇಟರ್ ಬೆಂಗಳೂರು ಅಥಾರಿಟಿ ಈ ಬ್ಯುಸಿ ಮಾರ್ಗದಲ್ಲಿ ವೈಟ್ ಟ್ಯಾಪಿಂಗ್ ಕೆಲಸವನ್ನು ಶುರು ಮಾಡಲಾಗಿದೆ. ಅಕ್ಟೋಬರ್ ತಿಂಗಳಿನಿಂದ ಆರಂಭವಾಗಲಿರುವ ಈ ಕಾಮಗಾರಿಯನ್ನು 2027ರ ಜನವರಿ ವೇಳೆಗೆ ಮುಕ್ತಾಯ ಮಾಡಲು ಯಾವುದೇ ವಿರಾಮ ಇಲ್ಲದೇ ಕೆಲಸ ಮಾಡಬೇಕು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ಐಟಿ ಕಂಪನಿಗಳೊಂದಿಗೆ ಸರ್ಕಾರ ಮಾತುಕತೆ
ನಿರ್ಮಾಣ ಕಾಮಗಾರಿ ಆರಂಭವಾಗುವ ಕಾರಣ ಈ ಮಾರ್ಗದಲ್ಲಿ ಪ್ರಯಾಣ ಮಾಡುವ ವಾಹನ ಸವಾರರಿಗೆ ಟ್ರಾಫಿಕ್ ಸಮಸ್ಯೆ ತಪ್ಪಿದಲ್ಲ. ಈ ಕಾರಣದಿಂದಲೇ ಔಟರ್ ರಿಂಗ್ ರೋಡ್ ಮಾರ್ಗದಲ್ಲಿರುವ ಅಂತರಾಷ್ಟ್ರೀಯ ಕಂಪನಿಗಳೊಂದಿಗೆ ಮಾತುಕತೆ ನಡೆಸಿರುವ ಸರ್ಕಾರ, ಅರ್ಧದಷ್ಟು ಉದ್ಯೋಗಗಳಿಗೆ ವರ್ಕ್ ಫರ್ಮ್ ಹೋಮ್ ನೀಡಲು ಅಥವಾ ಹೈಬ್ರೀಡ್ ಮಾದರಿಯನ್ನು ಅನುಸರಿಸಲು ಮನವಿ ಮಾಡಿದೆ. ಆದರೆ ಯಾವುದೇ ಪೂರ್ವ ಸಿದ್ಧತೆ ಯೋಜನೆ ಇಲ್ಲದೆ, ತಕ್ಷಣವೇ ಆರಂಭಿಸಲು ಸಾಧ್ಯವೇ ಎಂಬ ಬಗ್ಗೆ ಹಿರಿಯ ಟ್ರಾಫಿಕ್ ಪೊಲೀಸರು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಟ್ರಾಫಿಕ್ ಪೊಲೀಸರ ಸಲಹೆ ಏನು?
ಟ್ರಾಫಿಕ್ ಪೊಲೀಸರ ಮಾಹಿತಿಯ ಅನ್ವಯ, ಸಾಮಾನ್ಯವಾಗಿ ಈ ಮಾರ್ಗದಲ್ಲಿ ಗಂಟೆಗೆ 1200 ರಿಂದ 1300 ಪ್ಯಾಸಿಂಜರ್ ಕಾರ್ ಯೂನಿಟ್ ಪ್ರಯಾಣಿಸುವುದು ಉತ್ತಮ ಸಾಮರ್ಥ್ಯವಾಗಿ ಪರಿಗಣಿಸಬಹುದು. ಆದರೆ ಔಟರ್ ರಿಂಗ್ ರೋಡ್ ಮಾರ್ಗದಲ್ಲಿ ಗಂಟೆಗೆ ಸುಮಾರು 2,800 ಪ್ಯಾಸಿಂಜರ್ ಕಾರ್ ಯೂನಿಟ್ ಪ್ರಯಾಣಿಸುತ್ತಿದ್ದು, ನೀವು ಈ ರಸ್ತೆಗಳ ಮೇಲಿನ ಒತ್ತಡವನ್ನು ಗಮನಿಸಬಹುದು. ಈಗಾಗಲೇ ಕಿಕ್ಕಿದಿರುವ ಈ ಮಾರ್ಗದಲ್ಲಿ ವೈಟ್ ಟ್ಯಾಪಿಂಗ್ ಕೆಲಸ ಆರಂಭ ಮಾಡಿದರೆ, ವಾಹನಗಳನ್ನು ನಿಯಂತ್ರಣ ಮಾಡುವುದು ದೊಡ್ಡ ಸವಾಲು ಆಗಲಿದೆ ಎಂದು ಅಂದಾಜು ಮಾಡಿದ್ದಾರೆ.
ಇನ್ನು, ಔಟರ್ ರಿಂಗ್ ರೋಡ್ ಮಾರ್ಗದಲ್ಲಿ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಪರ್ಯಾಯ ಮಾರ್ಗಗಳನ್ನು ಬಳಕೆ ಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದರು. ಆದರೆ ಇದು ಜಾರಿ ಮಾಡೋದು ಕೂಡ ಸವಾಲಿನ ಕೆಲಸವೇ. ಏಕೆಂದರೆ ಇಲ್ಲಿ ಪರ್ಯಾಯ ಮಾರ್ಗಗಳು ಬಹಳ ಸೀಮಿತವಾಗಿದೆ, ನಿರ್ಮಾಣ ಕಾರ್ಯಕ್ಕಾಗಿ ಮುಖ್ಯ ಮಾರ್ಗಗಳನ್ನು ಮುಚ್ಚಿದಾಗ ಅಥವಾ ವಾಹನ ಸಂಚಾರವನ್ನು ನಿರ್ಬಂಧಿಸಿದಾಗ, ವಾಹನಗಳನ್ನು ಬೇರೆಡೆಗೆ ತಿರುಗಿಸಲು ಸಾಕಷ್ಟು ಸ್ಥಳಾವಕಾಶವಿಲ್ಲದಿರುವುದು ಪ್ರಮುಖ ಸಮಸ್ಯೆಯಾಗಿ ಪರಿಣಮಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟ್ರಾಫಿಕ್ ಸಮಸ್ಯೆಗೆ ಸಿಗುತ್ತಾ ಪರಿಹಾರ?
ಇದಕ್ಕೆ ಪರಿಹಾರ ನೀಡುವಂತೆ, 17 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಗದಿತ ಸ್ಥಳಗಳಲ್ಲಿ ಪ್ರಮುಕ ಮಾರ್ಗವನ್ನು ಸರ್ವೀಸ್ ರೋಡ್ನೊಂದಿಗೆ ವಿಲೀನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಏತನ್ಮಧ್ಯೆ, ಈ ಯೋಜನೆಯಲ್ಲಿ ಸೇರಿಸಲಾದ 18 ಪ್ರವೇಶ-ನಿರ್ಗಮನ ಪಾಯಿಂಟ್ಗಳನ್ನು 13ರ ಕಾಮಗಾರಿ ಈಗಾಗಲೇ ಪೂರ್ಣಗೊಂಡಿದೆ. ಆದ್ದರಿಂದ ಈ ಎಲ್ಲಾ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಈಗಾಗಲೇ ಈ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ ವೇಗವಾಗಿ ನಡೆಯತ್ತಿರುವ ಕಾರಣ ಇವು ಪೂರ್ಣಗೊಂಡ ಬಳಿಕವೇ ಹೊಸ ಕಾಮಗಾರಿ ಆರಂಭ ಮಾಡಲು ಸಲಹೆ ನೀಡಿದ್ದಾರೆ. ಒಂದೇ ಬಾರಿಗೆ ವೈಟ್ ಟಾಪಿಂಗ್ ಕೆಲಸವನ್ನು ಕೈಗೆತ್ತಿಕೊಳ್ಳುವುದರಿಂದ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ.
ಇತ್ತ, ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿರುವ ಸರ್ಕಾರದ ನಿರ್ಧಾರಕ್ಕೆ ಐಟಿ ಕಂಪನಿಗಳ ಸಂಘ ಸ್ವಾಗತಿಸಿದೆ. ಆದರೆ ಈ ಕಾರಿಡಾರ್ನಲ್ಲಿ ಅನೇಕ ಕಂಪನಿಗಳು ನವೆಂಬರ್ನಿಂದ ಜನವರಿ ವರೆಗೂ ಮಾತ್ರವೇ ಹೈಬ್ರೀಡ್ ಕೆಲಸದ ವಿಧಾನವನ್ನು ಕಲ್ಪಿಸುತ್ತವೆ ಎಂದು ಸ್ಪಷ್ಟಪಡಿಸಿದೆ.
ಈ ಕುರಿತಂತೆ ಮಾತನಾಡಿದ ಗ್ರೇಟರ್ ಬೆಂಗಳೂರು ಐಟಿ ಕಂಪನಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ಅವರು, ಡಿಸೆಂಬರ್ನಲ್ಲಿ ಹೆಚ್ಚಿನ ಹಬ್ಬಗಳು, ಸಾಲು ಸಾಲು ರಜೆಗಳು ಇದೆ. ಇದರಿಂದ ಹಲವು ಕಂಪನಿಗಳು ಹೈಬ್ರೀಡ್ ಮಾಡೆಲ್ನಲ್ಲಿಯೇ ಕೆಲಸ ಮಾಡುತ್ತವೆ. ಆದ್ದರಿಂದ ಈ ಸಮಯದಲ್ಲಿ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಬಹುದು, ಅಕ್ಟೋಬರ್ ಬದಲು ಡಿಸೆಂಬರ್ನಲ್ಲಿ ಪೂರ್ಣ ಪ್ರಮಾಣದಲ್ಲಿ ಕಾಮಗಾರಿಗಳನ್ನು ನಡೆಸಿದರೆ ಹಲವರಿಗೆ ಅನುಕೂಲ ಆಗಲಿದೆ. ಇದರಿಂದ ಉದ್ಯೋಗಿಗಳಿಗೆ, ಸರ್ಕಾರಕ್ಕೆ, ಸಾಮಾನ್ಯ ಜನರಿಗೂ ಬಹಳ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.


