Asianet Suvarna News Asianet Suvarna News

Mysuru 2015 MLC ಚುನಾವಣೆ : ಸಂದೇಶ್‌, ಧರ್ಮಸೇನ ಪುನಾರಾಯ್ಕೆ,

  • ಮೈಸೂರು, ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ಐದನೇಯ ಸಾರ್ವತ್ರಿಕ ಚುನಾವಣೆ
  • ಜೆಡಿಎಸ್‌ನ ಸಂದೇಶ್‌ ನಾಗರಾಜ್‌ ಹಾಗೂ ಕಾಂಗ್ರೆಸ್‌ನ ಆರ್‌. ಧರ್ಮಸೇನ ಪುನಾರಾಯ್ಕೆಯಾಗುವ ಮೂಲಕ ದಾಖಲೆ
2015 MLC Election Sandesh nagaraj dharmasena victory in Mysuru chamarajanagar snr
Author
Bengaluru, First Published Nov 17, 2021, 11:56 AM IST

ವರದಿ :  ಅಂಶಿ ಪ್ರಸನ್ನಕುಮಾರ್‌

 ಮೈಸೂರು (ನ.17):  ಮೈಸೂರು (Mysuru), ಚಾಮರಾಜನಗರ (Chamarajanagar) ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ಐದನೇಯ ಸಾರ್ವತ್ರಿಕ ಚುನಾವಣೆಯು  2015ರ ಡಿ.27 ರಂದು ನಡೆದು, ಜೆಡಿಎಸ್‌ನ (JDS) ಸಂದೇಶ್‌ ನಾಗರಾಜ್‌ ಹಾಗೂ ಕಾಂಗ್ರೆಸ್‌ನ ಆರ್‌. ಧರ್ಮಸೇನ ಪುನಾರಾಯ್ಕೆಯಾಗುವ ಮೂಲಕ ದಾಖಲೆ ನಿರ್ಮಿಸಿದರು.

1987 ರಿಂದ ಇಲ್ಲಿಯವರೆಗೆ ನಡುವೆ ಮೂರು ವರ್ಷ ಹೊರತುಪಡಿಸಿದರೆ ಐದು ಬಾರಿ ಚುನಾವಣೆಗಳು ನಡೆದಿವೆ. ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ನ (Congress) ಟಿ.ಎನ್‌. ನರಸಿಂಹಮೂರ್ತಿ- ಜನತಾಪಕ್ಷದ ವಿ.ಎಚ್‌. ಗೌಡ, ಎರಡನೇ ಚುನಾವಣೆಯಲ್ಲಿ ಕಾಂಗ್ರೆಸ್‌ ಸಿ. ರಮೇಶ್‌- ಜನತಾದಳದ ವೈ. ಮಹೇಶ್‌, ಮೂರನೇ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎನ್‌. ಮಂಜುನಾಥ್‌- ಜೆಡಿಎಸ್‌ನ ಬಿ. ಚಿದಾನಂದ, ನಾಲ್ಕನೇ ಚುನಾವಣೆಯಲ್ಲಿ ಜೆಡಿಎಸ್‌ನ ಸಂದೇಶ್‌ ನಾಗರಾಜ್‌- ಬಿಜೆಪಿಯ (BJP) ಪ್ರೊ.ಕೆ.ಆರ್‌.ಮಲ್ಲಿಕಾರ್ಜುನಪ್ಪ ಗೆದ್ದಿದ್ದರು. ಮಲ್ಲಿಕಾರ್ಜನಪ್ಪ ಅವರ ರಾಜಿನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಆರ್‌. ಧರ್ಮಸೇನ ಗೆದ್ದಿದ್ದರು.

2010 ರಲ್ಲಿ ನಡೆದ ಚುನಾವಣೆಯಲ್ಲಿ ಮಂಜುನಾಥ್‌ ಅವರಿಗೆ ಎರಡನೇ ಬಾರಿ ಟಿಕೆಟ್‌ ನೀಡಲಾಗಿತ್ತು. ಆದರೆ ಸೋತಿದ್ದರು. ಆದರೆ 2015ರ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌- ಎರಡೂ ಹಾಲಿ ಸದಸ್ಯರಿಗೆ ನೀಡಿದ್ದವು. ಇಬ್ಬರೂ ಪುನಾರಾಯ್ಕೆಯಾದರು.

ಅಭ್ಯರ್ಥಿಗಳು ಪಡೆದಿದ್ದ ಮತಗಳು

ಒಟ್ಟು 7597 ಮತಗಳು ತಲಾವಣೆಯಾಗಿದ್ದವು. ಈ ಪೈಕಿ 427 ತಿರಸ್ಕೃತವಾಗಿದ್ದವು. ನೋಟಾ-10, ಆರ್‌. ಧರ್ಮಸೇನ- 3037, ಸಂದೇಶ್‌ ನಾಗರಾಜ್‌- 2632, ಆರ್‌. ರಘು- 2045, ವಾಟಾಳ್‌ ನಾಗರಾಜ್‌-11, ಅಯೂಬ್‌ಖಾನ್‌- 13 , ಕೆ.ಎಂ. ಪರಶಿವಮೂರ್ತಿ-4, ಪುಟ್ಟಸುಬ್ಬಪ್ಪ - 4, ಮನೋಜ್‌ ಗಗನ್‌- 6

ಕಾಂಗ್ರೆಸ್‌

ಈ ಬಾರಿ ಕೂಡ ಧರ್ಮಸೇನ ಕಾಂಗ್ರೆಸ್‌ ಟಿಕೆಟ್‌ (Congress Ticket) ಆಕಾಂಕ್ಷಿ. ಅವರಲ್ಲದೇ ಜಿಪಂ ಮಾಜಿ ಅಧ್ಯಕ್ಷ ಕೆ. ಮರೀಗೌಡ, ತಾಪಂ ಮಾಜಿ ಅಧ್ಯಕ್ಷ ಸಿ.ಎನ್‌. ಮಂಜೇಗೌಡ, ಮೈಮುಲ್‌ (MYMUL) ನಿರ್ದೇಶಕ ಚಲುವರಾಜು, ಬನ್ನೂರು ಪುರಸಭಾ ಮಾಜಿ ಅಧ್ಯಕ್ಷ ಮುನಾವರ್‌ ಪಾಷ, ಟಿ. ನರಸೀಪುರ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಮಹದೇವ, ತಾಪಂ ಮಾಜಿ ಉಪಾಧ್ಯಕ್ಷ ಮರಯ್ಯ, ಡಾ.ಡಿ. ತಿಮ್ಮಯ್ಯ, ಪ್ರದ್ಯುಮ್ನ ಆಲನಹಳ್ಳಿ ಕೂಡ ಜಿಲ್ಲಾ ಘಟಕದ ಮೂಲಕ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಹಿಳಾ ಘಟಕ ರಾಜ್ಯಾಧ್ಯಕ್ಷ, ಜಿಪಂ ಮಾಜಿ ಅಧ್ಯಕ್ಷ ಡಾ. ಪುಷ್ಪಾ ಅಮರನಾಥ್‌ ನೇರವಾಗಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ.

ಜೆಡಿಎಸ್‌

ಎರಡು ಬಾರಿ ಗೆದಿದ್ದ ಸಂದೇಶ್‌ ನಾಗರಾಜ್‌ (Sandesh nagaraj) ಬಿಜೆಪಿ (BJP) ಕಡೆ ವಾಲಿರುವುದರಿಂದ ಜೆಡಿಎಸ್‌ನಲ್ಲಿ ಜಿಲ್ಲಾಧ್ಯಕ್ಷ ಎನ್‌. ನರಸಿಂಹಮೂರ್ತಿ, ಕೆಆರ್‌. ನಗರ ಮಾಜಿ ಸಚಿವ ಎಸ್‌. ನಂಜಪ್ಪ ಅವರ ಪುತ್ರ ಕೆ.ಎನ್‌. ಬಸಂತ್‌, ಕಳೆದ ಬಾರಿ ವರುಣದಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅಭಿಷೇಕ್‌, ಅಲ್ಪಕಾಲ ಜಂಗಲ್‌ ಲಾಡ್ಜಸ್‌ ಮತ್ತು ರೆಸಾಟ್ಸ್‌ರ್‍ ಅಧ್ಯಕ್ಷರಾಗಿದ್ದ ವಿವೇಕಾನಂದ, ಇತ್ತೀಚೆಗೆ ಪಕ್ಷ ಸೇರಿರುವ ಎಚ್‌.ಡಿ. ಕೋಟೆಯ ಕೃಷ್ಣ ನಾಯಕ ಮೊದಲಾದವರ ಹೆಸರುಗಳಿವೆ. ಮಾಜಿ ಸಚಿವರೂ ಆದ ಕೆ.ಆರ್‌. ನಗರ ಶಾಸಕ ಸಾ.ರಾ. ಮಹೇಶ್‌ ಅವರು ಬಸಂತ್‌ ನಂಜಪ್ಪ ಅವರಲ್ಲದೇ ಮೂಳೆತಜ್ಞ ಡಾ. ಮೆಹಬೂಬ್‌ ಖಾನ್‌, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡರ ಕುಟುಂಬದವರ ಹೆಸರು ಪ್ರಸ್ತಾಪ ಮಾಡಿದ್ದಾರೆ. ಆದರೆ ಈವರೆಗೆ ಯಾವುದೇ ತೀರ್ಮಾನವಾಗಿಲ್ಲ.

ಬಿಜೆಪಿ ಟಿಕೆಟ್‌ಗೆ ಮರಳಿ ಯತ್ನ ಮಾಡುತ್ತಿರುವ ಆರ್‌. ರಘು ಕೌಟಿಲ್ಯ

ಮೈಸೂರು- ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಜನತಾ ಪರಿವಾರ ಎಲ್ಲಾ ಚುನಾವಣೆಗಳಲ್ಲೂ ತಲಾ ಒಂದು ಸ್ಥಾನದಲ್ಲಿ ಗೆದ್ದಿದೆ. ಕಾಂಗ್ರೆಸ್‌ 2010 ರಲ್ಲಿ ಸೋತಿದೆ. ಆಗ ಬಿಜೆಪಿ ಗೆದ್ದಿತ್ತು. ಆದರೆ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಪ್ರಸ್ತುತ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಆರ್‌. ರಘು ಕೌಟಿಲ್ಯ ಶತಾಯಗತಾಯ ಗೆಲ್ಲಲು ಯತ್ನಿದರು. ಜೆಡಿಎಸ್‌ಗೆ ಪ್ರಬಲ ಪೈಪೋಟಿ ನೀಡಿದರು. ಕಳೆದ ಬಾರಿ ಆದ ಸೋಲಿನಿಂದ ಪಾಠ ಕಲಿತಿರುವ ಅವರು ಈ ಬಾರಿ ಅದನ್ನು ಸರಿಪಡಿಸಿಕೊಂಡು ಗೆಲ್ಲುವ ತಂತ್ರ ರೂಪಿಸಿದ್ದಾರೆ. ಅಲ್ಲದೇ ಟಿಕೆಟ್‌ಗಾಗಿ ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ.

ಕಳೆದೆರಡು ಬಾರಿ ಜೆಡಿಎಸ್‌ ಟಿಕೆಟ್‌ ಮೇಲೆ ಗೆದ್ದಿದ್ದ ಸಂದೇಶ್‌ ನಾಗರಾಜ್‌ ಅವರು ಈ ಬಾರಿ ಬಿಜೆಪಿ ಟಿಕೆಟ್‌ ಮೇಲೆ ಕಣ್ಣಿಟ್ಟಿರುವುದು, ಎಂಡಿಎ ಮಾಜಿ ಅಧ್ಯಕ್ಷರಾದ ಸಿ. ಬಸವೇಗೌಡ ಅವರು ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್‌ ಅವರ ಮೂಲಕ ಟಿಕೆಟ್‌ ಪಡೆಯಲು ಯತ್ನಿಸುತ್ತಿರುವುದು ಅವರಿಗೆ ತೊಡಕಾಗಿದೆ.

Follow Us:
Download App:
  • android
  • ios