ಕಕ್ಕೇರಾ ಗ್ರಾಮೀಣ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಮುದ್ದೇಬಿಹಾಳ–ರಾಯಚೂರು-ಮಂತ್ರಾಲಯ ನೂತನ ಬಸ್ ಸಂಚಾರ ಸೇವೆಗೆ ಚಾಲನೆ ದೊರೆತಿದೆ. ವಿದ್ಯಾರ್ಥಿಗಳು, ಕಾರ್ಮಿಕರು, ಮತ್ತು ವ್ಯಾಪಾರಿಗಳಿಗೆ ಅನುಕೂಲವಾಗಲಿದೆ.
ಸುರಪುರ: ಕಕ್ಕೇರಾ ಗ್ರಾಮೀಣ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಮುದ್ದೇಬಿಹಾಳ–ರಾಯಚೂರು-ಮಂತ್ರಾಲಯ ನೂತನ ಬಸ್ ಸಂಚಾರ ಸೇವೆಗೆ ಚಾಲನೆ ದೊರೆತಿದೆ. ಕಕ್ಕೇರಾ ಪಟ್ಟಣಕ್ಕೆ ಆಗಮಿಸಿದ ನೂತನ ಬಸ್ ಚಾಲಕ ಹಾಗೂ ನಿರ್ವಾಹಕರನ್ನು ವಿವಿಧ ಸಾಮೂಹಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಆತ್ಮೀಯವಾಗಿ ಸನ್ಮಾನಿಸಿ ಸ್ವಾಗತಿಸಿದರು.
ಈ ಬಸ್ ಮುದ್ದೇಬಿಹಾಳ, ತಾಳಿಕೋಟಿ, ಹುಣಸಗಿ, ಕಕ್ಕೇರಾ, ತಿಂಥಣಿ ಬ್ರಿಜ್, ಜಾಲಹಳ್ಳಿ ಹಾಗೂ ದೇವದುರ್ಗ ಮಾರ್ಗವಾಗಿ ರಾಯಚೂರು, ಮಂತ್ರಾಲಯಕ್ಕೆ ಸಂಚರಿಸಲಿದ್ದು, ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಲಾಗಿದೆ.
ಮುದ್ದೇಬಿಹಾಳ–ರಾಯಚೂರು-ಮಂತ್ರಾಲಯ
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಮುದ್ದೇಬಿಹಾಳ–ರಾಯಚೂರು-ಮಂತ್ರಾಲಯ ನಡುವೆ ಸಂಚರಿಸುವ ವಿದ್ಯಾರ್ಥಿಗಳು, ಕಾರ್ಮಿಕರು, ವ್ಯಾಪಾರಿಗಳು, ಮಹಿಳಾ ಉದ್ಯೋಗಿಗಳು ಹಾಗೂ ಸಾರ್ವಜನಿಕರಿಗೆ ಈ ಹೊಸ ಬಸ್ ಸೇವೆ ಹೆಚ್ಚಿನ ಅನುಕೂಲ ಕಲ್ಪಿಸಲಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಈ ಜನಪರ ಕ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನೂತನ ಬಸನ್ನು ಬೆಳಿಗ್ಗೆ 10.30ಕ್ಕೆ ಕಕ್ಕೇರಾ ಪಟ್ಟಣದಲ್ಲಿ ಸ್ವಾಗತಿಸಲಾಯಿತು. ಬಳಿಕ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಮುಖಂಡರು ಅಭಿನಂದನೆ ಸಲ್ಲಿಸಿದರು.
ಇದನ್ನೂ ಓದಿ: ಕಾರು ಚಲಾಯಿಸುವಾಗ ದಿಢೀರ್ ಉಸಿರಾಟ ಸಮಸ್ಯೆ, ಮಹಿಳೆಯ ಜೀವ ಉಳಿಸಿದ ಮಡಿವಾಳ ಸಂಚಾರಿ ಪೊಲೀಸ್ ಪೇದೆ
ಕಾರ್ಯಕ್ರಮದಲ್ಲಿ ಅಹಿಂದ ಜಿಲ್ಲಾ ಗೌರವಾಧ್ಯಕ್ಷ ಸಂಗಣ್ಣ ಸುಬೇದಾರ, ಕೆಪಿಸಿಸಿ ಸದಸ್ಯ ಗುಂಡಪ್ಪ ಸೊಲ್ಲಾಪುರ, ಪುರಸಭೆ ಉಪಾಧ್ಯಕ್ಷ ಜಟ್ಟೆಪ್ಪ, ಕೆಪಿಸಿಸಿ ಪದವೀಧರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ ಹೊಸಮನಿ (ಕಕ್ಕೇರಾ), ಅಹಿಂದ ಅಧ್ಯಕ್ಷ ಅಯೂಬ್, ಉದ್ಯಮಿ ಸುನೀಲ ಶೆಟ್ಟಿ, ರೈತ ಮುಖಂಡ ಮುದ್ದಣ್ಣ ಅಮ್ಮಾಪುರ, ಬಸಣ್ಣ ದೇಸಾಯಿ, ಗೋವಿಂದ ಪತ್ತಾರ, ಅಂಬ್ರೇಶ ಭೊಯಿ, ವೆಂಕಟೇಶ ದೊರೆ, ಮೈಬೂಬ್ ಸಾಬ್ (ಸುರಪುರ), ಶ್ರೀನಿವಾಸ, ಬಂದಗಿಸಾಬ್ ಸೇರಿದಂತೆ ಹಲವು ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
ಇದನ್ನೂ ಓದಿ: 50 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಹೊಸ ಬಡಾವಣೆ: ಜನರಿಗೆ ಕೈಗೆಟುಕುವ ಬೆಲೆಗೆ ನಿವೇಶನ


