ಸಿಲಿಕಾನ್ ಸಿಟಿಯಲ್ಲಿ ಗೃಹಿಣಿಯೊಬ್ಬರು ಪತಿಯ ಕಿರುಕುಳ ಹಾಗೂ ಅತಿಯಾದ ಅನುಮಾನಕ್ಕೆ ಬೇಸತ್ತು ಆತ್ಮ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿ.ಎಸ್‌.ಸಿ (B.Sc) ಮುಗಿಸಿ ಬದುಕಿನ ದೊಡ್ಡ ಕನಸು ಕಾಣುತ್ತಿದ್ದ 21 ವರ್ಷದ ಪ್ರೇರಣಾ ಎಂಬ ಯುವತಿ ಬದುಕನ್ನು ಅರ್ಧಕ್ಕೇ ಅಂತ್ಯಗೊಳಿಸಿದ ದುರ್ದೈವಿ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗೃಹಿಣಿಯೊಬ್ಬರು ಪತಿಯ ಕಿರುಕುಳ ಹಾಗೂ ಅತಿಯಾದ ಅನುಮಾನಕ್ಕೆ ಬೇಸತ್ತು ಆತ್ಮ*ತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಿ.ಎಸ್‌.ಸಿ (B.Sc) ಮುಗಿಸಿ ಬದುಕಿನ ದೊಡ್ಡ ಕನಸು ಕಾಣುತ್ತಿದ್ದ 21 ವರ್ಷದ ಪ್ರೇರಣಾ ಎಂಬ ಯುವತಿ ಬದುಕನ್ನು ಅರ್ಧಕ್ಕೇ ಅಂತ್ಯಗೊಳಿಸಿದ ದುರ್ದೈವಿ.

ಏನಿದು ಪ್ರಕರಣ..?

ದೂಪನಹಳ್ಳಿ ಬಳಿಯ ಗಂಡನ ಮನೆಯಲ್ಲಿ ವಾಸವಿದ್ದ ಪ್ರೇರಣಾ, ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಬಚ್ಚಲು ಮನೆಯಲ್ಲಿ (Bathroom) ನೇಣು ಬಿಗಿದುಕೊಂಡು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ಅವರನ್ನು ತಕ್ಷಣ ಇಂದಿರಾನಗರದ ಚಿನ್ಮಯಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಆಸ್ಪತ್ರೆಗೆ ತಲುಪುವ ಮೊದಲೇ ಪ್ರೇರಣಾ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ರೇರಣಾ ಮತ್ತು ವಿನಯ್ ಕುಮಾರ್ ಅವರ ವಿವಾಹ ಒಂದೂವರೆ ವರ್ಷದ ಹಿಂದೆ ನಡೆದಿತ್ತು. ಪ್ರೇರಣಾ ಇನ್ನೂ ಬಿ.ಎಸ್‌.ಸಿ ವ್ಯಾಸಂಗ ಮಾಡುತ್ತಿದ್ದಾಗಲೇ ವಿನಯ್ ಮನೆಯವರು ಹೆಣ್ಣು ಕೇಳಿ ಮದುವೆ ಮಾಡಿಕೊಂಡಿದ್ದರು. ಮದುವೆಯ ನಂತರ ನಾವೇ ಓದಿಸುತ್ತೇವೆ ಎಂದು ವಾಗ್ದಾನ ಮಾಡಿದ್ದ ಗಂಡನ ಮನೆಯವರು, ಅದರಂತೆ ಓದಿಸಿದ್ದರು. ಈ ವರ್ಷವಷ್ಟೇ ಪ್ರೇರಣಾ ತನ್ನ ಪದವಿ ಮುಗಿಸಿದ್ದರು.

ಸಾವಿಗೆ ಕಾರಣವಾಯ್ತಾ ಅನುಮಾನ?

ಪತಿ ವಿನಯ್ ಕುಮಾರ್ ಇಸ್ರೋದಲ್ಲಿ (ISRO) ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ. ಪ್ರೇರಣಾ ಕುಟುಂಬದ ಆರೋಪದ ಪ್ರಕಾರ, ವಿನಯ್ ಅತಿಯಾದ ಅನುಮಾನದ ವ್ಯಕ್ತಿಯಾಗಿದ್ದ. ಸದಾ ಪ್ರೇರಣಾ ಮೇಲೆ ಅನುಮಾನ ಪಡುತ್ತಿದ್ದ ಈತ, ಅದೇ ವಿಚಾರಕ್ಕೆ ಪ್ರತಿದಿನ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಇದರ ಜೊತೆಗೆ ಮಗು ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಮನೆಯಲ್ಲಿ ಪದೇ ಪದೇ ಗಲಾಟೆ ನಡೆಯುತ್ತಿತ್ತು. ಕಿರುಕುಳ ತಾಳಲಾರದೆ ಕಳೆದ ಎರಡು ತಿಂಗಳ ಹಿಂದೆ ಪ್ರೇರಣಾ ಗಲಾಟೆ ಮಾಡಿಕೊಂಡು ತಂದೆ ಮನೆಗೆ ಬಂದಿದ್ದರು. ಆಗ ಕುಟುಂಬಸ್ಥರೆಲ್ಲಾ ಸೇರಿ ಪಂಚಾಯಿತಿ ಮಾಡಿ, ಬುದ್ಧಿ ಹೇಳಿ 15 ದಿನಗಳ ಹಿಂದೆಯಷ್ಟೇ ವಿನಯ್ ಮನೆಗೆ ಕಳುಹಿಸಿಕೊಟ್ಟಿದ್ದರು. ಗಂಡನ ಮನೆಯವರ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿರಲಿಲ್ಲ.

ಮಗಳು ಆತ್ಮ*ತ್ಯೆ ಮಾಡಿಕೊಂಡಿಲ್ಲ, ಗಂಡನ ಮನೆಯವರ ಕಿರುಕುಳವೇ ಆಕೆಯನ್ನು ಬಲಿಪಡೆದಿದೆ ಎಂದು ಪ್ರೇರಣಾ ಪೋಷಕರು ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರೆಲ್ಲಾ ಮನೆಯಲ್ಲಿ ಇರುವಾಗಲೇ ನಮ್ಮ ಮಗಳು ಸಾವನ್ನಪ್ಪಿದ್ದಾಳೆ, ಇದಕ್ಕೆ ಪತಿ ವಿನಯ್ ಮತ್ತು ಆತನ ಕುಟುಂಬವೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.