ದುಬಾರೆ ಆನೆ ಶಿಬಿರದಲ್ಲಿ ಸಹ ಆನೆ 'ಮಾರ್ತಾಂಡ'ನ ಸಾವಿಗೆ ಕಾರಣವಾದ 'ಕಂಜನ್' ಆನೆಯನ್ನು, ಅದರ ಆಕ್ರಮಣಕಾರಿ ನಡವಳಿಕೆಯಿಂದಾಗಿ ಮುಂಬರುವ ಮೈಸೂರು ದಸರಾ ಮಹೋತ್ಸವದಿಂದ ಶಾಶ್ವತವಾಗಿ ನಿಷೇಧಿಸಲಾಗಿದೆ. ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರ ಕಟ್ಟುನಿಟ್ಟಿನ ಆದೇಶದ ಮೇರೆಗೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಮೈಸೂರು/ಬೆಂಗಳೂರು (ಮೇ.19): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದ ಪ್ರಮುಖ ದಸರಾ ಆನೆಗಳಲ್ಲೊಂದಾದ 'ಕಂಜನ್'ಗೆ ಇನ್ಮುಂದೆ ಜಂಬೂಸವಾರಿಯ ಅದೃಷ್ಟವಿಲ್ಲ. ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮುಂಬರುವ ಮೈಸೂರು ದಸರಾ ಮಹೋತ್ಸವದ ಕಾರ್ಯಕ್ರಮಗಳಿಂದ ಕಂಜನ್ ಆನೆಯನ್ನು ಸಂಪೂರ್ಣವಾಗಿ ಕೈಬಿಡುವಂತೆ ಉನ್ನತ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.

ಕಂಜನ್ ಆನೆಯು ಪದೇ ಪದೇ ತೋರುತ್ತಿರುವ ಅತ್ಯಂತ ಆಕ್ರಮಣಕಾರಿ ಮತ್ತು ಮೊಂಡಾಟದ ನಡವಳಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವೇ ಉನ್ನತ ಅಧಿಕಾರಿಗಳು ಹಾಗೂ ಸಚಿವರು ಈ ಕಠಿಣ ತೀರ್ಮಾನಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.
ಅರಮನೆ ಆವರಣದಲ್ಲೇ ಸೃಷ್ಟಿಸಿದ್ದ ಆತಂಕ
ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಕಂಜನ್ ಆನೆಯ ಇಂತಹ ಉಗ್ರ ನಡವಳಿಕೆ ಇದೇ ಮೊದಲೇನಲ್ಲ. ಕಳೆದ 2024 ರ ಮೈಸೂರು ದಸರಾ ಮಹೋತ್ಸವದ ತಾಲೀಮಿನ ಅವಧಿಯಲ್ಲೂ ಸಹ ಕಂಜನ್ ಭಾರಿ ಗದ್ದಲ ಸೃಷ್ಟಿಸಿತ್ತು. ಮೈಸೂರು ಅರಮನೆಯ ಆವರಣದಲ್ಲೇ ಮತ್ತೊಂದು ದಸರಾ ಆನೆಯನ್ನು ಕಂಜನ್ ಅತ್ಯಂತ ಆಕ್ರೋಶದಿಂದ ಅಟ್ಟಿಸಿಕೊಂಡು ಹೋಗಿ ಪ್ರವಾಸಿಗರು ಹಾಗೂ ಅಧಿಕಾರಿಗಳಲ್ಲಿ ತೀವ್ರ ಆತಂಕ ಮತ್ತು ಭೀತಿಯ ವಾತಾವರಣ ನಿರ್ಮಿಸಿತ್ತು.
ದುಬಾರೆ ಘಟನೆಯಲ್ಲಿ ಜಯ ಮಾರ್ತಾಂಡನ ಸಾವಿಗೆ ಕಾರಣವಾದ ಕಂಜನ್
ಸೋಮವಾರ ದುಬಾರೆ ಶಿಬಿರದಲ್ಲಿ ಕಂಜನ್ ಮತ್ತು ಮಾರ್ತಾಂಡ ಆನೆಗಳ ನಡುವೆ ಭೀಕರ ಕಾಳಗ ನಡೆದಿತ್ತು. ಈ ವೇಳೆ ಅತ್ಯಂತ ಆಕ್ರಮಣಕಾರಿಯಾಗಿ ಮುನ್ನುಗ್ಗಿದ್ದ ಕಂಜನ್ ಆನೆಯು, ಮಾರ್ತಾಂಡ ಆನೆಯ ಹೊಟ್ಟೆ, ಕಿವಿ ಹಾಗೂ ದೇಹದ ಇತರೆ ಸೂಕ್ಷ್ಮ ಭಾಗಗಳಿಗೆ ತನ್ನ ಬಲವಾದ ದಂತಗಳಿಂದ ತೀವ್ರವಾಗಿ ತಿವಿದು ರಕ್ತಸಿಕ್ತ ಗಾಯಗೊಳಿಸಿತ್ತು.
ತೀವ್ರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಾರ್ತಾಂಡ ಆನೆಗೆ ದುಬಾರೆ ಶಿಬಿರದಲ್ಲೇ ಪಶುವೈದ್ಯರಾದ ಡಾ. ಮುಜಿಭ್ ಹಾಗೂ ಚಿಟ್ಟಿಯಪ್ಪ ಅವರು ನಿರಂತರ ತುರ್ತು ಚಿಕಿತ್ಸೆ ನೀಡುತ್ತಿದ್ದರು. ಆದರೆ, ಆಳವಾದ ಗಾಯಗಳಾಗಿದ್ದರಿಂದ ಚಿಕಿತ್ಸೆ ಫಲಿಸದೇ ಮಾರ್ತಾಂಡ ಆನೆ ಇಂದು ಮೃತಪಟ್ಟಿದೆ.
ಆನೆಗಳ ಸರಣಿ ಆಕ್ರಮಣಕಾರಿ ನಡವಳಿಕೆ ಮತ್ತು ಮಹಿಳೆಯೊಬ್ಬರು ಬಲಿಯಾದ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಇಲಾಖೆ, ಮುನ್ನೆಚ್ಚರಿಕೆ ಕ್ರಮವಾಗಿ ಇಂದು ದುಬಾರೆ ಸಾಕಾನೆ ಶಿಬಿರವನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ. ಮುಂದಿನ ಅಧಿಕೃತ ಆದೇಶ ಬರುವವರೆಗೂ ಪ್ರವಾಸಿಗರಿಗೆ ಶಿಬಿರದ ಒಳಗೆ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಆನೆಗಳ ಕಾದಾಟದ ಸಂದರ್ಭದಲ್ಲಿ ಸಿಲುಕಿ ದುರಂತವಾಗಿ ಪ್ರಾಣ ಕಳೆದುಕೊಂಡಿದ್ದ ಮಹಿಳೆಯ ಕುಟುಂಬಸ್ಥರು ತೀವ್ರ ದುಃಖದ ನಡುವೆಯೂ ಹೆಮ್ಮೆಯ ಮಾನವೀಯತೆ ಮೆರೆದಿದ್ದಾರೆ. ಮೃತ ಮಹಿಳೆಯ ಕಣ್ಣುಗಳನ್ನು ದಾನ (ನೇತ್ರದಾನ) ಮಾಡುವ ಮೂಲಕ ಇಬ್ಬರ ಬಾಳಿಗೆ ಬೆಳಕಾಗಿದ್ದಾರೆ. ಸದ್ಯ ನೇತ್ರದಾನ ಪ್ರಕ್ರಿಯೆ ಮುಗಿದ ಬಳಿಕ ಮಹಿಳೆಯ ಮೃತದೇಹವನ್ನು ಅವರ ತವರೂರಾದ ಚೆನ್ನೈಗೆ ರವಾನಿಸಲಾಗಿದೆ.


