ಬಾಗಲಕೋಟೆಯ ಪ್ರಸಿದ್ಧ ಬಾದಾಮಿ ಗುಹಾಂತರ ದೇವಾಲಯದ ಆವರಣದಲ್ಲಿ ಚಪ್ಪಲಿ ಧರಿಸಿದ್ದ ಮುಸ್ಲಿಂ ಮಹಿಳೆಯನ್ನು ಇನ್ನೊಬ್ಬ ಮಹಿಳಾ ಪ್ರವಾಸಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಇಬ್ಬರ ನಡುವಿನ ವಾಗ್ವಾದದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾಗಲಕೋಟೆ (ಮೇ.19): ಕರ್ನಾಟಕದ ಹೆಮ್ಮೆಯ ಐತಿಹಾಸಿಕ ಮತ್ತು ಧಾರ್ಮಿಕ ಪರಂಪರೆಯ ತಾಣವಾಗಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ಗುಹಾಂತರ ದೇವಾಲಯದ (Badami Cave Temples) ಆವರಣದಲ್ಲಿ ತೀವ್ರ ಹೈಡ್ರಾಮಾ ನಡೆದಿದೆ. ಪವಿತ್ರ ದೇವಾಲಯದ ಸಂಕೀರ್ಣದ ಒಳಗೆ ಚಪ್ಪಲಿ ಧರಿಸಿ ಓಡಾಡುತ್ತಿದ್ದ ಮುಸ್ಲಿಂ ಮಹಿಳೆಯೊಬ್ಬರನ್ನು ಮಹಿಳಾ ಟೂರಿಸ್ಟ್ ಒಬ್ಬರು ಸ್ಥಳದಲ್ಲೇ ಹಿಡಿದು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಇಬ್ಬರು ಮಹಿಳೆಯರ ನಡುವೆ ನಡೆದ ತೀವ್ರ ವಾಗ್ವಾದದ ದೃಶ್ಯಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.

ಎಕ್ಸ್ನಲ್ಲಿ'@gharkekalesh' ಎಂಬ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಇದು ಇಂಟರ್ನೆಟ್ನಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವಿಡಿಯೋದಲ್ಲಿ, ಹಸಿರು ಬಣ್ಣದ ಉಡುಪು ಮತ್ತು ಹಿಜಾಬ್ ಧರಿಸಿರುವ ಮಹಿಳೆಯ ಜೊತೆ ಮಹಿಳಾ ಪ್ರವಾಸಿಗರೊಬ್ಬರು ತೀವ್ರವಾಗಿ ಜಗಳವಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಪಾರಂಪರಿಕ ತಾಣ ಹಾಗೂ ಪವಿತ್ರ ದೇವಸ್ಥಾನದ ಒಳಗೆ ಚಪ್ಪಲಿ ಧರಿಸಿ ನಿಯಮ ಉಲ್ಲಂಘಿಸಿರುವುದನ್ನು ಕಂಡು ಆ ಪ್ರವಾಸಿಗ ಮಹಿಳೆ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
'ನಾನು ಇಲ್ಲಿನ ಸ್ಟಾಫ್' ಎಂದ ಮಹಿಳೆ; ಪ್ರವಾಸಿಗಳ ಆರೋಪ
ಆಕ್ಷೇಪ ಎತ್ತಿದ ಮಹಿಳಾ ಪ್ರವಾಸಿಗರು, ಚಪ್ಪಲಿ ಧರಿಸಿದ್ದ ಮಹಿಳೆಯ ಹೆಸರು 'ರೋಷ್ನಿ ಮುಸ್ತಾಫಿ' ಎಂದು ಹೇಳಿದ್ದಾರೆ. ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ತರುತ್ತಿರುವುದನ್ನು ಪ್ರಶ್ನಿಸಿದಾಗ, ಆ ರೋಷ್ನಿ ಎಂಬಾಕೆ ತಾನು ಅಲ್ಲಿನ ಸಿಬ್ಬಂದಿ ಎಂದು ಹೇಳಿದ್ದಾಳೆ ಎಂದು ಪ್ರವಾಸಿಗರು ಆರೋಪಿಸಿದ್ದಾರೆ. ನೀವು ಸಿಬ್ಬಂದಿ ಆಗಿದ್ದರೆ, ದೇವಸ್ಥಾನದ ಒಳಗೆ ಚಪ್ಪಲಿ ಧರಿಸಿ ಓಡಾಡಬಹುದೇ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
ಆದರೆ, ಈ ವೈರಲ್ ವಿಡಿಯೋ ಹಾಗೂ ಘಟನೆಗೆ ಸಂಬಂಧಿಸಿದಂತೆ ಈ ವರದಿ ಪ್ರಕಟವಾಗುವವರೆಗೂ ಇತಿಹಾಸ ಪ್ರಸಿದ್ಧ ಸ್ಮಾರಕಗಳ ಉಸ್ತುವಾರಿ ಹೊತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI - Archaeological Survey of India) ಯಾವುದೇ ಅಧಿಕೃತ ಪ್ರತಿಕ್ರಿಯೆ ಅಥವಾ ಸ್ಪಷ್ಟೀಕರಣವನ್ನು ನೀಡಿಲ್ಲ.
ಟ್ವಿಟರ್ನಲ್ಲಿ ಜನಾಕ್ರೋಶ; ನೆಟ್ಟಿಗರ ಮಿಶ್ರ ಪ್ರತಿಕ್ರಿಯೆ
ಈ ವಿಡಿಯೋ ಎಕ್ಸ್ (ಟ್ವಿಟರ್) ಜಾಲತಾಣದಲ್ಲಿ ಅಪ್ಲೋಡ್ ಆದ ಬೆನ್ನಲ್ಲೇ ಸಾರ್ವಜನಿಕರಿಂದ ಕಮೆಂಟ್ಗಳು ಹರಿದು ಬರುತ್ತಿವೆ. ಒಬ್ಬ ಯೂಸರ್ ಆಕ್ರೋಶ ವ್ಯಕ್ತಪಡಿಸಿ, "ಇದೇನು ನಿಮಗೊಂದು ನಿಯಮ, ಬೇರೆಯವರಿಗೊಂದು ನಿಯಮವೇ? ಇದು ಬರೀ ಸಾರ್ವಜನಿಕ ಕಾರಿಡಾರ್ ಅಲ್ಲ, ಇದು 6 ನೇ ಶತಮಾನದ ಭವ್ಯ ಹಿಂದೂ ದೇವಾಲಯದ ಪವಿತ್ರ ತಾಣ. ನೀವು ಎಎಸ್ಐ (ASI) ಸಿಬ್ಬಂದಿಯೇ ಆಗಿದ್ದರೂ ಸಹ, ಪ್ರತಿಯೊಬ್ಬ ಭಕ್ತ ಹಾಗೂ ಪ್ರವಾಸಿಗರಿಂದ ನಿರೀಕ್ಷಿಸುವ ಕನಿಷ್ಠ ಗೌರವ ಮತ್ತು ಸೌಜನ್ಯವನ್ನು ನೀವೂ ಪಾಲಿಸಬೇಕು ಹಾಗೂ ಚಪ್ಪಲಿಗಳನ್ನು ಹೊರಗಿಡಬೇಕು. ಕೇವಲ ಫೋನ್ ಕಾಲ್ಗಳು ನಿಮ್ಮನ್ನು ಈ ಮೂಲಭೂತ ನಿಯಮದಿಂದ ಮುಕ್ತಗೊಳಿಸುವುದಿಲ್ಲ. ಧರ್ಮದ ಪಾವಿತ್ರ್ಯತೆ ಪರವಾಗಿ ಧ್ವನಿ ಎತ್ತಿದ ಮಹಿಳಾ ಟೂರಿಸ್ಟ್ನ ಬಗ್ಗೆ ಹೆಮ್ಮೆಯಿದೆ" ಎಂದು ಬರೆದುಕೊಂಡಿದ್ದಾರೆ.
ಆದರೆ, ಮತ್ತೊಬ್ಬ ಮಹಿಳೆ ಸಿಬ್ಬಂದಿ ಪರವಾಗಿ ಬ್ಯಾಟ್ ಬೀಸಿದ್ದು, "ಅಷ್ಟಕ್ಕೂ ಯಾಕೆ ಇಷ್ಟೊಂದು ಗಲಾಟೆ? ಬಿಸಿಲ ಧಗೆಯಿಂದ ಆಕೆಯ ಪಾದಗಳನ್ನು ರಕ್ಷಿಸಲು ನೀವು ಹೋಗುತ್ತೀರಾ?" ಎಂದು ಪ್ರಶ್ನಿಸಿದ್ದಾರೆ.
ಬಾದಾಮಿ ನಿರ್ವಹಣೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಪ್ರವಾಸಿಗರು
ಇದೇ ವೇಳೆ ಬಾದಾಮಿ ಮತ್ತು ಭೂತನಾಥ ದೇವಾಲಯದ ಕಳಪೆ ನಿರ್ವಹಣೆಯ ಬಗ್ಗೆಯೂ ಕೆಲವರು ಅಸಮಾಧಾನ ಹೊರಹಾಕಿದ್ದಾರೆ. ಮತ್ತೊಬ್ಬ ಬಳಕೆದಾರರು ತಮ್ಮ ಹಳೆಯ ಅನುಭವವನ್ನು ಹಂಚಿಕೊಳ್ಳುತ್ತಾ, "ಇಲ್ಲಿನ ಮ್ಯಾನೇಜ್ಮೆಂಟ್ ಅತ್ಯಂತ ಕೆಟ್ಟದಾಗಿದೆ. ನಾನು 6 ವರ್ಷಗಳ ಹಿಂದೆ ಬಾದಾಮಿ ಗುಹೆಗಳು ಮತ್ತು ಭೂತನಾಥ ದೇವಾಲಯಕ್ಕೆ ಭೇಟಿ ನೀಡಿದ್ದಾಗ, ಬಹುತೇಕ ಎಲ್ಲಾ ಗುಹೆಗಳು ಹಾಗೂ ಗರ್ಭಗುಡಿಯ ಆವರಣದಲ್ಲಿ ಮೂತ್ರದ ವಾಸನೆ ಬರುತ್ತಿತ್ತು. ನಾನು ಆ ಸಮಯದಲ್ಲಿ ಈ ಬಗ್ಗೆ ದೂರನ್ನು ಸಹ ಎತ್ತಿದ್ದೆ, ಆದರೆ ಈಗೇನಾದರೂ ಬದಲಾಗಿದೆಯೇ ಎಂಬುದು ತಿಳಿಯುತ್ತಿಲ್ಲ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
