ಧಾರವಾಡದಲ್ಲಿ ನಡೆದ ಮಾಜಿ ಶಾಸಕನ ಪುತ್ರ ರಾಜು ಬೋಳಶೆಟ್ಟಿ ಕೊಲೆ ಪ್ರಕರಣಕ್ಕೆ ಅಕ್ರಮ ಸಂಬಂಧವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಓರ್ವ ಮಹಿಳೆ ಸೇರಿ ನಾಲ್ವರನ್ನು ಬಂಧನ, ತೋಟದ ಮನೆಯಲ್ಲಿ ಕೊಲೆ ಮಾಡಿ ರಾಮಾಪುರ ಬಳಿ ಶವವನ್ನು ಸುಟ್ಟು ಹಾಕಲಾಗಿತ್ತು.ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
ಧಾರವಾಡ (ಮಾ. 26): ಧಾರವಾಡ ಜಿಲ್ಲೆಯ ರಾಮಾಪುರ ಸಮೀಪದಲ್ಲಿ ನಡೆದಿದ್ದ ಮಾಜಿ ಶಾಸಕನ ಪುತ್ರ ರಾಜು ಬೋಳಶೆಟ್ಟಿಯ ಭೀಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಧಾರವಾಡ ಎಸ್ಪಿ ಗುಂಜನ್ ಆರ್ಯ ಬೆಚ್ಚಿಬಿಳಿಸುವ ಮಾಹಿತಿ ತಿಳಿಸಿದ್ದಾರೆ. ಸದ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಶಾಸಕ ಪುತ್ರನ ಹತ್ಯೆಗೆ ಸ್ಕೆಚ್ ಹಾಕಿದ್ದು ಯಾಕೆ?
ಮೃತ ರಾಜು ಬೋಳಶೆಟ್ಟಿ ಬೈಲಹೊಂಗಲ ತಾಲ್ಲೂಕಿನ ಬಿದರಗಡ್ಡಿ ಗ್ರಾಮದ ಮುನೀರಾ ಎಂಬಾಕೆಯೊಂದಿಗೆ ಕಳೆದ ಎರಡು ವರ್ಷಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಇತ್ತ ಮುನೀರಾ ಮತ್ತು ಮೃತ್ಯುಂಜಯ ಎಂಬಾತನ ನಡುವೆಯೂ 'ಲವ್ವಿ-ಡವ್ವಿ' ಇತ್ತು ಎನ್ನಲಾಗಿದೆ. ಮುನೀರಾ ಮತ್ತು ರಾಜು ನಡುವಿನ ಸಂಬಂಧವನ್ನು ಮೃತ್ಯುಂಜಯ ಪ್ರಶ್ನಿಸಿದ್ದಲ್ಲದೆ, ಇದೇ ಕಾರಣಕ್ಕೆ ಕಳೆದ ಕೆಲವು ದಿನಗಳ ಹಿಂದೆ ಇಬ್ಬರ ನಡುವೆ ಜಗಳ ನಡೆದಿತ್ತು. ಇದೇ ದ್ವೇಷದಿಂದ ರಾಜು ಅವರನ್ನು ಮುಗಿಸಲು ಹಂತಕರು ಸ್ಕೆಚ್ ಹಾಕಿದ್ದರು.
ತೋಟದ ಮನೆಯಲ್ಲಿ ಕೊಲೆ, ರಾಮಾಪುರದಲ್ಲಿ ದಹನ!
ಹಂತಕರು ಪಕ್ಕಾ ಪ್ಲಾನ್ ಮಾಡಿದಂತೆ ಉಡಕೇರಿ ಗ್ರಾಮದ ತೋಟದ ಮನೆಯ ಶೆಡ್ನಲ್ಲಿ ರಾಜು ಬೋಳಶೆಟ್ಟಿಯನ್ನ ಚಾಕು ಮತ್ತು ಸಲಿಕೆಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆ ಬಳಿಕ ಮೃತ್ಯುಂಜಯನಿಗೆ ಧಾರವಾಡದ ರಾಮಾಪುರ ಪ್ರದೇಶದ ಬಗ್ಗೆ ಮೊದಲೇ ಮಾಹಿತಿ ಇದ್ದಿದ್ದರಿಂದ, ಅಲ್ಲಿಗೆ ಮೃತದೇಹವನ್ನು ತಂದು ಸುಟ್ಟು ಹಾಕಿದ್ದಾರೆ. ಮೃತದೇಹದ ಕುರುಹು ಪೊಲೀಸರಿಗೆ ಸಿಗದಂತೆ, ತಾವು ಕೊಲೆ ಮಾಡಿರುವ ಬಗ್ಗೆ ಯಾವ ಸಾಕ್ಷ್ಯ ಸಿಗದಂತೆ ಸಾಕ್ಷ್ಯ ನಾಶಪಡಿಸಲು ಹಂತಕರು ಧಾರವಾಡದಲ್ಲಿ 5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಖರೀದಿ ಮಾಡಿದ್ದರು. ಪೆಟ್ರೋಲ್ ಖರೀದಿಸಿ ಒಂದೇ ಬೈಕ್ನಲ್ಲಿ ಆರೋಪಿಗಳು ಹೋಗುವ ದೃಶ್ಯ ಪೆಟ್ರೋಲ್ ಬಂಕ್ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ ಆರೋಪಿಗಳೆಲ್ಲರೂ ಸಿಕ್ಕಿಬಿಳಲು ಕಾರಣವಾಯ್ತು.
ನಾಲ್ವರು ಆರೋಪಿಗಳ ಬಂಧನ
ಪ್ರಕರಣದ ಗಂಭೀರತೆ ಅರಿತ ಧಾರವಾಡ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ಮುನೀರಾ, ಮೃತ್ಯುಂಜಯ, ಬಸವರಾಜ ಮತ್ತು ಮುನೀರಾಳ ಅಪ್ರಾಪ್ತ ಮಗನನ್ನು ಬಂಧಿಸಿದ್ದಾರೆ. ಹತ್ಯೆಯ ಬಳಿಕ ನಾಲ್ವರೂ ಒಂದೇ ಬೈಕ್ನಲ್ಲಿ ಪರಾರಿಯಾಗಿದ್ದರು ಎಂದು ತಿಳಿದುಬಂದಿದೆ. ಸದ್ಯಕ್ಕೆ ಡಿಎನ್ಎ (DNA) ಪರೀಕ್ಷೆಯ ಮೂಲಕ ಮೃತದೇಹ ರಾಜು ಬೋಳಶೆಟ್ಟಿ ಅವರದ್ದೇ ಎಂದು ಖಚಿತಪಡಿಸಿಕೊಳ್ಳಲಾಗಿದೆ. ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಗುಂಜನ್ ಆರ್ಯ, ಎಸ್ಪಿ ಧಾರವಾಡ
ರಾಜು ಬೋಳಶೆಟ್ಟಿ ಹತ್ಯೆ ಪ್ರಕರಣದಲ್ಲಿ ಅನೈತಿಕ ಸಂಬಂಧವೇ ಮುಖ್ಯ ಕಾರಣವೆಂದು ತಿಳಿದುಬಂದಿದೆ. ಸಿಸಿಟಿವಿ ದೃಶ್ಯಾವಳಿ ಮತ್ತು ತಾಂತ್ರಿಕ ಆಧಾರದ ಮೇಲೆ ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಉಡಕೇರಿ ಗ್ರಾಮದಲ್ಲಿ ಕೊಲೆ ಮಾಡಿ ರಾಮಾಪುರ ಅರಣ್ಯ ಪ್ರದೇಶದಲ್ಲಿ ದೇಹವನ್ನು ಸುಟ್ಟು ಹಾಕಲಾಗಿತ್ತು. ಹೆಚ್ಚಿನ ತನಿಖೆ ನಡೆಯುತ್ತಿದೆ


