1962-65ರ ಬ್ಯಾಚಿನಲ್ಲಿ ಓದಿದ್ದ ಸಹಪಾಠಿಗಳು 60 ವರ್ಷಗಳ ನಂತರ ತಮ್ಮ 85-86ರ ಇಳಿವಯಸ್ಸಿನಲ್ಲಿ ಮತ್ತೆ ಭೇಟಿಯಾದರು. ಮೂರು ದಿನಗಳ ಕಾಲ ನಡೆದ ಈ ಅಪರೂಪದ ಮರುಮಿಲನದಲ್ಲಿ, 122 ಸಹಪಾಠಿಗಳ ಪೈಕಿ ಉಳಿದಿರುವ 12 ಮಂದಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಸಂಭ್ರಮಿಸಿದರು.
ಧಾರವಾಡ: 60 ವರ್ಷಗಳ ಹಿಂದೆ ಸಹಪಾಠಿಗಳಾಗಿ ಓದಿದ್ದ ಗೆಳೆಯರೆಲ್ಲ ತಮ್ಮ 85- 86ರ ಇಳಿವಯಸ್ಸಿನಲ್ಲಿ ಮತ್ತೆ ಭೇಟಿಯಾಗಿ ತಮ್ಮ ಕಾಲೇಜಿನ ಕ್ಯಾಂಪಸ್ನಲ್ಲಿ ಮೂರು ದಿನ ಜೊತೆಯಾಗಿ ಕಳೆದದ್ದು ನಿಜಕ್ಕೂ ಅಪರೂಪದ ಸಂಗತಿ.
ಧಾರವಾಡ ಕೃಷಿ ಮಹಾವಿದ್ಯಾಲಯದಲ್ಲಿ 1962 -65ರ ಬ್ಯಾಚಿನಲ್ಲಿ ಬಿಎಸ್ಸಿ ಅಗ್ರಿ ಪದವಿ ಪಡೆದ ವಿದ್ಯಾರ್ಥಿಗಳ ಮರುಮಿಲನದ ಹಬ್ಬ ಈಚೆಗೆ ನಡೆಯಿತು.
ಪದವಿ ಮುಗಿದಾಗ ಇದ್ದಿದ್ದು 122, ಈಗ ಉಳಿದಿರೋದು 12 ಜನ ಮಾತ್ರ
ಪದವಿ ಮುಗಿಸಿ ಹೋಗುವಾಗ ಅವರಲ್ಲಿ ಹರೆಯ ಚಿಮ್ಮುತ್ತಿತ್ತು. ಈಗ ಮುಪ್ಪು ಅವರಿಸಿದೆ. ಮಕ್ಕಳು ಮೊಮ್ಮಕ್ಕಳ ದೊಡ್ಡ ಪರಿವಾರ ಜೊತೆಯಾಗಿದೆ. ಪದವಿ ಮುಗಿಸಿ ಬೀಳ್ಕೊಡುವ ದಿನ 122 ಸಹಪಾಠಿಗಳಿದ್ದರು. ಅಗಲಿಕೆಯ ಭಾರವಾದ ಹೃದಯ ಹೊತ್ತು ಚದುರಿ ಹೋಗಿದ್ದರು. ಆರು ದಶಕ ಬಹಳ ದೀರ್ಘ ಅವಧಿ. ಅಗಲಿ ಹೋದವರ ಸಂಖ್ಯೆ ದೊಡ್ಡದು. ಈಗ ಉಳಿದವರು ಕೇವಲ ಹನ್ನೆರಡು ಜನ ಮಾತ್ರ. ವಿಶೇಷ ಎಂದರೆ ದೂರದಲ್ಲಿದ್ದ ಅವರೆಲ್ಲರೂ ಬಹಳ ಉತ್ಸಾಹದಿಂದ ಬಂದಿದ್ದರು. ಜೊತೆಯಲ್ಲಿ ತಮ್ಮ ಪರಿವಾರದವರನ್ನೆಲ್ಲ ಕರೆತಂದಿದ್ದರು.
ಎ.ಎಸ್. ಪ್ರಭಾಕರ್, ಪಿ.ಎ. ಸಾರಂಗಮಠ, ರವೀಂದ್ರ ಬಸವನಾಳ, ಶಿವರಾಜ್, ಜಿ. ಪರಮೇಶ್ವರ್, ಎಸ್.ಪಿ. ಹುಲ್ಲತ್ತಿ, ಜಿ.ಆರ್. ಗುಂಡಿ, ವಿ.ಎಸ್. ಮುತ್ತಳ್ಳಿ, ಸಿ.ಬಿ. ಪಟ್ಟಣಶೆಟ್ಟಿ, ಕುಮಾರಸ್ವಾಮಿ ಮತ್ತು ವಿಜಯಕುಮಾರ್ ಗಿಡ್ನವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಗೆಳೆಯರ ಸ್ಮರಣೆಯಲ್ಲಿ ಭಾವುಕರಾಗಿ ಮೌನ ಆಚರಣೆ
ಇವರೆಲ್ಲ ತಮ್ಮ ನೆನಪುಗಳನ್ನು ಸಾಧನೆ, ಸೋಲುಗಳ ಕುರಿತು ಮನ ತೆರೆದು ಮಾತನಾಡಿದರು. ಹಾಡಿ, ಕುಣಿದು, ಜೋಕು ಹೇಳಿ ಸಂಭ್ರಮಿಸಿದರು. ಆಗ ಪ್ರಿನ್ಸಿಪಾಲ್ ಆಗಿದ್ದ ಡಾ. ಎಸ್.ಡಬ್ಲ್ಯೂ. ಮೆಣಸಿನಕಾಯಿ ಹಾಗೂ ಶಿಕ್ಷಕ ವೃಂದದ ಸಹಾಯ, ಪ್ರೋತ್ಸಾಹ ಸ್ಮರಿಸಿದರು. ಅಗಲಿದ ಗೆಳೆಯರ ಸ್ಮರಣೆಯಲ್ಲಿ ಮೌನ ಆಚರಿಸಿದರು.
ಇದನ್ನೂ ಓದಿ: 2700 ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದ ಮಣಿಪುರ ಮಿಜೋರಾಂನಲ್ಲಿ ವಾಸಿಸುವ ಇಸ್ರೇಲಿಗರು ಮತ್ತೆ ತವರಿಗೆ
ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸುವುದಕ್ಕೆ ಶ್ರಮಿಸಿದ ಸಹಪಾಠಿಗಳಲ್ಲಿ ಒಬ್ಬರಾದ ಎಸ್.ವಿ. ಮುತ್ತಳ್ಳಿ ದಂಪತಿಯನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಇದನ್ನೂ ಓದಿ: 1991ರ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿಗಳ ಪುನರ್ಮಿಲನದ ಕಥ


