*  500 ಕೋಟಿ ಬಿಲ್‌ ಬಾಕಿ: ಕಸ ಸಂಗ್ರಹ ಸ್ಥಗಿತ?*  ನಾಳೆಯಿಂದಲೇ ಪ್ರತಿಭಟನೆ ನಡೆಸಲು ಬಿಬಿಎಂಪಿ ಕಸದ ಗುತ್ತಿಗೆದಾರರ ನಿರ್ಧಾರ*  ಮನೆಗಳಿಂದ ಕಸ ಸಂಗ್ರಹ ಅನುಮಾನ 

ಬೆಂಗಳೂರು(ಫೆ.17):  ಬಿಬಿಎಂಪಿಯು(BBMP) ಕಳೆದ ಆರು ತಿಂಗಳಿಂದ ಬಾಕಿ ಉಳಿಸಿಕೊಂಡ ನೂರಾರು ಕೋಟಿ ರುಪಾಯಿ ಬಿಲ್‌ ಪಾವತಿಗೆ ಆಗ್ರಹಿಸಿ ಬಿಬಿಎಂಪಿ ಕಸದ ಗುತ್ತಿಗೆದಾರರು ಶುಕ್ರವಾರದಿಂದ (ಫೆ.18) ಪ್ರತಿಭಟನೆ ನಡೆಸಲು ಉದ್ದೇಶಿಸಿದ್ದಾರೆ. ಬಾಕಿ ಹಣ ಪಾವತಿಸುವವರೆಗೂ ಎಲ್ಲ ವಾರ್ಡ್‌ಗಳಲ್ಲಿಯೂ ಕಸ ಸಂಗ್ರಹಿಸುವ ವಾಹನಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ.

ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಕಸ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್‌.ಎನ್‌.ಬಾಲಸುಬ್ರಹ್ಮಣ್ಯ, ‘ಮನೆಗಳಿಂದ ವಾಹನಗಳಲ್ಲಿ ತ್ಯಾಜ್ಯ(Garbage) ಸಂಗ್ರಹಿಸಿ ಕಾಂಪ್ಯಾಕ್ಟರ್‌ಗೆ ವರ್ಗಾಯಿಸಿ ಸಮರ್ಪಕ ವಿಲೇವಾರಿ ಮೂಲಕ ನಗರದ ಸ್ವಚ್ಛತೆ ಕಾಪಾಡಲಾಗುತ್ತಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಇಲ್ಲಿಯವರೆಗೂ 198 ವಾರ್ಡ್‌ಗಳಲ್ಲಿಯೂ ಕಸದ ಸಂಗ್ರಹಿಸುವ ಗುತ್ತಿಗೆ ವಾಹನಗಳ ಬಿಲ್‌ ಪಾವತಿಸಿಲ್ಲ. ಈವರೆಗೂ ಒಟ್ಟಾರೆ 500 ಕೋಟಿ ಬಿಲ್‌ ಬಾಕಿ ಇದೆ. ಸಿಬ್ಬಂದಿ ವೇತನ, ನಿರ್ವಹಣೆಗೆ ಸಾಕಷ್ಟು ಸಮಸ್ಯೆಯಾಗುತ್ತಿದ್ದು, ಬಿಬಿಎಂಪಿ ಮಾತ್ರ ಬಾಕಿ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

BBMP: ಬರಲಿದೆ ಕಸದ ವಾಹನ ಎಲ್ಲಿದೆ ಎಂದು ತಿಳಿಸುವ ಆ್ಯಪ್‌!

ಈ ಹಿಂದೆ ಮೂರು ಬಾರಿ ಪ್ರತಿಭಟನೆಗೆ(Protest) ಮುಂದಾದಾಗ ಮುಖ್ಯ ಆಯುಕ್ತರು, ಆಡಳಿತಾಧಿಕಾರಿ ಮತ್ತು ಸರ್ಕಾರ ಮಧ್ಯಸ್ಥಿಕೆ ವಹಿಸಿ ಸಮಸ್ಯೆ ಪರಿಹಾರದ ಭರವಸೆ ನೀಡಿದ್ದರು. ಆದರೆ ಈವರೆಗೆ ಕ್ರಮ ಕೈಗೊಂಡಿಲ್ಲ. ಸರ್ಕಾರವೇ ಮಧ್ಯಪ್ರವೇಶಿಸಿ ಮಾಸಿಕ ಬಿಲ್‌ ಪಾವತಿಗೆ ನಿಯಮ ರೂಪಿಸುವವರೆಗೂ ಧರಣಿ ಕೈಬಿಡದಿರಲು ನಿರ್ಧರಿಸಿದ್ದೇವೆ. ಧರಣಿಗೆ ಅರಣ್ಯ ವಿಭಾಗದ ಗುತ್ತಿಗೆದಾರರ ಸಂಘ, ಪಾಲಿಕೆ ಐಟಿ ಮತ್ತು ಡಿಇಒ ನೌಕರರ ಸಂಘ, ತೋಟಗಾರಿಕೆ ಗುತ್ತಿಗೆ ನೌಕರರ ಸಂಘ, ಪ್ರಜಾ ವಿಮೋಚನಾ ಸಮಿತಿ ಸೇರಿದಂತೆ ಒಟ್ಟು ಎಂಟು ಸಂಘಟನೆಗಳು ಬೆಂಬಲಿಸುತ್ತಿವೆ ಎಂದು ತಿಳಿಸಿದರು.

ಪ್ರತಿ ತಿಂಗಳ ದಿನಾಂಕ 15ರೊಳಗೆ ಕಾರ್ಮಿಕರು(Labors) ಇಎಸ್‌ಐ(ESI) ಮತ್ತು ಪಿಎಫ್‌(PF) ಪಾವತಿಸದಿದ್ದರೆ ಅದನ್ನು ಮಾಲಿಕರ ಆದಾಯವೆಂದು ಪರಿಗಣಿಸಿ ಶೇ.33ರಷ್ಟು ತೆರಿಗೆ(Tax) ಪಾವತಿಸಬೇಕಾಗುತ್ತದೆ. ಸದ್ಯ ನೂರಾರು ಕೋಟಿ ಬಿಲ್‌ ಬಾಕಿ ಇರುವ ಪರಿಣಾಮ ತೆರಿಗೆ ರೂಪದಲ್ಲಿ ಲಕ್ಷಾಂತರ ಹಣ ನಷ್ಟವಾಗುತ್ತಿದೆ. ಇದನ್ನು ಮನಗಂಡು ಪ್ರತಿ ತಿಂಗಳು ದಿನಾಂಕ 10ರೊಳಗೆ ಬಿಲ್‌ ಪಾವತಿಗೆ ಕ್ರಮಹಿಸಬೇಕು. ರಸ್ತೆ, ಬೀದಿ ಗುಡಿಸುವ ಪೌರ ಕಾರ್ಮಿಕರಿಗೆ ನೇರವಾಗಿ ವೇತನ ನೀಡುವಂತೆ ನಮಗೂ ಸಮರ್ಪಕವಾಗಿ ವೇತನ ನೀಡಬೇಕು ಎಂದು ಆಗ್ರಹಿಸಿದರು.

ಇಂದಿನಿಂದಲೇ ವ್ಯತ್ಯಯ

ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಅಕ್ರಮವಾಗಿ ಕಸ ಸುರಿಯುತ್ತಿರುವ ಕುರಿತು ಹೈಕೋರ್ಟ್‌(High Court) ತರಾಟೆಗೆ ತೆಗೆದುಕೊಂಡ ಹಿನ್ನೆಲೆ ಸ್ಥಳೀಯ ಸಾರ್ವಜನಿಕರು ಬುಧವಾರವೇ ಕಸ ವಿಲೇವಾರಿಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಬುಧವಾರ ಕಸ ತುಂಬಿಕೊಂಡಿದ್ದ ಲಾರಿಗಳು ಅನ್‌ಲೋಡ್‌ ಮಾಡದೇ ಹಾಗೇ ನಿಂತಿವೆ. ಇದರಿಂದ ಗುರುವಾರ ಕೆಲವೆಡೆ ಕಸ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ ಎಂದು ಎಸ್‌.ಎನ್‌.ಬಾಲಸುಬ್ರಹ್ಮಣ್ಯ ತಿಳಿಸಿದರು.

ಹೈಕೋರ್ಟ್‌ ಛೀಮಾರಿ ಹಾಕಿದ್ರೂ ಬುದ್ಧಿ ಕಲಿಯದ BBMP: ರಸ್ತೆಗುಂಡಿಗಳಿಗೆ ಮುಕ್ತಿ ಎಂದು?

ನ್ಯಾಯಾಂಗ ನಿಂದನೆ: ಜೈಲಿಗೆ ಹೋಗಲು ಬ್ಯಾಗ್‌ ಸಮೇತ ಸಿದ್ಧರಾಗಿ ಬನ್ನಿ: ಹೈಕೋರ್ಟ್‌

ನ್ಯಾಯಾಲಯದ ನಿರ್ಬಂಧ ಆದೇಶ ಉಲ್ಲಂಘಿಸಿ ಮಿಟ್ಟಗಾನಹಳ್ಳಿ ಕ್ವಾರಿ ಪ್ರದೇಶದಲ್ಲಿ ಘನತ್ಯಾಜ್ಯವನ್ನು ಸುರಿಯುತ್ತಿರುವ ಪಾಲಿಕೆ ಅಧಿಕಾರಿಗಳನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಗುಡುಗಿರುವ ಹೈಕೋರ್ಟ್‌(High Court of Karnataka), ಮಾ.5ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಬಿಬಿಎಂಪಿ(BBMP) ಮುಖ್ಯ ಆಯುಕ್ತರಿಗೆ ತಾಕೀತು ಮಾಡಿತ್ತು. 

ಬಿಬಿಎಂಪಿ ಅಧಿಕಾರಿಗಳನ್ನು ನ್ಯಾಯಾಲಯದ ಅಂಗಳದಿಂದಲೇ ಜೈಲಿಗೆ ಕಳುಹಿಸಲಾಗುವುದು. ಜೈಲಿಗೆ(Jail) ಹೋಗಲು ಗಂಟು ಮೂಟೆ ಕಟ್ಟಿಕೊಂಡು ಸಿದ್ಧವಾಗಿ ಬರುವಂತೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಪಾಲಿಕೆಯ ವಕೀಲರಿಗೆ ಹೈಕೋರ್ಟ್‌ ಇದೇ ವೇಳೆ ಮೌಖಿಕವಾಗಿ ತಿಳಿಸಿತ್ತು.