ಕೊಪ್ಪಳದಲ್ಲಿ 28 ವರ್ಷದ ಯುವಕ ಸಂದೇಶ್, ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಎದೆನೋವು ಕಾಣಿಸಿಕೊಂಡು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಾದಬ್ರಹ್ಮ ಇಡ್ಲಿ ಸೆಂಟರ್ ಮಾಲೀಕರಾಗಿದ್ದ ಇವರು, ಕೋವಿಡ್ ನಂತರ ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳಿಗೆ ಮತ್ತೊಂದು ಸೇರ್ಪಡೆಯಾಗಿದ್ದಾರೆ.

ಕೊಪ್ಪಳ (ಡಿ.5): ಕೋವಿಡ್‌ ನಂತರ ಯುವಕರಲ್ಲಿ ಹೃದಯಾಘಾತ ಹಾಗೂ ಹೃದಯಸ್ತಂಭನದಂಥ ಘಟನೆಗಳು ಹೆಚ್ಚಾಗುತ್ತಿದೆ. ಈ ಬಗ್ಗೆ ವೈದ್ಯರು ಕೂಡ ಎಚ್ಚರಿಕೆ ನೀಡಿದ್ದಾರೆ. ಹಾಗಿದ್ದರೂ ಚಿಕ್ಕವಯಸ್ಸಿನವೇ ಹೃದಯಾಘಾತಕ್ಕೆ ಬಲಿಯಾಗುವುದು ಕಡಿಮೆಯಾಗಿಲ್ಲ. ಲೈಫ್‌ಸ್ಟೈಲ್‌ನಲ್ಲಿನ ದೊಡ್ಡ ಮಟ್ಟದ ಬದಲಾವಣೆಗಳೇ ಇದಕ್ಕೆ ಕಾರಣ ಎಂದು ಹೇಳಿದರೂ, ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುವಾಗಲೇ ಸಾವು ಕಂಡ ಸಾಕಷ್ಟು ವರದಿಗಳು ಆಗಿವೆ.

ಅದೇ ರೀತಿಯ ಪ್ರಕರಣ ಕೊಪ್ಪಳದಲ್ಲಿ ವರದಿಯಾಗಿದ್ದು, 28 ವರ್ಷದ ಯುವಕ, ನಾದಬ್ರಹ್ಮ ಇಡ್ಲಿ ಸೆಂಟರ್‌ ಮಾಲೀಕನಾಗಿರುವ ಸಂದೇಶ್ ಹೃದಯಾಘಾತದಿಂದ ಸಾವು ಕಂಡಿದ್ದಾರೆ. ಜಿಮ್‌ ಮುಗಿಸಿ ಬಂದ ಕೆಲವೇ ನಿಮಿಷದಲ್ಲಿ ಸಂದೇಶ್‌ ಸಾವು ಕಂಡಿದ್ದಾರೆ ಎನ್ನಲಾಗಿದೆ.

ಜಿಮ್‌ನಲ್ಲಿ ವರ್ಕ್‌ಔಟ್‌ ಮಾಡುವಾಗಲೇ ಸಂದೇಶ್‌ಗೆ ಎದೆನೋವು ಕಾಣಿಸಿಕೊಂಡಿತ್ತು. ಇದರಿಂದಾಗಿ ಜಿಮ್‌ನಿಂದ ನೇರವಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಂದೇಶ್‌ ಸಾವು ಕಂಡಿದ್ದಾರೆ. ಕಳೆದ ನಾಲ್ಕು ತಿಂಗಳ ಹಿಂದೆಯಷ್ಟೇ ಕೊಪ್ಪಳದಲ್ಲಿ ನಾದಬ್ರಹ್ಮ ಇಡ್ಲಿ ಸೆಂಟರ್ ಓಪನ್‌ ಮಾಡಿದ್ದರು.