Asianet Suvarna News Asianet Suvarna News

ಕಲಬುರಗಿ: ಕಲ್ಯಾಣದ ಬೇಡಿಕೆಗಳಿಗೆ ದೊರಕದ ಸ್ಪಂದನೆ

ಹಿಂದುಳಿದ ಕಲಬುರಗಿ ಜಿಲ್ಲೆಗೆ ಮಾತ್ರ ಅಮೃತ ಕಾಲ ಬಜೆಟ್‌ ಯಾವುದೇ ಹೊಸ ಯೊಜನೆ, ಹೊಸ ಅನುದಾನ ಹೊತ್ತು ತರಲೇ ಇಲ್ಲ, ಹೀಗಾಗಿ ಅಮೃತ ಕಾಲದ ಬಜೆಟ್‌ ಹಿಂದುಳಿದವರ ಅನುಭವಕ್ಕೆ ಬರಲೇ ಇಲ್ಲ.

Inadequate Responsiveness to Demands of Kalyana Karnataka in Union Budget grg
Author
First Published Feb 2, 2023, 9:30 PM IST

ಶೇಷಮೂರ್ತಿ ಅವಧಾನಿ

ಕಲಬುರಗಿ(ಫೆ.02):  ದೇಶದ ಅಮೃತ ಕಾಲದ ಮೊದಲ ಬಜೆಟ್‌ನ್ನು ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಬುಧವಾರ ಮಂಡಿಸಿದ್ದಾರೆ, ಆದರೆ ಹಿಂದುಳಿದ ಕಲಬುರಗಿ ಜಿಲ್ಲೆಗೆ ಮಾತ್ರ ಅಮೃತ ಕಾಲ ಬಜೆಟ್‌ ಯಾವುದೇ ಹೊಸ ಯೊಜನೆ, ಹೊಸ ಅನುದಾನ ಹೊತ್ತು ತರಲೇ ಇಲ್ಲ, ಹೀಗಾಗಿ ಅಮೃತ ಕಾಲದ ಬಜೆಟ್‌ ಹಿಂದುಳಿದವರ ಅನುಭವಕ್ಕೆ ಬರಲೇ ಇಲ್ಲ. ವರ್ಷ 13 ಆದರೂ ಕಲ 371(ಜೆ) ಜಾರಿಯಿಂದ ಆಗಬೇಕಿದ್ದಂತಹ ನಿರೀಕ್ಷಿತ ಸಾಧನೆಗಳು ಇನ್ನೂ ಕಲ್ಯಾಣದ ಜಿಲ್ಲೆಗಳಲ್ಲಿ ಅಗೋಚರ. ಹೀಗಾಗಿ ಪಕ್ಕದ ತೆಲಂಗಾಣ ಹಾಗೂ ಮಹಾರಾಷ್ಟ್ರದ ವಿದರ್ಭಕ್ಕೆ ದೊರಕಿರುವ ಅನುದಾನದ ಮಾದರಿಯಲ್ಲಿಯೇ ಕೇಂದ್ರ ಸರ್ಕಾರ ಕಲ್ಯಾಣ ನಾಡಿಗೂ ಹೆಚ್ಚುವರಿ ಅನುದಾನ ಘೋಷಿಸುವ ನಿರೀಕ್ಷೆ ಇತ್ತಾದರೂ ನಿರ್ಮಲಾ ಸೀತಾರಾಮನ್‌ ಈ ವಿಚಾರದಲ್ಲಿ ತಾಳಿರುವ ಮಹಾಮೌನ ಇಲ್ಲಿನ ಜನರ ನಿರೀಕ್ಷೆ ಹುಸುಗೊಳಿಸಿದೆ.

ಈಶಾನ್ಯದ ರಾಜ್ಯಗಳಂತೆಯೇ ಕಲ್ಯಾಣ ನಾಡಲ್ಲಿಯೂ ನಾಲ್ಕಾರು ಜಿಲ್ಲೆಗಳಲ್ಲಿ ಹಿಂದುಳಿದಿರುವಿಕೆ ಹಾಸಿ ಹೊದ್ದು ಮಲಗಿದ್ದರೂ ಕೇಂದ್ರ ಅದ್ಯಾಕೋ ಇತ್ತ ಕಣ್ಣೆತ್ತಿಯೂ ನೋಡುತ್ತಿಲ್ಲ. ಕಳೆದ 5 ಬಜೆಟ್‌ನಿಂದಲೂ ಕೇಂದ್ರದ ಅನುದಾನದ ನಿರೀಕ್ಷೆಯಲಿ ಇಲ್ಲಿನವರಿದ್ದರೂ ಇಂದಿಗೂ ಇದು ದಕ್ಕುತ್ತಿಲ್ಲ. ಕಲ್ಯಾಣದಲ್ಲಿ ಇರುವ ಐದಕ್ಕೈದೂ ಬಿಜೆಪಿ ಸಂಸದರೇ ಆಗಿರೋದು ವಿಶೇಷ. ಡಬ್ಬಲ್‌ ಎಂಜಿನಿನ್‌ ಸರ್ಕಾರ, ಎಲ್ಲಾ ಸಂಸದರೂ ಕೇಸರಿ ಪಡೆಯವರೇ ಇದ್ದರೂ ಕೂಡಾ ಕೇಂದ್ರ ಹಿಂದುಳಿದರ ನೆರವಿಗೆ ಹಣಕಾಸು ನೀಡುವ ಗೋಜಿಗೆ ಹೋಗಲೇ ಇಲ್ಲ.

Union Budget: ಕೇಂದ್ರದ ಬಜೆಟ್‌ಗೆ ಪರ-ವಿರೋಧ

ಕಲಬುರಗಿಯಲ್ಲಿ ಐಟಿ ಪಾರ್ಕ್ ಅಭಿವೃದ್ಧಿಗೂ ಅನುದಾನ ಘೋಷಣೆಯಾಗುವ ನಿರೀಕ್ಷೆ ಇತ್ತಾದರೂ ಅದು ಕೂಡಾ ಕೈಗೂಡಲಿಲ್ಲ. 2 ವರ್ಷದಿಂದಲೇ ಇಲ್ಲಿ ವೈಮಾನಿಕ ಸೇವೆ ಲಭ್ಯವಾದರೂ ಐಟಿ ಕಂಪನಿಗಳವರು ಕಲಬುರಗಿಯತ್ತ ಹೆಜ್ಜೆ ಹಾಕದೆ ಇರೋದು ಉದ್ದಿಮೆ ವಹಿವಾಟಿಗೆ ತೊದರೆಯಾಗಿದೆ. ಐಟಿ ರಂಗದಲ್ಲಾದರೂ ಇಲ್ಲಿನ ಪಾರ್ಕ್ಗೆ ಉತ್ತೇಜನ ದೊರುವುದೋ ಎಂಬ ನಿರೀಕ್ಷೆಯೂ ಹುಸಿಯಾಗಿದೆ.

1) ಕಲಬುರಗಿಗೆ ರಾಷ್ಟ್ರೀಯ ಉತ್ಪಾದನೆ ವಲಯ ನಿಮ್‌್ಜ ಘೋಷಣೆಯಾಗಿ ದಶಕ ಕಳೆದರೂ ಅದಿನ್ನೂ ಕೈಗುತ್ತಿಲ್ಲ. ರಾಜ್ಯ ಸರ್ಕಾರ ಪ್ರಸ್ತಾವನೆ ಕಳುಹಿಸುವ ಗೋಜಿಗೂ ಹೋಗಿಲ್ಲ. ಕೇಂದ್ರ ಬಜೆಟ್‌ನಲ್ಲಿ ನೆರವು ನೀಡಲು ಮುಂದೆ ಬರುತ್ತಿಲ್ಲ.
2) ಈ ಭಾಗದಲ್ಲಿರುವ ತೊಗರಿ, ಅಕ್ಕಿ ಮಿಲ್‌ಗಳನ್ನು ಕೃಷಿ ಆಧಾರಿತ ಉದ್ದಿಮೆಗಳೆಂಬ ಗೋಷಣೆಗೂ ಕೇಂದ್ರ ಮನಸ್ಸು ಮಾಡಲಿಲ್ಲ, ಪಕ್ಕÜದ ತೆಲಂಗಾಣದಲ್ಲಿ 63 ಎಸ್‌ಇಝಡ್‌ ಇದ್ದರೂ ಕಲ್ಯಾಣ ನಾಡಿನ ಎಸ್‌ಇಝಡ್‌ ಯೋಜನೆಗೆ ಪುರಸ್ಕಾರ ದೊರಕಲಿಲ್ಲ
3) ಮುಂಬೈ, ಹೈದ್ರಾಬಾದ್‌, ಬೆಂಗಳೂರು ಹೆದ್ದಾರಿಯಲ್ಲಿರುವ ಕಲಬುರಗಿಯಲ್ಲಿ ಇನ್‌ಲ್ಯಾಂಡ್‌ ಕಂಟೈನರ್‌ ಡೀಪೋ ಸ್ಥಾಪಿಸುವುದರಿಂದ ಈ ಭಾಗದಲ್ಲಿನ ರಫ್ತು ಚಟುವಟಿಕೆಗೆ ಜೀವ ನೀಡಬಹುದಾಗಿತ್ತು. ಈ ಬೇಡಿಕೆಗೂ ಕೇಂದ್ರ ಕ್ಯಾರೆ ಎನ್ನಲಿಲ್ಲ. ಜಿಐ ಟ್ಯಾಗ್‌ ಹೊಂದಿರುವ ತೊಗರಿ ಉತ್ಪನ್ನ ನಮ್ಮದು. ಜೊತೆಗೇ ಇಲ್ಲಿನ ಅನೇಕ ತೋಟಗಾರಿಕೆ ಬೆಳೆಗಳಿಗೂ ರಫ್ತು ಅವಕಾಶ ಇದರಿಂದ ದೊರಕುತಿತ್ತು.
4) 2013-14ರಲ್ಲಿ ಘೋಷಣೆಯಾಗಿರುವ ಗುಲ್ಬರ್ಗ ರೇಲ್ವೆ ವಿಭಾಗೀಯ ಕಚೇರಿ ಯೋಜನೆಗೆ ಬಜೆಟ್‌ನಲ್ಲಿ ಸ್ಪಂದನೆ ಶೂನ್ಯ. ಇಎಸ್‌ಐಸಿ ಆಸ್ಪತ್ರೆ ಸಮುಚ್ಚಯವನ್ನು ಎಐಎಂಎಸ್‌ಎಸ್‌ಗೆ ಮೇಲ್ದರ್ಜೆಗೇರಿಸಬೇಕೆಂಬ ಬೇಡಿಕೆ, ಕಲಬುರಗಿಯಲ್ಲೇ ಕೌಶಲ್ಯ ವಿವಿ ಸ್ಥಾಪಿಸಬೇಕೆಂಬ ಬೇಡಿಕೆಗಳಿಗೂ ಕೇಂದ್ರ ಮೌನ

ನನ್ನ ಬಜೆಟ್ ಜನಪರ ಬಜೆಟ್ ಆಗಿರುತ್ತದೆ: ಕೊಡುಗೆಗಳ ಸುಳಿವು ಕೊಟ್ಟ ಸಿಎಂ ಬೊಮ್ಮಾಯಿ

ಕಲಂ 371 (ಜೆ) ಹಿನ್ನಲೆಯಲ್ಲಿ ಈಶಾನ್ಯ ರಾಜ್ಯಗಳಿಗೆ ನೀಡಿರುವ ವಿಶೇಷ ಆರ್ಥಿಕ ಅನುದಾನದ ಮಾದರಿಯಲ್ಲಿಯೇ ಕಲ್ಯಾಣ ನಾಡಿನ ಪ್ರಗತಿಗಾಗಿ ಇರುವ ಕೆಕೆಆರ್‌ಡಿಗೂ ಅನುದಾನ ಗೋಷಣೆಯಾಗಬೇಕೆಂಬ ಬೇಡಿಕೆ ಇತ್ತು. ಇದರ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಸ್ಪಂದನೆ ದೊರಕಿಲ್ಲ. ಕಲ್ಯಾಣ ನಾಡಿಗೆ ನಿರಾಶೆ ತಂದ ಬಜೆಟ್‌ ಇದಾಗಿದೆ ಅಂತ ಅಭಾ ವೀರಶೈವ ಮಹಾಸಭಾ ರಾಷ್ಟ್ರೀಯ ಕೈಗಾರಿಕೆ ವಾಣಿಜ್ಯ ಸಮಿತಿ ಅಧ್ಯಕ್ಷ ಅಮರನಾಥ ಪಾಟೀಲ್‌ ಹೇಳಿದ್ದಾರೆ. 

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಇವರು ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕ ಗಣನೆಗೆ ತೆಗೆದುಕೊಳ್ಳದೇ ನಿರ್ಲಕ್ಷಿಸಿದ್ದಾರೆ. ಮೇಲಾಗಿ ಕಲ್ಯಾಣ ಕರ್ನಾಟಕ ಭಾಗವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. 371 (ಜೆ) ಕಲಂನ ಬಗ್ಗೆ ಕಾಳಜಿ ಇಲ್ಲ. ಕಲಬುರಗಿಯಲ್ಲಿ ರೈಲ್ವೆ ವಿಭಾಗೀಯ ಕಚೇರಿಯ ಬಗ್ಗೆ ಬಜೆಟ್‌ನಲ್ಲಿ ಯಾವುದೇ ಘೋಷಣೆ ಇಲ್ಲ. ಈ ಭಾಗದ ರೈತರ ಪ್ರಮುಖ ಬೆಳೆಯಾದ ತೊಗರಿ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಲ್ಲ ಅಂತ ಕಲಬುರಗಿ ಜಿಲ್ಲಾ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷ ಜಗದೇವ ಗುತ್ತೇದಾರ್‌ ತಿಳಿಸಿದ್ದಾರೆ. 

Follow Us:
Download App:
  • android
  • ios