ಸರ್ಕಾರ ವ್ಯವಸ್ಥಿತ ಕೆಲಸ ಮಾಡಬೇಕು ಎಂದ ಎಂಎಲ್‌ಸಿ ಎಚ್ ವಿಶ್ವನಾಥ್ ಅಸಮಾಧಾನ ಎಲ್ಲಾ ಜಿಲ್ಲೆಗಳಿಗೂ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಅನುಭವಿ ಡೀಸಿಗಳ ಅವಶ್ಯಕತೆಯಿದೆ.  ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ದ ಸ್ವಪಕ್ಷ ನಾಯಕನಿಂದಲೇ ಭಾರೀ ಅಸಮಾಧಾನ  

ಮೈಸೂರು (ಮೇ.19): ರಾಜ್ಯದಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ವ್ಯವಸ್ಥಿತ ಕೆಲಸ ಮಾಡಬೇಕು ಎಂದ ಎಂಎಲ್‌ಸಿ ಎಚ್ ವಿಶ್ವನಾಥ್ ವಿಪಕ್ಷ ಹಾಗೂ ಆಡಳಿತ ಪಕ್ಷಗಳ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು. 

Add Asianetnews Kannada as a Preferred SourcegooglePreferred

ಮೈಸೂರಿನಲ್ಲಿಂದು ಮಾತನಾಡಿದ ವಿಶ್ವನಾಥ್, ಎಲ್ಲಾ ಜಿಲ್ಲೆಗಳಿಗೂ ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಅನುಭವಿ ಡೀಸಿಗಳ ಅವಶ್ಯಕತೆಯಿದೆ. ಜಿಲ್ಲೆಗಳಿಗೆ ಐಎಎಸ್ ಕಾರ್ಯದರ್ಶಿಗಳನ್ನು ನೇಮಿಸಿ. ವಿಧಾನಸೌಧದಲ್ಲಿ ಹೆಚ್ಚುವರಿ ಕಾರ್ಯದರ್ಶಿಗಳು ಹಾಗೂ ಆಯುಕ್ತರು ಕೆಲಸ‌ ಇಲ್ಲದೆ ಕುಳಿತಿದ್ದಾರೆ. ಅವರನ್ನು ಜಿಲ್ಲೆಗಳಿಗೆ ಜಿಲ್ಲಾಧಿಕಾರಿ ಮಾಡಿ ಕಳುಹಿಸಿ. ಪ್ರತಿಯೊಬ್ಬರಿಗೂ 100 ಕೋಟಿ ನೀಡಿ ಎಂದು ಸಲಹೆ ನೀಡಿದರು.

ಮೂರು ತಿಂಗಳು ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಕಾರ್ಯದರ್ಶಿಗಳನ್ನು ನೇಮಿಸಿ. ಎಲ್ಲಾ ಅಧಿಕಾರವನ್ನು ಅವರಿಗೆ ನೀಡಿ. ಎಲ್ಲಾ ಜವಾಬ್ದಾರಿಯನ್ನು ಅವರಿಗೆ ನೀಡಿ. ಸಾವುಗಳಿಗೆ ಅವರನ್ನು ಹೊಣೆಗಾರರನ್ನಾಗಿ ಮಾಡಿ ಎಂದರು. 

ಸದ್ಯ ಜಿಲ್ಲಾಧಿಕಾರಿಗೆ ಹಣ ಖರ್ಚು ಮಾಡಲು ಪವರ್ ಇಲ್ಲ. ಸರ್ಕಾರ ಹಣಕಾಸಿನ ವಿಚಾರ ಕೇಂದ್ರಿಕೃತ ಮಾಡಿದೆ. ಜಿಲ್ಲಾಧಿಕಾರಿಗಳು ನಮಗೆ ಅಧಿಕಾರ ಇಲ್ಲ ಅನ್ನೋದನ್ನು ಪ್ರಧಾನಿಗೆ ಹೇಳಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಡೀಸಿಗೆ ಮನವಿ‌ ಮಾಡಬಾರದು, ಕಮಾಂಡ್ ಮಾಡಬೇಕು ಎಂದು ಸೂಚನೆ ನೀಡಿದರು. 

ಇನ್ನು ಹಳ್ಳಿಗಳಲ್ಲಿ ಸದ್ಯ ಸೋಂಕಿನ ಪ್ರಮಾಣ ಅತ್ಯಂತ ಹೆಚ್ಚಾಗಿದೆ. ಆದರೆ ಜಿಲ್ಲಾಧಿಕಾರಿಗಳು ಒಂದು ದಿನವೂ ಕೂಡ ಹಳ್ಳಿಗಳತ್ತ ಮುಖ ಮಾಡುತ್ತಿಲ್ಲ. ಟಾಸ್ಕ್‌ಪೋರ್ಸ್ ಸಹ ಹೋಗಲಿಲ್ಲ. ಹಳ್ಳಿಗಳ ಗೋಳು ಯಾರು ಕೇಳುತ್ತಿಲ್ಲ. ಸಿದ್ದರಾಮಯ್ಯ ಅವರೇ ಮಾತಾಡಿ ಗ್ರಾಮೀಣ ಭಾಗದಲ್ಲಿ ಅಹಿಂದ ಜನರು ಸಾಯುತ್ತಿದ್ದಾರೆ ಎಂದು ವಿಶ್ವನಾಥ್ ಹೇಳಿದರು. 

15 ದಿನ ಲಾಕ್‌ಡೌನ್ : ಎಲ್ಲವನ್ನೂ ಕೊಟ್ಟು ಮತ್ತೆ 15 ದಿನ ಲಾಕ್‌ಡೌನ್ ಮಾಡಿ ಎಂದು ಸರ್ಕಾರಕ್ಕೆ ಎಂ.ಎಲ್.ಸಿ ಎಚ್ ವಿಶ್ವನಾಥ್ ಸಲಹೆ ನೀಡಿದರು. 

ಇನ್ನು ಅಂಗಡಿಗಳನ್ನು ತೆರೆಯುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ವಿಶ್ವನಾಥ್ ಏಕೆ ಅಂಗಡಿ ತೆಗಿಯಬೇಕು. ಮಾಂಸದ ಅಂಗಡಿ ಬಳಿ ಜನ ಜಂಗುಳಿಯಾಗುತ್ತಿದೆ. ಒಂದು ತಿಂಗಳು ಮಾಂಸ ತಿನ್ನಲಿಲ್ಲ ಅಂದರೆ ಸತ್ತು ಹೋಗುತ್ತಾರಾ?

ಮೈಸೂರಿನ ಕೋವಿಡ್‌ ಮಿತ್ರದ ಬಗ್ಗೆ ಮೋದಿಗೆ ಮಾಹಿತಿ: ರೋಹಿಣಿ

ಮೇಡಂ ಹೇಳಿದ್ದಾರೆ ಬೆಳಗ್ಗೆ 6 ಗಂಟೆ ಅಂತಾ ಬೆಳಗ್ಗೆ 6 ಗಂಟೆಗೆ ಏಳುತ್ತಾರೆ. ಕಾಮನ್ ಸೆನ್ಸ್ ಇಲ್ಲದೆ ಏನೇನೋ ತೀರ್ಮಾನ ಮಾಡಬಾರದು. ವಾರಕ್ಕೆ ಒಂದು ದಿನ ಮಾತ್ರ ಅವಕಾಶ ಕೊಟ್ಟು ಲಾಕ್‌ಡೌನ್ ಮಾಡಿ ಎಂದು ಮೈಸೂರು ಜಿಲ್ಲಾದಿಕಾರಿ ವಿರುದ್ಧವೂ ಅಸಮಾಧಾನ ಹೊರಹಾಕಿದರು. 

ಸರಿಯಾದ ವ್ಯವಸ್ಥೆ ಮಾಡಲಿ : ಆಸ್ಪತ್ರೆಗಳ ಅಧೀಕ್ಷಕರು ಸುಮ್ಮನೆ ಕುಳಿತಿದ್ದಾರೆ. ಅವರಿಗೆ ಹಣವಿಲ್ಲ, ಸರಿಯಾದ ವ್ಯವಸ್ಥೆ ಇಲ್ಲ. ಮೊದಲು ಅಲ್ಲಿ ಸರಿಯಾದ ವ್ಯವಸ್ಥೆ ಮಾಡಬೇಕಾಗಿದೆ. ಸಿದ್ದರಾಮಯ್ಯನವರೇ ಹಳ್ಳಿಗಳಲ್ಲಿ ಸಾಯುತ್ತಿರೋದು ಅಹಿಂದದವರು. ಅಂದರೆ ಬಡ ವರ್ಗದವರು. ಸುಮ್ಮನ್ನೆ ಮಾತಾಡೋದಲ್ಲ. ಈಗ ಬಂದು ಅವರ ಕಷ್ಟ ನೋಡಬೇಕು. ಹಳ್ಳಿಗಳಲ್ಲಿ ಬೆಡ್, ಆಕ್ಸಿಜನ್ ಸಿಗದೆ ಜನ ನರಳಿ ಸಾಯುತ್ತಿದ್ದಾರೆ.
ಈಗಾಗಲೇ ಹಳ್ಳಿಯಲ್ಲಿ ಕೊರೋನಾ ಹೆಚ್ಚಾಗುತ್ತಿದೆ. ಮೊದಲು ಇಲ್ಲಿನ ಜನರಿಗೆ ಮುಕ್ತಗೊಳಿಸಿ ಎಂದು ವಿಪಕ್ಷ ನಾಯಕರನ್ನು ತರಾಟೆ ತೆಗೆದುಕೊಂಡರು. 

ಸ್ವಪಕ್ಷೀಯರ ವಿರುದ್ಧವೇ BJP ಮುಖಂಡ ಎಚ್. ವಿಶ್ವನಾಥ್ ಗರಂ

ಸರ್ಕಾರ ಹೆಣದ ಮೇಲೆ‌ ಹಣ ಮಾಡಬೇಡಿ : ನಿಮಗೆ ಒಳ್ಳೆಯದಾಗಲ್ಲ ಎಂದು ಬಿಜೆಪಿ ಸರ್ಕಾರದ ವಿರುದ್ಧ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದು, ಎಲ್ಲಾ ಪವರ್ ವಿಜಯೇಂದ್ರ ಬಳಿ ಇದೆ. ಸರ್ಕಾರದ ಆಡಳಿತ ಕೇಂದ್ರೀಕರಣ ಆಗಿದೆ. ಇದೆಲ್ಲವು ಪರ್ಸೆಂಟೇಜ್‌ಗಾಗಿ ಮಾಡಿಕೊಂಡಿರೋದು. ಮೈಸೂರು ಡಿಸಿಗೆ 10 ಪೈಸೆ ಖರ್ಚು ಮಾಡುವ ಪವರ್ ಇಲ್ಲ. ಜಿಲ್ಲಾ ಮಂತ್ರಿಗೂ ಕೂಡ ಆ ಪವರ್ ಇಲ್ಲ. ಯಾವುದೇ ಬಿಲ್ ಪಾಸಾಗಬೇಕಾದರೆ ಬೆಂಗಳೂರಿಗೆ ಹೋಗಬೇಕು ಎಂದು ವಿಜಯೇಂದ್ರ ವಿರುದ್ಧ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದರು. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona