Mahesh Shetty Thimarodi: ಧರ್ಮಸ್ಥಳ ಸೌಜನ್ಯ ಪ್ರಕರಣದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಪುತ್ತೂರು ಸಹಾಯಕ ಆಯುಕ್ತರು ಮೂರನೇ ಬಾರಿಗೆ ಗಡೀಪಾರು ಆದೇಶ ಹೊರಡಿಸಿದ್ದಾರೆ

ಪುತ್ತೂರು (ಮಾ.17): ಧರ್ಮಸ್ಥಳ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರು (AC) ಮೂರನೇ ಬಾರಿಗೆ ರಾಯಚೂರು ಜಿಲ್ಲೆಯ ಮಾನ್ವಿಗೆ ಗಡೀಪಾರು ಆದೇಶ ಹೊರಡಿಸುವ ಮೂಲಕ ಶಾಕ್ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂರನೇ ಬಾರಿಗೆ ಗಡೀಪಾರು ನೋಟೀಸ್ ಜಾರಿ

ಪುತ್ತೂರು ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಅವರು ಈ ಮಹತ್ವದ ಆದೇಶವನ್ನು ಹೊರಡಿಸಿದ್ದಾರೆ. ಅದರಂತೆ, ಮಹೇಶ್ ಶೆಟ್ಟಿ ತಿಮರೋಡಿ ಅವರು ಮಾ.16, 2026 ರಿಂದ ಸೆ.19, 2026ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರವೇಶಿಸುವಂತಿಲ್ಲ. ಈ ಆರು ತಿಂಗಳ ಅವಧಿ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನೆಲೆಸಬೇಕೆಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಗಡಿಪಾರು ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ತಿಮರೋಡಿ

ತಿಮರೋಡಿ ಅವರಿಗೆ ಈ ಹಿಂದೆ ಎರಡನೇ ಬಾರಿಗೆ ಗಡೀಪಾರು ಆದೇಶ ಹೊರಡಿಸಿದಾಗ, ಅವರು ಅದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ನೇತೃತ್ವದ ಏಕಸದಸ್ಯ ಪೀಠವು, ಆದೇಶವನ್ನು ಮರುಪರಿಶೀಲಿಸುವಂತೆ ಪುತ್ತೂರು ಎಸಿಗೆ ಸೂಚಿಸಿತ್ತು. ಪ್ರತಿವಾದಿಗಳ ಆಕ್ಷೇಪಣೆಗಳನ್ನು ಆಲಿಸಿ, ಕಾನೂನುಬದ್ಧವಾಗಿ ಹೊಸ ಆದೇಶ ಹೊರಡಿಸಲು ಮೂರು ವಾರಗಳ ಕಾಲಾವಕಾಶ ನೀಡಿತ್ತು. ಹೈಕೋರ್ಟ್ ನೀಡಿದ್ದ ಗಡುವಿನ ಹಿನ್ನೆಲೆಯಲ್ಲಿ ಈಗ ಮರುಪರಿಶೀಲನೆ ನಡೆಸಿ ಮೂರನೇ ಬಾರಿ ಈ ಆದೇಶ ಹೊರಡಿಸಲಾಗಿದೆ.

ಗಡೀಪಾರು ಶಿಕ್ಷೆಯ ಹಿನ್ನೆಲೆ ಏನು?

ಮಹೇಶ್ ಶೆಟ್ಟಿ ತಿಮರೋಡಿ ಅವರ ಮೇಲೆ ಸಾರ್ವಜನಿಕ ಶಾಂತಿ ಭಂಗಕ್ಕೆ ಕಾರಣವಾಗುವಂತಹ ಪ್ರಚೋದನಕಾರಿ ಭಾಷಣಗಳು ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ.

ಮುಂದೇನು?

ಈಗಾಗಲೇ ಎರಡು ಬಾರಿ ಹೈಕೋರ್ಟ್ ಮೂಲಕ ತಡೆಯಾಜ್ಞೆ ಪಡೆಯಲು ಯತ್ನಿಸಿದ್ದ ತಿಮರೋಡಿ ಅವರಿಗೆ ಈ ಮೂರನೇ ಆದೇಶವು ದೊಡ್ಡ ಹಿನ್ನಡೆಯಾಗಿದೆ. ಹೈಕೋರ್ಟ್ ಸೂಚನೆಯನ್ನು ಪಾಲಿಸಿ, ನಿಯಮಬದ್ಧವಾಗಿಯೇ ಎಸಿ ಅವರು ಈ ಆದೇಶ ನೀಡಿರುವುದರಿಂದ, ತಿಮರೋಡಿ ಈಗ ರಾಯಚೂರಿಗೆ ತೆರಳುತ್ತಾರಾ ಅಥವಾ ಮತ್ತೆ ಕಾನೂನು ಹೋರಾಟ ಮುಂದುವರಿಸುತ್ತಾರಾ ಎಂಬುದು ಕುತೂಹಲ ಮೂಡಿಸಿದೆ.