ಶಬರಿಮಲೆ ಯಾತ್ರೆ ಮುಗಿಸಿ ಚಾಮರಾಜನಗರಕ್ಕೆ ಹಿಂತಿರುಗುತ್ತಿದ್ದ ಕನ್ನಡಿಗ ಯಾತ್ರಿಗಳ ಮೇಲೆ ತಮಿಳುನಾಡಿನ ತೂತುಕುಡಿ ಬಳಿ ಸ್ಥಳೀಯರು ದೌರ್ಜನ್ಯ ಎಸಗಿದ್ದಾರೆ. ಯಾತ್ರಿಗಳ ವಾಹನಕ್ಕೆ ಕಟ್ಟಿದ್ದ ಕನ್ನಡ ಬಾವುಟವನ್ನು ತೆಗೆಯುವಂತೆ ಒತ್ತಾಯಿಸಿ ತಮಿಳಿಗರು ಪುಂಡಾಟ ಮೆರೆದಿದ್ದಾರೆ.

ತೂತುಕುಡಿ: ಶಬರಿಮಲಾ ದರ್ಶನ ಮುಗಿಸಿ ತಮಿಳುನಾಡು ಮಾರ್ಗವಾಗಿ ಚಾಮರಾಜನಗರಕ್ಕೆ ವಾಪಾಸ್ಸಾಗುತ್ತಿದ್ದ ಶಬರಿಮಲೆ ಯಾತ್ರಿಗಳ ಮೇಲೆ ತಮಿಳಿಗರು ಪುಂಡಾಟ ಮೆರೆದಿದ್ದಾರೆ. ಕನ್ನಡ ಬಾವುಟವನ್ನು ವಾಹನಕ್ಕೆ ಕಟ್ಟಿಕೊಂಡು ಶಬರಿಮಲೆ ಯಾತ್ರಿಗಳಿಗೆ, ಕನ್ನಡ ಬಾವುಟ ತೆಗೆಯುವಂತೆ ಕೆಲವು ತಮಿಳಿಗರು ಕಿರಿಕ್ ಮಾಡಿದ ಘಟನೆ ನಡೆದಿದೆ.

ಅಷ್ಟಕ್ಕೂ ಆಗಿದ್ದೇನು?

ಹೌದು, ಚಾಮರಾಜನಗರ ತಾಲೂಕಿನ ಹರದನಹಳ್ಳಿ ಗ್ರಾಮದ ಮಾಲಾಧಾರಿಗಳು ಶಬರಿಮಲೆ ಯಾತ್ರೆ ಕೈಗೊಂಡಿದ್ದರು. ಇವರೆಲ್ಲರು ಶಬರಿಮಲೆ ಯಾತ್ರೆ ಮುಗಿಸಿ ತಮಿಳುನಾಡಿನ ಮೂಲಕ ಚಾಮರಾಜನಗರಕ್ಕೆ ವಾಪಾಸ್ಸಾಗುವ ವೇಳೆ ಇಲ್ಲಿನ ತೂತುಕುಡಿ ಬಳಿ ತಮಿಳಿನ ಕೆಲವು ಕಿಡಿಗೇಡಿಗಳು ಉದ್ದಟತನ ಮೆರೆದಿದ್ದು, ಕನ್ನಡಿಗರಿಗೆ ಅಪಮಾನವಾಗುವ ಕೆಲಸ ಮಾಡಿದ್ದಾರೆ. ಕನ್ನಡದ ಬಾವುಟವನ್ನು ತೆಗೆದುಹಾಕಿ ಮುಂದೆ ಸಾಗಬೇಕು ಎಂದು ತಮಿಳಿಗರಿ ಕಿರಿಕ್ ಮಾಡಿದ್ದಾರೆ.

ಇದು ತಮಿಳುನಾಡು. ಇಲ್ಲಿ ಯಾಕೆ ಕನ್ನಡ ಬಾವುಟವನ್ನು ವಾಹನಕ್ಕೆ ಕಟ್ಟಿಕೊಂಡು ಓಡಾಡುತ್ತಿದ್ದೀರ, ಈ ಬಾವುಟವನ್ನು ಇಲ್ಲೇ ಬಿಚ್ಚಿ ಎಂದು ಕೆಲವು ಪುಂಡ ತಮಿಳಿಗರು ಕನ್ನಡಿಗರ ಮೇಲೆ ಕಿರಿಕ್ ಮಾಡಿದ್ದು, ಕೆಲವೊಂದು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ರೀತಿಯ ಘಟನೆ ಇದೇ ಮೊದಲೇನಲ್ಲ!

ಅಂದಹಾಗೆ ಕನ್ನಡಿಗರು ಹಾಗೂ ಕನ್ನಡ ಬಾವುಟಕ್ಕೆ ಅವಮಾನ ಮಾಡುತ್ತಿರುವ ಪ್ರಕರಣ ಇದೇ ಮೊದಲೇನಲ್ಲ. ಎರಡು ತಿಂಗಳ ಹಿಂದೆಯೂ ಅಯ್ಯಪ್ಪ ಮಾಲಾಧಾರಿಗಳ ಮೇಲೆ ಕನ್ನಡ ಬಾವುಟ ತೆರವು ಮಾಡುವಂತೆ ಕೆಲವು ತಮಿಳಿಗರು ಮಾಲಾಧಾರಿಗಳ ಮೇಲೆ ದೌರ್ಜನ್ಯವೆಸಗಿದ್ದರು. ಈ ವೇಳೆ ವಾಹನ ತಡೆದವರ ಮೇಲೆ ಪ್ರಕರಣ ಕೂಡಾ ದಾಖಲಾಗಿತ್ತು. ನಂತರ ಮಾತುಕತೆ ನಡೆಸಿದ್ದ ಚಾಮರಾಜನಗರ ಹಾಗೂ ತಮಿಳುನಾಡು ಪೊಲೀಸ್ ಅಧಿಕಾರಿಗಳು ಮಧ್ಯಪ್ರವೇಶಿಸಿ ಪ್ರಕರಣ ಇತ್ಯರ್ಥ ಮಾಡಿದ್ದರು. ಇದೀಗ ಮತ್ತೆ ತಮಿಳಿಗರಿಂದ ಕನ್ನಡ ಬಾವುಟ ತೆರವು ಮಾಡುವ ಮೂಲಕ ದುಂಡಾವರ್ತನೆ ವಿರುದ್ದ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.